- ರಾಘವೇಂದ್ರ ಅಡಿಗ ಎಚ್ಚೆನ್.
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿನಿಮಾ ಬಿಡುಗಡೆ ಮೇಲಿನ ತಡೆಯಾಜ್ಞೆ ಆದೇಶಕ್ಕೆ ಕೇರಳ ಹೈಕೋರ್ಟ್ತಡೆ ನೀಡಿದೆ. ಕೇರಳ ಹೈಕೋರ್ಟ್ ಶುಕ್ರವಾರ ‘ದಿ ಕೇರಳ ಸ್ಟೋರಿ 2 – ಗೋಸ್ ಬಿಯಾಂಡ್’ ಚಿತ್ರದ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು. ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಪಿ.ವಿ. ಬಾಲಕೃಷ್ಣನ್ ಅವರ ವಿಭಾಗೀಯ ಪೀಠವು, ಚಿತ್ರದ ಬಿಡುಗಡೆಯನ್ನು 15 ದಿನಗಳವರೆಗೆ ತಡೆಹಿಡಿದಿದ್ದ ಏಕಸದಸ್ಯ ನ್ಯಾಯಾಧೀಶರ ಮಧ್ಯಂತರ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.
ರಾಜ್ಯದಲ್ಲಿ ಚಿತ್ರದ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಯುತ್ತಿರುವ ಮಧ್ಯೆ ಈ ಮಹತ್ವದ ತೀರ್ಪು ಬಂದಿದೆ. ನಿರ್ಮಾಪಕರು ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ನೀಡಲಾದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿದ್ದರು. ಅರ್ಜಿದಾರರ ಪರಿಷ್ಕರಣೆಯನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್ಸಿ) ಅಧ್ಯಕ್ಷರ ಮುಂದೆ ಎರಡು ವಾರಗಳಲ್ಲಿ ಪರಿಗಣಿಸುವಂತೆ ಏಕ ಸದಸ್ಯ ನ್ಯಾಯಾಧೀಶರು ನಿರ್ದೇಶಿಸಿದ್ದರು. ಏಕ ಸದಸ್ಯ ನ್ಯಾಯಾಧೀಶರು ಮಧ್ಯಂತರ ಆದೇಶ ಹೊರಡಿಸಿದ ಕೆಲವೇ ಗಂಟೆಗಳ ನಂತರ, ವಿಭಾಗೀಯ ಪೀಠವು ನಿನ್ನೆ ರಾತ್ರಿ 7:30 ಕ್ಕೆ ರಿಟ್ ಮೇಲ್ಮನವಿಗಳ ತುರ್ತು ವಿಚಾರಣೆಯನ್ನು ನಡೆಸಿತು.
ಚಿತ್ರದ ನಿರ್ಮಾಪಕರ ಪರವಾಗಿ ಹಿರಿಯ ವಕೀಲರಾದ ಎಲ್ವಿನ್ ಪೀಟರ್ ಮತ್ತು ನೀರಜ್ ಕಿಶನ್ ಕೌಲ್ ವಾದ ಮಂಡಿಸಿದರು. ಚಿತ್ರದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿದ್ದ ಅರ್ಜಿದಾರರ ಪರವಾಗಿ ವಕೀಲರಾದ ಮೈತ್ರೇಯಿ ಹೆಗ್ಡೆ ಮತ್ತು ಶ್ರೀರಾಗ್ ಶೈಲನ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.





