- ರಾಘವೇಂದ್ರ ಅಡಿಗ ಎಚ್ಚೆನ್.
ಹೊಸಬರ ತಂಡದ ‘ವಿಕಲ್ಪ’ ಎನ್ನುವ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾ ಇದಾಗಿದ್ದು ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ, ನಿರ್ದೇಶಕ ಪೃಥ್ವಿರಾಜ್ ಪಾಟೀಲ್, ಚಿತ್ರದ ಪ್ರಚಾರದ ಭಾಗವಾಗಿ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. ಹಿರಿಯ ಪತ್ರಕರ್ತರಾದ ಜೋಗಿ ‘ವಿಕಲ್ಪ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
'ವಿಕಲ್ಪ 2026ರಲ್ಲಿ ಬರುವ ಅತ್ಯುತ್ತಮ ಸಿನಿಮಾಗಳ ಲಿಸ್ಟ್ನಲ್ಲಿ ನಿಲ್ಲುವ ಸಿನಿಮಾ ಆಗುತ್ತದೆ ಎಂಬ ವಿಶ್ವಾಸ ಬಂದಿದೆ. ಯಾಕಂದ್ರೆ ನಾನು ಚಿತ್ರದ ಒಂದಿಷ್ಟು ದೃಶ್ಯಗಳನ್ನು ನೋಡಿದ್ದೇನೆ. ಹಾಗಾಗಿ ಈ ಮಾತು ಹೇಳುತ್ತಿದ್ದೆನೆ. ನಿರ್ದೇಶಕರಿಗೆ ಮೊದಲ ಚಿತ್ರವಾದರೂ ಅಚ್ಚು ಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಹಾಗಾಗಿ ತಂಡಕ್ಕೆ ಒಳ್ಳೆಯದಾಗಲಿ' ಎಂದು ಜೋಗಿ ಅವರು ಶುಭ ಕೋರಿದರು.

'ಇದು ಬಹಳ ಸೀರಿಯಸ್ ಆಗಿರುವ ಕಥೆ ಸೈಕ್ರಿಯಾಟಿಸ್ಟ್ ಕನ್ಸಲೇಟ್ ತಗೊಂಡು ಸಿನಿಮಾ ಮಾಡಲಾಗಿದೆ. ಸತ್ಯ ಮತ್ತು ಕಲ್ಪನೆ ನಡುವೆ ಇರುವ ಅಂಶದ ಮೇಲೆ ಕಥೆ ಹೇಳಲಾಗುತ್ತದೆ. ಮೂರು ಟೈಮ್ ಲೈನ್ನಲ್ಲಿ ಸಿನಿಮಾ ಸಾಗುತ್ತದೆ. ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಆಗಿದ್ದರೂ ಇದೊಂದು ಥ್ರಿಲ್ಲರ್ ಚಿತ್ರ ಎನ್ನುವುದು ವಿಶೇಷ. ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಸಿನಿಮಾ ಮಾಡಲಾಗಿದೆ. ಚಿತ್ರಕ್ಕೆ ಚಿತ್ರದ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆ' ಎಂದು ಚಿತ್ರದ ನಿರ್ದೇಶಕ ಹಾಗೂ ನಾಯಕ ನಟರಾದ ಪೃಥ್ವಿರಾಜ್ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಹರಿಣಿ ಮಾತನಾಡಿ 'ನಾನು ಚಿತ್ರದಲ್ಲಿ ಸೈಕ್ರಿಯಾಟಿಸ್ಟ್ ಪಾತ್ರ ಮಾಡಿದ್ದೇನೆ, ಒಂದು ಒಳ್ಳೆಯ ಕಥೆ ಇರುವ ಸಿನಿಮಾ ಇದಾಗಿದ್ದು ನಿರ್ದೇಶಕರು ಸಂಪೂರ್ಣ ತಯಾರಿ ನಡೆಸಿ ಚಿತ್ರ ಮಾಡಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು ಪ್ರತಿಯೊಬ್ಬರು ಪಾತ್ರವಾಗಿ ಈ ಸಿನಿಮಾ ನೋಡುತ್ತೀರಿ' ಎಂದರು.

'ಕಥೆಯಲ್ಲಿ ಕ್ಯಾರೆಕ್ಟರ್ ನೋಡಿ ಈ ಸಿನಿಮಾ ಮಾಡಲೇ ಬೇಕು ಅನಿಸಿತು. ಮೂಲತಃ ನಾನು ರಂಗಭೂಮಿ ಕಲಾವಿದೆ. ಸಿನಿಮಾ ಮೊದಲ ಅನುಭವ. ನನ್ನ ಪಾತ್ರದ ಹೆಸರು ಸಮುದ್ಯತಾ' ಎಂದು ಸಿನಿಮಾದ ನಾಯಕಿ ನಟಿ ಕಿ ನಾಗಶ್ರೀ ಹೆಬ್ಬಾರ್ ಹೇಳಿದ್ದಾರೆ.
ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಸಿನಿಮಾದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ 'ಚಿತ್ರೀಕರಣ ನಡೆದಿದ್ದು ಸಿಂಗಪುರ, ನೆದಲ್ಯಾಂರ್ಡ್ ಸೇರಿದಂತೆ ವಿದೇಶಗಳಲ್ಲೂ 'ವಿಕಲ್ಪ'ದ ಚಿತ್ರೀಕರಣ ನಡೆದಿದೆ. ಚಿತ್ರವನ್ನು ಸುರೂಸ್ ಟಾಕೀಸ್ ಬ್ಯಾನರ್ನಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ನಿರ್ಮಾಣ ಮಾಡಿದ್ದಾರೆ. ಪೃಥ್ವಿರಾಜ್ ಪಾಟೀಲ್ ಅವರು ಹವ್ಯಾಸಿ ರಂಗಭೂಮಿಯಲ್ಲಿ ಅನುಭವ ಹೊಂದಿದ್ದಾರೆ. ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು ಈಗ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಪೃಥ್ವಿರಾಜ್ ಪಾಟೀಲ್, ಸಂಧ್ಯಾ ವಿನಾಯಕ್, ನಾಗಶ್ರೀ ಹೆಬ್ಬಾರ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಡಾ. ಪ್ರಕೃತಿ, ಜಯಂತ್ ಡೇವಿಡ್, ಮಾಸ್ಟರ್ ಆಯುಷ್ ಸಂತೋಷ್ ರಂಗಭೂಮಿ ಕಲಾವಿದರಾದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಗಿರೀಶ್ ಹೆಗಡೆ, ಮಾಧವ ಶರ್ಮಾ, ಗಣಪತಿ ಎ.ಆರ್, ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ವಿಕಲ್ಪ’ ಸಿನಿಮಾಗೆ ಮಿಥುನ್ ತೀರ್ಥಹಳ್ಳಿ ಸಹ-ನಿರ್ದೇಶನ ಮಾಡಿದ್ದಾರೆ. ಅಭಿರಾಮ್ ಗೌಡ ಅವರು ಛಾಯಾಗ್ರಣ ಮಾಡಿದ್ದಾರೆ. ಸುರೇಶ್ ಆರುಮುಗಮ್ ಅವರ ಸಂಕಲನ, ಸಂವತ್ಸರ ಅವರ ಸಂಗೀತ ಈ ಸಿನಿಮಾಗಿದೆ. ಪೃಥ್ವಿರಾಜ್ ಪಾಟಿಲ್ ಹಾಗೂ ಕೌಂಡಿನ್ಯ ಕುಡ್ಲುತೋಟ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದಾರ್ಥ್ ಬೆಳ್ಮಣ್ಣು, ಸಂವತ್ಸರ, ಇಂಚರಾ, ಶ್ರೀರಂಜಿನಿ ಮುಂತಾದವರು ‘ವಿಕಲ್ಪ’ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಟರಾದ ಗಣಪತಿ ವಡ್ಡಿನಗದ್ದೆ, ಗೀರೀಶ್, ಸ್ವರೂಪ್ ಬಚ್ಚ್, ಪೂಜಾ ಬಚ್ಚ್ ಸಂಗೀತ ನಿರ್ದೇಶಕ ಸಂವತ್ಸರ, ಸಂಕಲನಕಾರ ಸುರೇಶ್ ಆರುಮುಗಮ್ ತಮ್ಮ ಅನುಭವ ಹಂಚಿಕೊಂಡರು. ಇನ್ನು ಸಿನಿಮಾ ಅತಿ ಶೀಘ್ರದಲ್ಲಿಯೇ ರಾಜ್ಯಾದ್ಯಂತ ರೀಲೀಸ್ ಆಗಲಿದೆ.





