ಒಂದು ಸುಂದರ ಸರೋವರ, ಯಾರ ಪರಿವೆಯೂ ಇಲ್ಲದೆ ನೀರಿನಲ್ಲಿ ತೇಲುವಂತೆ ಭಾಸವಾಗುವ ಎರಡು ಹಂಸಗಳು. ದಡದ ಆಚೆಗೆ ಓರ್ವ ಸುಂದರಿ, ಯಾರದ್ದೋ ನಿರೀಕ್ಷೆಯಲ್ಲಿ. ಅವಳ ಸೌಂದರ್ಯಕ್ಕೆ ಮಾರುಹೋಗಿ ಗರಿಬಿಚ್ಚಿ, ತದೇಕ ಚಿತ್ತದಿಂದ ಗಮನಿಸುವ ಮಯೂರ!…. ಇದನ್ನು ಓದುವಾಗಲೇ ಯಾವುದೋ ಲೋಕಕ್ಕೆ ಹೋದಂತಿದೆ ಅಲ್ಲವೇ? ಈ ಕಲ್ಪನೆಗಳಿಗೆಲ್ಲ ರೂಪ ಕೊಟ್ಟು ಬಣ್ಣಗಳಲ್ಲಿ ಸೆರೆಹಿಡಿದರೆ….? ಭಾವನೆಗಳನ್ನು ಎಳೆಎಳೆಯಾಗಿ ಬಿಡಿಸಿದರೆ? ನೋಡಲೆರಡು ಕಣ್ಣು ಸಾಲದು.

ತನ್ನೆಲ್ಲ ಉಸಿರನ್ನು ಧಾರೆಯೆರೆದು ಮೂಡಿಸಿದ ಚಿತ್ರ ನೋಡಿದವರಿಗೂ ಮುದ ನೀಡಿದರೆ…..ಬಹುಶಃ ಕಲಾವಿದನ ಪ್ರಯತ್ನ ಸಾರ್ಥಕ!

ವೃತ್ತಿಯಲ್ಲಿ ವೈದ್ಯೆ, ಕೊರಳಲ್ಲಿ ಸ್ಟೆತಾಸ್ಕೋಪ್‌. ಪ್ರವೃತ್ತಿ ಚಿತ್ರಕಲೆ. ಕೈಯಲ್ಲಿ ಬ್ರಶ್‌, ನಿಬ್‌, ಪೆನ್ಸಿಲ್ ಮತ್ತು ಬಣ್ಣಗಳು. ಇತ್ತ ದೈಹಿಕ ಕಾಯಿಲೆಗೆ ಮದ್ದು ನೀಡುತ್ತಲೆ ಅತ್ತ ಮನೋಲ್ಲಾಸಕ್ಕೆ ಒಂದಷ್ಟು ಚಿತ್ರಕಲೆಯ ಮೊರೆ.

ಡಾ. ರಮಾ ಶಂಕರ್‌ ವೃತ್ತಿಯಲ್ಲೂ, ಪ್ರವೃತ್ತಿಯಲ್ಲೂ ಯಶಸ್ಸು ಕಂಡ ಮಹಿಳೆ. ವೈದ್ಯ ವೃತ್ತಿಯೆಂದರೆ ಹಗಲಿರುಳೆನ್ನದೆ ಯಾವುದೇ ತುರ್ತಿಗೂ ಬೇಸರಿಸದೆ ಸೇವೆಗೆ ಸನ್ನದ್ಧರಾಗಬೇಕಾದ ಪ್ರಮೇಯ. ಹಾಗಿರುವಾಗ ಸಿಗುವ ಅಲ್ಪಸ್ವಲ್ಪ ಸಮಯದಲ್ಲೇ ಕ್ಯಾನ್ವಾಸ್‌ನಲ್ಲಿ ಕೈಯಾಡಿಸಿ ಸುಂದರ ಚಿತ್ರಗಳನ್ನು ಬಿಡಿಸಿರುವ ಜಾಣೆ. ಏಕಾಗ್ರತೆ, ಶ್ರದ್ಧೆ, ಅತಿ ಮುಖ್ಯವಾಗಿ ಸಹನೆ ಈ ಎಲ್ಲ ಗುಣಗಳೂ ಮೇಳೈಸಿದರಷ್ಟೇ ಒಳ್ಳೆಯ ಕಲಾಕೃತಿ ಮೂಡುವುದು. ಪೆನ್ಸಿಲ್ ಶೇಡಿಂಗ್‌ ಆಗಲಿ, ಸ್ಟಿಪ್ಲಿಂಗ್‌, ರೋಟರಿಂಗ್‌ ಪೆನ್‌ ನಿಬ್‌ ಬಳಸಿ ರೂಪಿಸುವ ಕೆಲಸವಾಗಲಿ, ತೈಲ ವರ್ಣ ಚಿತ್ರವೇ ಆಗಲಿ ಡಾ.ರಮಾರ ಚಿತ್ರಗಳನ್ನು ನೋಡುವಾಗ ಅದರ ಹಿಂದಿನ ಪರಿಶ್ರಮ ತಿಳಿಯುತ್ತದೆ.

ಹಾಗೆ ನೋಡಿದರೆ ನಿಯಮಿತವಾಗಿ ಯಾವುದೇ ಶಾಲೆಗೆ ಹೋಗಿ ಇವರು ಚಿತ್ರಕಲೆಯನ್ನು ಅಭ್ಯಾಸ ಮಾಡಿದವರಲ್ಲ. ಆದರೂ ಶಾಲಾ ದಿನಗಳಲ್ಲಿ ಚಿತ್ರಗಳನ್ನು ಚೆನ್ನಾಗಿ ಬಿಡಿಸುತ್ತಿದ್ದುದುಂಟು. ಅದರ ಗುರುತಾಗಿ ಹಲವಾರು ಬಹುಮಾನಗಳನ್ನು ಗಳಿಸಿದ್ದರು.  ಹಬ್ಬ ಹರಿದಿನವೆಂದರೆ ಕೊಬ್ಬರಿಯಲ್ಲಿ ಕಷ್ಟಕರವಾದ ಚಿತ್ರ ವಿನ್ಯಾಸಗಳನ್ನು ಕೆತ್ತುತ್ತಿದ್ದುದನ್ನು ಗಮನಿಸಿದ ಅವರ ತಂದೆ ಮಗಳಲ್ಲಿ ಅಡಗಿರುವ ಕಲೆ ಮತ್ತಷ್ಟು ಬೆಳಕಿಗೆ ಬರಲು ನೆರವಾದರು. ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು.

ಆಗ ಲಭ್ಯವಿದ್ದ ಪರಿಕರಗಳನ್ನು ಒದಗಿಸಿ ಕಲೆಯ ಬೆಳವಣಿಗೆಗೆ ಕಾರಣರಾದರು. ಮುಂದೆ ಕಾಲೇಜು ಸೇರಿದ ಮೇಲೆ ಚಿತ್ರಕಲೆ ತಾತ್ಕಾಲಿಕವಾಗಿ ತೆರೆಮರೆಯಾಯಿತು. ಆಗಾಗ್ಗೆ ಮೆಡಿಕಲ್ ರೆಕಾರ್ಡ್ಸ್ ಬರೆಯುವಾಗ ಚಿತ್ರಕಲೆಯ ಛಾಯೆ ಇಣುಕುತ್ತಿತ್ತು. ಆಗ, ಗೆಳೆಯರು ತಮ್ಮ ರೆಕಾರ್ಡ್‌ಗೆ ಇವರ ಸಹಾಯ ಬಯಸಿದ್ದುಂಟು ಎಂದು ಈಗಲೂ ನೆನೆದು ಸಂಭ್ರಮಿಸುತ್ತಾರೆ.

ಓದಿನ ನಂತರ ಮದುವೆ, ಸಂಸಾರದ ರಭಸದಲ್ಲಿ ಚಿತ್ರಕಲೆ ಸಂಪೂರ್ಣ ಮರೆತೇ ಹೋದರೂ, ಚಿತ್ರಕಲೆಯ ಬಗ್ಗೆ ಮಗಳ ಆಸಕ್ತಿ  ಗಮನಿಸಿ ಒಬ್ಬ ಗುರುವಿನ ಬಳಿ ಕಲಿಸುವ ಆಶಯದಲ್ಲಿ ಮುನ್ನಡೆದು ಕೊನೆಗೆ ಮಗಳ ಜೊತೆಗೆ ತಾವು ಚಿತ್ರಕಲೆಯ ಸ.ಪ.ಸ. ಕಲಿತರು. ಎರಡು ವರ್ಷದ ನಂತರ ಮಗಳು ಓದಿಗೆ ಗಮನ ಕೊಡಲೋಸುಗ ಚಿತ್ರಕಲಾ ಕಲಿಕೆಗೆ ಗುಡ್‌ಬೈ ಹೇಳಿದರೂ, ಇವರು ಅದನ್ನು ಮುಂದುವರಿಸಿದರು. ಅದರ ಫಲವೇ ಸಾಕಷ್ಟು ಕಲಾ ಪ್ರದರ್ಶನಗಳು. ವೆಂಕಟಪ್ಪ ಆರ್ಟ್‌ ಗ್ಯಾಲರಿ, ಚಿತ್ರಕಲಾ ಪರಿಷತ್ತು, ಇಂಡಿಯನ್‌ ಮೆಡಿಕಲ್ ಅಸೋಸಿಯೇಷನ್‌ ಇತ್ಯಾದಿ ಹಲವಾರು ಸಂಘ ಸಂಸ್ಥೆಗಳಲ್ಲಿ ಇವರ ಕಲಾ ಪ್ರದರ್ಶನಗಳು ನಡೆದವು. ಚಿತ್ರಕಲಾ ಪರಿಷತ್ತಿನಲ್ಲಿ ಇವರ ಸೋಲೋ ಪ್ರದರ್ಶನವನ್ನು ಪ್ರಖ್ಯಾತ ಕಲಾವಿದರಾದ ಬಿ.ಕೆ.ಎಸ್‌. ವರ್ಮರವರಿಂದ ಉದ್ಘಾಟನೆಗೊಂಡು ಕಲಾರಸಿಕರಿಂದ ಒಳ್ಳೆಯ ಪ್ರಶಂಸೆಗೆ ಪಾತ್ರರಾದರು. ಮತ್ತೊಂದು ಸೋಲೋ ಪ್ರದರ್ಶನ ಮೈಸೂರಿನ ಸೈಲೆಂಟ್‌ ಶೋರ್ಸ್‌ ರೆಸಾರ್ಟ್‌ನಲ್ಲಿ ನಡೆದವು. ಕರ್ನಾಟಕ ಸರ್ಕಾರದ ಕಂದಾಯ ವಾರ್ತೆ 2011ರ ಕ್ಯಾಲೆಂಡರ್‌ನಲ್ಲಿ ಇವರ ಎರಡು ಪೇಂಟಿಂಗ್‌ಗಳನ್ನೂ ಬಳಸಿಕೊಳ್ಳಲಾಗಿದೆ.

ಎಂ.ಸಿ. ಅಕಾಡೆಮಿ ಆಫ್‌ ಆರ್ಟ್‌ ಅಂಡ್‌ ಡಿಸೈನ್‌, ಬೆಂಗಳೂರು ಸಂಸ್ಥೆಯಿಂದ ಉತ್ತಮ ಶ್ರೇಣಿಯಲ್ಲಿ ಡಿಪ್ಲೋಮಾ ಪಡೆದ ನಂತರ ತಮ್ಮ ಕಲಾಭ್ಯಾಸವನ್ನು ಮಾಣಿಕಲೆ ಪಾಟೀಲ್ ‌ಅವರಲ್ಲಿ ಮುಂದುವರಿಸುತ್ತಿದ್ದಾರೆ.

“ನನ್ನೆಲ್ಲ ಯಶಸ್ಸಿನ ಹಿಂದ ಪತಿ ಡಾ. ಶಂಕರ್‌ ಮತ್ತು ಕುಟುಂಬದ ತುಂಬು ಉತ್ತೇಜನ ಪ್ರೋತ್ಸಾಹ ಇದೆ,” ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

“ಬಣ್ಣಾ ನನ್ನ ಒಲವಿನ ಬಣ್ಣಾ…. ನನ್ನ ಫೇವರಿಟ್‌ ಹಾಡುಗಳಲ್ಲಿ ಒಂದು,” ಎಂದು ಗುನುಗುವ ಡಾ. ರಮಾ, “ಎಷ್ಟೇ ಬೇಸರ, ಆಲಸ್ಯವಾದರೂ ಬಣ್ಣಗಳ ಜೊತೆ ಸಂವಹನ ಶುರುವಾದರೆ ಸಾಕು ಮನಸ್ಸು ಪ್ರಫುಲ್ಲವಾಗುತ್ತದೆ,” ಎನ್ನುತ್ತಾರೆ.

ಚಿತ್ರಕಲೆಯಲ್ಲಿ ಅಪಾರ ಶ್ರದ್ಧೆ ಭಕ್ತಿಯಳ್ಳ ಕಲಾವಿದೆ. ಅದಕ್ಕೆ ಸಾಕ್ಷಿಯಾಗಿ ಅವರು ಬಿಡಿಸಿದ ನೂರಾರು ಚಿತ್ರಗಳು ಕಲಾರಸಿಕರ ಮನ ಗೆದ್ದಿವೆ.

ವೆಬ್‌ಸೈಟ್‌ನಲ್ಲಿ ಇವರ ಮತ್ತಷ್ಟು ಹೆಚ್ಚಿನ ಚಿತ್ರಕಲೆಗಳನ್ನು ನೋಡಬಹುದು.

– ಕೆ.ವಿ. ರಾಜಲಕ್ಷ್ಮಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ