ಟೀಚರ್‌ : 6 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಮಣ್ಣು ಸಿಗುತ್ತದೆ?

ಗುಂಡ : ಬರೀ ಶೂನ್ಯ!

ಟೀಚರ್‌ : ಕೋಳಿ ಏಕೆ ಒಂದೆಡೆ ಬೆಚ್ಚಗಿನ ಜಾಗದಲ್ಲಿ ಕುಳಿತು ಮೊಟ್ಟೆ ಇಡುತ್ತದೆ?

ನಾಣಿ : ಗೋಡೆ ಮೇಲೆ ನಿಂತು ಮೊಟ್ಟೆ ಹಾಕಿದರೆ ಅದು ಒಡೆದೀತು ಅಂತ ಕೋಳಿಗೂ ಗೊತ್ತು!

ಟೀಚರ್‌ : ಗುಂಡ, ನಿನಗೆ ಇಂಗ್ಲಿಷ್‌ ಬರುತ್ತೆ ತಾನೇ?

ಗುಂಡ : ಏನೋ ಸುಮಾರಾಗಿ ಟೀಚರ್‌.

ಟೀಚರ್‌ : ಎಲ್ಲಿ, ಹಾಗಾದರೆ ಇದನ್ನು ಕನ್ನಡದಲ್ಲಿ ಹೇಳು : ಟುಮಾರೋ ಬೈ ದಿಸ್‌ ಟೈಂ ಐ ವಿಲ್ ‌ಬಿ ಡೆಲಿವರಿಂಗ್‌ ಮೈ ಸ್ಪೀಚ್‌ಗುಂಡ : ಛೆ….ಛೇ! ಇದು ಗಂಡಸರಿಂದ ಆಗದ ಕೆಲಸ!

ನಾಣಿ ಮನೆಗೆ ಬರುವಾಗ ಹೊಸ ಕನ್ನಡಕ ಕೊಂಡು ತಂದ. ಆದರೆ ಹಾಕಿಕೊಂಡಿರಲಿಲ್ಲ, ಜೇಬಿನಲ್ಲಿ ಸ್ಟೈಲಾಗಿ ಸಿಗಿಸಿಕೊಂಡಿದ್ದ.

ಹೆಂಡತಿ ಕಾಣಿಸಿಕೊಂಡ ತಕ್ಷಣ ಮೂಗಿಗೆ ಕನ್ನಡಕ ಏರಿಸುತ್ತಿದ್ದ. ಇದನ್ನು ಅವಳು ಪ್ರತಿದಿನ ಗಮನಿಸುತ್ತಿದ್ದಳು.

ಮಾರನೇ ದಿನ ಕೇಳಿಯೇಬಿಟ್ಟಳು, “ಇದೇನ್ರಿ, ಮನೆಗೆ ಬಂದ ಮೇಲೆ ಕನ್ನಡಕ ಹಾಕಿಕೊಳ್ತಿದ್ದೀರಾ? ಮೆಟ್ರೋ, ಬಸ್ಸಲ್ಲಿ ಬೇಡವೇನು?”

“ಬೇಡ…. ಅಲ್ಲೆಲ್ಲ ತೊಂದರೆ ಇಲ್ಲ. ಯಾವಾಗ ತಲೆನೋವು ಕಾಣಿಸುತ್ತೋ ಆಗ ಹಾಕಿಕೊಳ್ಳಿ ಅಂತ ಡಾಕ್ಟರ್‌ ಸಲಹೆ ನೀಡಿದ್ದಾರೆ!” ತಕ್ಷಣ ನಾಣಿಗೆ ಧರ್ಮದೇಟು ಬಿತ್ತು ಅಂತ ಗೊತ್ತಾಯ್ತು ತಾನೇ?

ಇಡೀ ದಿನ ಬಾಸ್‌ ಕೈಲಿ ಬೈಸಿಕೊಂಡು ಬೈಸಿಕೊಂಡು ತಲೆ ರಾಡಿ ಮಾಡಿಕೊಂಡು ಸಂಜೆ 8 ಗಂಟೆಗೆ ಕಾಲೆಳೆಯುತ್ತಾ ಸೀನ ಮನೆಗೆ ಬಂದರೆ, ಹೆಂಡತಿಯ ತವರಿನ ಬಳಗ ಬಂದು ಝಾಂಡಾ ಊರುವುದೇ? ಬಂಧು ಬಳಗದವರಿಗೆ ಅವಳು ಮಾಡುತ್ತಿದ್ದ ಆದರೋಪಚಾರ ಕಂಡು ಇವನ ಪಿತ್ತ ನೆತ್ತಿಗೇರಿತು.

ಸಾಲದೆಂಬಂತೆ ಅವಳು ಪಲುಕಿದಳು, “ರೀ, ನನ್ನ ತವರಿನವರಿಗೆ ಏನಾದರೂ ಸ್ಪೆಷಲ್ ತಂದು ಕೊಡ್ರೀ!” ಸೀನ ಅಲ್ಲಿಂದ ಎದ್ದು ಹೊರಬಂದವನೇ ಸರಸರ ಓಲಾ ಬುಕ್‌ ಮಾಡಿ ಟ್ಯಾಕ್ಸಿ ತರಿಸಿಯೇಬಿಟ್ಟ.

“ಕಾರು ಬಂದಿದೆ, ಬೇಗ ಅವರಿಗೆ ಕೈ ತೊಳೆದುಕೊಳ್ಳಲು ಹೇಳು,” ಎನ್ನುವುದೇ?

ಪ್ರಶ್ನೆ : ಕೊರೋನಾ ಕಾಲದ 2 ವಿಶೇಷತೆ ಏನು?

ಉತ್ತರ : ಮನೆ ಒಳಗೆಡ ಇದ್ದರೆ ಉಳಿಗಾಲ, ಹೊರಗಡೆ ಬಂದೆ ಕೊನೆಗಾಲ!

ಅಪ್ಪಟ ಕನ್ನಡದಲ್ಲಿ ದಿನಸಿ ಸಾಮಾನು ಹೆಸರು ಹೇಳಿ ಖರೀದಿಸಿದರೆ ಶೇ.30 ರಿಯಾಯಿತಿ ಎಂದು ಕನ್ನಡ ಸಾಹಿತ್ಯಪ್ರೇಮಿ ಕೆಂಪಯ್ಯ ತನ್ನ ಅಂಗಡಿ ಮುಂದೆ ಬೋರ್ಡ್‌ ಹಾಕಿಕೊಂಡಿದ್ದ. ಆ ಅಂಗಡಿಗೆ ತಿಮ್ಮ ಹೋದ.

ಕೆಂಪಯ್ಯ : ಸ್ವಲ್ಪ ಮಾತ್ರ ಆಂಗ್ಲ ಬಳಸದೆ ಏನಾದರೂ ಖರೀದಿಸಿದರೆ ಶೇ.30 ರಿಯಾಯಿತಿ ಕೊಡ್ತೀನಿ!

ತಿಮ್ಮ : `ಸೂಕ್ಷ್ಮಾತಿ ಸೂಕ್ಷ್ಮ ವಿಷಾಣು ಆಗಮನ ನಿರ್ಗಮನ ಅವಿರೋಧ ಮುಖ್ಯೋಷ್ಟನ್ಯಾಸಿಕಾಧಿ ರಕ್ಷಣಾರ್ಥ ಕರ್ಣದ್ವಯ ಸಮರ್ಥಿತ ದ್ವಿವಸ್ತ್ರ ಪಟ್ಟಿಕಾ’ ಕೊಡಿ.

ಕೆಂಪಯ್ಯ : ಏನು ಕರ್ಮ ಇದು? ಅದೇನು ಇಂಗ್ಲಿಷ್‌ ನಲ್ಲಿ ಬೊಗಳು… 50% ಡಿಸ್ಕೌಂಟ್‌ ಕೊಡ್ತೀನಿ.

ತಿಮ್ಮ : ಮಾಸ್ಕ್ ಕೊಡ್ರೀ….. ಕೆಂಪಯ್ಯ!

ಟೀಚರ್‌ : `ರಾಮನು ವನವಾಸಕ್ಕೆ ಹೋದನು.’ ನಾಣಿ ಹೇಳು, ಇದು ಯಾವ ಕಾಲ?

ನಾಣಿ : ಟೀಚರ್‌, ರಾಮನಿಗೆ ಇದು ಯಮಗಂಡ ಕಾಲ!

40+ ನವರಿಗೆ ಜೋರಾಗಿ ವ್ಯಾಕ್ಸಿನೇಶನ್‌ ನಡೆಯುತ್ತಿತ್ತು. ಆಫೀಸಿಗೆ ಹೋದ ಗಂಡ, 1-2 ಗಂಟೆ ನಂತರ ಹೆಂಡತಿಗೆ ಫೋನ್ ಮಾಡಿದ.

ಪತಿ : ಲಸಿಕೆ ಹಾಕಿಸಿಕೊಂಡು ಬಂದೆಯಾ?

ಪತ್ನಿ : ಹ್ಞೂಂ, ಮನೆಗೆ ಬಂದು 1 ಗಂಟೆ ಕಾಲ ಆಯ್ತು.

ಪತಿ : ಮತ್ತೆ ವಾಟ್ಸ್ ಆ್ಯಪ್‌, ‌FBನಲ್ಲಿ ಕಾಣಿಸ್ತಾನೇ ಇಲ್ಲ…..

ಪತ್ನಿ : 30+ ನವರಿಗೆ ಲಸಿಕೆ ಶುರು ಅಂತ ಅನೌನ್ಸ್ ಆಗಲಿ ಅಂತ ಕಾಯ್ತಾ ಇದ್ದೀನಿ.

ಟೀಚರ್‌ : ವಾಸ್ಕೋಡಗಾಮ ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ನಂತರ ಏನು ಮಾಡಿದನು?

ಗುಂಡ : ಎರಡನೇ ಹೆಜ್ಜೆ ಇಟ್ಟು ನಡೆದನು!

ಟೀಚರ್‌ : ಇತಿಹಾಸ ಗಮನಿಸಿ ಹೇಳಿ, ಅಕ್ಬರನು ಸಿಂಹಾಸನ ಏರಿದ ತಕ್ಷಣ ಮೊದಲು ಮಾಡಿದ ಕೆಲಸ?

ವೆಂಕ : ಅವನು ಅಚ್ಚುಕಟ್ಟಾಗಿ ಸಿಂಹಾಸನದಲ್ಲಿ ಕುಳಿತುಕೊಂಡನು.

ಹೆಂಡತಿ : ಏನು ಪುರೋಹಿತರೇ, ನನ್ನ ಗಂಡ ಈ ಪಾಟಿ ಕುಡಿದು ಸದಾ ಜಗಳ ಆಡ್ತಿರ್ತಾನೆ. ನೀವು ಜಾತಕ ಸರಿಯಾಗಿ ನೋಡಿರಲಿಲ್ವಾ?

ಪುರೋಹಿತರು : ಜಾತಕ ನೋಡಿ ಅವರಿಗೆ ಕುಜ ದೋಷ ಇದೆ ಅಂತ ಹೇಳಿದ್ನಲ್ಲ.

ಹೆಂಡತಿ : ಕುಜ ದೋಷ ಅಂದ್ರೆ…..

ಪುರೋಹಿತರು : ಕು : ಕುಡಿದು ಜ : ಜಗಳ ಆಡೋ ದೋಷ.

ಮಹೇಶ : ಹೊಸ ವರ್ಷದ ಗಾದೆ ಏನಾದರೂ ಹೇಳಬಾರದೇ?

ಉಮೇಶ : ಹಾಕಿಕೊಳ್ಳೋಕ್ಕೆ ಚಡ್ಡಿ ಇಲ್ಲದಿದ್ದರೂ ಮುಖಕ್ಕೆ ಮಾತ್ರ ಹೊಸ ಮಾಸ್ಕ್! ಕೈಗೆ ಸ್ಯಾನಿಟೈಸರ್‌ ಆದರೆ, ಬಾಯಿಗೆ ಮಾಸ್ಕ್.

ಟೀಚರ್‌ : ಸತ್ಯ ಹರಿಶ್ಚಂದ್ರನ ಕಥೆ ತಿಳಿದುಕೊಂಡ್ರಲ್ಲ, ಇದರಿಂದ ಕಲಿಯಬಹುದಾದ ನೀತಿ ಏನು?

ಕಿಟ್ಟಿ : ಕಷ್ಟ ಕಾಲ ಬಂದಾಗ ಹೆಂಡತಿ ಮಕ್ಕಳನ್ನು ಮಾರಿಕೊಳ್ಳಿ!

ಟೀಚರ್‌ : ರಾಮಾಯಣದಿಂದ ತಿಳಿಯಬೇಕಾದ ನೀತಿ ಏನು?

ಸೀನ : ಹೆಂಡತಿಗೆ ಆವೇಶದಲ್ಲಿ ಎಂದೂ ವಚನ ನೀಡಬಾರದು. ಹಾಗೊಮ್ಮೆ ನೀಡಿದರೂ ಅದನ್ನು ವರ್ಷಗಟ್ಟಲೆ ನೆನಪಿಡಬಾರದು.

ಗುಂಡ ತನ್ನ ಗರ್ಲ್ ಫ್ರೆಂಡ್‌ ಜೊತೆ ಒಮ್ಮೆ ಹೋಟೆಲಿಗೆ ಹೋಗಿದ್ದ.

ಗುಂಡಿ : ಏನಾದರೂ ಹೇಳು…. ಬರೀ ತಿನ್ನೋದೇ ಆಯ್ತು.

ಗುಂಡ : ಓ ಹೌದಲ್ವಾ…. ಐ ಲವ್ ಯೂ ಡಿಯರ್‌!

ಗುಂಡಿ : ಏ ಬಿಡು ಬಿಡು, ನಾನು ನಿನ್ನ ಲವ್ ಮಾಡಲ್ಲ.

ಗುಂಡ : ಯಾಕೆ ಹಾಗಂತೀಯಾ? ಇನ್ನೊಮ್ಮೆ ಯೋಚಿಸು.

ಗುಂಡಿ : ಯೋಚಿಸೋಕ್ಕೆ ಏನಿದೆ….? ಆಗಲ್ಲ ಅಂದೆ!

ಗುಂಡ : ಏ ಮಾಣಿ… 2 ಬೇರೆ ಬೇರೆ ಬಿಲ್‌ಕೊಡಪ್ಪ. ಇವರು ಯಾರೋ ನನಗೆ ಗೊತ್ತಿಲ್ಲ.

ಗುಂಡಿ : ಅಯ್ಯೋ! ಸಾರಿ…. ಐ ಟೂ ಲವ್ ಯೂ!

ಓಂ’ ಎಂಬ ಶಬ್ದದ ಉಚ್ಚಾರದಿಂದ ಮೆದುಳುಬಳ್ಳಿ ಚುರುಕಾಗುತ್ತದೆ.  ವಿಜ್ಞಾನಿಗಳು.`ರೀ….. ಏನ್ರೀ…..’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ಇಡೀ ದೇಹವೇ ಕಂಪಿಸುತ್ತದೆ. ಅನುಭವಿ ಗಂಡ.

ಇದು `ಯೂನಿವರ್ಸ್‌ ಟ್ರೂತ್‌’!?

ಟೀಚರ್‌ : ಸಾರಿಗೆ ಉಪ್ಪು ಕಡಿಮೆ ಆದರೆ ಉಪ್ಪಿಗೆ ಏನು ಹಾಕಬೇಕು?

ಸೀನ : ಮೊದಲು ಕೈ ಹಾಕಬೇಕು!

ಪ್ರಶ್ನೆ : ನಿಮ್ಮ ನೆಚ್ಚಿನ ಆಟ ಯಾವುದು?

ಉತ್ತರ : ಸದ್ಯಕ್ಕೆ ಉಸಿರಾಟ!

ವೆಂಕ : ನೀನು  ಈಜುವುದನ್ನು ಎಲ್ಲಿ ಕಲಿತೆ?

ಕಿಟ್ಟಿ : ನೀರಿನಲ್ಲಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ