ಸುಮಾ ಸತೀಶ್ ಲೇಖಕಿ

ಮೂಲತಃ ಲೇಖಕಿ, ಕವಿಯಿತ್ರಿ, ನಿರೂಪಕಿ, ನಾಟಕಕಾರ್ತಿ ಹಾಗೂ ಸಂಘಟಕಿಯಾದ ಸುಮಾ ಸತೀಶ್ ಅನನ್ಯ ಸಾಧನೆಗಳ ಬಗ್ಗೆ ತಿಳಿಯೋಣವೇ……!

ಬೆಣ್ಣೆಯಲ್ಲಿ ಅದ್ದಿ ತೆಗೆದಂತಹ ಮೃದು ಮಾತು, ಸುಂದರ ಮುಗುಳ್ನಗೆ, ನಿರೂಪಣೆ ಮಾಡಲು ನಿಂತರೆ ಬಹಳ ಸರಾಗವಾಗಿ, ಪಟಪಟನೆ, ಚಂದದ ಕನ್ನಡ ಮಾತು ಇವರ ಬಾಯಿಂದ ಹೊರ ಹೊಮ್ಮುತ್ತದೆ. ಇವರ ಮಾತುಗಳನ್ನು ಕೇಳಲು ನಿಜಕ್ಕೂ ಕಿವಿಗೆ ಇಂಪು. ಇಷ್ಟೆಲ್ಲಾ ಪ್ರತಿಭಾವಂತೆಯಾದರೂ ಸ್ವಲ್ಪ ಹಮ್ಮುಬಿಮ್ಮು ಇಲ್ಲದ ವ್ಯಕ್ತಿತ್ವ. ಸ್ನೇಹಜೀವಿಯಾದ ಇರುವ ಹೋದೆಡೆಯೆಲ್ಲಾ ಆಪ್ತ ಬಳಗನ್ನು ಸಂಪಾದಿಸುತ್ತಾರೆ. ಶ್ರಮಜೀವಿಯಾದ ಇವರು ಒಪ್ಪಿಕೊಂಡ ಕೆಲಸಕ್ಕೆ ನ್ಯಾಯ ಒದಗಿಸುವ ಕಾರಣ ಎಲ್ಲರಿಗೂ ಅಚ್ಚುಮೆಚ್ಚು.

ಬಾಲ್ಯ : ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ. ಬಾಲ್ಯದಿಂದಲೂ ಓದಿನ ಗೀಳು ಹತ್ತಿಸಿದ್ದು ಅಪ್ಪ. ಬಾಲಮಿತ್ರ, ಚಂದಮಾಮಾ, ಬೊಂಬೆಮನೆಗಳನ್ನು ತಂದುಕೊಡುತ್ತಿದ್ದರು. ಮಾಸ್ಟರ್‌ ಹಿರಣ್ಣಯ್ಯನವರ ಎಲ್ಲಾ ನಾಟಕಗಳನ್ನು ಕೇಳುತ್ತಲೇ ಬೆಳೆದವರು. ಅಪ್ಪನೊಂದಿಗೆ ನಿತ್ಯ ದಿನಪತ್ರಿಕೆಯ ಓದುವ ಹಾಗೂ ಚರ್ಚೆ ನಡೆಯುತ್ತಿದ್ದುದು ವೈಚಾರಿಕ ಚಿಂತನೆಗೆ ಭಿತ್ತಿಯಾಯಿತು. ಹಳ್ಳಿಯ ಪ್ರಕೃತಿಯ ಮಡಿಲಿನಲ್ಲಿ ಬೆಳೆದದ್ದೂ ಸಾಹಿತ್ಯಾಸಕ್ತಿ ಚಿಗುರೊಡೆಯಲು ಬೀಜವಾಯಿತು.

ಸಂಘಗಳೊಂದಿಗೆ ನಂಟು : ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂ.ಎ (ಕನ್ನಡ ಸಾಹಿತ್ಯ) ಮಾಡಿದರು. ವಾಸವಿಯ ಯೂನಿಯನ್ ನಿಂದ ಚಿನ್ನದ ಪದಕ ವಿಜೇತೆ. ಸಾಹಿತ್ಯದಲ್ಲಿನ ಅಪರಿಮಿತ ಆಸಕ್ತಿ ಇವರಿಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಅನುವು ಮಾಡಿಕೊಟ್ಟಿತು.

`ನಿಮ್ಮ ವೈಶ್ಯ ವಾರ್ತೆ’ ಮಾಸಿಕದ ಉಪ ಸಂಪಾದಕಿ.

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿ.

ಕರ್ನಾಟಕ ಲೇಖಕಿಯರ ಸಂಘ (ವಕೀಲೀಸಂ)ನಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯೆ.

ವಿಕಸನ ವೃಂದ ಸಂಸ್ಥೆಯ ಸೌರಭ ಎಂಬ ಸಾಹಿತ್ಯದ ಗುಂಪಿನ ಮೂಲಕ ಮೌಲ್ಯಯುತ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಕನ್ನಡ ಕೃತಿಯೊಂದರ ಮೌಲಿಕ ಪರಿಚಯ ಮಾಡುವ ಮೂಲಕ ಸಾಹಿತ್ಯಾಸಕ್ತರ ಓದಿಗೆ ನೀರೆರೆಯುತ್ತಾರೆ.

ಸಿರಿ ಸಾಂಸ್ಕೃತಿಕ ಮಹಿಳಾ ಸಂಘದಲ್ಲಿ ಸಂಘಟನಾ ಕಾರ್ಯದರ್ಶಿ.ಪ್ರಕಟಿತ ಕೃತಿಗಳು :

12 ಕಿರು ಹಾಸ್ಯ ನಾಟಕಗಳ ಸಂಕಲನ `ಮಿರ್ಚಿ ಮಸಾಲೆ ಮತ್ತು ಇತರ ನಗೆ ನಾಟಕಗಳು.’

ಅವನಿ  ಕವನ ಸಂಕಲನ.

ವಚನ ಸಿರಿ ಆಧುನಿಕ ವಚನಗಳು.

ಹಾದಿಯಲ್ಲಿನ ಮುಳ್ಳುಗಳು  ವೈಚಾರಿಕ ಲೇಖನ ಸಂಕಲನ.

ಬಳಗ ಬಳ್ಳಿಯ ಸುತ್ತ (ಸಂ.ಕೃತಿ).

ಶೂನ್ಯದಿಂದ ಸಿಂಹಾಸನದವರೆಗೆ ವ್ಯಕ್ತಿ ಚಿತ್ರಣ (ಅಚ್ಚಿನಲ್ಲಿ).

ಲಾಕ್ಡೌನ್ಸಮಯದಲ್ಲಿನ ಚಟುವಟಿಕೆ :

ಕೋವಿಡ್‌ ಜಗತ್ತನ್ನೇ ಬಂಧಿಸಿಟ್ಟ ಸಮಯದಲ್ಲಿ ಇವರು ರೆಕ್ಕೆ ಕಟ್ಟಿಕೊಂಡು ಹಾರಿದರು. ಅನೇಕ ಕಿರು ಹಾಸ್ಯ ವಿಡಿಯೋಗಳ ಚಿತ್ರಣವನ್ನು ಅವರದೇ ಯೂ ಟ್ಯೂಬ್‌ ಚಾನೆಲ್ ‌ನಲ್ಲಿ ಸೇರಿಸಿದ್ದಾರೆ. ಜೊತೆಗೆ ಆನ್‌ ಲೈನ್ ನಲ್ಲಿ ಮಾಡಿದ ಕೆಲವು ಉಪನ್ಯಾಸಗಳು, ಕಿರು ಭಾಷಣಗಳೂ, ಏಕಪಾತ್ರಾಭಿನಯದ ತುಣುಕುಗಳೂ ಇವೆ. ವಿವಿಧ ಸಂಸ್ಥೆಗಳಡಿಯಲ್ಲಿ ನೀಡಿದ ಹಲವು ಕಾರ್ಯಕ್ರಮದ ವಿಡಿ.ಓಗಳಿವೆ. ಸ್ಥಳೀಯ ಚಾನೆಲ್ ‌ಗಳಲ್ಲಿ ಕಿರು ನಾಟಕಗಳ ನಿರ್ದೇಶನ ಮತ್ತು ಅಭಿನಯ.

ಹಲವಾರು ಪತ್ರಿಕೆಗಳಲ್ಲಿ ಲೇಖನಗಳು ಮತ್ತು ಕವನಗಳು ಹಾಗೂ ಕೃತಿ ವಿಶ್ಲೇಷಣೆ ಪ್ರಕಟಣೆ.

ವೈಶ್ಯ ಲಗ್ನಂ ಲಾಂಛನದಲ್ಲಿ ಸಾಮಾಜಿಕ ಸಮಸ್ಯೆಗಳು ಮತ್ತು ಅದರ ನಿವಾರಣೆಗಾಗಿ ಹಲವು ಕಿರುಚಿತ್ರಗಳಿಗೆ ಕಥೆ ಚಿತ್ರಕಥೆ ಬರೆದು ಮುಖ್ಯ ಪಾತ್ರದಲ್ಲಿ ಅಭಿನಯ.

ಪ್ರಶಸ್ತಿಗಳು :

ಕರ್ನಾಟಕ ಆರ್ಯ ವೈಶ್ಯ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ `ಕನ್ನಡ ಸೇವಾ ರತ್ನ’ ಪ್ರಶಸ್ತಿ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮಹಿಳಾ ಸಬಲೀಕರಣ ಸಮಾವೇಶದಲ್ಲಿ ಸ್ತ್ರೀ ಸದ್ಭಾವನಾ ಪ್ರಶಸ್ತಿ, ಲಲಿತಾ ಪುರಸ್ಕಾರ.

ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಾಧಕ ಮಹಿಳೆ ಪ್ರಶಸ್ತಿ ಹಾಗೂ ಆತ್ಮೂರಿ ನರಸಿಂಹ ಸೋಮಯಾಜುಲು ಪ್ರಶಸ್ತಿ.

ಎ.ವಿ.ಎಲ್.ಜಿ ಗ್ರೂಪ್‌ನ ಅಚೀವರ್ಸ್‌ ಅವಾರ್ಡ್‌.

ಬಾರಿಸು ಕನ್ನಡ ಡಿಂಡಿಮ ಸಂಸ್ಥೆಯ ಕನ್ನಡ ಕೌಸ್ತುಭ ಪ್ರಶಸ್ತಿ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವ 2019ರ ಕಾರ್ಯಕ್ರಮದಲ್ಲಿ ಮಹಿಳಾ ಸಮಸ್ಯೆಗಳ ಕುರಿತಾದ `ಹೆಣ್ಣೇ ನೀನೆಷ್ಟು ಸಹನಾಮಯಿ’ ನಾಟಕ ಪ್ರದರ್ಶನ.

2021 ರಲ್ಲಿ ಜರಗನಹಳ್ಳಿಯಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹಿಳಾ ಸಾಂಸ್ಕೃತಿಕ ಉತ್ಸವದ ಕವಿಗೋಷ್ಠಿಯಲ್ಲಿ ಕವಿತಾ ವಾಚನ.

ಇತ್ತೀಚೆಗೆ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಹಿರಿಮೆ.

ಉಪನ್ಯಾಸ ಹಾಗೂ ಚಟುವಟಿಕೆಗಳು :

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ಶುಕ್ರವಾರ ನಡೆಯುವ ಉಪನ್ಯಾಸ ಮಾಲಿಕೆಯಲ್ಲಿ ಅಕ್ಕಮಹಾದೇವಿ ಕುರಿತು ಉಪನ್ಯಾಸ.

ಹಾಸನದ ಮಹಿಳಾ ಸಮಾವೇಶದಲ್ಲಿ ಕುಟುಂಬದಲ್ಲಿ ಅತ್ತೆ ಸೊಸೆ ಪಾತ್ರದ ಉಪನ್ಯಾಸ.

ನಿಮ್ಹಾನ್ಸ್ ನ ಮಾನಸ ಸಂಜೀವಿನಿ ಸಂಸ್ಥೆಯ ಉಪನ್ಯಾಸ ಮಾಲಿಕೆಯಲ್ಲಿ `ಸಂಸಾರದಲ್ಲಿ ಸಾಮರಸ್ಯ’ ಉಪನ್ಯಾಸ.

ಸಮರ್ಪಣಾ ಮಹಿಳಾ ವೇದಿಕೆಯ ಉಪನ್ಯಾಸ ಮಾಲಿಕೆಯಲ್ಲಿ `ಮೌಢ್ಯತೆಯ ಪರಮಾವಧಿ’ ಹಾಗೂ `ನಮ್ಮೊಳಗಿನ ಸಮಯ.’

ವಿಕಸನ ವೃಂದ ಸಂಸ್ಥೆಯ ಉಪನ್ಯಾಸ ಮಾಲಿಕೆಯಲ್ಲಿ `ಸಾಗರದಾಚೆ ಹರಡಿದ ಭಾರತೀಯ ಸಂಸ್ಕೃತಿ’ ಹಾಗೂ `ಹೂವಿನ ಪ್ರಾಮುಖ್ಯತೆ, ಇತ್ಯಾದಿಗಳ ಉಪನ್ಯಾಸ ನೀಡಿದ್ದಾರೆ.

ಆಕಾಶವಾಣಿಯ ವಿವಿಧ ಭಾರತಿ ಕಾರ್ಯಕ್ರಮದಲ್ಲಿ ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ವೈಚಾರಿಕ ಭಾಷಣ ಪ್ರಸಾರವಾಗಿದೆ.

ಲೇಖಿಕಾ ಸಾಹಿತ್ಯ ವೇದಿಕೆಯ ಹಿರಿಯ ಮಹಿಳಾ ಚೇತನಗಳು ಮಾಲಿಕೆಯಲ್ಲಿ ಹಾಸ್ಯ ಸಾಹಿತಿ ಟಿ. ಸುನಂದಮ್ಮನವರ ಸಾಹಿತ್ಯ, ಶ್ಯಾಮಲಾದೇವಿ ಬೆಳಗಾಂವ್ ಕರ್‌ ರ ಬದುಕು ಬರಹ, ವಾಣಿಯವರ ಕೃತಿಗಳು, ಡಾ. ವಿಜಯಾ ಸುಬ್ಬರಾಜ್‌ ಕಥಾಸಂಕಲನ ಕುರಿತ ಪ್ರಬಂಧ ಮಂಡನೆ.

ಒಟ್ಟಾರೆ ಬಹುಮುಖ ಕ್ರಿಯಾಶೀಲೆ, ಸದಾ ಒಂದಿಲ್ಲೊಂದು ಕಾರ್ಯಕ್ಕೆ ಹೆಗಲು ಕೊಡುವ ಗುಣ ಎಲ್ಲೆಡೆಯೂ ಸಲ್ಲುವಂತೆ ಮಾಡಿದೆ.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ