ಶುಭಾಂಗಿ ಉದ್ಯೋಗಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. ಏಕೆಂದರೆ ಆಕೆ ಗರ್ಭಿಣಿಯಾಗಿದ್ದಳು. ವೈದ್ಯರು ಅವಳಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಅಂದಹಾಗೆ ಕೆಲವು ಕಂಪನಿಗಳು ಗರ್ಭಿಣಿಯರನ್ನು ಉದ್ಯೋಗದಲ್ಲಿ ಇರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಜವಾಬ್ದಾರಿಗಳು ಹೆಚ್ಚಾಗಿರುವ ಕಾರಣದಿಂದ ಅವರು ಕೆಲಸ ಕಾರ್ಯಗಳನ್ನು ಸರಿಯಾಗಿ ನಿಭಾಯಿಸಲು ಆಗುವುದಿಲ್ಲ ಎನ್ನುವುದು ಸಂಸ್ಥೆಗಳ ಮುಖ್ಯಸ್ಥರ ಅನಿಸಿಕೆಯಾಗಿರುತ್ತದೆ. ಅಂದಹಾಗೆ ಮಹಿಳೆಯರು ಎರಡೂ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಕಲಿತುಕೊಂಡಿರುತ್ತಾರೆ. ಆದರೂ ಫ್ಯಾಮಿಲಿ ಪ್ಲಾನಿಂಗ್‌ ಅವರ ಕೆರಿಯರ್‌ ನಡುವೆ ಬಾಧೆಯಾಗಿ ಪರಿಣಮಿಸುತ್ತದೆ. ಇದೇ ಹೆದರಿಕೆ ಅವರನ್ನು ಫ್ಯಾಮಿಲಿ ಪ್ಲಾನಿಂಗ್‌ ಬಗ್ಗೆ ಯೋಚಿಸುಂತೆ ಮಾಡುತ್ತಿದೆ.

ಸರ್ವೆ ಏನು ಹೇಳುತ್ತದೆ?

ಲಂಡನ್‌ ಬಿಸ್‌ನೆಸ್‌ ಸ್ಕೂಲಿನ ಹೊಸ ಸಮೀಕ್ಷೆಯ ಪ್ರಕಾರ, 70%ರಷ್ಟು ಮಹಿಳೆಯರು ಕೆರಿಯರ್‌ನಿಂದ ಬ್ರೇಕ್‌ ಪಡೆದು ಚಿಂತಿತರಾಗಿದ್ದಾರೆ. ಅವರಿಗೆ ಕೆರಿಯರ್‌ನಿಂದ ಬ್ರೇಕ್‌ ಪಡೆಯುವುದೆಂದರೆ ಮಾತೃತ್ವಕ್ಕಾಗಿ ರಜೆ ಪಡೆಯುವುದು ಹಾಗೂ ಮಕ್ಕಳ ಯೋಗಕ್ಷೇಮಕ್ಕಾಗಿ ಕಾರ್ಯಸ್ಥಳದಿಂದ ದೂರ ಇರುವುದಾಗಿದೆ.

ಕಳೆದ ವರ್ಷ ಲೇಬರ್‌ ಪಾರ್ಟಿಯ ಸಂಶೋಧನೆಯ ಪ್ರಕಾರ, 50 ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಹೆರಿಗೆ ರಜೆಯಿಂದ ಮರಳುತ್ತಿದ್ದಂತೆ ಅವರನ್ನು ನೌಕರಿಯಿಂದ ತೆಗೆದು ಹಾಕಲಾಯಿತು.

ಪ್ರತಿಭೆಗಳನ್ನು ಕಳೆದುಕೊಳ್ಳುವ ಕಂಪನಿಗಳು

ಈಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಹೊರಹೊಮ್ಮಿಸುತ್ತಿದ್ದಾರೆ. ತಾವು ಏಕಾಂಗಿಯಾಗಿ ಎಲ್ಲವನ್ನು ಮಾಡಿ ತೋರಿಸಬಲ್ಲೇ ಎಂಬುದನ್ನು ಅವರು ಸಾಬೀತು ಮಾಡಿ ತೋರಿಸಿದ್ದಾರೆ. ಮನೆಗಷ್ಟೇ ಸೀಮಿತವಾಗಿದ್ದ ಇಮೇಜ್‌ನ್ನು ಬದಲಿಸಿಕೊಂಡಿದ್ದೇವೆ ಎಂಬುದನ್ನು ಅವರು ಕೆಲಸದ ಮೂಲಕ ಬಿಂಬಿಸುತ್ತಿದ್ದಾರೆ. ಅಂತಹ ಕೆಲವು ಪ್ರಸಿದ್ಧ ವ್ಯಕ್ತಿಗಳ ಉದಾಹರಣೆ ಗಮನಿಸಿ :

ಇಂದಿರಾ ನೂಯಿ

ಪೆಪ್ಸಿಕೊ ಕಂಪನಿಯ ಸಿಇಓ ಹಾಗೂ ಪ್ರೆಸಿಡೆಂಟ್‌ ಆಗಿದ್ದಾರೆ. ತಮ್ಮ ವಿಶಿಷ್ಟ ಸಾಧನೆಯಿಂದ ಅವರು ಗೌರವ ಪಡೆದುಕೊಂಡಿದ್ದಾರೆ.

ಚಂದಾ ಕೋಚರ್

ಐಸಿಐಸಿಐ ಬ್ಯಾಂಕಿನ ಸಿಇಓ ಆಗಿದ್ದರು. ತಮ್ಮ ಸಾಧನೆಗಳಿಂದ ಮೇಲೆ ಬಂದರು. ಆದರೆ ಅನೇಕ ಹಗರಣಗಳ ಕಾರಣದಿಂದ ಅವರು ಪದತ್ಯಾಗ ಮಾಡಬೇಕಾಗಿ ಬಂತು. ಅದಕ್ಕೂ ಮುಂಚೆ ಅವರು ಐಸಿಐಸಿಐ ಬ್ಯಾಂಕ್‌ಗೆ ಭಾರತದಲ್ಲಿ ಬೆಸ್ಟ್ ಬ್ಯಾಂಕ್‌ ರೀಟೇಲ್ ನ ಅವಾರ್ಡ್‌ ದೊರಕಿಸಿ ಕೊಟ್ಟಿರುವುದು ಮಹತ್ವದ್ದು.

ಮಿತಾಲಿ ರಾಜ್

ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದ ದಾಖಲೆ ಹೊಂದಿದ್ದಾರೆ. ನಾಯಕಿಯಾಗಿ ಅವರ ಸಾಧನೆ ಅಪ್ರತಿಮ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದ. ಒಂದು ವೇಳೆ ನಾವು ಮಹಿಳೆಯರನ್ನು ಕಡಿಮೆ ಎಂದು ಭಾವಿಸಿದ್ದರೆ ಅವರು ಈ ರೀತಿಯ ಸಾಧನೆ ಮಾಡುತ್ತಿದ್ದರೇ ಇಲ್ಲಿ ಏಳುವ ಮುಖ್ಯ ಪ್ರಶ್ನೆಯೆಂದರೆ, ಕಂಪನಿಗಳು ಇಷ್ಟೊಂದು ಪ್ರತಿಭಾವಂತ ಉದ್ಯೋಗಿಗಳನ್ನು ಏಕೆ ಕಳೆದುಕೊಳ್ಳುತ್ತಿವೆ? ತಾಯಿಯಾದ ಬಳಿಕ ಅವರು ಮಕ್ಕಳ ಜವಾಬ್ದಾರಿ ನಿಭಾಯಿಸುತ್ತ ಕಂಪನಿಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ಎನ್ನುವುದು ಕಂಪನಿಗಳ ಅಭಿಪ್ರಾಯವಾಗಿದೆ. ಆದರೆ ಈ ಅಭಿಪ್ರಾಯ ಸುಳ್ಳು. ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಬಲ್ಲರು. ಕಂಪನಿಗಳು ಅವರಿಂದ ಈ ಅವಕಾಶವನ್ನು ಕಸಿದುಕೊಂಡು ಅವರನ್ನು ಮನೆಗೇ ಸೀಮಿತಗೊಳಿಸುತ್ತವೆ. ಕಂಪನಿಗಳು ತಮ್ಮ ಯೋಚನೆಯನ್ನು ಬದಲಿಸಿಕೊಳ್ಳಬೇಕು. ಆಗಲೇ ದೇಶ ಪ್ರಗತಿ ಕಾಣಲು ಸಾಧ್ಯವಾಗುತ್ತದೆ.

ಮಹಿಳೆಯರ ಬದಲಾದ ಯೋಚನೆ

ಮೊದಲು ಮಹಿಳೆಯರು ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಸೀಮಿತರಾಗಿರುತ್ತಿದ್ದರು, ಆಗ ಪುರುಷರಷ್ಟೇ ಮನೆಯ ಜವಾಬ್ದಾರಿಗಳನ್ನೆಲ್ಲ ನಿಭಾಯಿಸುತ್ತಿದ್ದರು. ಆದರೆ ಈಗ ಕಾಲ, ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಮಹಿಳೆಯರು ಮನೆಯ ಜವಾಬ್ದಾರಿಯ ಜೊತೆಗೆ ಹೊರಗಿನ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಮನೆಯವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತಿದ್ದಾರೆ. ಈಗ ಕೆರಿಯರ್‌ ರೂಪಿಸಿಕೊಳ್ಳುವುದರತ್ತ ಅವರ ಗಮನ ಹೆಚ್ಚಾಗಿದೆ.

ಕುಟುಂಬ ಯೋಜನೆ ವಿಳಂಬ

ಹೈ ಕ್ವಾಲಿಫಿಕೇಶನ್‌ನ್ನು ಮನೆಗಷ್ಟೇ ಸೀಮಿತಗೊಳಿಸುವುದು ಅವರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಅವರು ಮದುವೆ ಮಾಡಿಕೊಳ್ಳುವುದು ಕೂಡ ಅದಕ್ಕೆ ಸಮರ್ಥರಾದಾಗಲೇ, ಯಾವುದೇ ಒಂದು ಸಂಗತಿಗಾಗಿ ಯಾರ ಮುಂದೆಯೂ ಕೈಯೊಡ್ಡುವುದು ಅವರಿಗೆ ಇಷ್ಟವಿಲ್ಲ. ಇದೇ ಕಾರಣದಿಂದ ತಮಗೆ ಸೂಕ್ತ ಎನಿಸುವ ವರನನ್ನು ಹುಡುಕುತ್ತಾರೆ ಹಾಗೂ ಆರ್ಥಿಕವಾಗಿ ಭದ್ರವಾಗಿ ನೆಲೆ ನಿಂತಾಗಲೇ ಅವರು ಮದುವೆ ಮಾಡಿಕೊಳ್ಳುತ್ತಾರೆ.

ಮದುವೆಯಾಗುತ್ತಿದ್ದಂತೆ ಕುಟುಂಬದವರು ಮಗುವನ್ನು ಪಡೆಯುವುದರ ಬಗ್ಗೆ ಒತ್ತಡ ಹೇರಲಾರಂಭಿಸುತ್ತಾರೆ. ಆದರೆ ಇಂದಿನ ಯುಗದ ಮಹಿಳೆಯರು ಅದರಲ್ಲಿ ತಡ ಮಾಡುವುದರಲ್ಲಿಯೇ ಜಾಣತನ ಇದೆಯೆಂದು ಭಾವಿಸುತ್ತಾರೆ.

ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ತಮ್ಮ ಕುಟುಂಬ ಯೋಜನೆಯ ಕಾರಣದಿಂದ ಉದ್ಯೋಗ ಕೈಬಿಟ್ಟು ಹೋಗಬಾರದು ಎನ್ನುವುದು ಅವರ ಪ್ರಥಮ ಆದ್ಯತೆಯಾಗಿರುತ್ತದೆ.

ಹಣದ ಅತಿ ವ್ಯಾಮೋಹ ಬೆಂಗಳೂರಿನ ಕೋರಮಂಗಲದಲ್ಲಿ ವಾಸಿಸುವ ಮಮತಾ ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮದುವೆಯಾಗಿ 6 ವರ್ಷಗಳಾಗಿವೆ. ತಮ್ಮ ಲೈಫ್‌ ಸೆಟಲ್ ಆಗಿದೆಯೆಂದು ಅನ್ನಿಸಿ ಈಗ ಮಗು ಪಡೆಯಲು ಯೋಚಿಸಿದರು. ಆದರೆ ಅವರಿಗೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ವೈದ್ಯರ ಬಳಿ ಹೋದಾಗ ಮಮತಾಗೆ ವಯಸ್ಸಾಗಿರುವುದು ಹಾಗೂ ಇತರೆ ಕಾರಣಗಳಿಂದ ಮಗು ಆಗಲು ತೊಂದರೆಯಾಗುತ್ತಿದೆ ಎಂದು ಹೇಳಿದರು. ತಾವು ಯಾವಾಗ ಮಗುವಿನ ತಾಯಿ ತಂದೆ ಆಗಬಹುದು ಎಂದು ಯೋಚಿಸಿ ಯೋಚಿಸಿ ಮಮತಾ ಹಾಗೂ ಆಕೆಯ ಪತಿ ಸುಸ್ತಾಗಿ ಹೋಗಿದ್ದಾರೆ. ಅವರ ಬಳಿ ಈಗ ಸಾಕಷ್ಟು ಹಣವಿದೆ. ಆದರೆ ಕೆರಿಯರ್‌ನ ಬೆನ್ನು ಹತ್ತಿ ಆಕೆ ತಾಯ್ತನದ ಸುಖದಿಂದ ವಂಚಿತಳಾಗಿದ್ದಾಳೆ.

ವರ್ಕ್‌ ಅಟ್‌ ಹೋಮ್ ನ ಸೌಲಭ್ಯ

ಉದ್ಯೋಗ ಎಂದರೆ ಆಫೀಸಿಗಷ್ಟೇ ಹೋಗಿ ಕೆಲಸ ಮಾಡುವುದೆಂದಲ್ಲ. ಆದರೆ ಅದು ಹಾಗಲ್ಲ. ಮನೆಯಲ್ಲಿದ್ದುಕೊಂಡೇ ಕೆಲಸ ಮಾಡಬಹುದು. ಕೊರೋನಾ ಕಾರಣದಿಂದ ಈಗ ಬಹಳಷ್ಟು ಕಛೇರಿಗಳು ವರ್ಕ್‌ ಫ್ರಮ್ ಹೋಮ್ ಕಾನ್ಸೆಪ್ಟ್ಗೆ ಮಹತ್ವ ಕೊಟ್ಟಿವೆ. ಹೆರಿಗೆಯ ಕಾರಣದಿಂದಲೂ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ಕೇಳಿ ಪಡೆದುಕೊಳ್ಳಬಹುದು.

ಇಂದಿನ ಇಂಟರ್‌ ನೆಟ್‌ ಯುಗದಲ್ಲಿ ನೌಕರಿಗಳಿಗೇನೂ ಕಡಿಮೆಯಿಲ್ಲ. ಅದಕ್ಕಾಗಿ ನಿಮ್ಮ ಬಳಿ ಛಲ ಹಾಗೂ ಪ್ರತಿಭೆ ಇರುವುದು ಮುಖ್ಯ. ಅದರ ಮುಖಾಂತರ ನೀವು ಕೆರಿಯರ್‌ಗೆ ಬ್ರೇಕ್‌ ಬೀಳುವುದರಿಂದ ಬಚಾವ್ ಆಗಬಹುದು. ನಿಮ್ಮ ಫ್ಯಾಮಿಲಿ ಪ್ಲಾನಿಂಗ್ ಮೇಲೂ ಪ್ರಭಾವ ಉಂಟಾಗದು. ನೀವು ಮನೆಯಲ್ಲಿಯೇ ಕುಳಿತುಕೊಂಡು ಫ್ರೀಲಾನ್ಸಿಂಗ್‌, ಟಿಫನ್‌ ಸಿಸ್ಟಮ್, ಟ್ಯೂಷನ್‌, ಭಾಷಾಂತರ, ಬ್ಲಾಗಿಂಗ್‌ ಮುಂತಾದ ಕೆಲಸಗಳನ್ನು ಮಾಡಬಹುದು. ಇದು ನೀವು ಕೆರಿಯರ್‌ನಲ್ಲಿ ಮುಂದುವರಿಯುವುದರ ಜೊತೆ ಜೊತೆಗೆ ಹಣ ಗಳಿಸುವ ಉತ್ತಮ ಮಾಧ್ಯಮವಾಗಿದೆ.

ಮದುವೆ ಹಾಗೂ ಮಗುವಿನ ಕಾರಣದಿಂದ ಕೆರಿಯರ್‌ಗೆ ಬ್ರೇಕ್‌ ಬೀಳುತ್ತದೆಂದು ಈಗ ಯೋಚಿಸುವ ಅಗತ್ಯವಿಲ್ಲ.

– ನಂದಿನಿ

ಕೆರಿಯರ್‌ ಗಾಗಿ ಮದುವೆಯಾಗದವರು

ರಾಜಕೀಯ ಹಾಗೂ ರಾಜಕಿಯೇತರ ಜಗತ್ತಿನ ಹಲವು ಹೆಸರಾಂತ ಮಹಿಳೆಯರು ಕೆರಿಯರ್‌ ರೂಪಿಸಿಕೊಳ್ಳಲು ಮದುವೆಯಾಗಲಿಲ್ಲ.

ತಬೂ : ಭಾರತೀಯ ಸಿನಿಮಾ ಜಗತ್ತಿನ ಹೆಸರಾಂತ ನಟಿ ತಬೂಗೆ ಈಗ 42 ವರ್ಷ. ಕಳೆದ 2 ದಶಕಗಳಲ್ಲಿ ಆಕೆ ಸಿನಿಮಾಗಳಲ್ಲಿ ಹಲವು ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈಗಲೂ ಕೂಡ ಆಕೆಗೆ ಮದುವೆಯಾಗಿ ಮಗು ಪಡೆಯುವ ಆತುರವೇನೂ ಇಲ್ಲ. ಏಕೆಂದರೆ ಈಗಲೂ ಆಕೆ ಕೆರಿಯರ್‌ ಮೇಲೆಯೇ ಫೋಕಸ್‌ ಮಾಡಲು ಇಚ್ಛಿಸುತ್ತಾರೆ.

ಸುಷ್ಮಿತಾ ಸೇನ್‌ : 1994ರಲ್ಲಿ ಮಿಸ್‌ ಯೂನಿವರ್ಸ್‌ ಆಗುವುದರ ಮೂಲಕ ಆಕೆ ಒಂದು ಕಿರೀಟ ಪಡೆದ ಭಾರತದ ಮಹಿಳೆ ಎನಿಸಿಕೊಂಡರು. ಆಕೆ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರೊಂದಿಗೇನೇ ಕ್ವಾಲಿಟಿ ಟೈಮ್ ಕಳೆಯಲು ಆಕೆ ಯೋಚಿಸುತ್ತಿರುತ್ತಾರೆ. ಯಾವುದೇ ತೆರನಾದ ಬಂಧನದಲ್ಲಿ ಬಂಧಿಸಿಕೊಳ್ಳುವುದು ಅವರಿಗೆ ಸುತರಾಂ ಇಷ್ಟವಿಲ್ಲ. ಸುಷ್ಮಿತಾ ತಮ್ಮದೇ ಆದ ರೀತಿಯಲ್ಲಿ ಜೀವಿಸಲು ಇಷ್ಟಪಡುತ್ತಾರೆ. ಕೆರಿಯರ್‌ನಲ್ಲಿ ಉತ್ತುಂಗ ತಲುಪಬೇಕೆನ್ನುವುದು ಅವರ ಅಪೇಕ್ಷೆ.

ಮಾಯಾವತಿ : ಈಕೆ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಬ್ರೇಕ್ ಬೀಳದಿರಲಿ ಎಂದು ಆಕೆ ಮದುವೆ ಆಗಲೇ ಇಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ