- ರಾಘವೇಂದ್ರ ಅಡಿಗ ಎಚ್ಚೆನ್.
ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರಕ್ಕೆ ಮಹಾಶಿವರಾತ್ರಿಯಂದು ಚಾಲನೆ ಸಿಕ್ಕಿದೆ. , ‘ಹೊಂದಿಸಿ ಬರೆಯಿರಿ’, ‘ತೀರ್ಥರೂಪ ತಂದೆಯವರಿಗೆ’ ಅಂತಹಾ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ರಾಮೇನಹಳ್ಳಿ ಜಗನ್ನಾಥ ಅವರ ಮೂರನೇ ಚಿತ್ರ ‘ತಮ್ಮ ಸುಖಾಗಮನ ಬಯಸುವ’ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.

ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ಅವರು ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ, ಈ ಚಿತ್ರ ಗಣೇಶ್ ಅಭಿನಯದ ನಲವತ್ತೈದನೇ ಚಿತ್ರವಾಗಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.
ಮುಹೂರ್ತದ ದಿನ ಗಣೇಶ್ ಪತ್ನಿ ಶಿಲ್ಪಾ ಅವರು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ.

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಗಣೇಶ್ "ಮುಂಗಾರು ಮಳೆ ಚಿತ್ರವು 2006ರಲ್ಲಿ ಬಿಡುಗಡೆಯಾಗಿತ್ತು. ಈಗ ಅದಕ್ಕೆ ಇಪ್ಪತ್ತು ವರ್ಷ ತುಂಬಿದೆ. ಇಪ್ಪತ್ತು ವರ್ಷಗಳು ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ" ಎಂದು ಹೇಳಿದ್ದಾರೆ.

"ಹೊಂದಿಸಿ ಬರೆಯಿರಿ " ಚಿತ್ರದ ನಿರ್ದೇಶಕರು ನನಗಾಗ್ಗಿ ಚಿತ್ರ ನಿರ್ದೇಶನ ಮಾಡಲು ಮುಂಡಾಗಿದ್ದಾರೆ ಎನ್ನುವಾಗ ನನಗೆ ಸಂತೋಷವಾಗಿತ್ತು. ಏಕೆಂದರೆ ನಾನು ಆ ಚಿತ್ರ ನೋಡಿದ್ದೆ.ಅವರೊಬ್ಬ ಸೆನ್ಸಿಬಲ್ ರೈಟರ್ ಅನ್ನೋದು ನನಗೆ ಗೊತ್ತಾಗಿತ್ತು. ʻಮನುಷ್ಯನ ಭಾವನೆಗಳನ್ನು ಆ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆʼ ಅಂತ ಅವರಿಗೆ ನಾನು ತಿಳಿಸಿದ್ದೆ. ಬಳಿಕ ನಿರ್ದೇಶಕರು ಬಂದು ನನಗೆ ಕಥೆ ಹೇಳಿದಾಗ ಅದನ್ನು ಕೇಳಿಯೇ ನನಗೆ ಅಳು ಬಂತು, ಅಂತಹಾ ಅಪರೂಪದ ಕಥೆ ಇದಾಗಿದೆ." ಎಂದು ನಟ ಗಣೇಶ್ ವಿವರಿಸಿದರು.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ "ಇದು ನನ್ನ ಗೋಲ್ಡನ್ ದಿನ. 2006ರಲ್ಲಿ ಮುಂಗಾರು ಮಳೆ ತೆರೆಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೀನಿ ಎಂಬ ಲೆಕ್ಕವಿಲ್ಲ. ಇಂದು ಗಣೇಶ್ ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ.. ಇದು ಗಣೇಶ್ ಅವರಿಗಾಗಿಯೇ ಬರೆದ ಕಥೆ. ಈ ಕಥೆಗೆ ಅವರೇ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮಾ." ಎಂದಿದ್ದಾರೆ.





