ಏಪ್ರಿಲ್ ನೇ ತಾರೀಖಿನಂದು ದಿನ ಪತ್ರಿಕೆಯಲ್ಲಿ ಜಾಹೀರಾತೊಂದು ಬಂದಿತ್ತು. ಆ ಜಾಹೀರಾತಿನಲ್ಲಿ `ಒಳ್ಳೆಯ ಕಂಡೀಶನ್ನಲ್ಲಿ ಇರುವ ಮರ್ಸಿಡಿಸ್ ಬೆಂಝ್ ಕಾರು ಮಾರಾಟಕ್ಕಿದೆ. ಬೆಲೆ ಕೇವಲ 100/ ರೂ. ಮಾತ್ರ. ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸುವುದು,’ ಎಂದು ವಿಳಾಸ ಕೊಟ್ಟಿದ್ದರು. 100 ರೂ.ಗೆ ಮರ್ಸಿಡಿಸ್ ಕಾರು ಅಂದರೆ ನಂಬಲಸಾಧ್ಯದ ವಿಷಯವೇ! ಅದೂ ಅಲ್ಲದೆ ಏಪ್ರಿಲ್ ನೇ ತಾರೀಖಾದ್ದರಿಂದ `ಏಪ್ರಿಲ್ ಫೂಲ್’ ಮಾಡಲು ಪ್ರಕಟವಾದ ಜಾಹೀರಾತು ಎಂದು ಎಲ್ಲರೂ ನೆನೆಸಿ ಅಲಕ್ಷ್ಯ ಮಾಡಿದರು.
ಆದರೆ ಒಬ್ಬ ವ್ಯಕ್ತಿ ಮಾತ್ರ ಏನಾದರಾಗಲಿ ಆ ವಿಳಾಸಕ್ಕೆ ಹೋಗಿ ವಿಚಾರಿಸಿಕೊಂಡು ಬಂದರಾಯಿತು ಎಂದು ಆ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದ. ಮಧ್ಯ ವಯಸ್ಸಿನ ಮಹಿಳೆ ಬಂದು ಬಾಗಿಲು ತೆರೆದಳು.“ಮೇಡಂ, ನೀವೇನಾ ಮರ್ಸಿಡಿಸ್ ಕಾರು ಮಾರಾಟಕ್ಕಿದೆ ಎಂದು ಜಾಹೀರಾತು ಕೊಟ್ಟಿದ್ದು….?”
“ಹೌದು ನಾನೇ ಆ ಜಾಹೀರಾತು ಕೊಟ್ಟಿದ್ದು.”
“ನಾನು ಕಾರು ನೋಡಬಹುದಾ ಮೇಡಂ…..”
“ಓ…. ಅದಕ್ಕೇನಂತೆ, ಬನ್ನಿ ಅವಶ್ಯವಾಗಿ ನೋಡಿ,” ಎಂದು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಗ್ಯಾರೇಜ್ ನಲ್ಲಿದ್ದ ಕಾರನ್ನು ತೋರಿಸಿದಳು.
ಕಾರನ್ನು ನೋಡಿ ದಂಗಾದ ಆ ವ್ಯಕ್ತಿ, “ಇದೇನು ಮೇಡಂ, ಹೊಸ ಕಾರು….” ಎಂದು ಕೇಳಿದ.
“ಹೊಸದೇನಲ್ಲ…. ಆದಾಗಲೇ 18000 ಕಿ.ಮೀ. ಓಡಿದೆ,” ಎಂದಳು ಮಹಿಳೆ.
“ಆದರೂ ಕಾರಿನ ಬೆಲೆ ಕೇವಲ 100 ರೂ. ಅಂತ ಪ್ರಕಟವಾಗಿದೆ. ಒಂದು ವೇಳೆ ಪ್ರಿಂಟ್ ಮಿಸ್ಟೇಕ್ ಏನಾದ್ರೂ ಆಗಿದೆಯಾ ಮೇಡಂ?”
“ಯಾವ ಪ್ರಿಂಟ್ ಮಿಸ್ಟೇಕೂ ಇಲ್ಲ. ನಾನೇ ಇದರ ಬೆಲೆ ಕೇವಲ 100 ರೂ. ಅಂತ ಹಾಕಿಸಿದ್ದು. ನಿಮಗೆ ಕಾರು ಒಪ್ಪಿಗೆಯಾದರೆ 100 ರೂ. ಕೊಟ್ಟು ಕಾರನ್ನು ಒಯ್ಯಬಹುದು,” ಎಂದಳಾಕೆ.
ಆ ವ್ಯಕ್ತಿ ನಡುಗುವ ಕೈಗಳಿಂದ ನೂರು ರೂ. ನೋಟನ್ನು ಆ ಮಹಿಳೆಗೆ ನೀಡಿದ. ಅದಕ್ಕೆ ಆ ಮಹಿಳೆ ರಸೀತಿಯನ್ನೂ ಸಹ ನೀಡಿದ್ದಲ್ಲದೆ, ಕಾರಿನ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅವನಿಗೆ ಕೊಟ್ಟಳು.
ಕೈಯಲ್ಲಿ ಡಾಕ್ಯುಮೆಂಟ್ತೆಗೆದುಕೊಂಡ ವ್ಯಕ್ತಿ, “ಮೇಡಂ, ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು ಕೇಳ್ತೀನಿ. ಇಷ್ಟು ನಿಕೃಷ್ಟ ಬೆಲೆಗೆ ಈ ಕಾರು ಮಾರುತ್ತಿರುವ ಹಿಂದಿನ ಸಸ್ಪೆನ್ಸ್ ಏನು ಅಂತ ಹೇಳಿ ಮೇಡಂ, ಪ್ಲೀಸ್……” ಎಂದ.
“ಇದರಲ್ಲಿ ಯಾವ ಸಸ್ಪೆನ್ಸೂ ಇಲ್ಲ. ನನ್ನ ಸ್ವರ್ಗೀಯ ಪತಿಯ ಮಾತನ್ನು ನಡೆಸಿ ಕೊಡುತ್ತಿದ್ದೇನೆ ಅಷ್ಟೇ. ನನ್ನ ಪತಿ ವಿಲ್ ನಲ್ಲಿ ತನ್ನ ಮರಣಾನಂತರ ತಮ್ಮ ಈ ಮರ್ಸಿಡಿಸ್ ಕಾರನ್ನು ಮಾರಬೇಕು. ಮಾರಿದ ಸಂಪೂರ್ಣ ಹಣವನ್ನು ತನ್ನ ಸೆಕ್ರೆಟರಿ ದೀಪಾಳಿಗೆ ಕೊಡಬೇಕು ಅಂತ ಬರೆದಿದ್ದರು. ಆದ್ದರಿಂದ ಅದನ್ನು 100 ರೂ.ಗೆ ಮಾರಿದೆ ಅಷ್ಟೆ…..”
ರಾಮು : `ಚೆಕ್ ಬೌನ್ಸ್ ಆಯ್ತು,’ ಅನ್ನೋದು ಹಳೇ ಮಾತು. ಈಗದು ಬದಲಾಗಿದೆ.
ಸೋಮು : ಅದೇನು ಹಾಗಂತಿಯಾ…?
ರಾಮು : ಹೌದು, ಈಗೆಲ್ಲ `ಬ್ಯಾಂಕೇ ಬೌನ್ಸ್ ಆಗೋಯ್ತು!’ ಅನ್ನೋದೇ ಕಾಲಕ್ಕೆ ತಕ್ಕ ಮಾತು.
ವೀಣಾ : ಹಿಂದಿನ ಇಂಗ್ಲಿಷ್ ಚಿತ್ರಗಳ ಜೇಮ್ಸ್ ಬಾಂಡ್ ಟ್ರೆಂಡ್ ಹಳೆಯದಾಗಿದೆ. ಈಗ ಹೊಸ ಬಾಂಡ್ ಬರ್ತಿದ್ದಾನೆ ಗೊತ್ತಾ?
ವಾಣಿ : ಏನು…? ಅದಾರು ಹೊಸ ಬಾಂಡ್?
ವೀಣಾ : ಅವನೇ ನಮ್ಮ ಭಾರತೀಯ `ನಾಟು ನಾಟು ಸಿನ್!’
ಜಡ್ಜ್ : ನಾಚಿಕೆ ಆಗಬೇಕು ಕಣ್ರೀ ನಿಮ್ಮ ಜನ್ಮಕ್ಕೆ! ಈ ವಯಸ್ಸಿನಲ್ಲಾ ಹೀಗಾಡೋದು? 80ರ ಮೇಲಾಯ್ತು, ಈ ಹಡುಮುದಿ ವಯಸ್ಸಿನಲ್ಲಿ ಹೋಗಿ 18ರ ಹುಡುಗಿಗೆ ಕಣ್ಣು ಹೊಡೆದಿದ್ದೀರಲ್ಲ….. ನಿಮ್ಮನ್ನು ಯಾವ ಕುಂಭೀಪಾಕದ ನರಕಕ್ಕೆ ಹಾಕಿಸಲಿ…..?
ತಾತಾ : ಅಯ್ಯೋ ಸ್ವಾಮಿ…. ನಿಮ್ಮ ಕೋರ್ಟಿನ ವಿಚಾರಣೆಯ ಕರ್ಮಕ್ಕೆ ಬಡ್ಕೊಂಡ್ರು…. 18ರ ಹುಡುಗಿಗೆ ನಾನು ಕಣ್ಣು ಹೊಡೆದಿದ್ದು ನಿಜ, ಆಗ ನನ್ನ ವಯಸ್ಸು ಕೇವಲ 20. ಆಗಿನಿಂದ ಕೇಸು ಮುಂದೂಡಲ್ಪಟ್ಟು ಈಗ ಹಿಯರಿಂಗ್ ಗೆ ಬಂದಿದೆ.
ಸೊಸೆ : ಅತ್ತೆ, ರಸಂ ಮಾಡುವಾಗ ಅದಕ್ಕೆ ಹುಳಿ ಹಿಂಡಿ ಹಾಕಬೇಕಾ?
ಅತ್ತೆ : ಬೇಡ… ಅದರ ಬದಲು ಫೆನಾಯಿಲ್ ಹಾಕಿಬಿಡು, ಎಲ್ಲರೂ ತಕ್ಷಣ ಶಿವನ ಪಾದ ಸೇರ್ಕೊಂಡುಬಿಡೋಣ.
ಸೊಸೆ : ಈಗ ತಾನೇ ಅಡುಗೆ ಕಲೀತಿದ್ದೀನಿ, ಸ್ವಲ್ಪ ದಯವಿಟ್ಟು ಹೇಳಿಕೊಡಬಾರದೇ….?
ಅತ್ತೆ : ಆ…ಹಾ…ಹಾ…! ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರಂತೆ… ನಿನಗೆ ಅಡುಗೆ ಕಲಿಸಲು ನಾನೇನು ಕುಕಿಂಗ್ ಕ್ಲಾಸ್ ನಡೆಸ್ತಿದ್ದೀನಾ…. ಗಂಡನ್ನ ಬಟ್ಟಿಗೆ ಹಾಕಿಕೊಳ್ಳೋದು ಗೊತ್ತು, ಅತ್ತೆ ಮೇಲೆ ಕಂಡೋರ ಹತ್ತಿರ ಚಾಡಿ ಹೇಳೋದು ಗೊತ್ತು, ಅಡುಗೆ ಮಾತ್ರ ಗೊತ್ತಾಗೋಲ್ವಾ…..?
ಮರಿ ಗುಂಡ ತಾಯಿ ತಂದೆಯರ ಮದುವೆ ಆಲ್ಬಂ ನೋಡುತ್ತಿದ್ದ.
ಮರಿ ಗುಂಡ : ಅಮ್ಮಾ, ಈ ಫೋಟೋದಲ್ಲಿ ನಿನ್ನ ಜೊತೆ ನಿಂತಿರೋರು ಯಾರು?
ಗುಂಡಿ : ಅದು ನಿನ್ನ ಡ್ಯಾಡಿ ಕಣೋ!
ಮರಿ ಗುಂಡ : ಮತ್ತೆ… ಈ ಬಾಲ್ಡಿ ಅಂಕಲ್ ಜೊತೆ ನಾವೇಕೆ ಈಗ ವಾಸಿಸುತ್ತಿದ್ದೇವೆ?
ಗುಂಡ ಮದುವೆಯಾಗಿ 20 ವರ್ಷಗಳಾದರೂ ಎಂದೂ ಪತ್ನಿಯ ಅಡುಗೆ ಹೊಗಳಿರಲಿಲ್ಲ. ಅದೇನೋ ಗೊತ್ತಿಲ್ಲ ಆ ದಿನ ಹೆಂಡತಿ ಬಡಿಸಿದ ಬಿಸಿಬೇಳೆ ಭಾತ್ ತಿಂದವನೇ ಅವಳನ್ನು ಹೊಗಳಿದ.
ಆದರೆ ಇದೇನಿದು? ಗುಂಡಿ ಖುಷಿ ಖುಷಿ ಆಗುವ ಬದಲು ಸರ್ರೆಂದು ಸಿಟ್ಟಿಗೆದ್ದು ಗಂಡನ ಮೇಲೆ ಜಗಳಕ್ಕೆ ಬರುವುದೇ? ಗುಂಡ ಕೇಳಿದ್ದಕ್ಕೆ, “ಕಳೆದ 20 ವರ್ಷಗಳಲ್ಲಿ ಒಮ್ಮೆಯೂ ನೀವು ನನ್ನ ಕೈ ಅಡುಗೆ ಹೊಗಳಲಿಲ್ಲ. ಇವತ್ತು ಪಕ್ಕದ್ಮನೆ ಪಂಕಜಾ ಕೊಟ್ಟಿದ್ದನ್ನು ತಿಂದು ಹೀಗಾ ಆಡುವುದು….?”
ಒಂದು ಸಲ ಹಾರಾಡುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಗುವುದರಲ್ಲಿತ್ತು.
ಆಗ ಪೈಲಟ್ ಬಂದು ಎಲ್ಲರಿಗೂ ಕೇಳಿದ, “ನಿಮ್ಮಲ್ಲಿ ಯಾರಿಗಾದರೂ ಕೊನೇ ಘಳಿಗೆಯಲ್ಲಿ ದೇವರನ್ನು ಪ್ರಾರ್ಥಿಸಿ ಜೀವ ಉಳಿಸಿಕೊಳ್ಳುವ ಮಂತ್ರ ಗೊತ್ತಿದೆಯೇ?”
ಆಗ ಗುಂಡ ತನಗೆ ಎಲ್ಲಾ ಗೊತ್ತು, ಈಗಲೇ ಪ್ರಾರ್ಥನೆ ಮಾಡ್ತೀನಿ, ಎಂದು ಹೇಳಿದ.
ಅದಕ್ಕೆ ಪೈಲಟ್, “ಅಗತ್ಯ ಮಾಡಿ. ನನ್ನ ಬಳಿ ಒಂದು ಪ್ಯಾರಾಚೂಟ್ ಕಡಿಮೆ ಇದೆ, ಅದಕ್ಕೆ ಕೇಳಿದ್ದು. ಪ್ರಾರ್ಥನೆ ನಂತರ ನೇರ ಕೆಳಕ್ಕೆ ದುಮುಕಿ ಬಿಡಿ!”
ಒಮ್ಮೆ ಭಾನುವಾರ ಕಿಟ್ಟಿ ಆರಾಮಾಗಿ ಆಕಳಿಸುತ್ತಾ, ಎದ್ದಾಗ ಅದಾಗಲೇ 9 ಗಂಟೆ ದಾಟಿತ್ತು.
ಪತ್ನಿ : ಆಹಾ… ಪತಿರಾಯರಿಗೆ ಇದೀಗ ಸುಪ್ರಭಾತ ಆಯ್ತೇ? ಈ ಚರಣದಾಸಿಯಿಂದ ನಿಮಗೆ ಏನೇನು ಸೇವೆ ಆಗಬೇಕಾಗಿದೆ… ಆದೇಶ ನೀಡೋಣವಾಗಲಿ? ಬೆಡ್ ಕಾಫಿ ಟೀ ಏನು ತಂದುಕೊಡಲಿ? ತಿಂಡಿಗೆ ಪೂರಿ ಸಾಗು ರೆಡಿ ಮಾಡಲೇ? ಸ್ನಾನಕ್ಕೆ ಹದವಾಗಿ ನೀರು ಕಾಯಿಸಿ ಅದಕ್ಕೆ ಗುಲಾಬಿ ದಳ ಬೆರೆಸಲೇ? ಮಧ್ಯಾಹ್ನದ ಊಟಕ್ಕೆ ಬಿಸಿ ಬಿಸಿ ಬಿರಿಯಾನಿ ಜೊತೆ ಹಾಲುಖೀರು, ಬೊಂಬಾಯಿ ಬೊಂಡ, ಹಪ್ಪಳ ಸಂಡಿಗೆ ಇಷ್ಟೇ ಸಾಕೇ? ಬಡ್ಕೊಂಡ್ರು, ನಿಮ್ಮ ಬುದ್ಧೀಗೆ….. ನಾನು ಎಲ್ಲಾ ಮನೆ ಕೆಲಸ ಮುಗಿಸಿದ್ದೀನಿ, ಈಗ ಏಳ್ತಿದ್ದಾರೆ, ಮಹರಾಯರು!
ಮಾರನೇ ಭಾನುವಾರ ಕಿಟ್ಟಿ ಕಿಮಕ್ ಕಮಕ್ಎನ್ನದೆ, 6 ಗಂಟೆಗೇ ಎದ್ದು ಕುಳಿತ.
ಪತ್ನಿ : ಇಷ್ಟು ಬೆಳ್ಳಂಬೆಳಗ್ಗೆ ಎದ್ದು ಯಾವ ಸಾಮ್ರಾಜ್ಯ ಆಳಬೇಕಿದೆಯೋ ತಾವು? ಬಾಲ್ಕನಿಯಲ್ಲಿ ಹೋಗಿ ನಿಂತು ಎಕ್ಸರ್ ಸೈಜ್ ಮಾಡೋ ನೆಪದಲ್ಲಿ, ಜಾಗಿಂಗ್ ನೆಪದಲ್ಲಿ ಕಂಡ ಕಂಡ ಹೆಂಗಸರನ್ನು ಕೆಕ್ಕರಿಸೋದೇನೂ ಬೇಡ…. ಮಾಡಲು ಏನೂ ಕೆಲಸವಿಲ್ಲದೆ ಎದ್ದು ಕುಳಿತಿದ್ದೀರಾ….. ಬಾಯಿ ಮುಚ್ಚಿಕೊಂಡು ಬಿದ್ದುಕೊಳ್ಳಿ!
ಬಹಳ ದಿನಗಳ ನಂತರ ಚಡ್ಡಿ ದೋಸ್ತುಗಳಾದ ಅವಿವಾಹಿತ ಮೋಹನ್ ಹಾಗೂ ವಿವಾಹಿತ ರಾಜೇಶ್ ಭೇಟಿಯಾದರು.
ಮೋಹನ್ : ಅದು ಸರಿ, ಲವ್ ಮ್ಯಾರೇಜ್ ಮತ್ತು ಅರೇಂಜ್ಡ್ ಮ್ಯಾರೇಜ್ ಮಧ್ಯೆ ವ್ಯಾತ್ಯಾಸವೇನು…..?
ರಾಜೇಶ್ : ಅದೇ….. ಆತ್ಮಹತ್ಯೆಗೂ, ಹತ್ಯೆಗೂ ಇರುವಂಥ ವ್ಯತ್ಯಾಸ…..!