ಉಪ್ಪಿ-2ಗೆ ಡರ್ಟಿ ಹುಡ್ಗೀನಾ….?

`ಡರ್ಟಿ ಪಿಕ್ಚರ್‌’ ಮತ್ತು `ಕಹಾನಿ’ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಸ್ಥಾನ ಸೃಷ್ಟಿಸಿಕೊಂಡು ಖಾನ್‌ತ್ರಯರಿಗೂ ಸೆಡ್ಡುಹೊಡೆದ ಮಲೆಯಾಳಿ ಕುಟ್ಟಿ ವಿದ್ಯಾ ಬಾಲನ್‌ `ಉಪ್ಪಿ-2′ ತಿನ್ನಲು ಸ್ಯಾಂಡಲ್ ವುಡ್‌ಗೆ ಬರುತ್ತಿದ್ದಾರಾ….? ಹಾಗೊಂದು ಸುದ್ದಿ `ಉಪ್ಪಿ-2’ಗಿಂತ ಹಸಿಬಿಸಿಯಾಗಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ರಿಯಲ್ ಸ್ಟಾರ್‌ ಉಪ್ಪಿ ಈಗಾಗಲೇ ತಮ್ಮ ಚಿತ್ರಕ್ಕೆ ವಿದ್ಯಾ ಬಾಲನ್‌ ಅವರನ್ನು ಕರೆತರಲು ಅವರ ಜೊತೆ ಮಾತುಕತೆ ಮುಗಿಸಿದ್ದಾರೆ. ಪಾತ್ರ ಮತ್ತು ಸಂಭಾವನೆ ಎರಡೂ `ತೂಕ’ದಲ್ಲಿ ಹೆವಿಯಾಗಿದ್ದರೆ ಆಕೆ ಸ್ಯಾಂಡಲ್ ವುಡ್‌ಗೆ ಬರುವುದರಲ್ಲಿ ಸಂಶಯವಿಲ್ಲ. ಆ ಲೆಕ್ಕಕ್ಕೆ ವಿದ್ಯಾ, ಇಲ್ಲಿಗೆ ಬಂದರೆ, ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಆಕೆಯ ತೆರೆಕಾಣಲಿರುವ ಮೊದಲ ಚಿತ್ರ `ಉಪ್ಪಿ-2′ ಆಗಲಿದೆ.

ರಮ್ಯಾ ಮರಳಿ ಗೂಡಿಗೆ

Ramya

ರಾಜಕೀಯ ಕೆಸರಾಟದಲ್ಲಿ ಸೋತು ಹೈರಾಣಾಗಿ, ಆ ಕೆಸರನ್ನು ತೊಳೆದುಕೊಳ್ಳಲು ಲಂಡನ್‌ಗೆ ಹಾರಿದ್ದ ಹೈಟೆಕ್‌ ತಾರೆ ರಮ್ಯಾ `ಸಾಕಪ್ಪಾ ಸಾಕು. ಈ ರಾಜಕೀಯದ ಸಹವಾಸವೇ ಬೇಡ. ನನಗೆ ಸಿನಿಮಾನೇ ಸಾಕು,’ ಅಂತ ರಾಜಕಾರಣಕ್ಕೆ `ಕೈ’ ಮುಗಿದು, ಮಂಡ್ಯದಿಂದ ಬೆಂಗಳೂರಿನ ತಾಜ್‌ ಹೋಟೆಲ್ ಲೊಕೇಷನ್‌ಗೆ ಶಿಫ್ಟ್ ಆಗಿಬಿಟ್ಟರು. ಈ ವಿಷಯ ಲೀಕ್‌ ಆಗುವಷ್ಟರಲ್ಲಿ ದುನಿಯಾ ಸೂರಿ ನಿರ್ದೇಶನದ ಅಪ್ಪು ಅಭಿನಯದ `ದೊಡ್ಮನೆ ಹುಡುಗ’ನಿಗೆ ನಾಯಕಿಯಾಗಿ ರಮ್ಯಾ ಸೆಟ್ಟಿಗೆ ಬಂದಿರುವುದು ಈಗಾಗಲೇ ಖಚಿತವಾಗಿದೆ. ರಾಜಕೀಯಕ್ಕೆ ಜಿಗಿಯುವ ಮೊದಲು ರಮ್ಯಾ ಶಿವಣ್ಣನಿಗೆ ನಾಯಕಿಯಾಗಿದ್ದ `ಆರ್ಯನ್‌’ ತೆರೆಗೆ ರೆಡಿಯಾಗುತ್ತಿದೆ. ಇದೀಗ ಮತ್ತೆ ಮರಳಿ ಬಂದಿರುವ ರಮ್ಯಾ, `ನೀರ್‌ ದೋಸೆ’ ಹಾಕುವುದು ಒಪ್ಪಿದರೆ, ನಿರ್ದೇಶಕ ವಿಜಯ್‌ ಪ್ರಸಾದ್‌ ಹೆಂಚು ಕಾಯಲು ಒಲೆ ಹಚ್ಚಬಹುದಾ ಎಂದು ಗಾಂಧಿನಗರದಲ್ಲಿ ಮಾತೋ ಮಾತು.

ಸನ್ನಿ ಲಿಯೋನ್‌ ಬರ್ತಾಳಂತಾ….?

sav2

ಪೋಲಿ ಚಿತ್ರ ತಾರೆ ಸನ್ನಿ ಲಿಯೋನ್‌ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾಳೆ. ಅದಕ್ಕೆ ಕಾರಣ ಕೇವಲ ನೀಲಿ ಚಿತ್ರಗಳೆನ್ನುವುದು ಸುಳ್ಳು. ಈಗಾಗಲೇ ಬಾಲಿವುಡ್‌ನಲ್ಲೂ ಬಿಚ್ಚಮ್ಮಳಾಗಿ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಈ ಬೆಡಗಿ, ಇದೀಗ ಸ್ಯಾಂಡಲ್ ವುಡ್‌ಗೂ ಎಂಟ್ರಿ ಕೊಡುತ್ತಿದ್ದಾಳಾ…? ಜೋಗಿ ಪ್ರೇಮ್ ಅವರ `ಡಿ.ಕೆ.’ ಚಿತ್ರಕ್ಕೆ ಆಕೆ ಐಟಂ ಗರ್ಲ್ ಆಗಿ ಬರುತ್ತಿದ್ದಾಳಂತೆ. ಅವಳಿಗೆ ಒಂದು ಕೋಟಿ ಸಂಭಾವನೆ ಕೊಟ್ಟು ಕರೆಸುತ್ತಿದ್ದಾರೆ. ಅಂದಮೇಲೆ, ಐಟಂ ಸಾಂಗ್‌ ಸಹ ಬಹಳ ಮಸ್ತ್ ಆಗಿರುತ್ತದೆ. ನಮ್ಮ ಪಡ್ಡೆ ಹುಡುಗರ ಕಣ್ಣುಗಳೂ ತಂಪಾಗುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇದೆಷ್ಟು ಸತ್ಯ ಸುಳ್ಳೆನ್ನುವುದು ಪ್ರೇಮ್ ಗೆಲ್ಲದೇ ಇನ್ಯಾರಿಗೂ ಗೊತ್ತಿಲ್ಲ. ಏಕೆಂದರೆ, ಬೂಸಿ ಬಿಡುವುದರಲ್ಲಿ ಮತ್ತು ಚಿತ್ರ ತಯಾರಾಗೋ ಮೊದಲೇ ಪ್ರಚಾರ ಗಿಟ್ಟಿಸುವುದರಲ್ಲಿ ಜೋಗಿ ಪ್ರೇಮ್ ಎತ್ತಿದ ಕೈ. ಅದೇನೇ ಇದ್ದರೂ, ಪ್ರೇಮ್ ತಮ್ಮ ಚಿತ್ರಗಳಲ್ಲಿ ಇಂತಹ ಕೆಲವು ವಿಶೇಷತೆಗಳನ್ನು ತುಂಬಿ ಪ್ರೇಕ್ಷಕನನ್ನು ಗೆಲ್ಲೋ ಪ್ರಯತ್ನ ಮಾಡುತ್ತಿರುತ್ತಾರೆ. `ಜೋಗಿ’ ಚಿತ್ರದ ಗುಂಗಿನಿಂದ ಇನ್ನೂ ಹೊರಬರದ ಪ್ರೇಮ್, ನಂತರದ ಚಿತ್ರಗಳಲ್ಲೂ ಅದೇ ಜಾಡನ್ನು ಉಳಿಸಿಕೊಂಡಿದ್ದರು. ಬಹುಶಃ `ಡಿ.ಕೆ.’ಯೂ ಅದಕ್ಕೆ ಹೊರತಲ್ಲವೇನೋ….?  ಆದರೆ ಒಂದಂತೂ ಸತ್ಯ, ತಮ್ಮ ಚಿತ್ರಗಳಲ್ಲಿ ಹೊಸತನ ಇರುತ್ತದೋ ಬಿಡುತ್ತದೋ ಗಿಮಿಕ್‌ಗಳಿಗೇನೂ ಕೊರತೆ ಇರುವುದಿಲ್ಲ. ಸನ್ನಿ ಲಿಯೋನ್‌ ಬರುತ್ತಿದ್ದಾಳೆ ಎಂಬ ಸುದ್ದಿಯೂ ಅಂತಹ ಒಂದು ಗಿಮಿಕ್‌ ಇರಬಹುದೇ…?

ಸಾರಿ-2

Rajesh-Krishnan

ಶ್ರೀನಗರ ಕಿಟ್ಟಿ ಈ ವರ್ಷ ಬಿಜಿ ನಟ ಎಂದೇ ಹೇಳಬಹುದು. ಅವರು `ಸಾರಿ-2′ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತ, “ಸಾರಿ ಒಂದನೇ ಭಾಗದಲ್ಲೂ ನಾನಿದ್ದೆ ಈ `ಸಾರಿ-2′ ನಲ್ಲೂ ಇದ್ದೀನಿ. ನಿರ್ದೇಶಕ ಜೇಕಬ್‌ ವರ್ಗೀಸ್‌ ಸ್ವಂತ ನಿರ್ಮಾಣದ ಚಿತ್ರವಿದು. ತುಂಬಾನೆ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಹಾಡುಗಳಂತೂ ಸೂಪರ್ರಾಗಿವೆ. ಈ ಚಿತ್ರದಲ್ಲಿ ಶೃತಿ ಹರಿಹರನ್‌ ನಾಯಕಿಯಾಗಿ ನನ್ನೊಂದಿಗೆ ನಟಿಸತ್ತಿದ್ದಾಳೆ. ಗಿರೀಶ್‌ ಕಾರ್ನಾಡ್‌ ಜೊತೆ ಮೊದಲ ಬಾರಿ ನಟಿಸುತ್ತಿದ್ದೇನೆ. ವೀರಪ್ಪ ಬಚ್ಚಿಟ್ಟಿರುವ ಮುನ್ನೂರು ಕೋಟಿ ಹಣವನ್ನು ಹುಡುಕಲು ಕಾಡಿಗೆ ಹುಡುಕಿಕೊಂಡು ಹೋಗುವ ನನ್ನದು ಅತ್ಯಂತ ಕುತೂಹಲ ಕೆರಳಿಸುವಂಥ ಪಾತ್ರ. ಮೊದಲ ಸಾರಿಯಲ್ಲಿ ಅಪ್ಪ ಅಮ್ಮ ಯಾರೂ ಇರಲಿಲ್ಲ. `ಸಾರಿ-2′ ಚಿತ್ರದಲ್ಲಿ ಎಲ್ಲವೂ ಇದೆ. ಹಾಡಿದೆ, ನಾಯಕಿ ಇದ್ದಾಳೆ. ಈ ಪಾತ್ರ ನನಗೆ ಅತ್ಯಂತ ಖುಷಿ ಕೊಟ್ಟಿದೆ,” ಎಂದು ಕಿಟ್ಟಿ ಹೇಳುತ್ತಾರೆ. ಅವರ ಹುಟ್ಟುಹಬ್ಬಕ್ಕೆ ತಮ್ಮದೇ ನಿರ್ಮಾಣದ `1980′ ಚಿತ್ರವನ್ನು ಲಾಂಚ್‌ ಮಾಡಲಿದ್ದಾರೆ. ನೈಜ ಘಟನೆ ಆಧರಿಸಿದ ಚಿತ್ರ  ಇದಂತೆ.

ರೀಮೇಕ್‌ ಪದ ರೈಗೆ ಅಲರ್ಜಿ

sunny-leone1

ಬಹುಭಾಷಾ ನಟ ಪ್ರಕಾಶ್‌ ರೈಗೆ `ರೀಮೇಕ್‌’ ಪದ ಎಂದರೆ ಎಲ್ಲಿಲ್ಲದ ಅಲರ್ಜಿ. ಬಹುಶಃ ಹಾಗಾಗಿಯೇ ಅವರು ಸದಾ ಸಾಹಿತ್ಯ ಮತ್ತು ಭಾವನೆಗಳ ಜೊತೆಗೆ ಬೆರೆತು, ನಟನೆ ಮತ್ತು ನಿರ್ದೇಶನದಲ್ಲಿ ಒಟ್ಟಾಗಿ ತೊಡಗಿಸಿಕೊಳ್ಳುತ್ತಾರೆ. `ಒಗ್ಗರಣೆ’ ಇದಕ್ಕೆ ಉತ್ತಮ ಉದಾಹರಣೆ. `ಒಗ್ಗರಣೆ’ ಕೇವಲ ಅಡುಗೆಗಷ್ಟೇ ಅಲ್ಲ, ಚಿತ್ರಕ್ಕೂ ಇರಬೇಕು ಎಂಬ ರೈ ಅಭಿಮತ ಒಪ್ಪುವಂಥದ್ದೇ. ಅದಕ್ಕಾಗಿಯೇ ಅವರಿಗೆ ರೀಮೇಕ್‌ ಎಂದರೆ ಅಲರ್ಜಿ ಇರಬಹುದೇ? ರೈ ಪ್ರಕಾರ ಒಳ್ಳೆಯ ಅಡುಗೆ ಮಾಡುವುದೆಂದರೆ ಉತ್ತಮ ಸಿನಿಮಾ ಮಾಡುವುದೂ ಆಗಿದೆ. `ಒಗ್ಗರಣೆ’ ಚಿತ್ರ ರೂಪುಗೊಂಡಿದ್ದೇ ಇಂತಹ ತಾಂತ್ರಿಕತೆಯಲ್ಲಿ. ಭಾವನೆಗಳ ಜೊತೆ ಆಟ ಆಡುತ್ತಾ ಕಥೆಗೆ ಪುಷ್ಟಿ ನೀಡುವ ರೈ, ಇಲ್ಲಿಯೂ `ನಾನೂ ನನ್ನ ಕನಸು’ ಮಾದರಿಯಲ್ಲೇ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ನಿರ್ದೇಶಕರಾಗಿ ಮತ್ತೊಮ್ಮೆ ಮಿಂಚಿದ್ದಾರೆ. ಇಳೆಯರಾಜ ಸಂಗೀತದಲ್ಲಿ ಈ ಚಿತ್ರ ಹೊಸ ಗಾನಸುಧೆಗೂ ನಾಂದಿ ಹಾಡಿದೆ ಎನ್ನಬಹುದು. ಹೀಗೆ ಅಡುಗೆಯ ಘಮಘಮ, ಪರಿಮಳ ಮೂಗಿಗೆ ಬಡಿಯುಂತೆ ಮಾಡಿದ್ದಾರೆ. ಅಂದರೆ, ಅದರರ್ಥ ಸರಿಯಾಗಿ `ಒಗ್ಗರಣೆ’ ಹಾಕಿದ್ದಾರೆ ಎಂದೇ. ಈಗಾಗಲೇ ಚಿತ್ರಮಂದಿರಗಳಲ್ಲಿ `ಒಗ್ಗರಣೆ’ ಹಾಕಿದ ಸದ್ದು ಕೇಳಿಸಿದೆ, ರುಚಿಯೂ ಹಿಡಿಸಿದೆ! ರಾಜೇಶ್‌ ಈಗ ಮತ್ತೆ ಹೀರೊ

 

`ಗಾಳಿಪಟ’ ಚಿತ್ರದಲ್ಲಿ ಭಗ್ನ ಪ್ರೇಮಿಯಾಗಿ ಕೈಯಲ್ಲಿ ಗಿಟಾರ್‌ ಹಿಡಿದು ನದಿ ತೀರದಲ್ಲಿ ಗಜಲ್ ಹಾಡುತ್ತಾ… ಮೆಚ್ಯೂರ್ಡ್ ಪಾತ್ರ ಮಾಡಿದ್ದ ರಾಜೇಶ್‌ ಕೃಷ್ಣನ್‌ ಕನ್ನಡದ ಉತ್ತಮ ಗಾಯಕ. ಇವರು ನೋಡುವುದಕ್ಕೆ ಅಂದವಾಗಿರೋದ್ರಿಂದ ಆಗಾಗ್ಗೆ ಮೇಕಪ್ ಹಾಕ್ತಿರ್ತಾರೆ. ಆಗಾಗ ಪ್ರೊಫೆಷನಲ್ ಲೈಫ್‌ ಜೊತೆ ಪರ್ಸನಲ್ ಲೈಫ್ ಚಾನಲ್ ಗಳಲ್ಲಿ ಹರಿದಾಡುತ್ತಿರುತ್ತೆ. ಸದ್ಯಕ್ಕೆ ಇವೆಲ್ಲದರಿಂದ ದೂರ ಬಂದಿರುವ ರಾಜೇಶ್‌ ನಾಯಕನಾಗಿ ಎಲ್ಲವನ್ನು ಮರೆತು ಹಾಯಾಗಿದ್ದಾರೆ. ನಟನೆಯೂ ಸ್ವಲ್ಪ ಇರಲಿ ಅಂತ, `ಮೆಲೋಡಿ’ ಎನ್ನುವ ಚಿತ್ರದಲ್ಲೂ ನಟಿಸುತ್ತಿದ್ದಾರೆ. ನಂಜುಂಡ ನಿರ್ದೇಶನದ ಈ ಚಿತ್ರದಲ್ಲಿ ರಾಜೇಶ್‌ ನಾಯಕ. ತಮ್ಮ ಲುಕ್ಸ್ ಬದಲಾಯಿಸಿಕೊಂಡಿದ್ದಾರೆ. ಮೊದಲಿಗಿಂತಲೂ ಡಿಫರೆಂಟಾಗಿ ಕಾಣ್ತಿದ್ದಾರೆ. ಎಲ್ಲದರಲ್ಲೂ ಶಿಸ್ತನ್ನು ಬಯಸುವ ರಾಜೇಶ್‌ ನಾನು ಹಾಡಲು ಸ್ಟುಡಿಯೋಗೆ ಹೋದಾಗ ನನಗಲ್ಲಿ ಶಾಂತಿಯುತವಾದ, ಸ್ವಚ್ಛವಾದ ವಾತಾವರಣವಿರಬೇಕೆಂದು ಬಯಸುತ್ತೇನೆ. ಆಗ ನಾನು ಹಾಡಿಗೆ ನ್ಯಾಯ ಸಲ್ಲಿಸಬಹುದು. `ಮೆಲೋಡಿ’ ಚಿತ್ರದ ಚಿತ್ರೀಕರಣದಲ್ಲೂ ಅದೇ ರೀತಿ ವಾತಾವರಣ ಇದ್ದುದರಿಂದ ನಾನು ಸಿನಿಮಾದಲ್ಲಿ ಇನ್ನಷ್ಟು ಚಂದವಾಗಿ ಕಾಣಿಸ್ತಿನಿ ಅಂತ ಅನಿಸುತ್ತದೆ ಎಂದು ತಾವೀಗ ಹ್ಯಾಪಿಯಾಗಿರುವುದಾಗಿ  ವ್ಯಕ್ತಪಡಿಸುತ್ತಾರೆ.

ಗಣೇಶನ ಬುಗುರಿಯಾಟ

vidya-balan

ಈಗಾಗಲೇ `ಚೆಲ್ಲಾಟ,’ `ಹುಡುಗಾಟ,’ `ಗಾಳಿಪಟ’ ಆಡಿದ್ದೆಲ್ಲಾ ಆಯ್ತು. ಈಗ ಏನಿದ್ದರೂ ಗಣೇಶನಿಗೆ `ಬುಗುರಿ’ ಆಡುವ ಸಮಯ. `ಬುಗುರಿ’ ಗಣೇಶ್‌ ಅಭಿನಯಿಸಲಿರುವ ಹೊಸ ಚಿತ್ರದ ಹೆಸರು. ಎಂ.ಡಿ. ಶ್ರೀಧರ್‌ ನಿರ್ದೇಶಿಸುತ್ತಿದ್ದು, ಈಗಾಗಲೇ ಫೋಟೋ ಶೂಟ್‌ ಮುಗಿದಿದೆ. ಗಣೇಶ್‌ ಮತ್ತು ಶ್ರೀಧರ್‌ ಕಾಂಬಿನೇಷನ್‌ನಲ್ಲಿ `ಚೆಲ್ಲಾಟ’ ಹಾಗೂ `ಕೃಷ್ಣ’ ಚಿತ್ರಗಳು ಸೆಟ್ಟೇರಿದ್ದ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಗೆದ್ದ `ಕೃಷ್ಣ’ದ ಆರು ವರ್ಷಗಳ ನಂತರ ಮತ್ತೆ ಈ ಜೋಡಿ `ಬುಗುರಿ’ ಆಡಲು ಒಟ್ಟಾಗಿದ್ದಾರೆ. ಎಲ್ಲವೂ ಅಂದುಕೊಂಡಂತೇ ಆದಲ್ಲಿ ದಸರಾ ಹೊತ್ತಿಗೆ ಚಿತ್ರಮಂದಿರದಲ್ಲಿ `ಬುಗುರಿ’ ಆಟ ಶುರು. ಆಟ ಹುಡುಗಾಟ ಮತ್ತು ಪ್ರೇಮ ನೈಜ ಜೀವನದ ಕಥೆ ಇದರದು. ಸ್ವಮೇಕ್‌ ಸಿನಿಮಾ ಇದಾಗಿದ್ದು, ಗಣೇಶ್‌ ಇಮೇಜ್‌ಗೆ ತಕ್ಕಂತಿದೆ ಎಂಬುದು ಈ ಚಿತ್ರ ತಂಡದ ಅಭಿಮತ. ಈ ಚಿತ್ರಕ್ಕಾಗಿ ಗಣೇಶ್‌ ಸಾಕಷ್ಟು ವರ್ಕ್‌ ಔಟ್‌ ಮಾಡಿದ್ದಾರಂತೆ. ಸ್ವಲ್ಪ ಸಣ್ಣಗಾಗುವ ಜೊತೆಗೆ ಕುದುರೆ ಸವಾರಿ, ಸ್ಕೇಟಿಂಗ್‌ ಕೂಡ ಅಭ್ಯಾಸ ಮಾಡುತ್ತಿದ್ದಾರಂತೆ.

ಮತ್ತೆ ಬಂದಳು ನಿಂಬೆ ಹುಡುಗಿ

juhi_chawla1

`ಪ್ರೇಮಲೋಕ’ದಲ್ಲಿ ಮಿಂದೆದ್ದು ಕನ್ನಡಿಗರ ಹೃದಯ ಕದ್ದಿದ್ದ ನಿಂಬೆಹಣ್ಣಿನ ಹುಡುಗಿ ಜೂಹಿ ಚಾವ್ಲಾ ಮತ್ತೆ `ಪ್ರೇಮಲೋಕ’ಕ್ಕೆ ಮರಳಿ ಬಂದಿದ್ದಾಳೆ. ಅರೆ! ಮತ್ತೆ ಇನ್ನೊಂದು ಪ್ರೇಮಲೋಕವೇ? ಒಂದರ್ಥದಲ್ಲಿ ಇದೂ ನಿಜವೇ ಆಗಬಹುದಾದರೂ, ಆಕೆ ಬಂದಿದ್ದು `ಪ್ರೇಮಲೋಕ’ದ ಓನರ್‌ ಮನೆಗೆ, ಅಂದರೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಮನೆಗೆ! `ಅಂದು `ನಿಂಬೆಹಣ್ಣಿನಂಥ ಹುಡುಗಿ ಬಂದ್ಲು ನೋಡು….’ ಎಂದು ರವಿಚಂದ್ರನ್‌ ಅವರ `ಪ್ರೇಮಲೋಕ’ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ಈ ಚೆಲುವೆ ಮೊನ್ನೆ ಕ್ರೇಜಿ ಸ್ಟಾರ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿದ್ದರು. ರವಿಚಂದ್ರನ್‌ ತಮ್ಮ ಹುಟ್ಟುಹಬ್ಬದಂದೇ ಹಿರಿಯ ಪುತ್ರ ಮನೋರಂಜನ್‌ನನ್ನು `ರಣಧೀರ ಪ್ರೇಮಲೋಕದಲ್ಲಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪರಿಚಯಿಸಲು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಜೂಹಿ ಬರಬೇಕಿತ್ತು. ಆದರೆ, ಅಂದು ಬರಲಿಲ್ಲ. ಬದಲಿಗೆ ಮರುದಿನ ಅವರ ಮನೆಗೇ ನೇರವಾಗಿ ತೆರಳಿದ ಜೂಹಿ ಅಪ್ಪ ಮಗ ಇಬ್ಬರಿಗೂ ಹೂಗುಚ್ಛ ನೀಡಿ ಶುಭ ಕೋರಿದರು. ಜೂಹಿ `ಪ್ರೇಮಲೋಕ’ದಲ್ಲಿ ನಾಯಕಿಯಾಗಿ ನಟಿಸುವಾಗ ಮನೋರಂಜನ್‌ ಪುಟ್ಟ ಹುಡುಗ. ಅಂದು ಜೂಹಿ ನೋಡಿದ್ದ ಈ ಹುಡುಗ ಇಂದು ಹೀರೋ. ಅಪ್ಪನಂತೆ ಮಗನಿಗೂ `ರಣಧೀರ ಪ್ರೇಮಲೋಕದಲ್ಲಿ’ ಮೆರೆಯುವಂತೆ ಹಾರೈಸಿದ್ದು ವಿಶೇಷ. ಬಲ್ಲ ಮೂಲಗಳಂತೆ ಈ ಚಿತ್ರದಲ್ಲಿ ರವಿ ಜೂಹಿ ಇಬ್ಬರೂ ಮನೋರಂಜನ್‌ನ ಅಪ್ಪ ಅಮ್ಮನಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ