“ಮಕ್ಕಳು ಟೀನೇಜ್‌ಗೆ ಬಂದಾಗ ಅವರು ಫ್ರೆಂಡ್ಸ್ ಆಗಿಬಿಡ್ತಾರೆ. ಕಾಲ ಸೂಕ್ಷ್ಮವಾಗಿರೋದ್ರಿಂದ ಪೋಷಕರ ಜವಾಬ್ದಾರಿ ಅದಕ್ಕೆ ತಕ್ಕಂತಿರಬೇಕು. ಅವರನ್ನು ತಾರಾಮಕ್ಕಳಂತೆ ಯಾವತ್ತೂ ಬೆಳೆಸಿಲ್ಲ. ಸಿಂಪಲ್ಲಾಗಿರೋದೇ ಸುಂದರ!”

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಸರುವಾಸಿ ಕುಟುಂಬವೆಂದರೆ ಶಂಕರ್‌ಸಿಂಗ್‌ ಮತ್ತು ಪ್ರತಿಮಾದೇವಿಯವರದು. ಅವರ ಮಕ್ಕಳಾದ ರಾಜೇಂದ್ರಸಿಂಗ್‌ ಬಾಬು ಖ್ಯಾತ ನಿರ್ದೇಶಕರು. ಮಗಳಾದ ವಿಜಯಲಕ್ಷ್ಮಿ  ಸಿಂಗ್‌ ಕೂಡಾ ನಟಿ, ನಿರ್ದೇಶಕಿಯಾಗಿ `ರಾಜಕುಮಾರ’ ಚಿತ್ರದಲ್ಲಿ ಪುನೀತ್‌ ಅಮ್ಮನಾಗಿ ನಟಿಸಿದ್ದಾರೆ. ಸಿನಿಮಾ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವ ವಿಜಯಲಕ್ಷ್ಮಿ ಸಿಂಗ್‌ ನಟಿಯಾಗಿ, ವಸ್ತ್ರ ವಿನ್ಯಾಸಕಿಯಾಗಿ, ನಿರ್ಮಾಪಕಿಯಾಗಿ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ನಟ ಜೈಜಗದೀಶ್‌ ಈಕೆಯ ಪತಿ. ಈ ತಾರಾ ದಂಪತಿಯ ಮೂರು ಹೆಣ್ಣುಮಕ್ಕಳು ಕೂಡಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಮ್ಮನ ನಿರ್ದೇಶನದಲ್ಲಿ ಮಕ್ಕಳು ನಟಿಸುತ್ತಿರುವುದು ಅಪರೂಪದ ಸಂಗತಿ.

ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿನಾ?

ನಾವು ಬೆಳೆದಿದ್ದು, ಕಂಡಿದ್ದು ಎಲ್ಲ ಅದೇ ವಾತಾವರಣದಲ್ಲಿ. ಸಿನಿಮಾ ಬಗ್ಗೆ ತುಂಬಾನೆ ಆಸಕ್ತಿ. ಕ್ಯಾಮೆರಾ ಹಿಂದೆ ನಿಂತು ಮಾಡುವ ಕೆಲಸಗಳು ಬೇಕಾದಷ್ಟಿರುತ್ತವೆ. ನಾನು ವಸ್ತ್ರ ವಿನ್ಯಾಸಕಿಯಾಗಿ ಅಣ್ಣ ಬಾಬು ಅವರ ಚಿತ್ರಗಳಿಗೆ ಕೆಲಸ ಮಾಡಿದ್ದೆ. ಒಬ್ಬ ಟೆಕ್ನೀಷಿಯನ್‌ ಆಗಿ ಏನೆಲ್ಲ ಕಲಿಯಬೇಕೋ ಅದೆಲ್ಲವನ್ನೂ ಕಲಿತಿದ್ದೆ. ಇದು ನನ್ನ ನಿರಂತರ ಆಸೆಯಾಗಿತ್ತು. ನಾನು ಮದುವೆಯಾದರೆ ಸಿನಿಮಾ ಹಿನ್ನೆಲೆಯವರನ್ನು ಆಗಬೇಕು. ಬರೀ ಗೃಹಿಣಿಯಾಗಿ ಬದುಕು ಸವೆಯಬಾರದು, ಅದರ ಜೊತೆಗೆ ಏನಾದರೂ ಸಾಧಿಸುವಂಥ ಮಹಿಳೆಯಾಗಿ ಯಶಸ್ವಿಯಾಗಬೇಕೆಂಬುದೇ ನನ್ನ ಉದ್ದೇಶವಾಗಿತ್ತು.

ಹಾಗೆಯೇ ಆಯಿತಲ್ವಾ…..?

ಹೌದು, ಜೈಜಗದೀಶ್‌ ಮತ್ತು ನನ್ನ ಸ್ನೇಹ ಪ್ರೀತಿಗೆ ತಿರುಗಿ ನಾವಿಬ್ಬರೂ ಸತಿಪತಿಯಾಗಿ ನನ್ನ ಕನಸುಗಳಿಗೆ ಪ್ರೋತ್ಸಾಹಕೊಟ್ಟರು. ನಾನು ಪತ್ನಿಯಾಗಿ, ಗೃಹಿಣಿಯಾಗಿ ಮನೆ ತೂಗಿಸಿಕೊಂಡು ಹೋಗುವುದರ ಜೊತೆಗೆ ಒಬ್ಬ ನಟಿಯಾಗಿ, ನಿರ್ದೇಶಕಿ, ನಿರ್ಮಾಪಕಿಯಾಗಿ ಅಷ್ಟೇ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದೇನೆ. ಕುಟುಂಬದವರ ಸಹಕಾರವಿತ್ತು. ಇಂದಿಗೂ ನನ್ನ ತಾಯಿ ನನ್ನ ಜೊತೆಗಿದ್ದಾರೆ. ಜಗದೀಶ್‌ ಪ್ರೋತ್ಸಾಹ ಮೊದಲಿನಿಂದಲೂ ಇದೆ.

ಸಿನಿಮಾ ನಿರ್ದೇಶಕಿಯಾಗಿ ಹೇಗನಿಸುತ್ತೆ?

ನಾವು ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಯಾವತ್ತೂ ಶ್ರಮ ಅನಿಸೋದಿಲ್ಲ. ನಿರ್ದೇಶನ ನನ್ನ ಪ್ಯಾಷನ್‌. ಒಂದು ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯುತ್ತಾ ಕುಳಿತಾಗಲಷ್ಟೇ ನಾನು ನಾನಾಗಿರುತ್ತೇನೆ. ನನಗೆ ತುಂಬಾ ಖುಷಿ ಕೊಡುವ ಕೆಲಸವೆಂದರೆ ಸಿನಿಮಾ ಮೇಕಿಂಗ್‌. `ಮಳೆ ಬರಲಿ ಮಂಜು ಇರಲಿ, ವಾರೆವ್ಹಾ, ಈ ಬಂಧನ’ ಮುಂತಾದ ಚಿತ್ರಗಳು ಅತ್ಯಂತ ತೃಪ್ತಿ ಕೊಟ್ಟಿವೆ.

ಅಮ್ಮನ ಜವಾಬ್ದಾರಿ ತುಂಬಾನೇ ದೊಡ್ಡದು.

ಕೆಲಸದ ಜೊತೆಗೆ ಹೇಗೆ ನಿಭಾಯಿಸಿದ್ರಿ?

ಸಿನಿಮಾ ಪ್ರೊಡಕ್ಷನ್‌ ಮಾಡುವಾಗಲೇ ನನ್ನ ಮೊದಲ ಮಗಳ ಜನನವಾಯ್ತು. ಅದಾದ ಒಂದೂವರೆ ವರ್ಷದೊಳಗೆ ಅವಳಿ ಜವಳಿ ಮಕ್ಕಳ ಜನನ ವೈಸಿರಿ, ವೈನಿಧಿ. ಎಲ್ಲ ಪುಟ್ಟಪುಟ್ಟ ಕಂದಮ್ಮಗಳು. ಆಗ ನಾನು ಒಂದೈದು ವರ್ಷ ನನ್ನ ಎಲ್ಲ ಕೆಲಸಗಳಿಂದ ವಿರಾಮ ಪಡೆದು ಮಕ್ಕಳಿಗಾಗಿ ಸಮಯ ನೀಡಿದೆ. ಸ್ವಲ್ಪ ಬಿಡುವು ಸಿಕ್ಕರೆ ಮನೆಯಲ್ಲೇ ಕುಳಿತು ಸಿನಿಮಾ ಸ್ಕ್ರಿಪ್ಟ್ ಕೆಲಸ ಮಾಡ್ತಿದ್ದೆ. ಐದಾರು ವರ್ಷ ನಾನು ಸೋಶಿಯಲ್ ಲೈಫ್‌ನಿಂದ ದೂರ ಉಳಿದುಬಿಟ್ಟಿದ್ದೆ.  ಮಕ್ಕಳು ಟೀನೇಜ್‌ಗೆ ಬಂದಾಗ ಅವರು ಫ್ರೆಂಡ್ಸ್ ಆಗಿಬಿಡ್ತಾರೆ. ಆದರೆ ಅವರು ತಡವಾಗಿ ಬಂದರೆ ಭಯವಾಗುತ್ತೆ, ಎಲ್ಲಿದ್ದಾರೆ ಅಂತ ಫೋನ್‌ ಮಾಡಿ ವಿಚಾರಿಸಿಕೊಳ್ತೀವಿ. ಯಾವ ಫ್ರೆಂಡ್ಸ್ ಜೊತೆ ಹೋಗಿದ್ದಾರೆ ಇವೆಲ್ಲ ತುಂಬಾ ಕಾಳಜಿ ವಹಿಸುವಂಥದ್ದು. ನನ್ನ ಮೂವರು ಮಕ್ಕಳು ಎಲ್ಲೇ ಹೋಗಲಿ ಮನೆಗೆ ಬಂದ ಮೇಲೆ ಎಲ್ಲವನ್ನೂ ಹೇಳ್ತಾರೆ. ಯಾವ ವಿಷಯವನ್ನೂ ಮುಚ್ಚಿಡುವುದಿಲ್ಲ. ಕಾಲ ಸೂಕ್ಷ್ಮವಾಗಿರೋದ್ರಿಂದ ಮಕ್ಕಳು ಸ್ವಲ್ಪ ತಡವಾದರೂ ಅವರ ತಂದೆ ವಿಚಾರಿಸಲು ಶುರು ಮಾಡುತ್ತಾರೆ. ಇತ್ತೀಚೆಗೆ ಅವರು ಸಿನಿಮಾ ನಾಯಕಿಯರಾಗಿಯೂ ಬೆಳಕಿಗೆ ಬಂದಿರೋದ್ರಿಂದ ಹೆಚ್ಚು ಎಚ್ಚರ ವಹಿಸಬೇಕಿರುತ್ತೆ. ಹಾಗಂತ ಅವರನ್ನು ನಾವು ತಾರಾಮಕ್ಕಳಂತೆ ಯಾವತ್ತೂ ಬೆಳೆಸಿಲ್ಲ. ಜನರ  ಜೊತೆ ಬೆರೆಯಬೇಕು, ಆಟೋದಲ್ಲಿ ಓಡಾಡೋದು, ಕಾಲೇಜಿಗೆ ಬಸ್ಸಿನಲ್ಲೇ ಹೋಗೋದು ಎಲ್ಲ ಅಭ್ಯಾಸ ಮಾಡ್ಕೊಂಡಿದ್ದಾರೆ. `ಸಿಂಪಲ್ಲಾಗಿದ್ದುಬಿಡಿ… ಅದೇ ಸುಂದರ!’ ಅಂತ ಸದಾ ಹೇಳ್ತಿರ್ತೀನಿ. ನನ್ನ ಮಕ್ಕಳು ಹಾಗೆಯೇ ನಡೆದುಕೊಂಡು ಬರ್ತಿದ್ದಾರೆ.

ವೈಭವಿ, ವೈಸಿರಿ, ವೈನಿಧಿ ಮೂವರನ್ನೂ `ಯಾನಾ’ ಚಿತ್ರದ ಮೂಲಕ ಲಾಂಚ್‌ ಮಾಡಿದ್ದೀರಾ…. ಯಾವಾಗ ಬಿಡುಗಡೆ?

ಸಿನಿಮಾದ ಮುಕ್ಕಾಲು ಭಾಗ ಕೆಲಸ ಮುಗಿದಿದೆ. ಸದ್ಯದಲ್ಲೇ ಕಂಪ್ಲೀಟ್‌ ಆಗುತ್ತೆ. ಅವರಿಗಾಗಿ ಒಂದು ಸಿನಿಮಾ ಮಾಡೋ ಆಸೆ ಇವತ್ತು. ಮಾಡಿದೆ. ಆದರೆ ಅವರ ವಿದ್ಯಾಭ್ಯಾಸಕ್ಕೆ ಯಾವತ್ತೂ ಅಡಚಣೆಯಾಗಿಲ್ಲ. ವೈಭವಿ ಎಂ.ಎ ಮಾಡಿದ್ದಾಳೆ. ವೈಸಿರಿ, ವೈನಿಧಿ  ಎಂಜಿನಿಯರಿಂಗ್‌ ಹಾಗೂ ಬಿ.ಬಿ.ಎಂ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆದಿದ್ದಾರೆ. `ಯಾನಾ’ ಚಿತ್ರದ ಬಗ್ಗೆ ಹೇಳಬೇಕೆಂದರೆ ಚಿತ್ರೀಕರಣದ ಸಮಯದಲ್ಲಿ ನಾನು ಅಮ್ಮನಾಗಿರದೇ ಒಬ್ಬ ನಿರ್ದೇಶಕಿಯಾಗಿಯೇ ಕಾರ್ಯ ನಿರ್ವಹಿಸುತ್ತೇನೆ. ನನ್ನ  ಪಾಲಿಗೆ ಅವರು ಕಲಾವಿದರಷ್ಟೆ. ಕಲಾವಿದರ ಕುಟುಂಬದಲ್ಲಿ ಹುಟ್ಟಿರೋದ್ರಿಂದ ಅಭಿನಯ ರಕ್ತದಲ್ಲೇ ಹರಿದು ಬಂದಿದೆ. ಜನ ಹೇಗಿದೆ ಅಂತ ಹೇಳಬೇಕಷ್ಟೆ.

– ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ