ತಾಯಿ ತಂದೆಯರ ಒಬ್ಬಳೇ ಮಗಳಾದ ಲಾಸ್ಯಾ ಅವರ ಪ್ರಪಂಚವಾಗಿದ್ದಳು. ಓದಲಿಕ್ಕಾಗಿ ಬೇರೆ ಊರಿಗೆ ಹೋದ ಅವಳು, ಪ್ರೇಮಕ್ಕೆ ಸಿಲುಕಿ ತಾಯಿ ತಂದೆಯರ ಆಸೆಗೆ ವಿರೋಧವಾಗಿ, ಮದುವೆಯಾಗಿ ಹೊರಟುಹೋದಳು. ಇದನ್ನು ಅವರು ಸಹಜವಾಗಿ ಸ್ವೀಕರಿಸಲು ಸಾಧ್ಯವಾಯಿತೇ……?

“ಎಲ್ಲಾ ಡಾಕ್ಯುಮೆಂಟ್ಸ್ ಸರಿಯಾಗಿ ಇಟ್ಟುಕೊಂಡಿದ್ದೀಯಾ….?” ಫೋಟೋಕಾಪಿ ಎಲ್ಲವೂ ಎರಡೆರಡು ಸೆಟ್‌ ರೆಡಿ ಇರಲಿ. ಡಾಕ್ಯುಮೆಂಟ್ಸ್ ವೆರಿಫಿಕೇಶನ್‌ ಜಾಗ ಇಲ್ಲಿಂದ ಬಹಳ ದೂರ ಇದೆ. ಬೇಕಂದ್ರೆ ಅಲ್ಲಿ ಕಾಪೀನೂ ಸಿಗಲ್ಲ. ಏನಾದರೂ ಮರೆತರೆ ನಾನು ಜವಾಬ್ದಾರಿ ಅಲ್ಲ ಮಗ,” ಎಂದು ಸುನಂದಾ ಟೀಚರ್‌ ಮಗಳು ಲಾಸ್ಯಾಳಿಗೆ ಹೇಳಿದರು.

ಲಾಸ್ಯಾ ಆಗ ತಾನೇ ಪಿ.ಯು.ಸಿ ಮುಗಿಸಿ ಎಂಜಿನಿಯರಿಂಗ್‌ ಬೇಡ, ಮೆಡಿಸಿನ್‌ ಓದಬೇಕೆಂಬ ಹಂಬಲ ಇಟ್ಟುಕೊಂಡಿದ್ದಳು. “ನೀನು ಏನಾದರೂ ಓದು ಆದರೆ 100% ಎಫರ್ಟ್‌ ಹಾಕಬೇಕು,”  ಎಂದು ಮಗಳು ಲಾಸ್ಯಾಳನ್ನು ಜಾಗೃತಗೊಳಿಸುತ್ತಿದ್ದರು ಸುನಂದಾ.

ಸರದಿ ಬಂದಾಗ ಕೌನ್ಸಿಲಿಂಗ್‌ ಗೆ ಹೋದರೆ ಅಲ್ಲಿ ಬಹಳ ಕಾಂಪಿಟೇಶನ್‌ ಇದ್ದ ಕಾರಣ ಅಲೋಪತಿಗೆ ಸೀಟ್‌ ಸಿಗಲಿಲ್ಲ. ಸಿಕ್ಕಿದ್ದು ಆಯುರ್ವೇದಿಕ್‌ ಸೀಟು. ಇದೂ ಕೂಡ ಚೆನ್ನಾಗಿದೆ ಎಂದು ಲಾಸ್ಯಾ ಬಿ.ಎ.ಎಂ.ಎಸ್‌ ಓದಲು ನಿರ್ಧರಿಸಿದಳು. ಬೆಂಗಳೂರಿನ ಹಿರಿಯ ಕ್ಯಾಂಪಸ್‌ ನಲ್ಲಿ ಲಾಸ್ಯಾಳ ಓದು ಪ್ರಾರಂಭವಾಯಿತು.

ಮಗಳು ಇಷ್ಟಪಟ್ಟು ಕಲಿಯುತ್ತಿದ್ದಾಳೆ ನಮಗೇನು ಎಂಬಂತೆ ಲಾಸ್ಯಾಳ ಅಮ್ಮ, ಅಪ್ಪ ನೆಮ್ಮದಿ ತಂದುಕೊಂಡರು. ವಾರ, ಎರಡು ವಾರಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ಮಗಳನ್ನು ನೋಡಿಕೊಂಡು ಬರುವುದು, ಸುತ್ತಾಡಿಸುವುದು, ಯಾವುದಕ್ಕೂ ಫೀಲ್ ಆಗಬಾರದೆಂದು ಅವಳಿಗೆ ಬೇಕಾದ ವಸ್ತುಗಳನ್ನು ಒಂದು ಹೆಚ್ಚಿಗೆ ಎಂಬಂತೆ ತೆಗೆದು ಕೊಡುತ್ತಿದ್ದರು.

`ನನ್ನ ಆಯ್ಕೆಯ ವಿಷಯವನ್ನೇ ತೆಗೆದುಕೊಂಡಿದ್ದೇನೆ. ಅಮ್ಮ ಹೇಳಿದಂತೆ ಬಹಳ ಚೆನ್ನಾಗಿ ಓದಿಕೊಳ್ಳಬೇಕು,’ ಎಂಬ ಆಸೆ ಲಾಸ್ಯಾಳಲ್ಲಿಯೂ ಇತ್ತು. ಆದರೆ ಸ್ವಲ್ಪ ಹೋಮ್ ಸಿಕ್‌. ಸಂಜೆ ಆಗುತ್ತಲೇ ಎಳೆ ಮಕ್ಕಳು ಗಲಾಟೆ ಮಾಡುವಂತೆ ಫೋನ್‌ ಹಿಡಿದು ರಾದ್ಧಾಂತ ಮಾಡಿಬಿಡುತ್ತಿದ್ದಳು.

ಮಗಳು ಹಾಗೆ ಅಳುವಾಗ ಅಪ್ಪ, “ನಿನಗಿಷ್ಟ ಇಲ್ಲ ಅಂದರೆ ಬಂದುಬಿಡು,” ಎಂದು ಸಮಾಧಾನಿಸುವ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಲ್ಲಿ ಲಾಸ್ಯಾ ಮನೆ ಕಡೆ ಅಷ್ಟಾಗಿ ಗಮನ ಕೊಡದೆ ಓದು ಮುಂದುವರಿಸಿದಳು. ಅವಳು ಓದುತ್ತಿದ್ದ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದರು. ಹಾಗೆ ಬಂದ ರೋಗಿಗಳ ಪಟ್ಟಿ ಬರೆದುಕೊಳ್ಳುವಾಗ, ಲಾಸ್ಯಾಳಿಂದ ತಪ್ಪಾಗಿ ಹೋಗುತ್ತಿತ್ತು. `ಮೊದಲನೇ ಪುಟದಲ್ಲಿ ಹೀಗಾಯಿತಲ್ಲ ಹಿರಿಯ ವೈದ್ಯರು ಕೇಳಿದರೆ ಏನು ಹೇಳುವುದು…..?’ ಎಂದು ಗಂಜಿಗೆ ಬಿದ್ದ ನೊಣದಂತೆ ಲಾಸ್ಯಾ ಒದ್ದಾಡುತ್ತಿದ್ದಳು. ಲಾಸ್ಯಾಳ ಪೇಚಾಟ ನೋಡಲಾಗದ ಎಂ.ಡಿ. ಓದುತ್ತಿದ್ದ ವೈದ್ಯ ಹರ್ಷ, ಯಾರಿಗೂ ಕಾಣದಂತೆ ಬೇರೆಯದೇ ಪುಟಕ್ಕೆ ರೋಗಿಗಳ ಪ್ರವರವನ್ನು ವರ್ಗಾಯಿಸಿಬಿಟ್ಟ. ಅವಳ ತಪ್ಪು ಯಾರಿಗೂ ತಿಳಿಯಲಿಲ್ಲ.  ಆಗಂತೂ ಲಾಸ್ಯಾಳಿಗೆ ಅನುಭವಿಸಲಾರದಷ್ಟು ಸಂತಸವಾಯಿತು. ಅವಳ ಪಾಲಿಗೆ ಅವನೇ ಹೀರೋ ಎನಿಸಿಬಿಟ್ಟ. ಪರಿಚಯ, ಸ್ನೇಹ, ಮದುವೆಯವರೆಗೂ ಬಂದು ತಲುಪಿತು. ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಪಾರ್ಟಿ ಮಾಡಲು ಹೋದರು ಅನಿರೀಕ್ಷಿತವಾಗಿ ಉಂಗುರವನ್ನು ಬದಲಾಯಿಸಿಕೊಂಡರು.

ಲಾಸ್ಯಾ ಏನೇ ವಿಚಾರವಿದ್ದರೂ ಅಮ್ಮನಿಗೆ ಹೇಳುತ್ತಿದ್ದಳು. ಆದರೆ ಈ ಪ್ರೀತಿ ಪ್ರೇಮದ ವಿಚಾರವನ್ನು ಭಯದಿಂದ ಹೇಳಲಿಲ್ಲ. ಮಕ್ಕಳಿಗಿಂತ ಅಮ್ಮಂದಿರು ಯಾವಾಗಲೂ ಜಾಣೆಯರಲ್ಲವೇ? ಹಿಂದಿಗಿಂತಲೂ ಮಗಳ ಫೋನ್‌ ಕರೆ ಕಡಿಮೆಯಾಗಿದೆ ಎಂದು ಅಲೋಕಿಸಿದಾಗ ಮಗಳ ಮನಸ್ಸು ಬೇರೆಲ್ಲೋ ಇದೆ ಎಂಬ ವಿಚಾರ ಸುನಂದಾಗೆ ಬಹು ಬೇಗ ಹೊಳೆಯಿತು. ಆದರೆ ನೇರವಾಗಿ ಕೇಳುವಂತಿಲ್ಲ, ಒಂದು ವೇಳೆ ನೇರವಾಗಿ ಕೇಳಿ ಆ ವಿಚಾರ ಆಕಸ್ಮಾತಾಗಿ ಸುಳ್ಳಾಗಿದ್ದರೆ ಮಗಳ ಎದುರು ಸಣ್ಣವಳಾಗಬೇಕಲ್ಲ ಎಂಬ ಭಾವ ಸುನಂದಾಳನ್ನು ಬಾಧಿಸುತ್ತಿತ್ತು. ಹೇಗಾದರೂ ಮಗಳನ್ನು ಪರೀಕ್ಷಿಸಲೇ ಬೇಕೆಂದು ಬೆಂಗಳೂರಿಗೆ ಪತಿಯ ವಿನಾ ಹೊರಡುವ ತೀರ್ಮಾನ ಮಾಡಿದಳು. ಲಾಸ್ಯಾ ಕೂಡ ಅಮ್ಮನಿಗೆ ತನ್ನ ಪ್ರೀತಿಯ ಕುರಿತು ಹೇಳಲು ಇದೊಂದು ಅವಕಾಶ ಎಂದುಕೊಂಡು ಹರ್ಷನನ್ನು ಪರಿಚಯಿಸಲು ಯೋಚಿಸಿದಳು. ಅಮ್ಮ ಬರುತ್ತಾರೆ ಒಪ್ಪಿಸಬಹುದು, ಆದರೆ ಅಪ್ಪನ ಸಮಾಚಾರ ಏನು? ಖಂಡಿತವಾದಿ ಅಪ್ಪನ ಬಗ್ಗೆ ಯೋಚಿಸಿದಾಗ, ಲಾಸ್ಯಾಳಿಗೆ ಭಯವಾಗುತ್ತಿತ್ತು. ಅಮ್ಮ ಬೆಂಗಳೂರಿಗೆ ಬಂದಾಗ, ಕ್ಯಾಂಟಿನ್ ನಲ್ಲಿ ಕಾಫಿ ಕುಡಿಯುವ ಸಂದರ್ಭದಲ್ಲಿ ಹರ್ಷನನ್ನು ಕರೆಸಿಕೊಂಡಳು. ತಾಯಿ ಮಗಳನ್ನು ಕಂಡು ಪ್ರೀತಿಯಿಂದ, “ಸ್ವಂತ ತೀರ್ಮಾನವನ್ನು ಯಾವುದೇ ವಿಚಾರದಲ್ಲಿ ತೆಗೆದುಕೊಳ್ಳಬೇಡ. ಬೇರೆ ಮನೆಗಳಲ್ಲಿ ಅದೆಲ್ಲಾ ನಡೆಯುತ್ತದೆ. ಆದರೆ ನಮ್ಮ ಮನೆಗಳಲ್ಲಿ ಇದೆಲ್ಲಾ ನಡೆಯುವುದಿಲ್ಲ,” ಎಂದು ಅಪ್ಪನ ನಿಷ್ಠುರತೆಯ ಬಗ್ಗೆ ಎಚ್ಚರಿಕೆ ಕೊಟ್ಟಳು.

“ಆಯಿತು….” ಎಂದು ಲಾಸ್ಯಾ ಹೇಳಿದಳು.

ಸುನಂದಾಗೆ ಹೇಳಲು ಕೇಳಲು ಸಾಕಷ್ಟಿದ್ದರೂ ಮಗಳು ಹೇಳಿದ್ದು ಸತ್ಯವಾಗಲಿ ಎಂದುಕೊಂಡು ಊರಿಗೆ ವಾಪಸ್‌ ಬಂದಳು.

ಬೇರೊಂದು ಟೇಬಲ್ ನಲ್ಲಿ ಭಾವಿ ಅತ್ತೆಯ ಪರಿಚಯಕ್ಕೆ ಕಾದು ಕುಳಿತಿದ್ದ ಹರ್ಷನಿಗೆ ನಿರಾಸೆಯಾಗಿತ್ತು. ಲಾಸ್ಯಾಳಿಗೂ ತನ್ನ ಪ್ರೀತಿಯ ಬಗ್ಗೆ ಹೇಳಿಕೊಳ್ಳಲು ಅವಕಾಶ ದೊರೆಯಲಿಲ್ಲ.

ಒಂದೆರಡು ದಿನ ರಜೆ ಸಿಕ್ಕಿತೆಂಬ ಕಾರಣಕ್ಕೆ ಲಾಸ್ಯಾ ಊರಿಗೆ ಹೋಗಿದ್ದಳು. ಊರಿಗೆ ಬಂದ ಮಗಳು ಯಾರೊಂದಿಗೊ ಸುದೀರ್ಘವಾಗಿ ಮಾತನಾಡುತ್ತಿರುವುದನ್ನು ಗಮನಿಸಿದ ಸುನಂದಾ ನೇರವಾಗಿ, “ಏನು ಸಮಾಚಾರ ಡಾಕ್ಟರ್‌…. ಫುಲ್ ಎಂಗೇಜ್‌ ಆಗಿರುವಂತಿದೆ ಏನು ವಿಷ್ಯಾ….?” ಎಂದು ಕೇಳಿದಳು.

ಲಾಸ್ಯಾ ಮುಚ್ಚುಮರೆಯಿಲ್ಲದಂತೆ ತನ್ನ ಪ್ರೀತಿಯ ಕುರಿತು ಹೇಳಿದಳು. ಮತ್ತದೇ ಉತ್ಸಾಹದಲ್ಲಿ ಇದೇ ಸಮಯ ಎಂಬಂತೆ ಹರ್ಷನೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದಳು. ಉತ್ತರ ಭಾರತೀಯನಾದ ಹುಡುಗ ಭಾವಿ ಅಳಿಯ ಕನ್ನಡ ಕಲಿತು ಮುದ್ದಾಗಿ ಮಾತನಾಡುವಾಗ ಲಾಸ್ಯಾಳ ಅಮ್ಮನಿಗೆ ಬಹಳ ಸಂತೋಷವಾಯಿತು. ಅವನೊಂದಿಗೆ ಕ್ಯಾಂಪ್‌ ನಲ್ಲಿ, ಕ್ಯಾಂಟೀನ್‌ನಲ್ಲಿ, ಲೈಬ್ರರಿಯಲ್ಲಿ ತೆಗೆಸಿಕೊಂಡಿದ್ದ ಸೆಲ್ಛಿಗಳನ್ನು ತೋರಿಸಿದಳು. ಜೊತೆಗೆ ಅವರ ಅಮ್ಮ ಅಪ್ಪನ ಫೋಟೋ ತೋರಿಸಿ ಪರಿಚಯಿಸಿದಳು. ಅದರಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡ ಫೋಟೋ ಸಹ ಇತ್ತು.

ಇದನ್ನು ನೋಡಿದ ಕೂಡಲೇ ಸುನಂದಾ ಕೋಪದಿಂದ ಮಗಳನ್ನು, “ಉಂಗುರ ಬದಲಾಯಿಸಿಕೊಳ್ಳಬಾರದಿತ್ತು. ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಬೇಕಾಗಿತ್ತು. ನಿಮ್ಮಪ್ಪ ಮೊದಲೇ ದೂರ್ವಾಸ ಮುನಿಯ ಅಪರಾವತಾರ ಗೊತ್ತಲ್ವಾ….” ಎಂದು ಸ್ವಲ್ಪ ಕಟುವಾಗಿಯೇ ವಿರೋಧಿಸಿದಳು.

ಲಾಸ್ಯಾಳಿಗೆ ತನ್ನ ತಪ್ಪಿನ ಅರಿವಾಗಿ ತಾಯಿ ಬಳಿ ಸಾರಿ ಕೇಳಿ ಮುದ್ದು ಮಾಡಿದಳು.ಅಮ್ಮ ಕರಗಿ, “ಒಳ್ಳೆಯದಾದರೆ ಸಾಕು,” ಎಂದು ಭಗವಂತನಲ್ಲಿ ಮೊರೆಯಿಟ್ಟಳು. ಆದರೆ ವಿಷಯ ಗುಟ್ಟಾಗಿ ಹೆಚ್ಚು ಕಾಲ ಉಳಿಯುವುದಿಲ್ಲ. ಲಾಸ್ಯಾಳ ಅಪ್ಪನಿಗೆ ಎಲ್ಲಾ ವಿಚಾರ ತಿಳಿಯಿತು.

ಲಾಸ್ಯಾಳೇ ಮುಂದುವರಿದು, “ಹರ್ಷನ ತಾಯಿ ತಂದೆ ಇಬ್ಬರೂ ಡಾಕ್ಟರ್ಸ್‌. ಅವರಿಗೆ ಅವರ ಮಗನ ಆಯ್ಕೆಯಲ್ಲಿ ತೃಪ್ತಿ ಇದೆ. ನನ್ನನ್ನು ಅವರ ಸೊಸೆಯಾಗಿಸಿಕೊಳ್ಳಲು ಒಪ್ಪಿದ್ದಾರೆ,” ಎಂದು ತಂದೆಗೆ ತಿಳಿಸಿದಳು.

ಲಾಸ್ಯಾಳ ತಂದೆಯ ಕೋಪ ನೆತ್ತಿಗೆ ಏರಿತು. ಅವರಪ್ಪನ ಪ್ರಕಾರ ಲಾಸ್ಯಾ ಸ್ವತಂತ್ರ ನಿರ್ಧಾರ ತೆಗೆದುಕೊಂಡಿದ್ದು ಮೊದಲ ತಪ್ಪು, ಎರಡನೆಯದು ಹುಡುಗಿಯ ತಾಯಿ ತಂದೆಗೆ ತಿಳಿಯದಂತೆ ಸೊಸೆಯನ್ನು ಒಪ್ಪಿಕೊಂಡಿರುವುದು ಭಾವಿ ಬೀಗರ ಧೋರಣೆ, ಮೂರನೆಯದಾಗಿ ತಾವು ಸಾಧಾರಣ ಶಾಲಾ ಶಿಕ್ಷಕರು. ಅವರಿಬ್ಬರೂ ಹೈಫೈ ಡಾಕ್ಟರ್ಸ್‌. ಅವರೇ ಮಿಗಿಲು ಎಂಬ ಭಾವನೆ ಬಲವಾಗಿ ಕಾಡತೊಡಗಿತು. ಜೊತೆಗೆ ತಮ್ಮ ಜಾತಿಯವರಲ್ಲ ಎಂಬ ದೊಡ್ಡ ಕಾರಣ ಸಿಕ್ಕಿತು. ಬಲವಂತವಾಗಿ ಮಗಳಿಗೆ, “ಅವನನ್ನು ಮರೆತು ಅಲ್ಲಿ ಓದುವುದಾದರೆ ಓದು. ಇಲ್ಲವೇ ಓದು ನಿಲ್ಲಿಸಿ ಊರಿಗೆ ಬಂದುಬಿಡು. ಇಲ್ಲವೇ ಈ ಸಂಬಂಧ ತೊರೆದು ಹೋಗಿಬಿಡು,” ಎಂದು ನಿಷ್ಠೂರವಾಗಿ ಹೇಳಿದರು.

ಲಾಸ್ಯಾಳಿಗೆ ಆಕಾಶ ಕಳಚಿ ಬಿದ್ದಂತಹ ಅನುಭವವಾಗಿತ್ತು. ಅಪ್ಪನನ್ನು ಪ್ರೀತಿಯಿಂದ ಒಪ್ಪಿಸಿ ಆಶೀರ್ವಾದ ಪಡೆಯಬೇಕೆಂದಿದ್ದರೂ ಅಪ್ಪ ತನಗೆ ಆಯ್ಕೆಗಳನ್ನು ಕೊಟ್ಟವರಲ್ಲ….. ಅದೂ ಹೀಗೆ ಎಂಬ ಭಾವನೆ ಬಹುವಾಗಿ ಕಾಡಿತು. ನಂತರ ಅವರು ಪತ್ನಿಯ ಬಳಿ, `ಮರಿಹಕ್ಕಿ ಅಷ್ಟು ಸಲೀಸಾಗಿ ಗೂಡಿಂದ ಹೋಗುತ್ತದೆಯೇ? ಹೋದರೂ ಬೇಗ ವಾಪಸ್ಸು ಬರುತ್ತದೆ,’ ಎಂದು ಬಯ್ದರು.

youhi-achanak 2

ಅದಾದ ನಂತರ ಲಾಸ್ಯಾಳಿಗೆ ಅಪ್ಪನ ಬಗ್ಗೆ ತಿರಸ್ಕಾರ ಮೂಡಿತು. ಅಮ್ಮನನ್ನು ಗದರಿಸುವ ಮೂಲಕ ಮಗಳ ಭಾವನೆಗಳನ್ನು ಕುಗ್ಗಿಸುವ ತಂದೆಯ ನಿಲುವು ಲಾಸ್ಯಾಗೆ ಇಷ್ಟವಾಗಲಿಲ್ಲ. ಅಮ್ಮನಿಗೆ ಹೇಗೆ ಹೇಳಿಕೊಳ್ಳಬೇಕೆಂಬ ಸಂಕಟ ಎದುರಾಯಿತು.  ಅವಳಮ್ಮ ಆ ವಿಚಾರದ ಕುರಿತು ಮಗಳ ಪರ ಪತಿಯ ವಿರೋಧ ಮಾತನಾಡಿದ್ದೂ ಪ್ರಯೋಜನವಾಗಲಿಲ್ಲ. ಆತನ ಆಕ್ರೋಶಕ್ಕೆ ಹೆದರಿ ಗಂಡನ ಪರವಾಗಿಯೇ ನಿಂತಳು.

ಲಾಸ್ಯಾ ತನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂಬ ಹಠಕ್ಕೆ ಬಿದ್ದಳು. ರಜೆ ಮುಗಿದ ಕಾರಣ ಬೆಂಗಳೂರಿಗೆ ಹೊರಟು ನಿಂತಾಗ ಅಪ್ಪ ಮಗಳ ಬಳಿ ಬಂದು, “ನಾನು ಹೇಳಿದಂತೆ ಕೇಳುವುದಿಲ್ಲಾ….?”  ಎಂದು ಕೇಳಿದರು.

ಲಾಸ್ಯಾ ಏನೂ ಮಾತನಾಡಲಿಲ್ಲ. ಅಮ್ಮನ ಎದುರಿಗೆ, “ನನ್ನ ನಿರ್ಧಾರ ಪಕ್ಕಾ….” ಭಯದಿಂದ ಹೇಳಿ ಕಾಲು ತೆಗೆದಳು.

ಮಗಳ ಮೇಲೆ ತಿರಸ್ಕಾರ ಹೆಚ್ಚಿ ತಂದೆಗೆ ಅದೂ ಒಂದು ಕಾರಣ ಸಿಕ್ಕಂತಾಗಿತು. ಇಲ್ಲಿ ಯಾರದೂ ತಪ್ಪಿಲ್ಲ. ಆದರೆ ಮನಸ್ಸು ಬಿಚ್ಚಿ ಮಾತನಾಡದೆ ಇರುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಲಾಸ್ಯಾ ಬೆಂಗಳೂರಿಗೆ ಹೋದ ಕೂಡಲೇ ಹರ್ಷನಿಗೆ ಎಲ್ಲಾ ವಿಚಾರ ಹೇಳಿದಳು. ಅದಕ್ಕವನು, `ತನ್ನೊಂದಿಗೆ ಬಂದುಬಿಡು,’ ಎಂದು ತೀರ್ಮಾನವಾಗಿ ಹೇಳಿದನು.

ಹರ್ಷನ ತಾಯಿ ತಂದೆಗೆ ವಿಷಯ ತಿಳಿದಾಗ ಇದು ಅವರಿಗೆ ಸಮಸ್ಯೆ ಎಂದೇ ಎನಿಸಲಿಲ್ಲ. ಅವರ ವೃತ್ತಿ ಬದುಕಿನಲ್ಲಿ ಇಂತಹ  ಅದೆಷ್ಟೋ ಪ್ರಕರಣಗಳನ್ನು ನೋಡಿದ್ದರು. ಲಾಸ್ಯಾಳ ತಾಯಿ ತಂದೆಗೆ ಸ್ವಲ್ಪ ಸಮಯ ಕೊಡೋಣ ಎಂದುಕೊಂಡರು. ಮಗ ಮದುವೆಯ ವಿಚಾರ ಪ್ರಸ್ತಾಪ ಮಾಡಿದ ಕೂಡಲೇ ಬೀಗರಿಗೆ ಕರೆ ಮಾಡಿದರು. ಆದರೆ ಲಾಸ್ಯಾಳ ತಂದೆ ಅತೀ ಸ್ವಾಭಿಮಾನ ಮತ್ತು ಹಿಂಜರಿಕೆಯಿಂದ ಬೀಗರನ್ನು ತಡೆಯುವ ಕೆಲಸ ಮಾಡಿದರು. ಆದರೆ ಹರ್ಷನ ತಾಯಿ ತಂದೆ ಅದನ್ನೇ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು, ಬೇಗ ಮದುವೆ ಮುಗಿಸಿ, ಮನೆ ತುಂಬಿಸಿಕೊಂಡು ಮಗ ಸೊಸೆಯನ್ನು ವಿದೇಶಕ್ಕೆ ಕಳಿಸಿದರು.

ಲಾಸ್ಯಾ ಮದುವೆಯಾದ ವಿಚಾರವನ್ನು ಅಮ್ಮನಿಗೆ ಹೇಳಿದಳು. ಆಕೆಗೆ ಸಂತೋಷವಾದರೂ ಗಂಡನಿಗೆ ಹೆದರಿ ಸುಮ್ಮನಾದಳು. ಲಾಸ್ಯಾಳ ತಂದೆಗೆ ಮಗಳ ಮೇಲೆ ಅಸಹನೆ ಉಂಟಾಯಿತು. ತನಗೆ ಬೇಡದ್ದು ಯಾರಿಗೂ ಬೇಡ ಎಂಬಂತೆ ಮಗಳ ನಂಬರ್ ಡೆಲಿಟ್‌ ಮಾಡಿ ಅವಳನ್ನು ಎಂತಹ ಪರಿಸ್ಥಿತಿ ಬಂದರೂ ಮಾತನಾಡಿಸಬಾರದು ಎಂದು ಹೆಂಡತಿಗೆ ಆದೇಶ ಹೊರಡಿಸಿದರು. ಸುನಂದಾ ಕಣ್ಣೀರು ಹಾಕಿದ್ದಕ್ಕೆ, “ಇದೇನು ಸೂತಕದ ಮನೆಯೇ….?” ಎಂದು ಅಸಹಜವಾದ ಮಾತುಗಳನ್ನಾಡಿದರು.

ಮುದ್ದಾದ ಮಗಳು ಕೈ ಬಿಟ್ಟಳಲ್ಲ ಎಂದು ನೆನೆಸಿದ ಲಾಸ್ಯಾಳ ಅಪ್ಪ, ಅವಳ ವಸ್ತುಗಳನ್ನು ಸುಟ್ಟು ಸತ್ತಳು ಎಂದು ಭಾವಿಸುವೆ ಎಂದೆಲ್ಲಾ ರಾದ್ಧಾಂತ ಮಾಡಿದರು. ಮಗಳ ಬಟ್ಟೆ ಬರೆ, ಆಟವಾಡಿದ ಸಾಮಗ್ರಿ, ಓಡಿಸಿದ ಮೂರು ಚಕ್ರದ ಸೈಕಲ್, ಸ್ಕಿಪ್ಪಿಂಗ್‌ ಹಗ್ಗ, ಚೆಸ್‌ ಬೋರ್ಡ್‌ ಇತ್ಯಾದಿಗಳನ್ನು ಸೇರಿಸಿ ಸುಡಬೇಕೆಂದು ಹಠ ಹಿಡಿದರೆ, ತಾಯಿ ಸುಡುವುದು ಬೇಡ, ಅದರ ಸುಟ್ಟ ಕಮಟು ವಾಸನೆಯೂ ನಮಗೆ ಸೂತಕವಲ್ಲವೇ….? ಎಂದು ಮಾತು ಬದಲಿಸಿ ಕಸ ಸಂಗ್ರಹಿಸುವ ಗಾಡಿಗೆ ಹಾಕಿಸಿದರು. ಹಾಗೆ ಹಾಕಿಸುವಾಗ ಅಮ್ಮನ ಕರುಳು ಬಹಳ ನೊಂದುಕೊಂಡಿತು. ನಂತರ ಸುನಂದಾ ಮಗಳ ಕರೆಗಾಗಿ ಕಾದು ಕುಳಿತಳು. ಕಾರಣಾಂತರದಿಂದ ಮಗಳ ಕರೆ ಸಿಗಲಿಲ್ಲ.

ಮಗಳ ವಿಷಯದಿಂದ ಸುನಂದಾ ಮನೆಬಿಟ್ಟು ಎಲ್ಲೂ ಹೊರ ಹೋಗಲಾರದೆ ಗೃಹ ಬಂಧಿಯಾಗಿ ಇದ್ದು ಬಿಟ್ಟಳು. ಆದರೆ ಆಕೆಯ ಆಪ್ತ ಗೆಳತಿ ವನಜಾ ವಿಚಾರ ತಿಳಿದು, ಲಾಸ್ಯಾಳನ್ನು ಹೇಗಾದರೂ ಅವಳ ತಾಯಿ ತಂದೆ ಜೊತೆ ಸೇರಿಸಬೇಕೆಂದು ಹಟಕ್ಕೆ ಬಿದ್ದಳು. ಫೇಸ್‌ ಬುಕ್‌ ಮುಖಾಂತರ ಲಾಸ್ಯಾಳನ್ನು ಹುಡುಕಿ ಮೆಸೇಜ್‌ ಮಾಡಿ, ನಂಬರ್‌ ತೆಗೆದುಕೊಂಡು ಮಾತನಾಡಿಸಿದಳು. ಲಾಸ್ಯಾ ಕೂಡ ಅಷ್ಟೇ ಪ್ರೀತಿಯಿಂದ ಮಾತನಾಡಿದಳು. ಮಗಳು ಫಾರಿನ್‌ ನಲ್ಲಿ ಡಾಕ್ಟರ್‌ ಎಂದು ಕೇಳಿ ತಾಯಿ ತಂದೆಗೆ ಸಂತೋಷವಾಯಿತು. ಆದರೆ ಸ್ವಾಭಿಮಾನಿಯಾದ ಲಾಸ್ಯಾಳ ತಂದೆ ಮಾತ್ರ ಮಗಳೊಂದಿಗೆ ಮಾತನಾಡಲಿಲ್ಲ. ಮಗಳ ಜೊತೆ ಕಾಂಟ್ಯಾಕ್ಟ್ ಇಲ್ಲದೆ ಚಡಪಡಿಸುತ್ತಿದ್ದ ಸುನಂದಾ ಮಗಳ ನಂಬರ್‌ ಬರೆದಿಟ್ಟುಕೊಂಡದ್ದಕ್ಕೆ ನಿರ್ಬಂಧ ಹೇರಲಿಲ್ಲ. ಅಷ್ಟರಲ್ಲಿ ಮನಸ್ಸು ಮಾಗಿತ್ತು. ವಯಸ್ಸಾದಂತೆ ಅಪ್ಪನಿಗೂ ಮಗಳ ಮೇಲೆ ಪ್ರೀತಿ ಬರುತ್ತದೆ, `ತನ್ನದೇ ತಪ್ಪು! ಬೀಗರಿಬ್ಬರೂ ಡಾಕ್ಟರ್ಸ್‌. ನಾವು ಅವರ ಹಾಗೆ ಇಲ್ಲವಲ್ಲ….’ ಎಂಬ ಕೊರಗು ಅನುಭವಿಸುತ್ತಾ, ಹೆಂಡತಿಗೆ ಗೊತ್ತಿಲ್ಲದಂತೆ ತಾನೂ ಮಗಳ ನಂಬರ್‌ ನ್ನು ಮೊಬೈಲ್‌ನಲ್ಲಿ ಸೇವ್ ‌ಮಾಡಿಕೊಂಡು, ಮಗಳು ಫೇಸ್‌ ಬುಕ್‌ ನಲ್ಲಿ ಅಪ್‌ ಲೋಡ್‌ ಮಾಡುತ್ತಿದ್ದ ಫೋಟೋಗಳನ್ನು ನೋಡಿಕೊಂಡು ಸಮಾಧಾನಪಟ್ಟುಕೊಂಡು ತನಗೆ ಮಗಳ ನೆನಪೇ ಇಲ್ಲ ಎಂಬಂತೆ ನಟಿಸುತ್ತಿದ್ದರು.

ಅಷ್ಟರಲ್ಲಿ ಲಾಸ್ಯಾ ತನ್ನ ಗಂಡನ ಮನೆಯಲ್ಲಿ ಅವರ ಕುಟುಂಬದ ಕಾರ್ಯಕ್ರಮಕ್ಕೆ ಬರುತ್ತಾಳೆಂಬ ವಿಚಾರ ಲಾಸ್ಯಾಳ ತಾಯಿ ತಂದೆಗೆ ತಿಳಿಯಿತು. ಮಗಳು ಬರಬಹುದು ಎಂದು ಕಾದರು. ಆದರೆ ಲಾಸ್ಯಾಳ ಅತ್ತೆ, ಮಾವ, `ಅವರು ಕರೆಯದೆ ಹೋಗುವುದು….. ಅದೂ ಇಷ್ಟು ದಿನಗಳಾದ ಮೇಲೆ ಯಾವ ನ್ಯಾಯ?’ ಎಂದುಬಿಟ್ಟರು.

ತಂದೆ ತಾಯಿಯನ್ನು ನೇರವಾಗಿ ನೋಡಲು ಹೋಗದಿದ್ದರೂ ಲಾಸ್ಯಾ ತಾಯಿಗೆ ತಾನು ಗರ್ಭಿಣಿ ಎಂಬ ಸಿಹಿ ಸುದ್ದಿಯನ್ನು ಫೋನ್ ಮಾಡಿ ಹೇಳಿದಳು.

ಸುನಂದಾಳಿಗೆ ಈ ಸುದ್ದಿಯನ್ನು ಅಪ್ಪನಿಗೆ ಹೇಳಲು ಭಯವಾಗಿ, ಸುಮ್ಮನಾಗಿಬಿಟ್ಟಳು. ಅಂತೂ ಮಗಳಿಗೆ ಒಂದಿಷ್ಟು ಆಭರಣಗಳನ್ನಾದರೂ ತಲುಪಿಸಬೇಕೆಂದು ನಿರ್ಧರಿಸಿ, ಫೋನ್‌ ಮಾಡಿ, “ನಿನ್ನ ಜ್ಯೂವೆಲ್ಸ್ ‌ತೆಗೆದುಕೊ,” ಎಂದಳು.

“ನನಗೆ ತಾಯಿ ಮನೆಯಿಂದ ಏನೂ ಬೇಡ,” ಎಂದು ಲಾಸ್ಯಾ ಹೇಳಿದಳು.

“ಇವೆಲ್ಲನ್ನೂ ನಿಮ್ಮಪ್ಪನಿಗೆ ಗೊತ್ತಿಲ್ಲದಂತೆ ಆಚಾರರ ಅಂಗಡಿಯಲ್ಲಿ ತಿಂಗಳು ತಿಂಗಳು ಹಣ ಕಟ್ಟಿ ಮಾಡಿಸಿದ ಆಭರಣಗಳು. ನೀನು ಚಿಕ್ಕವಳಿದ್ದಾಗ ಪೇಪರ್‌,  ಮ್ಯಾಗಝೀನ್‌ ನಲ್ಲಿ ನೋಡಿ ಆಸೆಪಡುತ್ತಿದ್ದ ಡಿಸೈನ್‌ ಗಳನ್ನೇ ಗುರುತು ಮಾಡಿಕೊಂಡು ಮಾಡಿಸಿದ್ದೇನೆ. ತೆಗೆದುಕೋ ಬೇಡ ಎನ್ನಬೇಡ,” ಎಂದು ತಾಯಿ ವಿನಂತಿಸಿಕೊಂಡಾಗ ಲಾಸ್ಯಾಳಿಗೆ ಬೇಸರವಾಯಿತು.

ಲಾಸ್ಯಾ ಆಗಿದ್ದು ಆಗಲಿ ಎಂದು ತನ್ನಪ್ಪನಿಗೆ ಫೋನ್‌ ಮಾಡಿ, “ಹಲೋ ಅಪ್ಪಾ ಹೇಗಿದ್ದೀರಿ…?” ಎಂದು ಕೇಳಿದಳು.

ತಂದೆಗೆ ಅವಳು ಮಗಳೆಂದು ತಿಳಿದರೂ, “ನೀನು ಯಾರು? ನಿನ್ನ ಗಂಡ ಏನು ಮಾಡುತ್ತಾನೆ? ಎಷ್ಟು ಸಂಬಳ ಬರುತ್ತದೆ? ನಿನ್ನತ್ತೆ ಮಾವ ಎಲ್ಲಿ? ಅವರಿಗೆ ಎಷ್ಟು ಸಂಬಳ? ಮಗನಿಗಾಗಿ ಏನು ಮಾಡಿದ್ದಾರೆ….?” ಎಂದೆಲ್ಲಾ ಕೇಳಿದರು.

ಲಾಸ್ಯಾಳಿಗೆ ಬಹಳ ಖುಷಿಯಾಗಿ ಅಪ್ಪ ನನ್ನನ್ನು ಕ್ಷಮಿಸಿದ್ದಾರೆ, ಎಂದು ಭ್ರಮಿಸಿ ಉತ್ಸಾಹದಿಂದಲೇ ಎಲ್ಲವನ್ನೂ ಹೇಳಿದಳು. ತುಂಬಾ ಹೊತ್ತಿನವರೆಗೂ ಅಪ್ಪ ಏನೂ ಉತ್ತರ ಕೊಡದಿದ್ದಾಗ, ಲಾಸ್ಯಾ ಮುಂದುವರಿದು, “ಸಾರಿ…. ಸಾರಿ ಅಪ್ಪ ! ನಾನು ಲಾಸ್ಯಾ ಮಾತನಾಡುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಅಪ್ಪಾ…. ನೀವು ಆರೋಗ್ಯವಾಗಿದ್ದೀರಾ…..” ಎಂದು ಪ್ರೀತಿಯಿಂದ ಕೇಳಿದಳು.

“ನೀನು ಆರೋಗ್ಯ ಕೇಳಬೇಕಾಗಿರುವುದು ಅಸಹಾಯಕ ರೋಗಿಗಳನ್ನು ನನ್ನನ್ನಲ್ಲ,” ಎಂದು ಮುಖಕ್ಕೆ ಹೊಡೆದಂತೆ ಫೋನ್‌ ಕಟ್‌ ಮಾಡಿದರು.ಆದರೂ ಮಗಳು ಬೇಸರಿಸದೆ ಮತ್ತೊಮ್ಮೆ ಕರೆ ಮಾಡಿದಳು.

“ನಾನು ಯಾವುದೋ ಮುಖ್ಯ ಕೆಲಸ ಮಾಡುತ್ತಿದ್ದೆ ಅಪಶಕುನವಾಯಿತು,” ಎಂದುಬಿಟ್ಟರು. ಆದರೆ ಕೆಲಸದವರ ಬಳಿ, `ನನ್ನ ಮಗಳಿಗೆ ಇದು ಇಷ್ಟ….. ಅದು ಇಷ್ಟ….’ ಎಂದು ಮಗಳ ಇಷ್ಟ ಕಷ್ಟಗಳ ಬಗ್ಗೆಯೇ ಮಾತನಾಡಲು ಪ್ರಾರಂಭಿಸಿದರು. ತಮ್ಮದೇ ಸಂಕುಚಿತ ಭಾವನೆಗಳಲ್ಲಿ ಬಂಧಿಯಾದ ತಂದೆಯ ಮೇಲೆ ಅವಳಿಗೆ ಕನಿಕರ ಉಂಟಾಯಿತು.

ಲಾಸ್ಯಾಳ ತಾಯಿ ಮಗಳ ಬಗ್ಗೆ ಆಗಾಗ ಮಾತನಾಡಿದಾಗ ಅದು ತಪ್ಪು ಎಂಬಂತೆ ಬಿಂಬಿಸಿದರು. ಅಕ್ಕಪಕ್ಕದ ಮನೆಯ ಹೆಣ್ಣುಮಕ್ಕಳು ತಾಯಿ ಮನೆಗೆ ಬಂದು ಹೋಗುವುದನ್ನು ಗಮನಿಸಿದ ಲಾಸ್ಯಾಳ ಅಮ್ಮನಿಗಂತೂ ಕರುಳು ಕಿವುಚಿದಂತಹ ಅನುಭವವಾಯಿತು. ಗರ್ಭಿಣಿಯಾದ ಲಾಸ್ಯಾ ತಾಯಿಯನ್ನು ನೋಡಲೇಬೇಕೆಂದು ತನ್ನಮ್ಮನ ಸ್ನೇಹಿತೆ ವನಜಾರ ಮನೆಯಲ್ಲಿ ಭೇಟಿಯಾಗಬೇಕೆಂದು ತೀರ್ಮಾನಿಸಿದಳು. ಅದಕ್ಕೆ ಹರ್ಷನೂ ಸಮ್ಮತಿಸಿ ತಾನೇ ಹೆಂಡತಿಯನ್ನು ಕರೆದುಕೊಂಡು ಹೋದ. ಸುನಂದಾಗೆ ಇದರಿಂದ ಬಹಳ ಸಂತೋಷವಾಯಿತು.

ಸ್ನೇಹಿತೆಯ ಮನೆಯಲ್ಲೇ ಮಗಳಿಗೆ ಉಡಿ ತುಂಬಿಸಿ ಅಳಿಯ ಮಗಳನ್ನು ಆಶೀರ್ದಿಸಿದಳು. ಮೊಮ್ಮಗನನ್ನು ನೋಡಬೇಕೆಂದು ಬಯಸಿದರೆ ಮತ್ತೆ ಅಳಿಯ ಮಗಳು ಫಾರಿನ್‌ ಗೆ ಹೋಗಿಬಿಡುತ್ತಾರೆ. ಸುನಂದಾಗೆ ವಯಸ್ಸಾದಂತೆ ವಯೋಸಹಜ ಕಾಯಿಲೆ, ಗಂಡನ ಕಿರಿಕಿರಿ ಹೆಚ್ಚಾಗ ತೊಡಗಿತು.

ಲಾಸ್ಯಾಳ ತಂದೆಗೆ, ತಾಯಿ ಮಗಳು ಫೋನ್‌ನಲ್ಲಿ ಮಾತನಾಡಿಕೊಳ್ಳುತ್ತಾರೆ ತಾನೇ ಮಾತನಾಡುತ್ತಿಲ್ಲ ಎಂದು ತನಗೆ ತಾನೇ ಹಳಿದುಕೊಂಡು ಆ ಕೋಪವನ್ನು ರೂಪಾಂತರದಲ್ಲಿ ತೀರಿಸಿಕೊಂಡು ತನಗೆ ತಾನೇ ಯಾತನೆ ಅನುಭವಿಸಿ ಚಡಪಡಿಸತೊಡಗಿದರು. ಹೀಗೆ ದಿನಗಳು ಕಳೆಯುತ್ತಿತ್ತು. ಮಗಳು ಲಾಸ್ಯಾಳ ನೆನಪಿನಲ್ಲೇ ಮುಳುಗಿದ ಸುನಂದಾ ಮಾನಸಿಕವಾಗಿ ನೊಂದು ತುಂಬಾ ಕುಸಿದು ಹೋದರು.

ಅದೇ ಚಿಂತೆಯಲ್ಲಿ ಇದ್ದಾಗ ಮಗಳು ಕರೆ ಮಾಡಿ ತಮಾಷೆಯಾಗಿ ಮಾತನಾಡುತ್ತಾ, “ನೀನು ಹಾರಿ ಇಲ್ಲಿಗೇ ಬಂದುಬಿಡು,” ಎಂದು ಹೇಳಿದಳು.

ಅದಕ್ಕೆ ಸುನಂದಾ ಕೋಪದಿಂದ, “ನೀನು ರೆಕ್ಕೆ ಬಲಿತ ಮೇಲೆ ಅಮ್ಮನ ಮಡಿಲು ಬಿಟ್ಟು ಹಾರಿದೆ. ನಾನು ಹೇಗೆ ಇಳಿ ವಯಸ್ಸಿನಲ್ಲಿರುವ ಗಂಡನನ್ನು ಒಬ್ಬಂಟಿಯಾಗಿ ಬಿಟ್ಟು ಹಾರಲಿ?” ಎಂದು ಹೇಳಿದಾಗ ಲಾಸ್ಯಾಳಿಗೆ ನಿಜಕ್ಕೂ ಬೇಸರವಾಯಿತು.

ತಾಯಿಯ ದ್ವಂದ್ವ ಮಗಳಿಗೆ ಖಂಡಿತಾ ಅರ್ಥವಾಯಿತು. ಅಪ್ಪನ ಸಿಡುಕಿನಲ್ಲೂ ಪ್ರೀತಿಯ ಸಿಂಚನವನ್ನು ಅನುಭವಿಸಿದಳು. ಲಾಸ್ಯಾ ಇಂಡಿಯಾಕ್ಕೆ ಹೋದರೆ ತಾನೇ ತವರಿನ ನೆನಪು, ದುಃಖ, ತಲೆಬಿಸಿ ಎಂದು ನೆನೆಸಿದ ಹರ್ಷ, ತಾನಿದ್ದಲ್ಲೇ ಮನೆ, ಕ್ಲಿನಿಕ್ ಮಾಡಿಕೊಂಡ. ಅಲ್ಲದೆ, ಲಾಸ್ಯಾ ಬೇಸರದಿಂದ ಹೊರಬರಲಿ ಎಂದು ಅವಳನ್ನು ಫಾರಿನ್‌ ನಲ್ಲೇ ಎಂ.ಡಿ. ಕೋರ್ಸ್‌ ಗೆ ಸೇರಿಸಿದ. ಸುನಂದಾಗೂ ಕೂಡ ಮಗಳಿಗೆ ಆ ರೀತಿ ಹೇಳಬಾರದಿತ್ತು ಎಂದು ತುಂಬಾ ಫೀಲ್ ಆಯಿತು. ಆಪ್ತ ಗೆಳತಿ ವನಜಾ ಬಳಿ ವಿಚಾರಿಸಿ, “ನಿಜವಾಗಿ ನೀನು ಸಿಟ್ಟಿನಿಂದ ಹೇಳಿದ್ದರೂ ಸರಿಯಾಗೆ ಹೇಳಿದ್ದಿ. ಅವರವರ ಬದುಕು ಅವರಿಗೆ ಮುಖ್ಯ. ಅವರವರ ವಿಚಾರಕ್ಕೆ ಅವರವರು ಸರಿ. ಆದರೆ ನಿಭಾಯಿಸುವ ಟೆಕ್ನಿಕ್‌ ಗೊತ್ತಿರಬೇಕು,” ಎಂದು ಹೇಳಿದಳು.

ಲಾಸ್ಯಾ ಇನ್ನೊಂದು ಮಗುವಿನ ತಾಯಿಯಾಗಿ ಫೇಸ್‌ ಬುಕ್‌ ನಲ್ಲಿ ಫೋಟೋ ಹಾಕಿದಾಗ ತಾಯಿ ತಂದೆಗೆ ಆಶ್ಚರ್ಯ ಕಾದಿತ್ತು. ಇಬ್ಬರೂ ಆ ಫೋಟೋಗೆ `ಸುಖವಾಗಿರು’ ಎಂದು ಕಮೆಂಟ್‌ ಮಾಡಿ ಲೈಕ್‌ ಕೊಟ್ಟು ತಮ್ಮ ಆತ್ಮೀಯರಿಗೆ ಶೇರ್‌ ಮಾಡುತ್ತಿದ್ದರು. ಅಂತೂ ಲಾಸ್ಯಾ ಮತ್ತು ಅವಳ ಗಂಡ, ಮಕ್ಕಳನ್ನು ಸುನಂದಾರ ಕುಟುಂಬ ಒಪ್ಪಿಕೊಂಡಿತು.

ಪ್ರೀತಿ ಮಾಡುವುದು, ಮದುವೆಯಾಗುವುದು ತಪ್ಪಲ್ಲ. ಅಲ್ಲಿ ಜವಾಬ್ದಾರಿ ಇರಬೇಕು. ಪ್ರೀತಿಸಿದವರಿಗೆ ಸಮರ್ಥಿಸಿಕೊಳ್ಳುವ ಜಾಣ್ಮೆ ಇರಬೇಕು, ಹಿರಿಯರಿಗೆ ಅದನ್ನು ಒಪ್ಪಿಕೊಳ್ಳುವ ತಾಳ್ಮೆ ಇರಬೇಕು. ರೆಕ್ಕೆ ಬಲಿತ ಮೇಲೆ ಬದುಕು ಕಟ್ಟಿಕೊಳ್ಳಲು ಮರಿಹಕ್ಕಿ ಹಾರಲೇ ಬೇಕು. ತನ್ನ ಸಂಸಾರಕ್ಕೆಂದು ಹೊಸ ಗೂಡನ್ನು ಕಟ್ಟಿಕೊಳ್ಳಲೇಬೇಕು. ಅದು ಬದುಕಿನ ರೀತಿ ಅಲ್ಲವೇ….

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ