ಕಳೆದ ಮೂರು ವರ್ಷಗಳಿಂದ ಕಣ್ಮರೆಯಾಗಿದ್ದ ಕೋವಿಡ್ -19 ಮತ್ತೆ ವಕ್ಕರಿಸಿಕೊಂಡಿದೆ. ಬೆಂಗಳೂರು ಸೇರಿದಂತೆ ವಿಶ್ವದಾದ್ಯಂತ ಕೋವಿಡ್ - 19 ಸೋಂಕು ಹೆಚ್ಚಳವಾಗುತ್ತಿದ್ದು. ಬೆಂಗಳೂರಿನಲ್ಲಿ ವಿವಿಧ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ 84 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು. ಕೋವಿಡ್ನಿಂದ ಮೃತಪಟ್ಟಿರುವುದು ವರದಿಯಾಗಿದೆ.
ಬೆಂಗಳೂರಿನಲ್ಲಿ 2025ನೇ ಸಾಲಿನಲ್ಲಿ ಕೋವಿಡ್ನಿಂದ ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದ್ದು, ದೇಶದಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು ರಾಜ್ಯದಲ್ಲೂ ಕೋವಿಡ್ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಕಳೆದ ವರ್ಷ 2024ನೇ ಸಾಲಿನಲ್ಲೂ ಕೋವಿಡ್ ಆತಂಕ ಎದುರಾಗಿತ್ತು.
2019ನೇ ಸಾಲಿನಲ್ಲಿ ಕೋವಿಡ್ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ಹೆಮ್ಮಾರಿಯಿಂದ ಕೋಟ್ಯಾಂತರ ಜನ ಮೃತಪಟ್ಟಿದ್ದರು. ಕಳೆದ ಆರು ವರ್ಷಗಳಿಂದಲೂ ಕೋವಿಡ್ ಹೆಮ್ಮಾರಿ ಇಡೀ ವಿಶ್ವವನ್ನೇ ಆತಂಕದಲ್ಲಿಟ್ಟಿದೆ.
ಕೋವಿಡ್ನಿಂದ ಇಲ್ಲಿಯ ವರೆಗೂ ಕರ್ನಾಟಕವೂ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಜನ ಮೃತಪಟ್ಟಿದ್ದಾರೆ. ಮೊದಲ ಮೂರು ವರ್ಷ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದಾದ ಕಳೆದ ಮೂರು ವರ್ಷಗಳಿಂದ ಕೋವಿಡ್ನ ರೂಪಾಂತರಿ ಕಾಣಿಸಿಕೊಂಡಿದ್ದರೂ. ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆದರೆ, ಈ ಬಾರಿ ಹೇಗಿದೆ ಎನ್ನುವ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ.
ಮೊದಲ ಸಾವು: ಬೆಂಗಳೂರಿನಲ್ಲಿ 84 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕು ದೃಢಪಟ್ಟು ಸಾವನ್ನಪ್ಪಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ವ್ಯಕ್ತಿಗೆ ಶನಿವಾರ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಶನಿವಾರ ಅವರನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಿಗೆ ಕೋವಿಡ್ - 19 ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮೇ 13ಕ್ಕೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮೇ 17 ರಂದು ಮೃತಪಟ್ಟಿದ್ದಾರೆ. ಅವರು ಜೀವಂತವಾಗಿದ್ದಾಗ ನಡೆಸಲಾದ ಕೋವಿಡ್ -19 ಪರೀಕ್ಷೆಯ ಫಲಿತಾಂಶಗಳು ಶನಿವಾರ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದೆ. ಇನ್ನು ಕರ್ನಾಟಕ ಆರೋಗ್ಯ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ 32 ಕೋವಿಡ್ -19 ಪ್ರಕರಣಗಳು ಸೇರಿದಂತೆ ರಾಜ್ಯದಾದ್ಯಂತ 38 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ವರದಿ ಮಾಡಿದೆ.
ರಾಜ್ಯದಲ್ಲಿ 100 ಸೋಂಕಿತರು!
ವೈರಸ್ನ ಮೇಲೆ ಪೂರ್ಣ ನಿಗಾ ವಹಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಂತೆ ರಾಜ್ಯದಾದ್ಯಂತ ದೈನಂದಿನ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು 150-200 ಕ್ಕೆ ಹೆಚ್ಚಿಸುವುದಾಗಿ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
ಭಾನುವಾರ ಒಂಬತ್ತು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗುವುದರೊಂದಿಗೆ ಕರ್ನಾಟಕದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಸುಮಾರು 100 ಆಗಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವುಗಳು ಸಂಭವಿಸದಿದ್ದರೂ, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 8.65 ರಷ್ಟಿದೆ.
ಪ್ರಸ್ತುತ ರಾಜ್ಯಾದ್ಯಂತ ಒಟ್ಟು 47 ಸಕ್ರಿಯ ಪ್ರಕರಣಗಳಲ್ಲಿ 46 ಮಂದಿ ಮನೆಯಲ್ಲಿ ಪ್ರತ್ಯೇಕವಾಗಿದ್ದರೆ, ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಆರ್ಟಿ-ಪಿಸಿಆರ್ ಸೇರಿದಂತೆ 104 ಪರೀಕ್ಷೆಗಳನ್ನು ಮಾಡಲಾಗಿದೆ.