ಈ ಹಿಂದೆ ಬೆಂಗಳೂರು ಎಂದ ತಕ್ಷಣ ಜನರ ಮನಸ್ಸಿನಲ್ಲಿ ಥಟ್ ಅಂತಾ ಮೂಡುತ್ತಿದ್ದದ್ದೇ ಉದ್ಯಾನ ನಗರಿ. ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತಹ ಪ್ರಸಿದ್ದ ಉದ್ಯಾನವನವಲ್ಲದೇ, ನೂರಾರು ಉದ್ಯಾನವನಗಳು ಇದ್ದ ಕಾರಣ, ನಗರ ಎಷ್ಟೇ ಬೆಳೆದರೂ ಹಚ್ಚ ಹಸುರಾಗಿಯೇ ಇದ್ದು ವರ್ಷದ 365 ದಿನಗಳು ಅತ್ಯಂತ ಪ್ರಶಾಂತ ವಾತಾವರಣ ಇರುವ ಕಾರಣ ಪ್ರಪಂಚದಾದ್ಯಂತ ಇರುವ ಜನರೆಲ್ಲರೂ ಬೆಂಗಳೂರಿಗೆ ಬಂದು ವಾಸಿಸಲು ಇಚ್ಚಿಸುವ ಕಾರಣ ಇಂದು ಬೆಂಗಳೂರು ಜಗತ್ತಿನ ಮೊದಲ 10 ನಗರಗಳಲ್ಲಿ ಒಂದಾಗಿದ್ದು, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಸರಿಗೂ ಪಾತ್ರವಾಗಿದೆಯಲ್ಲದೇ, ಅತ್ಯಂತ ಹೆಚ್ಚಿನ ಉಪಹಾರಗೃಹಗಳು ಇರುವ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಬೆಂಗಳೂರಿನ ಉಪಹಾರಗೃಹ ಎಂಬ ತಕ್ಷಣವೇ ನೆನಪಾಗುವುದೇ ಎಲ್ಲರ ನೆಚ್ಚಿನ ಎಂಟಿಆರ್ ಹೋಟೆಲ್ ಆಗಿದ್ದು ಆ ಉಪಹಾರಗೃಹದ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಉಡುಪಿಯ ಅಷ್ಟ ಮಠದ ಭೋಜನ ಶಾಲೆಯಲ್ಲಿ ಪಾಕ ತಜ್ಞರಾಗಿದ್ದವರು ಅಥವಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮತ್ತು ದೇವರ ಪ್ರಸಾದವನ್ನು ತಯಾರಿಸುತ್ತಿದ್ದ ಶಿವಳ್ಳಿ ಬ್ರಾಹ್ಮಣರು ಮತ್ತು ಮಾಧ್ವ ಸಂಪ್ರದಾಯದ ಬ್ರಾಹ್ಮಣರು ಕಾಲ ಕ್ರಮೇಣವಾಗಿ ಉದರ ನಿಮಿತ್ತವಾಗಿ ಬೇರೆ ಬೇರೆ ಉದ್ಯೋಗಗಳನ್ನು ಅರಸಿಕೊಳ್ಳಲು ನಿರ್ಧರಿಸಿದಾಗ ಅವರಿಗೆ ಥಟ್ ಅಂತಾ ಹೊಳೆದದ್ದೇ ತಮ್ಮ ಪಾರಂಪರಿಕೆ ಪಾಕ ಶೈಲಿ. ಹಾಗಾಗಿ ಅದನ್ನೇ ಮುಂದಿಟ್ಟುಕೊಂಡು ದೇಶ ವಿದೇಶಗಳಲ್ಲಿ ನಾನಾ ಹೆಸರಿನಲ್ಲಿ ಉಡುಪಿ ಹೋಟೆಲ್ ಗಳನ್ನು ಆರಂಭಿಸಿ ದೇವಾಲಯದ ಪಾಕಶಾಲೆಯ ಸಾತ್ವಿಕ ರುಚಿ ಮತ್ತು ಅಭ್ಯಾಸಗಳ ಜೊತೆ ಉಡುಪಿಯ ತಿಂಡಿಗಳನ್ನು ಮತ್ತು ಆಹಾರ ಪದ್ದತಿಯನ್ನು ಎಲ್ಲರಿಗೂ ಪರಿಚಯಿಸಿ ಹೋಟೆಲ್ ಎಂದರೆ ಉಡುಪಿ ಹೋಟೆಲ್ ಎಂಬ ಅನ್ವರ್ಥನಾಮ ಬರುವಂತೆ ಮಾಡಿದ್ದಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗದಾತರಾಗಿರುವುದು ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಅಂದಿಗೂ ಇಂದಿಗೂ ಮತ್ತು ಮಂದೆಯೂ ಸಹಾ, ಹೋಟೆಲ್ಲುಗಳ ನಾಮಫಲಕಗಳ ಮೇಲೆ ಉಡುಪಿ ಎಂಬ ಹೆಸರಿದ್ದರೆ ಸಾಕು ಸಕ್ಕರೆಗೆ ಇರುವೆಗಳು ಮುತ್ತುವಂತೆ ಜನರು ಹೋಟೆಲ್ಲಿಗೆ ಪ್ರವೇಶಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಇಂದು ಉಡುಪಿಯಲ್ಲದವರು ಸಹಾ ಉಡುಪಿ ಹೋಟೆಲ್ ಎಂಬ ತಮ್ಮ ಬ್ರಾಂಡ್ ಬಳಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಇದೇ ರೀತಿ ಉಡುಪಿಯ ಬಳಿಯ ಪಾರಂಪಲ್ಲಿ ಎಂಬ ಊರಿನವರಾದ ಶ್ರೀ ಯಜ್ಞನಾರಾಯಣ ಮೈಯ್ಯ ಮತ್ತು ಅವರ ಸಹೋದರರು ಬೆಂಗಳೂರಿನ ಲಾಲ್ ಬಾಗ್ ಇರುವ ಮಾವಳ್ಳಿ ಎಂಬ ಪ್ರದೇಶದಲ್ಲಿ 1924ರಲ್ಲಿ ಅದೇ ಊರಿನ ಹೆಸರನ್ನೇ ಬಳಸಿಕೊಂಡು ಮಾವಳ್ಳಿ ಟಿಫನ್ ರೂಮ್ ಎಂಬ ಹೆಸರಿನಲ್ಲಿ ಸಣ್ಣ ಪ್ರಮಾಣದ ಉಪಹಾರಗೃಹವನ್ನು ಆರಂಭಿಸಿ, ಪಾರಂಪರಾಗತ ದಕ್ಷಿಣ ಕನ್ನಡ ತಿನಿಸುಗಳನ್ನು ಉಣಬಡಿಸಲು ಆರಂಭಿಸಿದರು. ಹೋಟೆಲ್ಲಿನ ಶುಚಿ ಮತ್ತು ರುಚಿಯ ಜೊತೆಗೆ ಅವರ ಆದರ ಆತಿಥ್ಯಗಳಿಂದಾಗಿಯೇ ಕೆಲವೇ ಕಲವು ವರ್ಷಗಳಲ್ಲಿ ಆ ಹೋಟೆಲ್ ಜನಪ್ರಿಯವಾಗಿ ಎಲ್ಲರ ಬಾಯಿಯಲ್ಲಿಯೂ ಎಂಟಿಆರ್ ವಿಶ್ವ ವಿಖ್ಯಾತವಾಯಿತು.

ಜನರು ಕೊಡುವ ಬೆಲೆಗೆ ಸ್ವಲ್ಪವೂ ಕುಂದಾಗದಂತೆ ಆಹಾರದ ಗುಣಮಟ್ಟಕ್ಕೆ ಒತ್ತು ಕೊಟ್ಟು ಅಪ್ಪಟ್ಟ ದೇಸೀ ಬೆಣ್ಣೆ ಮತ್ತು ತುಪ್ಪ ಬಳೆಸುವ ಮೂಲಕ ಯಾವುದೇ ರೀತಿಯ ಕಲಬೆರಕೆ ಇಲ್ಲದ ಪರಿಶುದ್ಧವಾದ ಶುದ್ಧವಾದ ಸಾಮಾನುಗಳನ್ನು ಬಳೆಸಿ ತಯಾರಿಸುತ್ತಿದ್ದ ಆಹಾರ ಬಲು ಬೇಗನೆ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಲಾಲ್ ಬಾಗಿನಲ್ಲಿ ಬೆಳಗಿನ ವಾಕಿಂಗ್ ಮುಗಿಸಿ ಕೊಂಡು ಎಂಟಿಆರ್ ನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫೀ ಮತ್ತು ದೋಸೆ ತಿನ್ನದೇ ಹೋದಲ್ಲಿ ದಿನವೇ ಆರಂಭವಾಗದು ಎನ್ನುವಂತ ಪರಿಸ್ಥಿತಿ ಅಲ್ಲಿನ ಸುತ್ತಮುತ್ತಲಿನವರಿಎ ಆದ ಕಾರಣ ಅಂದಿನಿಂದ ಇಂದಿನವರೆಗೂ ಅಲ್ಲಿ ತಿಂಡಿಗಳನ್ನು ತಿನ್ನಲು ಜನ ಸದಾಕಾಲವೂ ಸಾಲು ಸಾಲು ನಿಲ್ಲುವುದು ಆ ಉಪಹಾರಗೃಹದ ಜನಪ್ರಿಯತೆ ಹಿಡಿದ ಕೈಗನ್ನಡಿಯಾಗಿದೆ.





