– ರಾಘವೇಂದ್ರ ಅಡಿಗ ಎಚ್ಚೆನ್.
ಶೀರ್ಷಿಕೆಯಿಂಡಲೇ ಕುತೂಹಲ ಮೂಡಿಸಿರುವ ‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಖೂರಿನ ನ್ಯಾಷನಲ್ ಕಾಲೇಜು ಎಚ್.ಎನ್. ಕಲಾಕ್ಷೇತ್ರದಲ್ಲಿ ನೆರವೇರಿದೆ. ರೈತ ಹೋರಾಟಗಾರ್ತಿ ಡಾ. ವಿಜಯಲಕ್ಷ್ಮಿ, ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್, ಪ್ರಕಾಶಕರು ಹಾಗೂ ಡಾ. ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾಗೆ ಬಂಡವಾಳ ಹೂಡಿದ್ದು ‘ಪೂಜ್ಯಾಯ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಎಂ.ಎಲ್.ಪ್ರಸನ್ನ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ವೆಂಕಟ್ ಗೌಡ ಅವರು ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಹಿಕಹಿ ಚಂದ್ರು, ಕುಮಾರಿ ಯಶಿಕಾ, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯ ಸುನಿಲ್, ರೋಹಿತ್ ರಾಘವೇಂದ್ರ, ಎಂ.ಜೆ. ರಂಗಸ್ವಾಮಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಡಾ. ವಿಜಯಲಕ್ಷ್ಮಿ ಮಾತನಾಡಿ ನಾನು ೯ನೇ ತರಗತಿ ಓದಿದ್ದ ಕಾರಣ ನನ್ನ ಮಗಳನ್ನು ಪ್ರತಿಷ್ಠಿತ ಆಂಗ್ಲ ಮಾದ್ಯಮ ಶಾಲೆಯವರು ಸೇರಿಸಿಕೊಳ್ಳಲು ನಿರಾಕರಿಸಿದ್ದರು, ಇದರಿಂದ ಹಠ ತೊಟ್ಟು ನಾನು ಸಹ ಚೇತನಾ ವಿದ್ಯಾಸಂಸ್ಥೆ ಎನ್ನುವ ಸಂಸ್ಥೆ ಸ್ಥಾಪನೆ ಂಆಡಿದ್ದಲ್ಲದೆ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ಶಿಕ್ಷಣದ ಮೌಲ್ಯ, ಮಹತ್ವ ಹೇಳುವ ‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಡಾ. ವಿ. ನಾಗೇಂದ್ರ ಪ್ರಸಾದ್ ಮಾತನಾಡಿ ಮಕ್ಕಳ ಸಮ್ಮುಖದಲ್ಲಿ ‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರದ ಹಾಡುಗಳ ಬಿಡುಗಡೆ ನಡೆಸಿರುವುದು ಖುಷಿ ತಂದಿದೆ. ಮ್ಯೂಸಿಕ್ ಬಜಾರ್ ಆಡಿಯೋ ಸಂಸ್ಥೆಯ ಮೂಲಕ ಈ ಆಡಿಯೋ ಬಿಡುಗಡೆ ಆಗಲಿದೆ. ಈ ಸಂಸ್ಥೆಯಲ್ಲಿ ಕಲೆಗೆ ಸದಾ ಪ್ರೋತ್ಸಾಹ ಇರುತ್ತದೆ ಎಂದರು.

ಕಥಾನಾಯಕಿ ಏಳನೇ ತರಗತಿಯವಳಾಗಿ ಊರ ಜನರನ್ನು ಸಾಕ್ಷರರನ್ನಾಗಿಸಲು ಪ್ರಯತ್ನಿಸುವಲ್ಲಿ ಎದುರಾಗುವ ಕಷ್ಟಗಳು ಅದನ್ನು ಆಕೆ ಹೇಗೆ ಮೆಟ್ಟಿ ನಿಲ್ಲುತ್ತಾಳೆ ಎನ್ನುವುದು ಚಿತ್ರದ ಕಥಾ ಹಂದರ. ಇದಾಗಲೇ ೩೪ ದಿನ ಚಿತ್ರೀಕರಣ ಮಾಡಲಾಗಿದ್ದು ಸಚಿವ ಸಂತೋಷ್ ಲಾಡ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಒಟ್ಟೂ ೧೦ ಹಾಡುಗಳಿರಲಿದೆ.





