ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಸಂಭ್ರಮದ ನಡುವೆ ಆಘಾತ, ಆಕ್ರಂದನ. ಹುಚ್ಚೆದ್ದು ಕುಣಿಯುತ್ತಿದ್ದ ಅಭಿಮಾನಿಗಳ ಹೃದಯ ನೋಡ ನೋಡುತ್ತಿದ್ದಂತೆ ಸ್ತಬ್ಧವಾಗಿದೆ. ಸಂಭ್ರಮಾಚರಣೆ ವೇಳೆ ಕಾಯ್ತುಳಿತಕ್ಕೆ ಬಲಿಯಾಗಿದ್ದಕ್ಕೆ ಸಾಕ್ಷಿಯಾಗಿದ್ದು ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಸ್ಟೇಡಿಯಂ.ಭೀಕರ ಕಾಲ್ತುಳಿತ: ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ವರ್ಷಕ್ಕೆ ಐಪಿಎಲ್ ಕಪ್ ಗೆದ್ದಿದೆ. ಈ ಸಂಭ್ರಮಾಚರಣೆ ಎಲ್ಲೆಡೆ ಮನೆ ಮಾಡಿರುವಾಗಲೇ ಭಾರೀ ದುರಂತ ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಕಾಲಿಡಲು ಜಾಗವಿಲ್ಲದೆ ಕಾಲ್ತುಳಿತ ಸಂಭವಿಸಿ ಅಭಿಮಾನಿಗಳು ಮೃತಪಟ್ಟಿದ್ದಾರೆ.
ಕಪ್ ನಮ್ದಾಯ್ತು ಅನ್ನೋ ಉತ್ಸಾಹದಲ್ಲಿ ಅಸಂಖ್ಯಾತ ಸಂಖ್ಯೆಯ ಅಭಿಮಾನಿಗಳು ಸ್ಟೇಡಿಯಂ ಸುತ್ತ ಜಮಾಯಿಸಿದ್ದರು. ಮಧ್ಯಾಹ್ನದ ವೇಳೆ ಆರ್ಸಿಬಿ ಮ್ಯಾನೇಜ್ಮೆಂಟ್ ಉಚಿತ ಪ್ರವೇಶ ಎಂದು ಪೋಸ್ಟ್ ಹಾಕಿತು. ಇದರಿಂದಾಗಿ ಇನ್ನೂ ಹಲವು ಅಭಿಮಾನಿಗಳು ಸ್ಟೇಡಿಯಂನತ್ತ ದೌಡಾಯಿಸಿದರು. ಸ್ಟೇಡಿಯಂ ಪ್ರವೇಶಕ್ಕೆ ಪೊಲೀಸರು ಗೇಟ್ ಓಪನ್ ಮಾಡುತ್ತಿದ್ದಂತೆ ಏಕಾಏಕಿ ಅಭಿಮಾನಿಗಳು ಒಳಗೆ ನುಗ್ಗಿದ್ದಾರೆ. ಈ ವೇಳೆ ನೂಕಾಟ, ತಳ್ಳಾಟ ಉಂಟಾಗಿ ದುರ್ಘಟನೆ ಸಂಭವಿಸಿದೆ. ಕಾಲ್ತುಳಿತ ನಡೆದು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ.
ಮಾತೇ ಬರ್ತಿಲ್ಲ, ಕರುಳು ಹಿಂಡುತ್ತಿದೆ: ಕಾಲ್ತುಳಿತ ದುರಂತದ ಬಗ್ಗೆ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, ಮಾತೇ ಬರ್ತಿಲ್ಲ, ಕರುಳು ಹಿಂಡುತ್ತಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿರ್ಸ್ ಕೂಡ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಮರುಗಿದ್ದಾರೆ. ಇತ್ತ ನಟಿ ಅನುಷ್ಕಾ ಶರ್ಮಾ ಕೂಡ ಬ್ರೋಕನ್ ಹಾರ್ಟ್ ಎಮೋಜಿ ಹಾಕಿ ಕಾಲ್ತುಳಿದ ಘಟನೆಗೆ ಮರುಕ ವ್ಯಕ್ತಪಡಿಸಿದ್ದಾರೆ.10 ಲಕ್ಷ ಪರಿಹಾರ ಘೋಷಣೆ: ಕಾಯ್ತುಳಿತದ ದುರಂತದಲ್ಲಿ ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಈ ನಡುವೆ ಗಾಯಾಳುಗಳ ಆರೋಗ್ಯವನ್ನು ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿಚಾರಿಸಿದ್ದಾರೆ.
ಸಂಭ್ರಮದಲ್ಲಿ ಸೂತಕ: ಭೂಮಿಕ (20), ಸಹನಾ (19), ಪೂರ್ಣಚಂದ್ರ (32), ಚಿನ್ಮಯಿ (19), ದಿವಾನ್ಷಿ (13) ಶ್ರವಣ್ (20), ದೇವಿ (29), ಶಿವಲಿಂಗ್ (17), ಮನೋಜ್ (33), ಅಕ್ಷತಾ, ಪ್ರಜ್ವಲ್ (21) ಕಾಯ್ತುಳಿತಕ್ಕೆ ಬಲಿಯಾಗಿದ್ದಾರೆ. ಇನ್ನೂ 47 ಮಂದಿ ತೀವ್ರ ಗಾಯಗೊಂಡಿದ್ದು, 33 ಜನರ ಸ್ಥಿತಿ ಚಿಂತಾಜನಕವಾಗಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ. 18 ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದ ಕಾಲ್ತುಳಿತದಿಂದ ಸಂಭವಿಸಿದ ಸಾವಿನ ಸೂತಕದಲ್ಲಿ ಮರೆಯಾಗಿದೆ.