ಆಕಸ್ಮಿಕವಾಗಿ ವಿಮಾನದಲ್ಲಿ ಸಹಪ್ರಯಾಣಿಕಳಾಗಿ ಕಾಣಿಸಿಕೊಂಡ ಚೆಲುವೆ, ತಂಗಿಯ ಮನೆಗೆ ಅತಿಥಿಯಾಗಿ ಬಂದಾಗ ಸುರೇಶ ದಂಗಾದ. ಮುಂದೆ ನಡೆದದ್ದೇನು……?

ಬೆಂಗಳೂರಿನ ಏರ್ಪೋರ್ಟ್‌ ನಲ್ಲಿ ಚೆಕ್‌ ಇನ್‌ ಆಗಿ, ಡೆಲ್ಲಿಗೆ ಹೊರಡಲು ಸಿದ್ಧವಾಗಿದ್ದ ಏರ್‌ ಏಷಿಯಾ ವಿಮಾನದಲ್ಲಿ ಕುಳಿತು, ಲಗೇಜ್‌ ಇಟ್ಟು ಆರಾಮವಾಗಿ ಕುಳಿತ ಸುರೇಶ್‌, ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಪಕ್ಕದ ಸೀಟಿಗೆ ಬಂದ ಸುಕೋಮಲೆಯತ್ತ ಕಣ್ಣಾಡಿಸಿದ.

ರೆಡ್‌ ಕಲರ್‌ ಶಿಫಾನ್‌ ಸೀರೆಯುಟ್ಟು ಸ್ಲೀವ್ ಲೆಸ್‌ ಬ್ಲೌಸ್‌ ಧರಿಸಿ ಕೂದಲನ್ನು ಹಿಂದೆ ತಳ್ಳುತ್ತಾ ಲಗೇಜ್‌ ಇಡಲು ಪರದಾಡುತ್ತಿದ್ದ ಅವಳ ಸೌಂದರ್ಯ ಅವನಿಗೆ ಇಷ್ಟವಾಗಿತ್ತು. ನೀಳ ನಾಸಿಕದಲ್ಲಿ ಪುಟ್ಟ ಫಳಗುಟ್ಟುವ ಮೂಗುತಿ ಧರಿಸಿದಳು ಯಾಕೋ ಮನದಾಳದಲ್ಲಿ ಇಳಿದೇ ಬಿಟ್ಟಿದ್ದಳು.

ತಾನಾಗೇ ಮೇಲೆದ್ದು ಅವಳ ಬ್ಯಾಗ್‌ ಸರಿಯಾಗಿ ಇಟ್ಟಾಗ ಮುಗುಳ್ನಗೆ ಬೀರಿ ಥ್ಯಾಂಕ್ಸ್ ಎಂದಿದ್ದಳು. ಅವಳು ನಕ್ಕಾಗ ಅರಳಿದ ಪುಟ್ಟ ಬಾಯಿ ಗಾಢ ಬಣ್ಣದ ಲಿಪ್‌ ಸ್ಟಿಕ್‌, ಅವಳು ಲೇಪಿಸಿಕೊಂಡಿದ್ದ ಸುಗಂಧ ಅವನ ಮೈ ಮನಸ್ಸನ್ನು ಅರಳಿಸಿತ್ತು.

ಅವಳು ಅತ್ತ ನಡೆದು ಸ್ವಲ್ಪ ವಯಸ್ಸಾದ ಹಿರಿಯರನ್ನು ಸುರೇಶನ ಪಕ್ಕ ಕೂರಿಸಿ ಹಿಂದೆ ಹೋದಾಗ ಅವನಿಗೆ ಬಹಳ ಬೇಸರವಾಗಿತ್ತು. ನಿರಾಸೆಯಿಂದ ತನ್ನ ಲ್ಯಾಪ್‌ ಟಾಪ್‌ ತೆಗೆದು ತನ್ನ ಕಾರ್ಯದಲ್ಲಿ ನಿರತನಾದ.

“ಕುಡಿಯಲು ನೀರು ಸಿಗುವುದೇ?” ಹಿರಿಯರು ಅವನನ್ನು ಕೇಳಿದಾಗ ಅವನು ಬಟನ್‌ ಒತ್ತಿ ಗಗನಸಖಿಯನ್ನು ಕರೆದ. ಅವಳು ಬಂದಾಗ, “ಇವರಿಗೆ ನೀರು ಕೊಡಿ,” ಎಂದು ಮತ್ತೆ ಕೆಲಸದಲ್ಲಿ ಮಗ್ನನಾದ.

ಹಿರಿಯರು ಅವನನ್ನು ಮಾತಿಗೆಳೆಯುತ್ತಾ,“ಡೆಲ್ಲಿಯವರೇನು….?”

“ಇಲ್ಲ. ತಂಗಿಯ ಮನೆಗೆ ಹೋಗುತ್ತಿರುವೆ.“

“ಮದುವೆ ಆಗಿದೆಯೇ….?”

“ಇನ್ನೂ ಇಲ್ಲ…..”

“ಉದ್ಯೋಗ….?”

“ವಿಜಯ ಬ್ಯಾಂಕ್‌ನಲ್ಲಿ ಮ್ಯಾನೇಜರ್‌!”

“ಮನೇಲಿ ಹೆಣ್ಣು ನೋಡುತ್ತಿದ್ದಾರಾ….?”

ಅವನಿಗೆ ಏನು ಉತ್ತರ ಹೇಳಲು ಹೊಳೆಯದೆ, “ಗೊತ್ತಿಲ್ಲ….” ಎಂದಷ್ಟೇ ಹೇಳಿ ಸುಮ್ಮನಾದ.

“ನಿಮ್ಮ ತಾಯಿ ತಂದೆ….”

“ಅವರು ಮನೇಲಿದ್ದಾರೆ….”

“ಅದು ಗೊತ್ತಪ್ಪ!”

ಅವರು ಮತ್ತೊಮ್ಮೆ ಕೇಳುವ ಮೊದಲೇ, “ಅಮ್ಮ ಸ್ಕೂಲ್ ‌ಟೀಚರ್‌, ಅಪ್ಪ ಗೌರ್ಮೆಂಟ್‌ ಉದ್ಯೋಗಿ.”

“ನಿನ್ನ ಒಡಹುಟ್ಟಿದವರು….?”

“ಒಬ್ಬಳೇ ತಂಗಿ. ಕಳೆದ ವರ್ಷ ಮದುವೆ ಆಯಿತು.” ಇಷ್ಟು ಹೇಳಿ ಪುನಃ ತನ್ನ ಕೆಲಸದಲ್ಲಿ ಮಗ್ನನಾದ.

ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ಹಿರಿಯರು ಮತ್ತೆ ಅವನನ್ನು, “ನಿಮ್ಮ ವಯಸ್ಸು….” ಎಂದು ಕೇಳಿದರು.

ಕೇಳಿಸಿದರೂ ಕೇಳಿದವನಂತೆ ಟೈಪಿಸುವುದರಲ್ಲಿ ಮಗ್ನನಾಗಿದ್ದ. ಅಷ್ಟರಲ್ಲಿ ಇನ್ನು ಕೆಲವೇ ನಿಮಿಷಗಳಲ್ಲಿ ಡೆಲ್ಲಿ ಇಂದಿರಾಗಾಂಧಿ ಏರ್ಪೋರ್ಟ್‌ ನಲ್ಲಿ ವಿಮಾನ ಲ್ಯಾಂಡ್‌ ಆಗಲಿದೆ ಎಂಬ ಅನೌನ್ಸ್ ಆಗಿತ್ತು.

ಸುರೇಶ್‌ ತನ್ನ ಲ್ಯಾಪ್‌ ಟಾಪ್‌ ಮುಚ್ಚಿ ಬ್ಯಾಗ್‌ ನಲ್ಲಿ ಸೇರಿಸಿದ. ಪಕ್ಕದಲ್ಲಿದ್ದ ಹಿರಿಯರು ಬೆಲ್ಟ್ ಹಾಕಿಕೊಳ್ಳಲು ಚಡಪಡಿಸುತ್ತಿದ್ದಾಗ ಅವರಿಗೆ ಸಹಕರಿಸಿದ.

ಅಷ್ಟರಲ್ಲಿ ಅವರ ಬಳಿ ಬಂದ ಚೆಲುವೆ, “ತಾತಾ ಆರಾಮಾಗಿದೀರಾ….?” ಎಂದು ಕೇಳಿದಳು.

ಸುರೇಶ್‌ ನತ್ತ ನೋಡಿ ಮುಗುಳ್ನಗುತ್ತಾ, “ಇವರು ನಮ್ಮ ಕರ್ನಾಟಕದವರು. ನನಗೆ ಸಹಾಯ ಮಾಡಿ ಕಂಪನಿ ಕೊಟ್ರು,” ಎಂದರು.

ಸುರೇಶನಿಗೆ ಸಂಕೋಚವಾಯಿತು. `ಹಿರಿಯರೊಂದಿಗೆ ತಾನು ಇನ್ನಷ್ಟೂ ಮಾತನಾಡಬಹುದಿತ್ತು,’ ಎನಿಸಿತು.

ಅವಳು ಅವನೆಡೆಗೆ ಕುಡಿನೋಟ ಬೀರುತ್ತಾ, “ಥ್ಯಾಂಕ್ಸ್ ಮಿಸ್ಟರ್‌…..” ಎಂದ.

“ಸುರೇಶ್‌….” ಎಂದ.

ಪ್ರಯಾಣಿಕರು ಒಬ್ಬೊಬ್ಬರಾಗಿ ಇಳಿಯುವಾಗ ತಾನೂ ಅವರನ್ನು ಹಿಂಬಾಲಿಸಿದ. ಕೆಳಗಿಳಿದು ಹಿರಿಯರಿಗೆ ನಮಸ್ಕರಿಸಿ, “ಬರ್ತೀನಿ…” ಎಂದ.

“ನಿಮ್ಮ ಮನೆಯ ವಿಳಾಸ ಕೊಟ್ಟಿದ್ದರೆ, ಅಲ್ಲಿಗೆ ಬಂದಾಗ ನಿಮ್ಮ ಮನೆಗೆ ಬರುತ್ತಿದ್ದೆ,” ಎಂದು ಕೇಳಿದಾಗ, ಸುರೇಶನಿಗೆ ನಿಜಕ್ಕೂ ಕೋಪ ಬಂದಿತ್ತು. `ಪಾಪ ಹಿರಿಯರು ಎಂದರೆ ಈತ ಬಹಳ ಅಧಿಕ ಪ್ರಸಂಗಿ,’ ಎಂದುಕೊಂಡು ಚೆಲುವೆಯತ್ತ ತಿರುಗಿ, “ಮಿಸ್‌….” ಎಂದ.

“ಪ್ರೇರಣಾ….” ಎಂದಳು.

“ದಿಸ್‌ ಈಸ್‌ ಮೈ ಕಾರ್ಡ್‌” ಎಂದು ಇಬ್ಬರಿಗೂ ಹೇಳಿ ಅಲ್ಲಿ ನಿಲ್ಲದೇ ಸರಸರನೆ ನಡೆದಿದ್ದ.

“ತಾತಾ ಹಾಗೆಲ್ಲಾ ಕೇಳಿದ್ರೆ ಹೇಗೇ… ಅವರೇನು ತಿಳ್ಕೊಳ್ಳಲ್ಲ ಹೇಳಿ….” ಎಂದು ಅವಳು ಹೇಳಿದ್ದು ಅವನಿಗೆ ಕೇಳಿಸಿತು.

`ಹೌದಲ್ಲವೇ…. ತಾನು ಇನ್ನೂ ಏಕೆ ಮದುವೆಯ ಬಗ್ಗೆ ಯೋಚಿಸುತ್ತಿಲ್ಲ. ಅಮ್ಮ ಒಮ್ಮೆ ಕೇಳಿದಳು ಮತ್ತೇ ಆ ಸುದ್ದಿ ತೆಗೆಯಲೇ ಇಲ್ಲ. ನಾನಾಗಿಯೇ ಮದುವೆ ಮಾಡು ಎನ್ನಲಾಗುವುದೇ….?’ ಎನಿಸಿತ್ತು.

ಕಣ್ಮುಂದೆ ಕುಡಿ ನೋಟ ಬೀರಿದ್ದ ಚೆಲುವೆ ಪ್ರೇರಣಾಳ ಮುಖವೇ ಮೂಡಿಬಂದಿತು. `ಎಸ್‌ ಇವಳು ನೋಡಲು ಚೆನ್ನಾಗಿದ್ದಾಳೆ. ಇಂಥವಳು ಸಿಕ್ಕಿದರೆ ಮದುವೆಯಾಗಲು ಅಡ್ಡಿಯಿಲ್ಲ,’ ಎಂದು ಹೊರಗಡೆ ಬಂದವನು ಅಲ್ಲಿದ್ದ ಟ್ಯಾಕ್ಸಿಯಲ್ಲಿ ಹತ್ತಿ ಕುಳಿತು, “ರಜೋರಿ ಗಾರ್ಡನ್‌ ಚಲೋ….” ಎಂದು ಕಿಟಕಿಯಲ್ಲಿ ನೋಡಿದವನಿಗೆ ಹಿರಿಯರು ಮತ್ತು ಪ್ರೇರಣಾ ಮತ್ತೊಬ್ಬ ಹೆಂಗಸು ಕಂಡರು. ಬಹುತೇಕ ಆಕೆ ಪ್ರೇರಣಾಳ ತಾಯಿ ಇರಬಹುದು ಎಂದುಕೊಂಡ.

ಮನೆಗೆ ಬಂದ ಅಣ್ಣನನ್ನು ಕಂಡು ಸಾರಿಕಾಳಿಗೆ ಬಹಳ ಖುಷಿಯಾಗಿತ್ತು, “ಸಧ್ಯ ನೀನಾದ್ರೂ ಬಂದೆಯಲ್ಲ ಬಾ…..” ಎಂದು ಸ್ವಾಗತಿಸಿದಳು.

ಮರುದಿನವೇ ಅವಳ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತು. ಅವಳ ಅತ್ತೆ ಮಾ, ಭಾವ ವಿಶಾಲ್ ‌ಆತ್ಮೀಯತೆಯಿಂದ ಮಾತನಾಡಿಸಿದರು. ಪೂಜೆಗೆ ಬಹಳ ಜನ ಸ್ನೇಹಿತರೇ ಬಂದಿದ್ದರು. ಹಳದಿ ಸೀರೆಯುಟ್ಟು, ತುಂಬು ತೋಳಿನ ರವಿಕೆಯಲ್ಲಿ ತಾಯಿ ಹಾಗೂ ತಾತನೊಂದಿಗೆ, ತಂಗಿ ಮನೆಗೆ ಬಂದ ಪ್ರೇರಣಾಳನ್ನು ಕಂಡು ಅವನಿಗೆ ಅಚ್ಚರಿಯಾಯಿತು.

ಅವಳು ಅವನನ್ನು ಕುಡಿನೋಟದಿಂದಲೇ ಗಮನಿಸಿದಳು, “ಹಾಯ್‌….” ಎಂದು ಪರಿಚಯದ ನಗೆ ಬೀರಿದಳು.

ಅವನೂ “ಹಾಯ್‌….” ಎಂದ.

ಸಾರಿಕಾ ಅವರನ್ನು ನೋಡಿ, “ಓಹೋ…. ಬನ್ನಿ…. ಬನ್ನಿ….” ಎಂದವಳು ಪೂಜೆಗೆ ಕೂತಿದ್ದ ಅತ್ತೆಗೆ, “ಅತ್ತೆ, ನೋಡಿ ಯಾರು ಬಂದಿದ್ದಾರೆ….” ಎಂದಳು.

ದಂಪತಿಗಳು ಅಲ್ಲಿಂದಲೇ ಕೈ ಆಡಿಸಿದರು. ಸುರೇಶ್‌ ತಂಗಿಯ ಕೈ ಹಿಡಿದು ಒಳಗೆ ಕರೆದೊಯ್ದು, “ಸಾರಿಕಾ, ಅವರು ನಿಮ್ಮ ಬಳಗದವರಾ…?” ಎಂದು ಕೇಳಿದ.

“ಹೌದು. ಅದಿರಲಿ, ಇವರು ನಿನಗೆ ಹೇಗೆ ಗೊತ್ತು….?” ಎಂದು ಕೇಳಿದಳು ಸಾರಿಕಾ.

“ವಿಮಾನದಲ್ಲಿ ಸಹಪ್ರಯಾಣಿಕರು ಅಷ್ಟೆ. ಇವರು ನಿನಗೆ ಹೇಗೆ ಸಂಬಂಧ?” ಎಂದು ಕೇಳಿದ.

“ಪ್ರೇರಣಾ ನಮ್ಮ ಮಾವನ ತಂಗಿಯ ಮಗಳು. ಅವರು ಅವಳ ತಾತ. ಅವಳಿಗೆ ಇಲ್ಲಿಯೇ ಕೆಲಸ ಸಿಕ್ಕಿದೆ. ಅದಕ್ಕೆ ಬಂದಿದ್ದಾರೆ. ಚಿತ್ರಾಪುರದಲ್ಲಿ ಅವರ ಫ್ಲಾಟ್‌ ಇದೆ. ಪೂಜೆಗೆ ಕರೆದಿದ್ವಿ ಅದಕ್ಕೆ ಬಂದಿದ್ದಾರೆ. ಅದಿರಲಿ, ನಿನ್ನ ವಿಚಾರಣೆ ನೋಡಿದರೆ ನೀನು ಅವಳಿಗೆ ಫುಲ್ ಫಿದಾ ಆಗಿರೋ ಹಾಗೆ ಕಾಣಿಸ್ತಿದೆ. ಸಾಹೇಬ್ರೇ ವಿಚಾರಿಸಲೇ….?” ಎಂದಳು.

“ಹೋಗಿ ಕಣಿ ಕೇಳು….” ಎಂದನು, “ಸಾರಿ ಕಣೇ ಸಾರಿಕಾ, ಈಗ ನೀನೇ ನನಗೆ ಹೆಲ್ಪ್ ಮಾಡಬೇಕು. ನನಗೆ ಹುಡುಗಿ ತುಂಬಾ ಇಷ್ಟವಾಗಿದ್ದಾಳೆ. ಪ್ಲೀಸ್‌ ಕಣೇ…..” ಎಂದು ತಂಗಿಯನ್ನು ಓಲೈಸಿದ.

ಕುಡಿ ನೋಟದ ಪ್ರೀತಿಯಲ್ಲೇ ತನ್ನನ್ನು ಸೆಳೆದ ಚೆಲುವೆಯೊಂದಿಗೆ ಕಲ್ಪನಾ ಲೋಕದಲ್ಲಿ ವಿಹರಿಸತೊಡಗಿದ ಸುರೇಶ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ