ಮಗುವೊಂದು ಬೆಳೆಯಬೇಕೆಂದರೆ ಅದರೊಟ್ಟಿಗೆ ಸಂಸ್ಕಾರ, ವಾತಾವರಣ, ಪರಿಸರ ಬಹಳ ಮುಖ್ಯವಾಗುತ್ತದೆ. ಬೆಳವಣಿಗೆಯ ಹಂತದಲ್ಲಿ ಮನೆಯಲ್ಲಿನ ಹಿರಿಯರ ಪಾತ್ರ ಬಹಳವೇ ಪ್ರಾಮುಖ್ಯತೆ ವಹಿಸುತ್ತದೆ. ಅಂತಹ ಒಂದು ಸ್ಛೂರ್ತಿದಾಯಕ ಪರಿಸರದಲ್ಲಿ ಬಾಲ್ಯ ಜೀವನವನ್ನು ಅನುಭವಿಸಿ ಇಂದು ದೇಶಾದ್ಯಂತ ಹೆಸರು ಮಾಡಿರುವ ಬಹುಮುಖ ಪ್ರತಿಭೆಯೇ ಈ ಡಾ. ಕೆ.ಎಸ್‌. ಚೈತ್ರಾ! ಸಮಾಜದಲ್ಲಿ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಖ್ಯಾತಿ ಪಡೆದಿರುವ ಈ ಹೆಣ್ಣುಮಗಳು ಹುಟ್ಟಿದ ಮನೆಯಲ್ಲೂ ಮೆಟ್ಟಿದ ಮನೆಯಲ್ಲೂ ಒಳ್ಳೆಯ ಹೆಸರನ್ನು ಪಡೆದು, ಎಷ್ಟೆಲ್ಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ಸಹ ಅತ್ತೆಮಾವಂದಿರ ಜೊತೆ ಸಂಸಾರವನ್ನು ಅಚ್ಚುಕಟ್ಟಾಗಿ ನೋಡಿ ಕೊಂಡು ಹೋಗುತ್ತಿರುವ ಗೃಹಿಣಿಯೂ ಹೌದು! ಇಂತಹ ಹೆಣ್ಣುಮಕ್ಕಳು ಬಹಳ ವಿರಳ ಅಲ್ಲವೇ?

ತಂದೆ-ತಾಯಿಯರ ಪ್ರೀತಿಯ ಮಡಿಲಲ್ಲಿ ಬೆಳೆದ ಇವರು ತನ್ನನ್ನು ತಾನು ಹತ್ತು ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡು ಎಲ್ಲದರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿರುವುದು ವಿಶೇಷದ ಸಂಗತಿ. ತಂದೆ ಶಿವಮೊಗ್ಗೆಯ ಖ್ಯಾತ ಮನೋವೈದ್ಯರಾದ ಡಾ. ಕೆ.ಆರ್‌. ಶ್ರೀಧರ್‌. ಎರಡು ಪದವಿಗಳನ್ನು ಗಳಿಸಿ, ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿರುವ ಜೊತೆಗೆ ಸಾಹಿತಿಯೂ ಆಗಿರುವ ತಾಯಿ ವಿಜಯಾ ಶ್ರೀಧರ್‌. ಮಕ್ಕಳ ಲಾಲನೆ ಪಾಲನೆಗಳ ವಿಷಯದಲ್ಲಿ ಇವರ ರೀತಿ ಕೊಂಚ ಭಿನ್ನವಾಗಿತ್ತು. ಶ್ರೀಧರ್‌ ದಂಪತಿಗಳಿಬ್ಬರೂ ಆಗಾಗ ಆಕಾಶವಾಣಿಗೆ ಹೋಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆಗೆಲ್ಲ ಅವರು ತಮ್ಮ ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.

ಬಹುಶಃ, ಇಂತಹ ಬೆಳವಣಿಗೆಗಳೇ ನಿರೂಪಣೆಯ ಕ್ಷೇತ್ರದಲ್ಲಿ ಚೈತ್ರಾ ಅವರಲ್ಲಿ ಆಸಕ್ತಿ ಮೂಡಲು ಕಾರಣವಾಗಿರಬೇಕು. ಮನೆಯಲ್ಲಿಯೂ ಸಹ ಆರೋಗ್ಯಕರ ಚರ್ಚೆಗಳು, ವಿಷಯ ವಿನಿಮಯಗಳು ಸದಾ ನಡೆಯುತ್ತಿದ್ದವು. ಇದೆಲ್ಲದರ ಪರಿಣಾಮವೇ ಇವರು ಇಂದು ಒಬ್ಬ ನೃತ್ಯಗಾರ್ತಿ, ನಿರೂಪಕಿ, ಸಾಹಿತಿ, ದಂತವೈದ್ಯೆ, ಉತ್ತಮ ವಾಗ್ಮಿಯಾಗಿ ಅಪರೂಪದ ವ್ಯಕ್ತಿಯಾಗಲು ಕಾರಣ. ಶ್ರೀಧರ್‌ ವಿಜಯಾರವರ ಮೂವರು ಪುತ್ರಿಯರ ಪೈಕಿ ಇವರು ಮೊದಲನೆಯವರು. ತಂಗಿಯರಾದ ಡಾ. ಕೆ.ಎಸ್‌. ಪವಿತ್ರಾ ಹಾಗೂ ಡಾ. ಕೆ.ಎಸ್‌. ಶುಭ್ರತಾ ಸಹ ವೈದ್ಯ ವೃತ್ತಿಯನ್ನು ಮಾಡುತ್ತಾ ಸಾಹಿತ್ಯದಲ್ಲೂ ನಿರತರಾಗಿರುವರು. ಒಟ್ಟಿನಲ್ಲಿ ಇದೊಂದು ಹಲವಾರು ಶ್ರೀಮಂತ ಪ್ರತಿಭೆಗಳನ್ನು ಮೈಗೂಡಿಸಿಕೊಂಡಿರುವ ವಿದ್ಯಾವಂತ ಕುಟುಂಬ!

ಕಥೆ, ಮಕ್ಕಳ ಕಥೆ, ಕವನ, ವೈದ್ಯಕೀಯ, ಪ್ರವಾಸ ಕಥನ, ಲಲಿತ ಪ್ರಬಂಧ ಮುಂತಾದ ಅನೇಕ ಪ್ರಕಾರಗಳಲ್ಲಿ ಕಳೆದ 25 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಸುಪ್ರಸಿದ್ಧ ಅಂಕಣಗಾರ್ತಿಯೂ ಹೌದು. ಇದುವರೆವಿಗೂ ಇವರ 13 ಕೃತಿಗಳು ಪ್ರಕಟವಾಗಿವೆ. `ಹಲ್ಲುಗಳ ರಕ್ಷಣೆ ಹೇಗೆ? ಆಸೆ ಅಗತ್ಯಗಳು, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ, ಕುಶಲವೇ ಕ್ಷೇಮವೇ? ಆರೋಗ್ಯದ ನಗುವಿಗಾಗಿ’ ಮುಂತಾದ ವೈದ್ಯಕೀಯ ಲೇಖನಗಳಲ್ಲಿ ದಂತದ ಸ್ವಾಸ್ಥ್ಯ ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕಥಾಸಂಕಲನಗಳಾದ `ಕೋತಪ್ಪನಾಯಕನ ಯಜಮಾನಿಕೆ, ಗರಾಜ್‌ ಸೇಲ್,’ ಅಂಕಣ ಬರಹಗಳಾದ `ಹೊಳೆ ಬಳೆಗಳ ಹಿಂದೆ, ಬಳೆಗಳ ಭಾರ ಹೊತ್ತು, ಮನದೊಳಗಿನ ಮಾತುಮಥನ’ಗಳ ಜೊತೆಗೆ ಒಂದು ವೈಜ್ಞಾನಿಕ ಕೃತಿಯೂ ಪ್ರಕಟವಾಗಿದೆ. ದಾವಣಗೆರೆ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಿಗೆ ಇವರ `ಗರಾಜ್‌ ಸೇಲ್’ ಕಥೆ ಪಠ್ಯವಾಗಿ ಆಯ್ಕೆಯಾಗಿರುವುದು ಇವರ ಪ್ರಬುದ್ಧ ಬರವಣಿಗೆಗೆ ಸಾಕ್ಷಿಯಾಗಿದೆ.

ಇದಲ್ಲದೇ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2014ನೇ ಸಾಲಿನ ಲಲಿತ ಪ್ರಬಂಧ ಸಂಕಲನದಲ್ಲಿ ಇವರ ಒಂದು ಪ್ರಬಂಧ ಪ್ರಕಟವಾಗಿದ್ದು, 40ಕ್ಕೂ ಹೆಚ್ಚು ಕಥೆಗಳು, 250ಕ್ಕೂ ಹೆಚ್ಚು ಮಕ್ಕಳ ಕಥೆಗಳು, 4 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಕಥೆಗಳ ಸಂಕಲನದಲ್ಲಿ ಪ್ರಕಟವಾಗಿದ್ದು, `ವಿಜಯಾ;’ ಪತ್ರಿಕೆಯಲ್ಲಿ ನಾಲ್ಕು ವರ್ಷಗಳ ಕಾಲ ಮಹಿಳಾ ಕಾಳಜಿಯುಳ್ಳ `ಲೇಡೀಸ್‌ ಡೈರಿ’ಯಲ್ಲಿ ಬರಹಗಳ ಸುರಿಮಳೆಯೇ ಆಗಿದ್ದು, 5 ವರ್ಷಗಳ ಕಾಲ ಅಮೆರಿಕ ಪತ್ರ ಅಂಕಣ, 6 ವರ್ಷಗಳ ಕಾಲ ಮಹಿಳೆ ಮಂಥನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 3 ವರ್ಷಗಳ ಕಾಲ `ವಿಕ್ರಮ’ದಲ್ಲಿ ಮಕ್ಕಳ ಕಥೆಗಳ  ಅಂಕಣಗಾರ್ತಿಯಾಗಿ, `ಹೊಸ ದಿಗಂತ’ದಲ್ಲಿ 2 ವರ್ಷಗಳ ಕಾಲ ಅಂಕಣಗಾರ್ತಿಯಾಗಿ 2 ವರ್ಷಗಳ ಕಾಲ ತುಷಾರದಲ್ಲಿ ವಿದೇಶಿ ಜಾನಪದ ಕಥೆಗಳ ಅಂಕಣಗಾರ್ತಿಯಾಗಿ ಹೆಸರು ಮಾಡಿದ್ದಾರೆ. ಆಕಾಶವಾಣಿಗಾಗಿ ಕಿರು ಪ್ರಹಸನಗಳನ್ನು ರಚಿಸಿರುವುದೇ ಅಲ್ಲದೆ, `ರೇಡಿಯೋ ಡಾಕ್ಟರ್‌’ ಆರೋಗ್ಯ ಕಾರ್ಯಕ್ರಮಕ್ಕೆ ಕಳೆದ 8 ವರ್ಷಗಳಿಂದ ಸಂಪನ್ಮೂಲ ವ್ಯಕ್ತಿಯಾಗಿ ದುಡಿಯುತ್ತಿದ್ದಾರೆ.

5 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಕಥೆ ಮತ್ತು ಲಲಿತ ಪ್ರಬಂಧಗಳ ಸಂಕಲನದಲ್ಲಿ ಇವರ ಬರಹ ಆಯ್ಕೆಯಾಗಿರುವುದು ಗಟ್ಟಿ ಸಾಹಿತ್ಯದ ಸಂಕೇತವಾಗಿದೆ. ದೂರದರ್ಶನದ `ಚಂದನ’ ವಾಹಿನಿಯಲ್ಲಿ ಸುಮಾರು 6 ವರ್ಷಗಳಿಗೂ ಮಿಕ್ಕಿ ವಾರ್ತಾ ವಾಚಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಒಂದು ದಶಕದಲ್ಲಿ 800ಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ. ಬಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 7ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನಗಳಲ್ಲಿ ಉಪನ್ಯಾಸ ಮಂಡಿಸಿದ ಹಿರಿಮೆ ಇವರದ್ದು.

ಸುಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಇವರ ನಿರೂಪಣೆ ಇದ್ದರೆ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಕಳೆಯಿರುತ್ತದೆ. ವಿಶಿಷ್ಟ ಪದಗಳೊಂದಿಗಿನ ಇವರ ಮಾತುಗಳು ಲೀಲಾಜಾಲವಾಗಿ ಹೊರಹೊಮ್ಮಿದಾಗ ಕೇಳುಗರಿಗೆ ಹಾಯೆನಿಸುತ್ತದೆ. ಇಡೀ ಕಾರ್ಯಕ್ರಮದಲ್ಲಿ ಶ್ರೋತೃಗಳಿಗೆ ಎಲ್ಲಿಯೂ ಆಸಕ್ತಿ ಕಡಿಮೆಯಾಗದಂತೆ ನಿರೂಪಿಸುವ ಇವರ ಶೈಲಿ ಅತ್ಯಾಕರ್ಷಕ. ಇವರು ನಿರೂಪಿಸಿದ ಕಾರ್ಯಕ್ರಮಗಳು ಒಂದೆರಡಲ್ಲ.

ಕರ್ನಾಟಕ ಸರ್ಕಾರದ ರಾಜ್ಯೋತ್ಸ ಪ್ರಶಸ್ತಿ ಪ್ರದಾನ ಸಮಾರಂಭ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಸಂಭ್ರಮದ ಕಾರ್ಯಕ್ರಮ, ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ, ಕರ್ನಾಟಕ ಶಿಲ್ಪ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸ, ಗ್ರಂಥಪಾಲಕರ ದಿನಾಚರಣೆ, ವಿಶ್ವ ನೃತ್ಯ ದಿನ, 2006ರಿಂದ 500ಕ್ಕೂ ಹೆಚ್ಚು `ಟಿವಿ ಡಾಕ್ಟರ್‌’ ಹಾಗೂ `ಆರೋಗ್ಯ ಭಾಗ್ಯ’ ಕಾರ್ಯಕ್ರಮಗಳ ನಿರೂಪಣೆ, ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದ ನೇರ ಪ್ರಸಾರದ ನಿರೂಪಣೆ, ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಡಾ. ವಸುಂಧರಾ ದೊರೆಸ್ವಾಮಿಯವರ ಗುರುವಂದನಾ ಕಾರ್ಯಕ್ರಮದಲ್ಲಿ ನಿರೂಪಣೆ, ರಾಜಭವನದಲ್ಲಿ ನಡೆದ ವಾಯುಪಡೆ ಮತ್ತು ದೂರದರ್ಶನ ಕೇಂದ್ರದ ಜಂಟಿ ಭಾಗಿತ್ವದಲ್ಲಿ `ಏರ್‌ ಶೋ’ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ನಿರೂಪಣೆ ಅದ್ಭುತ ಅನುಭವ ನೀಡಿತಂತೆ.

ವಿಶ್ವ ರೆಡ್‌ ಕ್ರಾಸ್‌ ದಿನದ ಪ್ರಯುಕ್ತ ರಾಜಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದ ನಿರೂಪಣೆ, `ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮದ ನಿರೂಪಣೆ, ಶಾಸಕರ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಸ್ತ್ರೀ ನೃತ್ಯ ರೂಪಕದಲ್ಲಿನ ನಿರೂಪಣೆ, ಆಕಾಶವಾಣಿ ಹಾಗೂ ದೂರದರ್ಶನದ ಸಹಭಾಗಿತ್ವದಲ್ಲಿ ರಾಜಭವನದಲ್ಲಿ ನಡೆದ ಯುಗಾದಿ ಸಂಭ್ರಮದಲ್ಲಿನ ನಿರೂಪಣೆ, ಆಧುನಿಕ ಕನ್ನಡ ಕವಿರತ್ನತ್ರಯರಾದ (ಬೇಂದ್ರೆ, ಕುವೆಂಪು, ಪು.ತಿ.ನ) ಕುರಿತ ನೃತ್ಯ ರೂಪಕಗಳ ನಿರೂಪಣೆ ಮತ್ತು ನಿರ್ವಹಣೆಯನ್ನು ಶಿವಮೊಗ್ಗ, ಕುಪ್ಪಳ್ಳಿ, ಬೆಂಗಳೂರು, ಭದ್ರಾವತಿ, ಮೈಸೂರು, ಚಿಕ್ಕಮಗಳೂರುಗಳಲ್ಲಿ, ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ನಿರೂಪಣೆ….. ಅಬ್ಬಾ! ಒಂದೇ ಎರಡೇ!

2001 ರಿಂದ 2006ರವರೆವಿಗೂ ದೂರದರ್ಶನದಲ್ಲಿ ವಾರ್ತಾವಾಚಕಿಯಾಗಿ ಕಾರ್ಯ ನಿರ್ವಹಿಸಿರುವರು. ನಿರರ್ಗಳಾಗಿ ಕನ್ನಡ ಮಾತನಾಡುವುದೇ ಇವರ ಒಂದು ಪ್ಲಸ್‌ ಪಾಯಿಂಟ್‌! ವಾರ್ತಾ ವಾಚಕರಾಗಿ ಆಯ್ಕೆಯಾದದ್ದೇ ಒಂದು ಖುಷಿಯ ವಿಷಯವಂತೆ. ಆದರೆ ಅವಕಾಶವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗಲಿಲ್ಲ. ಕಾರಣ, 5 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುತ್ತಿದ್ದುದೇ ಕಷ್ಟವಾಗಿದ್ದಾಗ ಎರಡನೆಯ ಮಗು ಆದದ್ದು. ಮೂರು ತಿಂಗಳ ನಂತರ ಮತ್ತೆ ನಿರೂಪಕಿಯಾಗಲು ಆಹ್ವಾನ ಬಂದಾಗ ಇಲ್ಲವೆನ್ನಲಾಗದೆ ಒಪ್ಪಿಕೊಂಡರು.

ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನಿರೂಪಣೆ ಮಾಡುತ್ತಾ, ಬೆಳಗು, ಹೋ ಗೆಳಯರೇ, ಓ ಸಖಿ, ಟಿವಿ ಡಾಕ್ಟರ್‌ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತರು. ಪ್ರಸ್ತುತ ಟಿ.ವಿ ಡಾಕ್ಟರ್‌ ಕಾರ್ಯಕ್ರಮದ ನಿರೂಪಣೆ ಇವರದ್ದೇ. ಏತನ್ಮಧ್ಯೆ ತಮ್ಮ ವೃತ್ತಿ ಜೀವನಕ್ಕೊಂದು ಅರ್ಥ ಕೊಡಲು ಕ್ಲಿನಿಕ್‌ನ್ನು ತೆರೆದರು. ಮತ್ತಷ್ಟು ಬ್ಯುಸಿಯಾದರು!

ಮದುವೆಯಾದ ನಂತರ ಒಂದು ದಶಕಕ್ಕೂ ಹೆಚ್ಚಿನ ಕಾಲ ಅಮೆರಿಕ ವಾಸಿಯಾಗಿದ್ದರು. ಅಲ್ಲಿಯೂ ಸುಮ್ಮನೆ ಕೂರದೆ ವರ್ಷದ ಮೆಡಿಕಲ್ ಡಿಪ್ಲೊಮಾ ಪಡೆದರು. ತದನಂತರ ಪುಸ್ತಕ ಓದಲು ಗ್ರಂಥಾಲಯಕ್ಕೆ ಹೋಗುತ್ತಿದ್ದು, ಆಗೊಮ್ಮೆ ಮಕ್ಕಳ ಸಾಹಿತ್ಯ ಪುಸ್ತಕಗಳ ಕಡೆಗೆ ಗಮನಹರಿದದ್ದೇ, ಮಕ್ಕಳ ಸಾಹಿತ್ಯಕ್ಕೆ ಕೈ ಹಾಕಿದರು. ಇವರ ಸಾಹಿತ್ಯ ಕ್ಷೇತ್ರದ ಮತ್ತೊಂದು ಕವಲೊಡೆಯಿತು. ಮಕ್ಕಳ ದಿನದಂದು ತಿಂಗಳಿಗೊಂದು ಕಾರ್ಯಕ್ರಮ ನಡೆಯುತ್ತಿದ್ದು, ಅದರಲ್ಲಿ ಬಹಳ ಚಟುವಟಿಕೆಯಿಂದ ಭಾಗಿಯಾಗುತ್ತಿದ್ದರು. ಲೈಬ್ರೆರಿ ವಾಲೆಂಟಿಯರ್‌ ಆಗಿ ಕಾರ್ಯ ನಿರ್ವಹಿಸಿ ಒಂದಷ್ಟು ಅನುಭವವನ್ನು ಪಡೆದುಕೊಂಡರು.

ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಕಥೆಗಳನ್ನು ಹೆಣೆಯುತ್ತಾ ಮಕ್ಕಳನ್ನು ಬೇರೆಯೇ ಪ್ರಪಂಚಕ್ಕೆ ಒಯ್ಯುವ ಇವರ ಬರವಣಿಗೆಯ ಶೈಲಿಗೆ ಮಕ್ಕಳು ಫಿದಾ! ಇಷ್ಟೆಲ್ಲಾ ಚಟುವಟಿಕೆಗಳ ನಡುವೆ ಇವರಿಗೊಂದು ನೋವಿನ ಸುದ್ದಿ ಭಾರತದಿಂದ ಬಂದಿತು. ಅದೆಂದರೆ ಪತಿಯ ಹಿರಿಯ ಸೋದರ ಅಕಾಲಿಕ ಮರಣಕ್ಕೀಡಾದದ್ದು. ಅತ್ತೆಮಾವರಿಗಿದ್ದ ಇಬ್ಬರು ಮಕ್ಕಳ ಪೈಕಿ ಒಬ್ಬರು ತೀರಿಕೊಂಡಾಗ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಭಾರತಕ್ಕೆ ಬಂದು ನೆಲೆಸಿದರು. `ಪರದೇಶ ಬಿಟ್ಟು ಬರುವಾಗ ಬೇಸರವೆನಿಸಲಿಲ್ಲವೇ?’ ಎಂದಿದ್ದಕ್ಕೆ `ಖಂಡಿತಾ ಬರಲಿಲ್ಲ’ ಎಂದರು. `ನಮ್ಮ ದೇಶ, ನಮ್ಮ ಜನ, ನಮ್ಮ ಹೆಮ್ಮೆ,’ ಎಂದದ್ದು ಅವರ ದೇಶಪ್ರೇಮದ ಪ್ರತೀಕ. ಬಾಲ್ಯದಲ್ಲಿ ಎಲ್ಲಾ ತಾಯಂದಿರೂ ತಮ್ಮ ಮಕ್ಕಳನ್ನು ಸಂಗೀತ ನೃತ್ಯ ತರಗತಿಗಳಿಗೆ ಸೇರಿಸುವಂತೆ ಇವರನ್ನೂ ಸೇರಿಸಿದರು. ಮುಂದೊಂದು ದಿನ ಆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಾರೆಂದು ಸಾಮಾನ್ಯವಾಗಿ ಯಾರೂ ಎಣಿಸಿರುವುದಿಲ್ಲ. ಆಸಕ್ತಿ, ಸತತ ಅಭ್ಯಾಸಗಳೇ ಇವರ ಇಂದಿನ ಈ ಏಳಿಗೆಗೆ ಕಾರಣ. ಕರ್ನಾಟಕ ಕಲಾ ತಿಲಕ ಡಾ. ವಸುಂಧರಾ ದೊರೆಸ್ವಾಮಿಯವರ ಶಿಷ್ಯೆಯಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನವನ್ನು ಸತತವಾಗಿ 3 ವರ್ಷ ಪಡೆದಿರುವರು. ಭರತನಾಟ್ಯದಲ್ಲಿ ದೂರದರ್ಶನದ ಗ್ರೇಡೆಡ್‌ ಕಲಾವಿದೆ ಮತ್ತು ವಿಜಯ ಕಲಾನಿಕೇತನದ ನಿರ್ದೇಶಕಿ.

ಕರ್ನಾಟಕ ಸೆಕೆಂಡರಿ ಬೋರ್ಡ್‌ ನಡೆಸುವ ನೃತ್ಯ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸಿರುವರು. ಕನ್ನಡ ಕಾರ್ಯವನ್ನಾಧರಿಸಿದ `ಪೂರ್ವ ಕವಿ ನಮನ’ ಮತ್ತು `ನರಸಿಂಹ ನಮನ ನೃತ್ಯ’ ನಿರ್ಮಾಣ ಮತ್ತು ಸಂಶೋಧನೆಗಾಗಿ ಕೇಂದ್ರ ಸರ್ಕಾರದಿಂದ ವೈಯಕ್ತಿಕ ಅನುದಾನ ಪಡೆದಿದ್ದಾರೆ. ಭರತನಾಟ್ಯದಲ್ಲಿ ನೃತ್ಯ ಬಂಧ ಜಾಳಿಗಳ ಕುರಿತಾದಂತಹ ಸಂಶೋಧನೆ ನಡೆಸಲು 2014ನೇ ಸಾಲಿನ ಕೇಂದ್ರ ಸರ್ಕಾರ ಯುವ ಸಂಶೋಧಕರಿಗೆ ನೀಡುವ ಫೆಲೋಶಿಪ್‌ ಪಡೆದ ಭಾರತದ ಕೇವಲ 5 ಕಲಾವಿದರಲ್ಲಿ ಇವರೂ ಒಬ್ಬರಾದದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂತಹ ಬಹುಮುಖ ಪ್ರತಿಭೆಗೆ ಸಂದ ಗೌರವ ಪುರಸ್ಕಾರಗಳೋ ಅಪಾರ. ಅವುಗಳಲ್ಲಿ ಕೆಲವು :

ಸೇಡಂನ ಅಮ್ಮ ಪ್ರಶಸ್ತಿ, ಧಾರವಾಡದ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗೆಯ ಕರ್ನಾಟಕ ಸಂಘದ ಹಾ.ಮಾ. ನಾಯಕ್‌ ಹೆಸರಿನ ಪುಸ್ತಕ ಬಹುಮಾನ, ಕರ್ನಾಟಕ ಮನೋವೈದ್ಯಕೀಯ ಸಂಘದ ಡಾ. ಎಸ್‌.ಎಸ್‌. ಜಯರಾಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ  ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರಿಗೆ ಕಳೆದ ಜೂನ್‌ ತಿಂಗಳಲ್ಲಿ `ಹೊಳೆ ಬಳೆಗಳ ಹಿಂದೆ’ ಅಂಕಣ ಬರಹಗಳ ಪುಸ್ತಕಕ್ಕೆ 2018ರ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಲಭಿಸಿದೆ.

“ಮದುವೆಯಾದ ಮೇಲೆ ಹೆಣ್ಣುಮಕ್ಕಳಿಗೆ ತವರಲ್ಲಿ ದೊರೆಯುತ್ತಿದ್ದ ಹಲವಾರು ಸುಖ ಸೌಲಭ್ಯಗಳು ಹೋದ ಮನೆಯಲ್ಲಿ ಸಿಗುವುದು ಅಪರೂಪ. ಆ ನಿಟ್ಟಿನಲ್ಲಿ ನಾನು ಎಷ್ಟೋ ಪುಣ್ಯವಂತಳು. ನನ್ನ ಈ ಎಲ್ಲ ಕಾರ್ಯಗಳಿಗೆ ಅತ್ತೆಮಾವಂದಿರ ಸಂಪೂರ್ಣ ಬೆಂಬಲ ಇರುವುದು ನನ್ನ ಪುಣ್ಯ. ಪತಿದೇವರಿಗೆ ಇವುಗಳಲ್ಲೆಲ್ಲಾ ಅಂತಹ ಆಸಕ್ತಿಯೇನಿಲ್ಲ. ಆದರೆ ಅವರಿಂದ ಯಾವುದೇ ರೀತಿಯ ತೊಂದರೆಯೂ ಇಲ್ಲ! ಹಾಗಾಗಿ ಅದನ್ನೇ ಪ್ರೋತ್ಸಾಹ ಎಂದುಕೊಳ್ಳುವೆ,” ಇದು ತಮ್ಮ ಕುಟುಂಬದ ಕುರಿತು ನಗುವೊಗದಿಂದ ಹೊರಹೊಮ್ಮುವ ಮಾತುಗಳು.

ತನ್ನಲ್ಲಿರುವ ನೃತ್ಯಕಲೆಯನ್ನು ತಮ್ಮ ಮಕ್ಕಳಿಗೆ ಹೇಳಿಕೊಡುವಾಗ ಸ್ನೇಹಿತರು `ಬರೀ ನಿನ್ನ ಮಕ್ಕಳಿಗೆ ಹೇಳಿಕೊಟ್ಟರೆ ಸಾಕಾ? ನಮ್ಮ ಮಕ್ಕಳು ಏನು ಮಾಡಬೇಕು?’ ಎಂದು ಕೇಳಿದಾಗ ತಮ್ಮ ಮನೆಯಲ್ಲೇ ನೃತ್ಯ ತರಗತಿಗಳನ್ನೂ ಪ್ರಾರಂಭಿಸಿ ನಡೆಸಿಕೊಂಡು ಬರುತ್ತಿದ್ದಾರೆ. `ನೀವು ಇಷ್ಟೆಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೀರಿ. ಆದರೆ ನನ್ನದೊಂದು ಪ್ರಶ್ನೆ ಇದೆ. ಕಾಲೆಳೆಯುವವರು ನಿಮಗೂ ಇದ್ದಾರಾ?’ ಎಂದಾಗ `ಕಾಲೆಳೆಯುವವರು ಎಲ್ಲ ಕ್ಷೇತ್ರಗಳಲ್ಲೂ ಇದ್ದೇ ಇರುತ್ತಾರೆ. ನಾವು ಅದಕ್ಕೆಲ್ಲಾ ತಲೆ ಕೊಡ್ತಾ ಇರೋ ಬದಲು ಅದನ್ನೇ ಪ್ಲಸ್‌ ಪಾಯಿಂಟಾಗಿ ಮಾಡಿಕೊಂಡು ಮೇಲೆ ಬಂದು ನಮ್ಮ ಗುರಿ ಮುಟ್ಟಲು ಸಾಧ್ಯ. ಇವರ ಇಂತಹ ಗುಣಗಳೇ ಸಮಾಜದಲ್ಲಿ ನಾನು ಇಷ್ಟು ಮೇಲೇರುವಂತೆ ಮಾಡಿದ್ದು!’ ಎಂದು ಬಹಳ ಸೌಮ್ಯವಾಗೇ ಉತ್ತರಿಸಿದರು.

ಇವರ ಈ ಎಲ್ಲ ಸಾಧನೆಗಳಿಗೆ ಸೀಮೆನ್ಸ್ ಕಂಪನಿಯಲ್ಲಿ ಗ್ಲೋಬಲ್ ಆರ್ಕಿಟೆಕ್ಟ್ ಆಗಿರುವ ಪತಿ ಸಂತೋಷ್‌ ಸಿದ್ದೇಶ್ವರ್‌, ಈಗಷ್ಟೇ ನೀಟ್‌ ಪರೀಕ್ಷೆಯಲ್ಲಿ 86ನೇ ರಾಂಕ್‌ ಪಡೆದು ಬಿಎಂಸಿ ಕಾಲೇಜಿಗೆ ಸೇರಿರುವ ಮಗಳು ಫ್ಯೂಚರ್‌ ಡಾಕ್ಟರ್‌ ಮಹತಿ ಹಾಗೂ ಹೈಸ್ಕೂಲ್‌ನಲ್ಲಿ ಓದುತ್ತಿರುವ ಮಧುಮತಿಯವರ ಪ್ರೋತ್ಸಾಹ ಸ್ಛೂರ್ತಿಗಳೇ ಇವರಿಗೆ ಶ್ರೀರಕ್ಷೆ.

ಗೃಹಶೋಭಾ ಪರವಾಗಿ ಗುಡ್‌ ಲಕ್‌ ಡಾಕ್ಟ್ರೇ, ನಿಮ್ಮ ಸಾಧನೆ ಹೀಗೆ ಇನ್ನೂ ಮುಂದುವರಿಯಲಿ,  ಶುಭವಾಗಲಿ!

– ಸವಿತಾ ನಾಗೇಶ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ