ಮಮತೆಯ ಮಡಿಲು ಈ ಮಿನಿಸ್ಟರ್ ಪತ್ನಿ, ಸದ್ದಿಲ್ಲದ ಸಾಧಕಿ ಈ ವಾತ್ಯಲ್ಯಮೂರ್ತಿ! ಇವರ ಅಪಾರ ಸಾಧನೆಗಳ ಕುರಿತಾಗಿ ವಿವರವಾಗಿ ತಿಳಿಯೋಣವೇ....?
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಛಟಿಕದ ಸಲಾಕೆಯಂತಿರಬೇಕು
ಕ್ರಾಂತಿಕಾರಿ ವಚನಕಾರ ಬಸವಣ್ಣ ಹೇಳಿದ ಮಾತು ಪ್ರತಿಯೊಬ್ಬರ ಭವಿಷ್ಯದ ಭವ್ಯ ಬುನಾದಿಯ ಸಾಲುಗಳು, ಕೆಲವರ ಮಾತು ಹಾಗೇ ಇರುತ್ತವೆ. ಅವರು ಮಾತನಾಡುವ ಒಂದೊಂದು ಮಾತು ಮುತ್ತಿನ ಹಾರದಂತಿರುತ್ತದೆ, ನೇರವಾಗಿ ಹೃದಯವನ್ನು ಮುಟ್ಟುವಂತಿರುತ್ತದೆ. ಮತ್ತಷ್ಟು ಇನ್ನಷ್ಟು ಕೇಳುತ್ತಿರಬೇಕು ಎನ್ನುವಷ್ಟು ಮನಸ್ಸಿಗೆ ಮಧುರವಾಗಿರುತ್ತದೆ. ಅಂತೆಯೇ ಅವರು ತಾವು ಇದ್ದೂ, ಇಲ್ಲದವರಂತೆ, ಕಂಡೂ ಕಾಣದವರಂತೆ, ಎಲೆ ಮರೆಯ ಕಾಯಾಗಿ, ತಮ್ಮ ವೃತ್ತಿ, ಹವ್ಯಾಸ, ವೈಯಕ್ತಿಕ, ಸಾಮಾಜಿಕ ಬದುಕು ಎಲ್ಲವನ್ನೂ ಸ್ತಿತಪ್ರಜ್ಞರಾಗಿ ಸಮಚಿತ್ತದಿಂದ ನಡೆಸಿಕೊಂಡು ಹೋಗುತ್ತಿರುತ್ತಾರೆ.
ಯಾವುದೇ ಹಮ್ಮುಬಿಮ್ಮುಗಳಿಲ್ಲದೆ, ಸಮಾಜ ನನ್ನನ್ನು ಗುರುತಿಸಲಿ ಎಂಬ ಯಾವ ಅಪೇಕ್ಷೆಯೂ ಇಲ್ಲದೆ, ತನ್ನ ಕಾಯಕದ ಮೂಲಕ ಸಮಾಜಕ್ಕೆ ನನ್ನಿಂದ ಕಿಂಚಿತ್ತಾದರೂ ಸೇವೆ ಸಲ್ಲಲ್ಲಿ ಎನ್ನುವ ನಿಸ್ವಾರ್ಥ ಮನೋಭಾವದಿಂದ ಸದ್ದಿಲ್ಲದೆ ಕೆಲಸ ಮಾಡುವ ಮಹಿಳೆಯೊಬ್ಬರಿದ್ದಾರೆ. ಅವರೇ ಡಾ. ಭಾಗ್ಯಶ್ರೀ ಎಸ್. ಪಾಟೀಲ್, ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರವಣಪ್ರಕಾಶ್ ಪಾಟೀಲ್ ರ ಪತ್ನಿ.
ಸರಳ ಜೀವನ ಸೂತ್ರ ಅಳವಡಿಸಿಕೊಂಡಿರುವ ಡಾ. ಭಾಗ್ಯಶ್ರೀಗೆ ತಾವೊಬ್ಬ ಡಾಕ್ಟರ್ ಎನ್ನುವ ಬಿಗುಮಾನವಾಗಲಿ, ನನ್ನ ಪತಿ ರಾಜಕಾರಣಿ ಅನ್ನುವ ಅಹಂ ಆಗಲಿ ಇಲ್ಲವೇ ಇಲ್ಲ. ಪ್ರಚಾರವಂತೂ ಇವರಿಗೆ ಬೇಕಾಗಿಯೇ ಇಲ್ಲ. ಇಂತಹ ಒಂದು ಪರಿಪೂರ್ಣ ವ್ಯಕ್ತಿತ್ವದಿಂದಲೇ ಪ್ರತಿಯೊಬ್ಬ ಮಹಿಳೆಗೆ ಈಕೆ ರೋಲ್ ಮಾಡೆಲ್ ಆಗಿರುವವರು.
ಪತಿಗೆ ತಕ್ಕ ಪತ್ನಿಯಾಗಿ, ಮಕ್ಕಳಿಗೆ ತಕ್ಕ ತಾಯಿಯಾಗಿ, ಸಂಬಂಧಿಕರಿಗೆ ತಕ್ಕ ಸಂಬಂಧಿಯಾಗಿ, ಮನೆಗೆ ತಕ್ಕ ಸೊಸೆಯಾಗಿ, ಸ್ನೇಹಿತೆಯರಿಗೆ ತಕ್ಕ ಆಪ್ತೆಯಾಗಿ. ಎಲ್ಲದಕ್ಕಿಂತ ಕಷ್ಟ ಅಂತ ಬಂದವರಿಗೆ ಕರುಣಾಮಯಿಯಾಗಿ, ಸಮಸ್ಯೆ ಎಂದು ಬರುವ ರೋಗಿಗಳಿಗೆ ದೇವರಾಗಿ, ಯಾವುದೇ ಬಿಗುಮಾನವಿಲ್ಲದೇ ಬಾಂಧ್ಯದಿಂದಲೇ ಬದುಕುತ್ತಿರುವ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳ ಏಕೈಕ ಮಹಿಳೆ ಅಂದ್ರೆ ಇವರೇ ಎಂದರೂ ಅತಿಶಯೋಕ್ತಿಯಲ್ಲ.
ಡಾ. ಭಾಗ್ಯಶ್ರೀಯವರ ಪ್ರಾಥಮಿಕ ಶಿಕ್ಷಣ ಬೀದರ್ ಜಿಲ್ಲೆಯ ಹುಮನಾಬಾದ್ ನಲ್ಲಿ ಆರಂಭವಾಯ್ತು. ಗುಲ್ಬರ್ಗಾದ ಶರಣಬಸವೇಶ್ವರ ಇನ್ ಸ್ಟಿಟಿಟ್ಯೂಟ್ ನಲ್ಲಿ ಹೈಸ್ಕೂಲ್, 11 ಮತ್ತು 12ನೇ ತರಗತಿ ಪೂರ್ಣಗೊಳಿಸಿ, ನಂತರ ಕಲಬುರಗಿಯ ಪ್ರತಿಷ್ಠಿತ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪೂರ್ಣಗೊಳಿಸಿದ್ದಾರೆ. ಫೈನಲ್ ಇಯರ್ ನಲ್ಲಿದ್ದಾಗ, ಡಾ. ಶರಣಪ್ರಕಾಶ್ ಪಾಟೀಲ್ ರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟರು. ಪತಿಯ ಪ್ರೋತ್ಸಾಹದಿಂದ ಶಿಕ್ಷಣ ಮುಂದುವರಿಸಿದರು. ಮಗ ಹುಟ್ಟಿದ ನಂತರ 2 ವರ್ಷ ಅರ್ಬನ್ ಸೆಕ್ಟರ್ ನಲ್ಲಿ ಕೆಲಸ ಮಾಡಿದ್ದಾರೆ. ಅಷ್ಟರಲ್ಲಿ ಅವರ ಪತಿ ಮಿನಿಸ್ಟರ್ ಆಗಿದ್ದರು.
ಇನ್ನೇನು ತನ್ನ ಗಂಡ ಮಂತ್ರಿ, ನಾನ್ಯಾಕೆ ಈ ಕೆಲಸ ಮಾಡಬೇಕು ಎಂದು ಅಂದೇ ಭಾಗ್ಯಶ್ರೀ ಯೋಚಿಸಿದ್ದರೆ, ತಾವು ಪತಿ ಜೊತೆ ಅಲ್ಲಲ್ಲಿ ರಾಜಕೀಯ ಸಮಾರಂಭಗಳಲ್ಲಿ ಓಡಾಡಬಹುದಿತ್ತು. ಆದರೆ, ಭಾಗ್ಯಶ್ರೀ ಆಲೋಚನೆಯೇ ಬೇರೆಯದಾಗಿತ್ತು. ತನ್ನ ವೃತ್ತಿ ಬದುಕಿನಲ್ಲಿ ಜನಸೇವೆ ಮಾಡುವುದೆಂದು ನಿರ್ಧರಿಸಿಬಿಟ್ಟಿದ್ದರು. ಪತಿ ರಾಜಕೀಯ ಕೃಷಿ ಮಾಡುತ್ತಿದ್ದರೆ, ಭಾಗ್ಯಶ್ರೀ ವೈದ್ಯಕೀಯ ಬೇಸಾಯ ಮುಂದುವರಿಸಿದ್ದರು. ಅದರ ಫಲವಾಗಿಯೇ ಪ್ರಸಿದ್ಧ ಸ್ತ್ರೀರೋಗತಜ್ಞೆ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕಿ ಎನಿಸಿಕೊಂಡಿದ್ದಾರೆ.





