ಯಶೋದಾ ನಾಗರಾಜ್   ಆಶಾಜ್ಯೋತಿಯ ಸಂಸ್ಥಾಪಕಿ

ಬದುಕಿನಲ್ಲಿ ಎದುರಾಗುವ ಕಷ್ಟಗಳಿಗೆ ಹೆದರದೆ, ಬೇರೆಯವರ ಬದುಕಿಗೂ ದೂರದಿಂದಲೇ ಸ್ಛೂರ್ತಿಯಾಗಬುಹುದು ಎಂಬುದಕ್ಕೆ ಇವರ ಬದುಕಿನ ಪುಟಗಳೇ ಸಾಕ್ಷಿ……..!

ಬದುಕೆಂದ ಮೇಲೆ ಕಷ್ಟಗಳು ಇದಿದ್ದೇ. ಬದುಕಿನಲ್ಲಿ ಎದುರಾಗುವ ಇಂತಹ ಕಷ್ಟಗಳಿಗೆ ಕೊರಗದೆ, ಅದನ್ನು ಧೈರ್ಯದಿಂದ ಎದುರಿಸಿ, ಕಷ್ಟವೇ ಕರಗಿ ಹೋಗುವಂತೆ ಬದುಕುವ ಬಗೆ ಹೇಗೆ ಎನ್ನುವುದಕ್ಕೆ ನಿಮಗೊಂದು ನಿದರ್ಶನ ಬೇಕೆಂದರೆ, ನೀವೊಮ್ಮೆ ಬೆಂಗಳೂರಿನ ಯಶೋದಾ ನಾಗರಾಜ್‌ ರ ಪುಟಗಳನ್ನು ಓದಬೇಕು.

ಹೌದು, ಯಶೋದಾ ನಾಗರಾಜ್‌ ತಮ್ಮ ಪತಿ ನಾಗರಾಜ್‌ ರಿಗೆ ಅಂಟಿದ್ದ ಕುಡಿತದ ಚಟವನ್ನು ಬಿಡಿಸಿದ್ದೇ ಒಂದು ಸಾಹಸದ ಕಥೆಯಾದರೆ, ಆನಂತರ ಕುಡಿತದಿಂದ ಹೊರಬಂದ ನಾಗರಾಜ್‌ಮದ್ಯವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಿದ್ದು, ಅದಕ್ಕೆ ಯಶೋದಾ ಜೊತೆಯಾದದ್ದು, ಸಾವಿರಾರು ಜನರನ್ನು ಕುಡಿತದಿಂದ ಹೊರತಂದಿದ್ದು, ಈ ನಡುವೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್ ನ್ನು ಕೂಡಾ ಮಣಿಸಿ ಹೊಸ ಹೆಜ್ಜೆ ಇಟ್ಟು, ಮಾಡುತ್ತಿದ್ದ  ಕೆಲಸದಿಂದ ಸ್ವಂತ ನಿವೃತ್ತಿ ಪಡೆದುಕೊಂಡು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡರು.

ಯಶೋದಾ ನಾಗರಾಜ್‌ ಮೂಲತಃ ಬೆಂಗಳೂರಿನವರು. 1983ರಲ್ಲಿ  ಡಿ. ಫಾರ್ಮಾ ಮುಗಿಸಿದ ಕೂಡಲೇ ಕನನಕಪುರ ಸಮೀಪದ ಟಿ. ಹೊಸಹಳ್ಳಿಯ ಗೌರವಾನ್ವಿತ ಕುಟುಂಬದ ನಾಗರಾಜ್‌ ಅವರೊಂದಿಗೆ ಸಪ್ತಪದಿ ತುಳಿದರು. ಎರಡು ಅವಳಿ ಮಕ್ಕಳು. ನಂತರ ಅವರಿಗೆ ಕಿದ್ವಾಯಿ ಆಸ್ಪತ್ರೆಯ ಔಷಧ ವಿಭಾಗದಲ್ಲಿ ಕೆಲಸ ಸಿಕ್ಕಿತು. 1986ರಲ್ಲಿ ನಾಗರಾಜ್‌ ರಿಗೆ ಬೆನ್ನುಮೂಳೆ ಆಪರೇಷನ್ ಆಯಿತು. ಅವರು ನಿಧಾನವಾಗಿ ಮದ್ಯ ಸೇವಿಸಲಾರಂಭಿಸಿದರು. ಕ್ರಮೇಣ ಅದು ಅವರ ಬೆನ್ನೇರಿತು.

ಕೆಲಸ, ಕುಟುಂಬ, ಜೊತೆಗೆ ಪತಿಯ ಬಿಸ್‌ ನೆಸ್‌ ನೋಡಿಕೊಳ್ಳಬೇಕಾದ ಹೊಣೆ ಯಶೋದಾರ ಹೆಗಲಿಗೇರಿತು. ಜೊತೆಗೆ ಪತಿಯ ಕುಡಿತದಿಂದಾಗಿ ಸವಾಲಗಳು ಹೆಚ್ಚಲಾರಂಭಿಸಿದವು. ಹೆಣ್ಣು ಮಕ್ಕಳಿಬ್ಬರಿಗೆ ಮದುವೆ ಮಾಡಿಸಿದ ಯಶೋದಾ, ಗಂಡನ ಕುಡಿತದ ಚಟವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದೆ ವಿಚ್ಛೇದನವೇ ದಾರಿ ಎಂದು ನಿರ್ಧರಿಸಿದರು. ಈ ನಿರ್ಧಾರದ ಅಂತಿಮ ಹೆಜ್ಜೆ ಇಡುವ ಮೊದಲು ಆಪ್ತ ಸಮಾಲೋಚನೆಗೆಂದು ಬಂಜಾರಾ ಅಕಾಡೆಮಿಗೆ ಹೋದಾಗ, ಅಲ್ಲಿನ ಆಪ್ತಸಮಾಲೋಚಕರು ಪತಿಗೂ ಆಪ್ತಸಮಾಲೋಚನೆ ಮಾಡಿಸುವಂತೆ ಹೇಳಿದರು.

ಅದಕ್ಕೆ ಒಪ್ಪಿದ ಯಶೋದಾ, `ಆಲ್ಕೋಹಾಲಿಕ್‌ ಅನಾನಿಮಸ್‌’ ಗುಂಪಿಗೆ ಪತಿಯನ್ನು ಸೇರಿಸಿದರು. ಇದರಿಂದ ನಾಗರಾಜ್‌ ಬದಲಾಗಿ 20 ವರ್ಷಗಳ ಕುಡಿತದ ಚಟದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿದರು.

ಮನೆಯಲ್ಲಿ ಮತ್ತೆ ಮೊದಲಿನ ಸಂತಸ ಸಂಭ್ರಮ! ಕುಡಿತ ಕೇವಲ ಚಟವಲ್ಲ, ಅದೊಂದು ಅಮಲು ರೋಗ, ಬೇರೆ ರೋಗಿಗಳಿಗೆ ಸಹಾನುಭೂತಿಯಿಂದ ಆರೈಕೆ ಮಾಡುವಂತೆ ಅವರನ್ನು ಅನುಕಂಪ, ಪ್ರೀತಿ, ಕರುಣೆಯಿಂದ ನೋಡಿಕೊಂಡರೆ ಅವರು ಕೂಡಾ ಬದಲಾಗುತ್ತಾರೆ ಎಂದು ಯಶೋದಾರಿಗೆ ಅರ್ಥವಾಗಿತ್ತು. ಇದು ತನ್ನೊಬ್ಬಳ ಕಷ್ಟವಲ್ಲ, ತನ್ನಂತೆಯೇ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಕುಟಂಬಗಳೊಂದಿಗೆ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಯೋಚಿಸಿದ ಯಶೋದಾ ಅಂತಹ ಕುಟುಂಬಗಳ ನೆರವಿಗೆ ನಿಂತು ಅವರ ಮನಸ್ಸುಗಳಲ್ಲಿ ನೆಮ್ಮದಿ ಮೂಡಿಸಬೇಕೆಂದು ನಿರ್ಧರಿಸಿದರು.

ಇದರಿಂದ ತಾವೇ ಕೌನ್ಸೆಲಿಂಗ್‌ ತರಬೇತಿ ಪಡೆದರು. ಭಾನುವಾರ ಸೇರಿದಂತೆ ಇತರ ರಜೆಯ ದಿನಗಳಲ್ಲಿ ಕುಡಿತದ ಚಟಕ್ಕೆ ಬಿದ್ದವರಿಗೆ ಮತ್ತು ಅವರ ಕುಟುಂಬದವರಿಗೆ ಆಪ್ತ ಸಮಾಲೋಚನೆ ನೀಡಲಾರಂಭಿಸಿದರು. ಅವರು ಮಾಡುತ್ತಿದ್ದ ಕೆಲಸ ಪತಿಗೆ ಸ್ಛೂರ್ತಿ ತುಂಬಲಾರಂಭಿಸಿತು. ಪತ್ನಿಯ ನೆರವಿಗೆ ನಿಂತ ಅವರು ಅಮಲು ರೋಗಿಗಳ ಚಟ ಬಿಡಿಸುವ ಸಲುವಾಗಿ ಕ್ಯಾಂಪ್ ಆರಂಭಿಸುವ ಯೋಚನೆ ಮಾಡಿದರು. ಗಂಡನ ಯೋಚನೆ ಯಶೋದಾರಿಗೆ ಸಹಜವಾಗಿ ಖುಷಿ ತಂದಿತ್ತು. ಅವರೂ ಪತಿಗೆ ಸಂಪೂರ್ಣ ಪ್ರೋತ್ಸಾಹ ನೀಡಿದರು.

ಮೊಟ್ಟ ಮೊದಲು ಕನಕಪುರದಲ್ಲಿ 10 ದಿನಗಳ ಮದ್ಯ ವ್ಯಸನಿಗಳ ಮುಕ್ತ ಕ್ಯಾಂಪ್‌ ಆರಂಭಿಸಿದರು. ಹೀಗೆ ಆರಂಭವಾದ ಕ್ಯಾಂಪ್ ಗಳ ಸಂಖ್ಯೆ ಈಗ 100 ದಾಟಿದೆ. 700ಕ್ಕೂ ಹೆಚ್ಚು ಜನ ಇವರ ಕ್ಯಾಂಪಿನಿಂದಾಗಿ ಕುಡಿತದ ಚಟ ಬಿಟ್ಟಿದ್ದಾರೆ. ಹೀಗೆ ಕ್ಯಾಂಪ್ ಮಾಡುವುದರ ಜೊತೆಗೆ ಶಾಶ್ವತವಾಗಿ ಮದ್ಯ ವ್ಯಸನ ಮುಕ್ತಿ ಕೇಂದ್ರ ತೆರೆಯಬೇಕೆಂದು ನಿರ್ಧರಿಸಿದರು. ಹೀಗೆ 2019ರಲ್ಲಿ ಕನಕಪುರದ ಹಾರೋಹಳ್ಳಿಯ ಬಳಿ `ಸ್ನೇಹಜ್ಯೋತಿ’ ಕೇಂದ್ರ ಆರಂಭಿಸಿದರು.

ಇಲ್ಲಿ ರೋಗಿಗಳ ಅಗತ್ಯಕ್ಕೆ ತಕ್ಕ ಹಾಗೆ 3-6 ತಿಂಗಳ ಕಾಲ ಅವರನ್ನು ಇರಿಸಿಕೊಂಡು ಅವರನ್ನು ಚಟದಿಂದ ಬಿಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ಕೇಂದ್ರದ ಎಲ್ಲಾ ಕಾರ್ಯಕ್ರಮಗಳೂ `ಆಲ್ಕೋಹಾಲಿಕ್‌ ಅನಾನಿಮಸ್‌’ ಗುಂಪಿನ 12 ಸೂತ್ರಗಳ ಅಡಿಯಲ್ಲೇ ರೂಪಿಸಲಾಗುತ್ತಿದೆ. ಮೊದಲು ಮದ್ಯ ವ್ಯಸನಿಗಳ ದೇಹಾರೋಗ್ಯ ಸರಿಪಡಿಸಿ, ವೈದ್ಯರ ಸಲಹೆ ಪಡೆದು ಅವರ ದೇಹದಿಂದ ವಿಷ ಹೊರಹಾಕಲು ನಿರ್ದಿಷ್ಟ ಔಷಧಿ ನೀಡಲಾಗುತ್ತದೆ. ಆಹಾರ ನೀಡುವುದರ ಜೊತೆಗೆ ಯೋಗ, ಪ್ರಾಣಾಯಾಮ, ಉಪನ್ಯಾಸ ಇತ್ಯಾದಿಗಳ ಮೂಲಕ ಅವರ ಮನಸ್ಸನ್ನು ಬದಲಿಸಲಾಗುತ್ತದೆ. ಲಾಭದ ಉದ್ದೇಶವಿಲ್ಲದೆ, ಕೇವಲ ತಮ್ಮಂತೆ ಬೇರೆಯವರು ಕಷ್ಟವನ್ನು ಅನುಭವಿಸುವಂತೆ ಆಗಬಾರದು ಎನ್ನುವ ಉದ್ದೇಶದಿಂದ ಆರಂಭವಾದ `ಸ್ನೇಹಜ್ಯೋತಿ’ ಕೇಂದ್ರದಲ್ಲಿ ಪತಿಯ ಎಲ್ಲಾ ಕೆಲಸಗಳ ಜೊತೆಗೆ ಯಶೋದಾ ಕೈಜೋಡಿಸಿದ್ದಾರೆ. ಕೋವಿಡ್‌ ಸಮಯದಲ್ಲಿ ಈ ಕೇಂದ್ರವನ್ನು ಮುಚ್ಚಲಾಗಿದ್ದು, ಈಗ ಪುನಾರಂಭಗೊಂಡಿದೆ.

ತಾವು ಕೆಲಸ ಮಾಡುತ್ತಿದ್ದ ಕಿದ್ವಾಯಿ ಆಸ್ಪತ್ರೆಯಲ್ಲೂ ಕೂಡ ಅವರು ಜನಪರ ಕೆಲಸಗಳಿಂದ ಹೆಸರಾದರು. ಆಸ್ಪತ್ರೆಗೆ ಬರುವ ಬಡರೋಗಿಗಳು ಮತ್ತು ಅವರ ಸಂಬಂಧಿಕರಿಗೆ ತಮ್ಮಿಂದಾದ ನೆರವು ನೀಡಲು ಸಮಾನಮನಸ್ಕರ ತಂಡವೊಂದನ್ನು ಕಟ್ಟಿಕೊಂಡು, ಅದರ ಮೂಲಕ ಉಚಿತ ಔಷಧಿ ಒದಗಿಸುತ್ತಾ, ಏನೂ ಅರಿಯದವರಿಗೆ ಆಸ್ಪತ್ರೆಯಲ್ಲಿ ಎದುರಾಗುವ ಕಷ್ಟಗಳನ್ನು ಪರಿಹರಿಸುವುದು… ಹೀಗೆ ತಮ್ಮಿಂದಾದ ನೆರವನ್ನು ನೀಡುತ್ತಿದ್ದಾರೆ ಯಶೋದಾ ನಾಗರಾಜ್‌.

ಸದಾ ಒಳಿತನ್ನೇ ಬಯಸುತ್ತಿದ್ದ ಯಶೋದಾ ಅವರನ್ನು ಕಷ್ಟಗಳು ಬಿಡಲಿಲ್ಲ. 2 ವರ್ಷಗಳ ಹಿಂದೆ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆಗಲೂ ಅವರು ಎದೆಗುಂದದೆ ತಮ್ಮ ಇಚ್ಛಾಶಕ್ತಿ, ಕುಟುಂಬದವರ ಪ್ರೀತಿ, ವೈದ್ಯರ ಸಹಕಾರದಿಂದ ಅದನ್ನೂ ದೂರ ಓಡಿಸಿ ಮೊದಲಿನಂತಾದರು. ಕೋವಿಡ್‌ ಸಮಯದಲ್ಲಿ ಕಿದ್ವಾಯಿಯ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ನಂತರ ವಿಶ್ರಮಿಸದೆ ತಮ್ಮ ಇನ್ನೊಂದು ಕನಸಿನಂತೆ ಸಾವಯವ ಕೃಷಿಯಲ್ಲಿ ತೊಡಗಿಕೊಂಡ ಯಶೋದಾ ಈಗ ಮಾದರಿ ಮಹಿಳಾ ಕೃಷಿಕರಾಗಿ ಸ್ಛೂರ್ತಿ ತುಂಬು ಕೆಲಸ ಮಾಡುತ್ತಿದ್ದಾರೆ.

ಆರುಡೋ ಗಣೇಶ ಕೋಡೂರು 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ