ಆಟವಾಡುತ್ತಿದ್ದ ಹನ್ನೊಂದು ತಿಂಗಳ ಮಗು ನೀರು ತುಂಬಿದ್ದ ಬಕೆಟ್ ಬಿದ್ದು ಮೃತಪಟ್ಟಿದ್ದು, ಮಗನ ದುರಂತಕ್ಕೆ ತಾನೇ ಕಾರಣ ಎಂದು ನೊಂದು ತಾಯಿ ಕೂಡ ಪ್ರಾಣ ಕಳೆದುಕೊಂಡ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಪ್ರತಿಭಾ ವಾಲಿ (29) ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ಮಹಂತೇಶ್ ಪೀಣ್ಯದಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರತಿಭಾ ಸಿಲ್ಕ್ ಬೋರ್ಡ್ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿಭಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.
ಬುಧವಾರ ಬೆಳಗ್ಗೆ 9 ಗಂಟೆಗೆ ಮಹಂತೇಶ್ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನದ ಪ್ರತಿಭಾ ಅವರು ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಟೆರೇಸ್ಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಆಟವಾಡುತ್ತಿದ್ದ 11 ತಿಂಗಳ ಮಗು ಅಗಸ್ತ್ಯ, ತೆವಳುತ್ತಾ ಬಚ್ಚಲು ಮನೆಗೆ ಹೋಗಿದ್ದಾನೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್ನಲ್ಲಿ ಮಗು ಮುಳುಗಿದ್ದಾನೆ..
ಟೆರೇಸ್ನಿಂದ ವಾಪಸ್ ಬಂದ ಪ್ರತಿಭಾ ಅವರಿಗೆ ಮಗು ಬಕೆಟ್ನಲ್ಲಿ ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ. ಮಗನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದೆ ಆಘಾತಗೊಂಡ ಅವರು, ಮಗನಿಲ್ಲದ ಮೇಲೆ ತಾನೂ ಬದುಕಬಾರದೆಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಮೊದಲು 15 ಡೋಲೋ ಮಾತ್ರೆಗಳನ್ನು ಸೇವಿಸಿರುವ ಪ್ರತಿಭಾ, ನಂತರ ಚಾಕುವಿನಿಂದ ಎಡಗೈ ಮುಂಗೈ ಕತ್ತರಿಸಿಕೊಂಡಿದ್ದಾರೆ. ಆಗಲೂ ಪ್ರಾಣ ಹೋಗದಿದ್ದಾಗ, ಅಂತಿಮವಾಗಿ ನೇಣು ಬಿಗಿದುಕೊಂಡು ಆತ್ತಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 6.30ರ ಸುಮಾರಿಗೆ ಮಹಂತೇಶ್ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಫೋನ್ ಮಾಡಿದರೂ ಪ್ರತಿಭಾ ಸ್ವೀಕರಿಸಲಿಲ್ಲ. ಅನುಮಾನಗೊಂಡ ಅವರು ಕಿಟಕಿಯ ಮೂಲಕ ಕೈಹಾಕಿ ಒಳಗಿದ್ದ ಕೀ ತೆಗೆದು ಬಾಗಿಲು ತೆರೆದು ನೋಡಿದ್ದಾರೆ. ರೂಂನಲ್ಲಿ ಹೆಂಡತಿ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿದ್ದರೆ, ಅಗಸ್ತ್ಯ ಹಾಸಿಗೆಯ ಮೇಲೆ ಮಲಗಿರುವ ಸ್ಥಿತಿಯಲ್ಲಿ ಶವವಾಗಿದ್ದ.
ನನ್ನ ಮಗು ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮಗನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿ ಎಂದು ಪ್ರತಿಭಾ ಪತ್ರವೊಂದನ್ನು ಬರೆದಿದ್ದಾರೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





