ರಕ್ಷಿತಾ ಕಳೆದ ಅನೇಕ ದಿನಗಳಿಂದ ಬಹಳ ದುಃಖಿತಳಾಗಿದ್ದಳು. ಆಫೀಸ್‌ ನ ಕೆಲಸವನ್ನು ಕೂಡ ಆಕೆ ಮನಸ್ಸು ಕೊಟ್ಟು ಮಾಡಲು ಆಗುತ್ತಿರಲಿಲ್ಲ. ಅವಳು ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದಳು. ಹೀಗಾಗಿ ಬಾಸ್‌ ಅವಳ ಬಗ್ಗೆ ಕೂಗಾಡುವುದು ಸಹಜವೇ.

ಅವಳ ಸಹೋದ್ಯೋಗಿ ಜ್ಯೋತಿಗೆ ಅವಳ ಸ್ಥಿತಿಯನ್ನು ನೋಡಲಾಗಲಿಲ್ಲ.

ಆ ದಿನ ಊಟದ ಸಮಯದಲ್ಲಿ ಅವಳು ಕೇಳಿಯೇ ಬಿಟ್ಟಳು. “ಯಾಕೆ ಏನಾಯ್ತು? ಕಳೆದ ಕೆಲವು ದಿನಗಳಿಂದ ನಿನ್ನ ಮನಸ್ಥಿತಿಯೇ ಸರಿ ಇಲ್ವಲ್ಲ?” ಗೆಳತಿಯ ಪ್ರಶ್ನೆಗೆ ರಕ್ಷಿತಾ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ನಂತರ ಅವಳು ಹೇಳತೊಡಗಿದಳು, “ನಾನು ಮತ್ತು ಅಮಿತ್‌ ಕಳೆದ 1 ವರ್ಷದಿಂದ ಲಿವ್ ‌ಇನ್‌ ರಿಲೇಶನ್‌ ಶಿಪ್‌ ನಲ್ಲಿ ಇದ್ದೆ. ನಾನು ಅಪ್ಪ ಅಮ್ಮನನ್ನು ಮದುವೆಗೆ ಕೂಡ ಒಪ್ಪಿಸಿಬಿಟ್ಟಿದ್ದೆ. ಆದರೆ ಈಗ ಅಮಿತ್‌ ನಾನು ಈ ಸಂಬಂಧದಿಂದ ಬೇಸರಗೊಂಡಿದ್ದೇನೆ ಎಂದು ಹೇಳುತ್ತಿದ್ದಾನೆ. ನಾವಿಬ್ಬರೂ ಈಗ ಜೊತೆಗಿದ್ದೂ ಅಪರಿಚಿತರಂತೆ ದೂರ ದೂರ ಇರುತ್ತಿದ್ದೇವೆ. ಕಳೆದ 3 ದಿನಗಳಿಂದ ನನಗೆ ಅವನ ಭೇಟಿ ಆಗಿಲ್ಲ. ಕಾಲ್‌, ಮೆಸೇಜೂ ಇಲ್ಲ,” ಎಂದು ಹೇಳುತ್ತ ಅವಳು ಮತ್ತೆ ಕಣ್ತುಂಬಿಕೊಂಡಳು.

ಜ್ಯೋತಿ ಅವಳಿಗೆ ಮನಸಾರೆ ಅಳಲು ಅವಕಾಶ ಕೊಟ್ಟಳು. ಸಂಜೆ ಅವಳನ್ನು ತನ್ನ ಮನೆಗೆ ಕರೆದುಕೊಂದು ಹೋದಳು. ಜ್ಯೋತಿ ತನ್ನ ಅಪ್ಪ ಅಮ್ಮ, ಅಣ್ಣ ಅತ್ತಿಗೆ ಜೊತೆ ವಾಸಿಸುತ್ತಿದ್ದಳು. ರಕ್ಷಿತಾಳಿಗೆ ಕೌಟುಂಬಿಕ ಆಶ್ರಯ ಹಾಗೂ ಗೆಳತಿಯ ಮಾನಸಿಕ ಬೆಂಬಲ ದೊರೆಯಿತು. ಇದರಿಂದ ಅವಳ ಮನೋಬಲ ಮತ್ತಷ್ಟು ಗಟ್ಟಿಯಾಯಿತು. ಆ ಬಳಿಕ ಅವಳು ತನ್ನುಳಿದ ಜೀವವನ್ನು ನಗುನಗುತ್ತ ಕಳೆಯಲು ಸಾಧ್ಯವಾಯಿತು.

ರಕ್ಷಿತಾಳಂತಹ ಅದೆಷ್ಟೋ ಹುಡುಗಿಯರು ಸಹಜೀವನ ಅಥವಾ ಲಿವ್ ‌ಇನ್‌ ರಿಲೇಶನ್‌ ಶಿಪ್‌ ಜಾಲಕ್ಕೆ ಸಿಕ್ಕಿ ನಲುಗಿಹೋಗಿದ್ದಾರೆ. ಅದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಮಾನಸಿಕ ಖಿನ್ನತೆಗೆ ತುತ್ತಾಗುತ್ತಾರೆ.

ಕೆಲವು ವರ್ಷಗಳ ಹಿಂದೆ ಲಿವ್ ಇನ್‌ ರಿಲೇಶನ್‌ ಶಿಪ್‌ ಗೆ ಸುಪ್ರೀಂ ಕೋರ್ಟ್‌ ಕಾನೂನಿನ ಮಾನ್ಯತೆ ಕೊಟ್ಟಿತ್ತು. ಆಗ ಯುವ ಜನಾಂಗದವರು ಭಾರಿ ಖುಷಿಪಟ್ಟಿದ್ದರು. ತಮಗೆ ಮುಕ್ತ ಆಕಾಶದ ಜೊತೆಗೆ ಬಂಗಾರದ ರೆಕ್ಕೆಗಳು ಬಂದವು ಎಂದವರು ಭಾವಿಸಿದ್ದರು. ಆದರೆ ಈಗ ಈ ಸಂಬಂಧದ ಸ್ವಚ್ಛಂದತೆ ಬಹಳಷ್ಟು ಜನರನ್ನು ಗಾಯಗೊಳಿಸುತ್ತಿದೆ. ಅದರಲ್ಲಿ ಮಹಿಳೆಯರು, ಹುಡುಗಿಯರೇ ಹೆಚ್ಚು.

ನ್ಯಾನ್ಸಿಯದು ಕರುಣಾಜನಕ ಕಥೆ. ಪ್ರಕಾಶ್‌ ಜೊತೆ 6 ತಿಂಗಳ ಕಾಲ ಲಿವ್ ‌ಇನ್‌ ರಿಲೇಶನ್‌ ಶಿಪ್‌ ನಲ್ಲಿದ್ದಳು. ಅದೊಂದು ದಿನ ದುರ್ಘಟನೊಂದರಲ್ಲಿ ಪ್ರಕಾಶ್‌ ಸತ್ತುಹೋಗುತ್ತಾನೆ. ನ್ಯಾನ್ಸಿ ಹೇಗೋ ಆ ದುಃಖದಿಂದ ಹೊರಬರಲು ಪ್ರಯತ್ನ ನಡೆಸಿ ತನ್ನಲ್ಲಿರುವ ಧೈರ್ಯ ಒಗ್ಗೂಡಿಸುತ್ತಾಳೆ. ಆದರೆ ಅದೊಂದು ದಿನ ತಾನು ಗರ್ಭಿಣಿ ಎನ್ನುವ ವಿಚಾರ ಅವಳಿಗೆ ಗೊತ್ತಾಗುತ್ತದೆ. ಗರ್ಭಪಾತ ಮಾಡಿಸಿಕೊಳ್ಳುವ ಸಮಯ ಕೂಡ ಮೀರಿ ಹೋಗಿರುತ್ತದೆ. ಹೀಗಾಗಿ ಅವಳು ಹತಾಶೆಯಿಂದ ತನ್ನ ಜೀವನಕ್ಕೇ ಕೊನೆ ಹಾಡುತ್ತಾಳೆ. ಮಗಳ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಪೋಷಕರ ಕನಸು ಈ ರೀತಿಯಲ್ಲಿ ನುಚ್ಚು ನೂರಾಗಿ ಹೋಯಿತು. ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಅದೆಷ್ಟೋ ಉದಾಹರಣೆಗಳು ನೋಡಲು ಸಿಗುತ್ತವೆ. ಇಲ್ಲಿ ಏಳುವ ಒಂದು ಪ್ರಶ್ನೆಯೆಂದರೆ, ಮದುವೆ ಒಂದು ಬಂಧನ ಹಾಗೂ ಲಿವ್ ‌ಇನ್‌ ಸ್ವಾತಂತ್ರ್ಯ ಎನ್ನುವುದಾದರೆ, ಹುಡುಗಿಯರಿಗೆ ಈ ಸ್ವಾತಂತ್ರ್ಯದಿಂದ ಇಷ್ಟೊಂದು ಕಷ್ಟ, ತೊಂದರೆ ಏಕೆ ಅನುಭವಿಸಬೇಕಾಗಿ ಬರುತ್ತದೆ? ಇದಕ್ಕೆ ಉತ್ತರವೆಂದರೆ, ಸಮಾಜದ ಇಬ್ಬಗೆಯ ಮಾನಸಿಕತೆ. ಭಾರತೀಯ ಮಹಿಳೆಯರಿಗೆ ಸಂಬಂಧವನ್ನು ಮುರಿದುಕೊಳ್ಳುವುದು ಅಷ್ಟು ಸುಲಭವಲ್ಲ. ಸಾಮಾಜಿಕವಾಗಿ ಅಷ್ಟೇ ಅಲ್ಲ, ಭಾವನಾತ್ಮಕವಾಗಿ ಕೂಡ ಪುರುಷರು ಇಂತಹ ಸಂಬಂಧಗಳಿಂದ ಹೊರಬಂದು ಮದುವೆ ಕೂಡ ಮಾಡಿಕೊಳ್ಳುತ್ತಾರೆ. ಅದನ್ನು ಸಮಾಜ ಸ್ವೀಕರಿಸುತ್ತದೆ ಕೂಡ. ಆದರೆ ಅದೇ ಸಮಾಜ ಮಹಿಳೆಯರ ಚಾರಿತ್ರ್ಯದ ಕಡೆ ಬೆರಳು ಮಾಡಿ ತೋರಿಸುತ್ತದೆ.

ಇಂತಹ ಸ್ಥಿತಿಯಲ್ಲಿ ನಾವು ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನೆಮ್ಮದಿದಾಯಕ ಜೀವನವನ್ನೇಕೆ ನಡೆಸಬಾರದು? ಲಿವ್ ಇನ್‌ ಸಂಬಂಧ ಮುರಿದು ಬಿದ್ದ ಬಳಿಕ ಎಲ್ಲ ಮುಗಿದುಹೋಯಿತು ಎಂದು ಪಲಾಯನವಾದಿ ಆಗುವುದಕ್ಕಿಂತ, ಅದನ್ನು ಒಂದು ಕಹಿ ಅನುಭವ ಎಂದು ಭಾವಿಸುವತ್ತ ಪಾಠ ಕಲಿಯಬೇಕು. ಮಹಿಳೆಯರಿಗೆ ಸಂಗಾತಿಯ ಸಾಂಗತ್ಯವನ್ನು ಮರೆತುಬಿಡುವುದು ಹಾಗೂ ಮುಂಬರುವ ಸಂಘರ್ಷಗಳನ್ನು ಎದುರಿಸುವುದು ಸುಲಭವಲ್ಲ. ಆದರೆ ಜೀವನ ನಿಲ್ಲುವುದಿಲ್ಲ. ಅದು ಸದಾ ಚಲನಶೀಲ. ಹೀಗಾಗಿ ನಾವು ಇದಕ್ಕೆ ಸಂಬಂಧಿಸಿದ ಕೆಲವು ಮಗ್ಗಲುಗಳ ಬಗ್ಗೆ ಗಮನಹರಿಸಬೇಕು, ಏಕೆಂದರೆ ಲಿವ್ ‌ಇನ್ ನಿಂದ ಮನಸ್ಸು ತುಂಡರಿಸಬಾರದು.

ನಿಮ್ಮನ್ನು ನೀವು ವ್ಯಸ್ತವಾಗಿಡಿ : ನೀವು ಉದ್ಯೋಗಸ್ಥೆಯಾಗಿದ್ದರೆ, ನಿಮ್ಮನ್ನು ನೀವು ವ್ಯಕ್ತವಾಗಿಡುವುದು ಸ್ವಲ್ಪ ಅನುಕೂಲ. ನೀವು ಅಫಿಶಿಯಲ್ ಟಾರ್ಗೆಟ್‌ ನ್ನು ಪೂರ್ತಿಗೊಳಿಸುವತ್ತ ನಿಮ್ಮ ಗಮನ ಕೇಂದ್ರೀಕರಿಸಿ. ಸಂಗಾತಿಯ ಮನವೊಲಿಸುವುದು ಹೇಗೆ ಎಂದು ಸದಾ ಯೋಚಿಸುವತ್ತ ಕುಳಿತುಕೊಳ್ಳಬೇಡಿ. ಏಕೆಂದರೆ ನಿಮ್ಮ ಸಂಗಾತಿ ಸಂಪೂರ್ಣ ಮಾನಸಿಕ ಸಿದ್ಧತೆಯ ಜೊತೆಗೆ ನಿಮ್ಮ ಸಂಗ ತೊರೆದಿದ್ದಾನೆ. ಹೀಗಾಗಿ ಅವನು ಬಯಸಿ ಕೂಡ ನಿಮ್ಮ ಜೊತೆಗೆ ಬರಲಾರ.

ಉದ್ಯೋಗ ಮಾಡದ ಹುಡುಗಿಯರು ತಮ್ಮ ಕುಟುಂಬದವರ ಜೊತೆ ಹೆಚ್ಚೆಚ್ಚು ಸಮಯ ಕಳೆಯಲು ಯೋಚಿಸಬೇಕು. ನಿಮ್ಮೊಳಗಿನ ವಿಶೇಷತೆಯನ್ನು ಗಮನಿಸಿ ಅದನ್ನು ಹೊರಹೊಮ್ಮಿಸಲು ಪ್ರಯತ್ನಿಸಬೇಕು. ಈ ಹಿಂದೆ ಸಮಯದ ಕೊರತೆಯಿಂದ ಮಾಡಲಾಗದ ಕೆಲಸಗಳನ್ನು ಈಗ ಮಾಡಲು ಪ್ರಯತ್ನಿಸಿ. ನಿಮ್ಮ ಮನದ ಮಾತುಗಳನ್ನು ಡೈರಿಯಲ್ಲಿ ಬರೆಯಲು ಪ್ರಯತ್ನಿಸಿ. ಆಗ ನಿಮ್ಮ ತೊಂದರೆಗಳು ಸಾಕಷ್ಟು ಕಡಿಮೆಯಾಗುತ್ತವೆ.

ಜನ ಏನಾದ್ರೂ ಹೇಳಬಹುದು : ನೀವು ಲಿವ್ ‌ಇನ್‌ ರಿಲೇಶನ್‌ ನಲ್ಲಿ ಇರುವ ಬಗ್ಗೆ ನಿರ್ಧಾರ ಕೈಗೊಂಡಾಗ ಜನರ ಮಾತುಗಳನ್ನು ನಿರ್ಲಕ್ಷಿಸಿರಬಹುದು. ಜನ ಏನು ತಾನೇ ಅನ್ನಲ್ಲ ಎಂದು ಹಲವು ಸಲ ಆ ವಾಕ್ಯವನ್ನು ತಲೆಯಿಂದ ತೆಗೆದು ಹಾಕಿರಬಹುದು. ಈಗಲೂ ಹಾಗೆಯೇ ಮಾಡಿ. ಶಾಂತ ಮನಸ್ಸಿನಿಂದ ಅವರ ನಕಾರಾತ್ಮಕ ಮಾತುಗಳನ್ನು ನಿರ್ಲಕ್ಷಿಸಿ, ಅವರ ಮಾತುಗಳಿಗೆ ಯಾವುದೇ ಕಾರಣಕ್ಕೂ ಸ್ಪಷ್ಟೀಕರಣ ಕೊಡಲು ಹೋಗಬೇಡಿ. ಏಕೆಂದರೆ ನೀವು ಯಾವುದೇ ಅಪರಾಧ ಮಾಡಿಲ್ಲ.

ಕೀಳರಿಮೆ ಬರದಂತೆ ನೋಡಿಕೊಳ್ಳಿ : ನೀವು ಸ್ನೇಹದ ಒಂದು ಸಂಬಂಧದಿಂದ ಪ್ರತ್ಯೇಕಗೊಂಡಿರುವಿರಿ ಅಷ್ಟೇ, ನಿಮ್ಮನ್ನು ನೀವು ವಿಚ್ಛೇದಿತೆ ಎಂದು ಭಾವಿಸಬೇಡಿ. ನೀವು ಯಾವುದೇ ತಪ್ಪು ಮಾಡಿಲ್ಲ. ಲೈಂಗಿಕ ಶುಚಿತ್ವದ ತಕ್ಕಡಿಯಲ್ಲಿ ನಿಮ್ಮನ್ನು ನೀವು ತೂಗಿಕೊಳ್ಳಬೇಡಿ. ದೈಹಿಕ ಸಂಬಂಧ ಒಂದು ನೈಸರ್ಗಿಕ ಕ್ರಿಯೆ. ಈ ಕುರಿತಂತೆ ಕೀಳರಿಮೆ ಹೊಂದಬೇಡಿ. ಜೊತೆಗೆ ನಿಮ್ಮೊಂದಿಗೆ ಇದ್ದು, ಈಗ ದೂರಾದ ವ್ಯಕ್ತಿಯ ಬಗ್ಗೆ ಯಾವುದೇ ವೈರತ್ವದ ಭಾವನೆ ಇಟ್ಟುಕೊಳ್ಳಬೇಡಿ. ಎಂದಾದರೊಮ್ಮೆ ಎದುರಾಗಿ ಭೇಟಿಯಾದಾಗ ಸ್ನೇಹದಿಂದಲೇ ಮಾತನಾಡಿಸಿ.

ಕಾನೂನು ನಿಮ್ಮೊಂದಿಗಿದೆ : ನೀವು ದೀರ್ಘಾವಧಿಯಿಂದ ಲಿವ್ ಇನ್‌ ರಿಲೇಶನ್‌ ಶಿಪ್‌ ನಲ್ಲಿ ಇದ್ದರೆ, ಈ ಸಂಬಂಧದಿಂದ ನಿಮಗೆ ಮಗು ಆಗಿದ್ದರೆ, ಸಂಗಾತಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾನೆಯೇ? ಆಗ ನೀವು ಕಾನೂನಿನ ನೆರವು ಪಡೆದುಕೊಳ್ಳಬಹುದು. 2010ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಒಂದು ತೀರ್ಪಿನ ಪ್ರಕಾರ, ಲಿವ್ ‌ಇನ್‌ ನ ಕಾರಣದಿಂದ ಹುಟ್ಟಿದ ಮಗುವನ್ನು ಅಕ್ರಮ ಸಂತಾನ ಎಂದು ಕರೆಯಲಾಗದು. ನೀವು ಸಿಆರ್‌ಪಿಸಿಯ 125ನೇ ಕಲಂ ಪ್ರಕಾರ ಮಗುವಿನ ಪಾಲನೆ ಪೋಷಣೆಗೆ ನಿರ್ವಹಣಾ ವೆಚ್ಚವನ್ನು ಕೇಳಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚು ದಿನಗಳ ಕಾಲ ನೀವು ಲಿವ್ ‌ಇನ್‌ ನಲ್ಲಿ ಇದ್ದ ಕಾರಣದಿಂದಾಗಿ ನಿಮಗೆ ಕಾನೂನು ರೀತ್ಯಾ ಹೆಂಡತಿಯ ಸ್ಥಾನಮಾನ ಲಭಿಸುತ್ತದೆ. ಸಂಗಾತಿಯಿಂದ ದೈಹಿಕ ಹಲ್ಲೆ ಅಥವಾ ಒತ್ತಡ ಹೇರಿದರೆ ನೀವು ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾನೂನಿನ ಅಡಿ ಪ್ರಕರಣ ದಾಖಲಿಸಬಹುದು. ಅದರ ಜೊತೆಗೆ ಜೀವನಾಂಶ ಕೂಡ ಕೇಳಬಹುದು.

ಸಂಗಾತಿಯಿಂದ ಬಚ್ಚಿಡಬೇಡಿ : ಒಡೆದು ಹೋದ ಸಂಬಂಧದ ದುಃಖದಲ್ಲಿ ಹೊರಬರಲು ಮದುವೆ ಒಂದು ಒಳ್ಳೆಯ ಉಪಾಯ. ಆದರೆ ನಿಮ್ಮನ್ನು ಮದುವೆ ಆಗಬಯಸುವ ಹುಡುಗನಿಗೆ ನಿಮ್ಮ ಲಿವ್ ‌ಇನ್‌ ರಿಲೇಶನ್‌ ಶಿಪ್‌ ಬಗ್ಗೆ ಅವಶ್ಯವಾಗಿ ತಿಳಿಸಿ. ಹೊಸ ಸಂಬಂಧದ ಮೇಲೆ ಹಳೆಯ ಸಂಬಂಧದ ಯಾವುದೇ ನೆರಳು ಬೀಳದಂತೆ ಎಚ್ಚರ ವಹಿಸುವೆ ಎಂಬ ಬಗ್ಗೆಯೂ ಮಾತು ಕೊಡಿ.

ಜಯಂತ್‌ ನ ಪಾರ್ಟ್‌ ನರ್‌ ಅವನನ್ನು ಬಿಟ್ಟು ಹೋದ ನಂತರ, ಅವನ ವಿರುದ್ಧ ಮದುವೆಯ ಒತ್ತಾಯ ಹೇರಿ, ಅತ್ಯಾಚಾರದ ಆಪಾದನೆ ಸಹ ಮಾಡಿದ್ದಳು. ಎಷ್ಟೋ ಹೋರಾಡಿದ ನಂತರ ಜಯಂತ್‌ ಈ ಜೇಡರ ಬಲೆಯಿಂದ ಬಿಡಿಸಿಕೊಳ್ಳುವಂತಾಯಿತು.

ಇಂಥ ಗಂಡಸರಿಗಾಗಿಯೇ, ದೆಹಲಿ ಹೈಕೋರ್ಟ್‌ ಇಂಥ ಪ್ರಕರಣಗಳಲ್ಲಿ ಪೊಲೀಸರು ಅತ್ಯಾಚಾರ ಎಂದು ನಮೂದಿಸಿಕೊಳ್ಳುವ ಬದಲು ವಿಶ್ವಾಸ ಭಂಗ (ಕ್ರಿಮಿನಲ್ ಬ್ರೀಚ್‌ ಆಫ್‌ ಟ್ರಸ್ಟ್) ಮೊಕದ್ದಮೆ ನೋಂದಾಯಿಸಿಕೊಂಡು, ಅದನ್ನು ಪರೀಕ್ಷಿಸುವಂತೆ ಆದೇಶ ನೀಡಲಾಗಿದೆ, ಹೀಗಾಗಿ ಗಂಡಸರಿಗೂ ಒಂದು ಪಾಲು ನ್ಯಾಯ ಸಿಗುವಂತಾಗಿದೆ.

ಪಿ. ಆರತಿ ದತ್ತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ