ವಿದ್ಯುಚಕ್ತಿ ಇಲ್ಲದೆ ಇರುವ ಗ್ಯಾಸ್ ಲೈಟ್ ಇದ್ದ ಕಾಲದ ಕಥೆಯಿದು. ಆಗ ಒಬ್ಬ ವ್ಯಕ್ತಿ ದಿನ ಸಂಜೆ ಗ್ಯಾಸ್ ಲೈಟ್ನ್ನು ಮಂದಗೊಳಿಸುತ್ತಿದ್ದ. ಅದರಿಂದ ಅವನ ಪತ್ನಿಗೆ ನೋಡಲು ಕಷ್ಟ ಆಗುತ್ತಿತ್ತು. ಅದರಿಂದಾಗಿ ನನ್ನ ಮನಸ್ಸು ಕೆಟ್ಟು ಹೋಗುತ್ತಿದೆ. ನಾನು ಗೊಂದಲಕ್ಕೊಳಗಾಗುತ್ತಿದ್ದೇನೆ. ನನಗೆ ಮಾನಸಿಕ ಒತ್ತಡ ಕೂಡ ಉಂಟಾಗುತ್ತಿದೆ ಎಂದು ಆಕೆ ಒತ್ತಿ ಒತ್ತಿ ಹೇಳುತ್ತಿದ್ದಳು. ಆದರೆ ಅವಳ ಗಂಡ ಅವಳನ್ನೇ ತಮಾಷೆ ಮಾಡುತ್ತ ದೋಷ ಇರುವುದು ನಿನ್ನಲ್ಲಿಯೇ ಹೊರತು ಹೊರಗೆ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದ. ಇದರಿಂದಾಗಿ ಅವಳು ಮಾನಸಿಕ ಸಮತೋಲನ ಕಳೆದುಕೊಳ್ಳತೊಡಗಿದಳು. ಆದರೂ ಅವಳ ಪತಿ ಅವಳ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಲಿಲ್ಲ.
ಅಂದಹಾಗೆ `ಗ್ಯಾಸ್ ಲೈಟಿಂಗ್’ ಶಬ್ದ ಪ್ಯಾಟ್ರಿಕ್ ಹ್ಯಾಮಿಲ್ಟನ್ ಅವರ ಗ್ಯಾಸ್ ಲೈಟ್ ನಾಟಕದಿಂದ ತೆಗೆದುಕೊಳ್ಳಲಾಗಿದೆ. ಅದೇ ವಿಷಯದ ಮೇಲೆ ಚಲನಚಿತ್ರ ಕೂಡ ತಯಾರಾಗಿತ್ತು.
ನೀವು ಇದಕ್ಕೆ ತುತ್ತಾಗಿಲ್ಲ ತಾನೇ?
ಸೀಮಾಳಿಗೆ ತನ್ನ ಗಂಡ ರಮೇಶ್ಗೆ ಯಾವುದೊ ಮಹಿಳೆಯ ಜೊತೆ ಸಂಬಂಧ ಇದೆ ಎನಿಸುತ್ತಿತ್ತು. ಇತ್ತೀಚೆಗೆ ಗಂಡ ತನ್ನ ಬಗ್ಗೆ ಆಸಕ್ತಿ ಕಡಿಮೆ ಮಾಡಿದ್ದ. ಆದರೆ ಮೊದಲಿಗಿಂತ ಹೆಚ್ಚು ಸಂತೋಷದಿಂದಿರುತ್ತಿದ್ದ. ತನ್ನ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ. ಜಿಮ್ ಗೆ ಕೂಡ ಹೋಗುತ್ತಿದ್ದ. ಮನೆಗೆ ತಡವಾಗಿ ಬರುತ್ತಿದ್ದ ಹಾಗೂ ಮೊಬೈಲ್ಗೆ ಅಂಟಿಕೊಂಡು ಕುಳಿತಿರುತ್ತಿದ್ದ.
ಅದೊಂದು ದಿನ ಸೀಮಾ ಅವನ ಅನಾಸಕ್ತಿಯ ಬಗ್ಗೆ ಕೇಳಿದಳು. ಅದಕ್ಕೆ ತದ್ವಿರುದ್ಧ ಎಂಬಂತೆ ಅವನು ಅವಳ ಮೇಲೆಯೇ ಕೆಂಡ ಕಾರಿದ, “ಯಾಕೆ ನೀನು ಒಂದು ವಿಷಯ ಹಿಡಿದುಕೊಂಡು ನನ್ನ ಮೂಡ್ ಆಫ್ ಮಾಡುತ್ತಿರುವೆ? ನನಗೆ ಉಸಿರುಗಟ್ಟಿದಂತಾಗಿದೆ,” ರಮೇಶನ ಈ ತೆರನಾದ ಮಾತುಗಳನ್ನು ಕೇಳಿ ಅವಳು ತನ್ನನ್ನೇ ತಾನು ದೂಷಿಸಿಕೊಳ್ಳತೊಡಗಿದಳು. ತನ್ನದೇ ತಪ್ಪು ಎಂದು ಭಾವಿಸಿದಳು. ರಮೇಶನದು ಏನೂ ತಪ್ಪಿಲ್ಲ, ಆಕೆಗೆ ತನ್ನದೇ ತಪ್ಪು ಎನಿಸತೊಡಗಿತು. ನಾನು ಹೆಚ್ಚು ಯೋಚಿಸುತ್ತಿದ್ದೇನೆ. ಈ ರೀತಿ ಅವಳಿಗೆ ಅಪರಾಧಪ್ರಜ್ಞೆ ಕಾಡತೊಡಗಿತು.
ಮಾನಸಿಕ ರೋಗ
ಮನೋರೋಗ ತಜ್ಞೆ ಡಾ. ಅನಾಮಿಕಾ ಹೀಗೆ ಹೇಳುತ್ತಾರೆ, “ವಾಸ್ತವದಲ್ಲಿ ರಮೇಶನ ಈ ವರ್ತನೆಗೆ ಮನೋವೈಜ್ಞಾನಿಕ ಭಾಷೆಯಲ್ಲಿ `ಗ್ಯಾಸ್ ಲೈಟಿಂಗ್’ ಎಂದು ಹೇಳಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮನೋರೋಗಿ ವ್ಯಕ್ತಿ ಮಾತು ಮಾತಿನಲ್ಲಿ ಇನ್ನೊಬ್ಬರನ್ನು ಹಿಂಸೆ ಮಾಡುತ್ತಿರುತ್ತಾನೆ. ಇದು ರಿಲೇಶನ್ ಶಿಪ್ ಅಥವಾ ಯಾವುದೇ ಸಂಬಂಧದಲ್ಲೂ ಆಗಬಹುದು. ಹಿಂಸೆ ಕೊಡು ವ್ಯಕ್ತಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಂತ್ರಸ್ತೆಯ ಮೇಲೆ ಒತ್ತಡ ಹೇರುತ್ತಾನೆ. ಎದುರಿಗಿನ ವ್ಯಕ್ತಿಗೆ ಮಾತನಾಡಲು ಅವಕಾಶವನ್ನೇ ಕೊಡುವುದಿಲ್ಲ. ಅವನು ಸಂತ್ರಸ್ತೆಯ ವಿರುದ್ಧ ಇತರರನ್ನು ರೊಚ್ಚಿಗೆಬ್ಬಿಸಲು ಪ್ರಯತ್ನಿಸುತ್ತಾನೆ. ಇದೆಲ್ಲದಕ್ಕಾಗಿ ಅವನು ಸುಳ್ಳು ಹೇಳುತ್ತಾನೆ.”
ಅನಾಮಿಕ ಮುಂದುವರಿದು ಹೀಗೆ ಹೇಳುತ್ತಾರೆ, “ಇದು ಒಂದು ತೆರನಾದ ಮಾನಸಿಕ ರೋಗ. ಹಿಂಸೆ ಮಾಡುವ ವ್ಯಕ್ತಿ ತನ್ನದೇ ಸರಿ ಎಂದು ಪ್ರತಿಪಾದಿಸುತ್ತಾನೆ. ಯಾವ ವ್ಯಕ್ತಿ ಗ್ಯಾಸ್ ಲೈಟಿಂಗ್ನಿಂದ ಪೀಡಿತನಾಗಿರುತ್ತಾನೋ, ಆ ವಿಷಯ ಸ್ವತಃ ಆ ವ್ಯಕ್ತಿಗೆ ಗೊತ್ತಿರುವುದಿಲ್ಲ. ಇದು ಒಂದು ತೆರನಾದ ಮಾನಸಿಕ ಹಿಂಸೆಯೇ ಆಗಿದೆ. ಇದರಲ್ಲಿ ಹಿಂಸೆ ಮಾಡುವ ವ್ಯಕ್ತಿ ತನ್ನ ತಪ್ಪುಗಳ ಮೇಲೆ ಪರದೆ ಎಳೆಯಲು ಸಂತ್ರಸ್ತೆಯ ಮೇಲೆಯೇ ತಪ್ಪು ಹೊರಿಸುತ್ತಾನೆ. ಹೀಗಾಗಿ ಸಂತ್ರಸ್ತೆಗೆ ತನ್ನ ಮೇಲೆಯೇ ಸಂದೇಹಪಡುವಂತಾಗುತ್ತದೆ.”
ಕೇವಲ ಸಂಬಂಧಗಳಿಗೆ ಸೀಮಿತಲ್ಲ…..
ಗ್ಯಾಸ್ ಲೈಟಿಂಗ್ ಕೇವಲ ಸಂಬಂಧಕ್ಕಷ್ಟೇ ಸೀಮಿತವಾಗಿಲ್ಲ. ಸರ್ಕಾರ ಹಾಗೂ ಸಂಸ್ಥೆಗಳು ಕೂಡ ಗ್ಯಾಸ್ ಲೈಟಿಂಗ್ನಿಂದಾಗಿ ನೀವು ಅವರ ಮೇಲೆ ಅವಲಂಬಿಸುವಂತೆ ಮಾಡುತ್ತದೆ. ಏಕೆಂದರೆ ನಾವು ಯೋಚಿಸುವುದನ್ನೇ ಬಿಟ್ಟುಬಿಡಬೇಕು ಹಾಗೂ ಅವರು ಹೇಳಿದಂತೆಯೇ ನಡೆಯಬೇಕು ಎನ್ನುವುದು ಅದರ ಹಿಂದಿನ ತರ್ಕವಾಗಿರುತ್ತದೆ.
ಬೇರೆಯವರ ಮೇಲೆ ಅವಲಂಬನೆ
ಗ್ಯಾಸ್ ಲೈಟಿಂಗ್ನ ಅರ್ಥ ಇನ್ನೊಬ್ಬರನ್ನು ತಮ್ಮ ಮೇಲೆ ಅವಲಂಬಿತರಾಗುವಂತೆ ಮಾಡುವುದು. ಏಕೆಂದರೆ ಇದು ಆ ವ್ಯಕ್ತಿ ತನ್ನ ಬಗ್ಗೆ ಯೋಚಿಸದಂತೆ ಮಾಡುತ್ತದೆ. ಅಷ್ಟೇ ಅಲ್ಲ, ಪೀಡಿಸುವ ವ್ಯಕ್ತಿಯ ಪ್ರತಿಯೊಂದು ಆದೇಶವನ್ನೂ ಪಾಲಿಸುವಂತೆ ಮಾಡುತ್ತದೆ. ಒಂದು ಅಚ್ಚರಿದಾಯಕ ವಿಷಯವೆಂದರೆ, ಪೀಡಿತ ವ್ಯಕ್ತಿಗೆ ಇದರ ಸುಳಿವು ಕೂಡ ಇರುವುದಿಲ್ಲ. ತನ್ನ ಬ್ರೇನ್ ವಾಶ್ ಮಾಡಲಾಗುತ್ತಿದೆ. ತನ್ನನ್ನು ನಕಾರಾತ್ಮಕಗೊಳಿಸಸಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ.
ಮಾನಸಿಕ ಹಿಂಸೆ
ತಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂಬುದು ಬಹಳಷ್ಟು ಕಡಿಮೆ ಜನರಿಗೆ ಗೊತ್ತಿರುತ್ತದೆ. ಇದರ ಬಗ್ಗೆ ಗೊತ್ತಾದವರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಕಾರಣವೇನೆಂದರೆ, ನಾವು ಪೀಡಿಸುವುದು ಎಂದರೆ ನಮ್ಮ ಕಣ್ಮುಂದೆ ಒಬ್ಬ ಗಾಯಗೊಂಡ ಮಹಿಳೆಯ ಚಿತ್ರ ಬರುತ್ತದೆ. ಅವಳನ್ನು ಥಳಿಸಲಾಗಿರುತ್ತದೆ. ಹಿಂಸೆ ಎಂದರೆ ಅದು ಮಾನಸಿಕ ಕೂಡ ಆಗಿರಬಹುದು. ಸಂಗಾತಿ ತನಗೆ ಹೊಡೆಯುವುದಿಲ್ಲವೆಂದರೆ ಅದೆಂಥ ಹಿಂಸೆ ಎನಿಸುತ್ತದೆ. ದೈಹಿಕ ಶೋಷಣೆಯಲ್ಲಿ ದೇಹದ ಮೇಲೆ ಗಾಯಗಳು ಕಂಡುಬರುತ್ತವೆ. ಆದರೆ ಮಾನಸಿಕ ಹಿಂಸೆಯಲ್ಲಿ ಗಾಯಗಳು ಗೋಚರಿಸುವುದಿಲ್ಲ. ಆದರೆ ಪೀಡಿತ ವ್ಯಕ್ತಿ ಒಳಗಿಂದೊಳಗೆ ತತ್ತರಿಸಿ ಹೋಗುತ್ತಾನೆ. ಆಕೆಯ ಆತ್ಮವಿಶ್ವಾಸ ಸಂಪೂರ್ಣ ಕುಸಿಯುತ್ತದೆ. ಇಂತಹ ಜನರನ್ನು ಬಹಳ ಸುಲಭವಾಗಿ ಗ್ಯಾಸ್ ಲೈಟಿಂಗ್ಗೆ ತುತ್ತಾಗಿಸಬಹುದು.
ಏನು ಕಾರಣ?
ಗ್ಯಾಸ್ ಲೈಟಿಂಗ್ಗೆ ಏನು ಕಾರಣ, ಯಾವ ರೀತಿ ತೊಂದರೆಗೀಡು ಮಾಡುತ್ತದೆ? ನೋಡಿ :
ಇದು ಪೀಡಿತ ವ್ಯಕ್ತಿಯ ಹಿಂದಿನ ಜೀವನಕ್ಕೆ ಸಂಬಂಧವಿಟ್ಟಿರಬಹುದು.
ಚೆಲ್ಲಾಪಿಲ್ಲಿಯಾದ ಕುಟುಂಬ ಕೂಡ ಇದಕ್ಕೆ ಕಾರಣವಾಗಿರಬಹುದು.
ಪೀಡಿಸುವ ವ್ಯಕ್ತಿ ಕೂಡ ಹಿಂದೆ ಪೀಡೆಗೆ ಒಳಗಾಗಿರಬಹುದು.
ತನ್ನ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳಲು ಹೀಗೆ ಮಾಡುತ್ತಿರಬಹುದು.
ಆರಂಭಿಕ ಲಕ್ಷಣಗಳು
ಯಾವುದೇ ತಪ್ಪಿಗೆ ತನ್ನನ್ನು ತಾನೇ ತಪ್ಪಿತಸ್ಥೆ ಎಂದು ಭಾವಿಸುವುದು.
ಆತ್ಮವಿಶ್ವಾಸದ ಕೊರತೆ ಹಾಗೂ ಏಕಾಂಗಿತನ.
ಸಂಗಾತಿ ಎದುರು ಧೈರ್ಯ ಕಳೆದುಕೊಳ್ಳುವುದು, ಮನಸ್ಸಿನ ಮಾತನ್ನು ಹೇಳಲು ಆಗದೇ ಇರುವುದು.
ಸಂಗಾತಿಯ ತಪ್ಪುಗಳನ್ನು ಮಾತ್ರ ತಪ್ಪೆಂದು ಭಾವಿಸದಿರುವುದು.
ಚಿಕಿತ್ಸೆ ಸಾಧ್ಯ
ಗ್ಯಾಸ್ ಲೈಟಿಂಗ್ಗೆ ತುತ್ತಾದ ವ್ಯಕ್ತಿಯ ಚಿಕಿತ್ಸೆ ಸಾಧ್ಯ.
ಎಲ್ಲಕ್ಕೂ ಮುಂಚೆ ಸಮಸ್ಯೆಯನ್ನು ಗುರುತಿಸುವುದು ಅತ್ಯವಶ್ಯ.
ಇಲ್ಲ ಎನ್ನಲು ಕಲಿಯಿರಿ.
ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ.
ಮನೋತಜ್ಞರ ಜೊತೆ ಸಮಾಲೋಚನೆ, ಸಲಹೆ ಪಡೆಯಬಹುದು.
ಯಾರ ಮೇಲೆ ನಂಬಿಕೆ ಇದೆಯೋ ಅವರ ಮುಂದೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ.
ಒಂದು ಸಂಗತಿ ನೆನಪಿನಲ್ಲಿಡಿ. ಯಾರನ್ನೂ ನಾವು ಬದಲಿಸಲು ಆಗದು. ಎಲ್ಲರಿಗೂ ತಮ್ಮದೇ ಆದ ವಿಚಾರಧಾರೆ ಇದೆ. ಯಾರ ವಿಚಾರವನ್ನೂ ನಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಆಗದು. ಹೀಗಾಗಿ ಇನ್ನೊಬ್ಬರು ನಿಮ್ಮನ್ನು ಆವರಿಸಿಕೊಳ್ಳದಂತೆ ನೋಡಿಕೊಳ್ಳಿ. – ಪಿ. ಜ್ಯೋತಿ