ಸೈನಿಕನಾಗಿ ದೇಶ ಸೇವೆಗೆ ಟೊಂಕ ಕಟ್ಟಿ ನಿಂತಿದ್ದ ರಾಜೇಶ್, ಹಿಮಪಾತದಲ್ಲಿ ಮುಳುಗಿದಾಗ ಯಾರೋ ಅರಿಯದ ಹುಡುಗಿ ತಂಗಿಯಂತೆ ಬಂದು ಅನ್ನ, ನೀರು ಒದಗಿಸಿದ್ದಳು. ಈ ಬಾಂಧವ್ಯ ಮುಂದೆ 50 ವರ್ಷ ಕಳೆದರೂ ಇವರನ್ನು ಅಣ್ಣ ತಂಗಿಯರನ್ನಾಗಿ ಒಂದುಗೂಡಿಸಿತ್ತು. ಆ ನಂತರ ನಡೆದದ್ದು ಏನು…….?
“ಸುಶೀಲಾ…. ಸುಶೀಲಾ….”
“ಅಯ್ಯೋ ಏನಾಯಿತ್ರೀ….? ಯಾಕೆ ಅಷ್ಟೊಂದು ಜೋರಾಗಿ ಕೂಗುತ್ತಿದ್ದೀರಿ….! ಇಲ್ಲೇ ಇದ್ದೀನಿ….” ಎನ್ನುತ್ತಾ ಸೀರೆ ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಮುಂದೆ ಬಂದು ನಿಂತರು ಸುಶೀಲಾ.
ಗಂಡನ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಅತ್ತಿಂದಿತ್ತ ಓಡಾಡುತ್ತಿದ್ದ ಯಜಮಾನರ ಕೈ ಹಿಡಿದು ಕಣ್ಣಲ್ಲೇ, `ಏನು….’ ಎಂದು ಕೇಳಿದರು.
ರಾಜೇಶ್ಹೆಂಡತಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, “ಹೊಟ್ಟೆಯಲ್ಲಿ ಏನೋ ಒಂಥರಾ ಸಂಕಟವಾಗ್ತಿದೆ ಕಣೇ, ಎಲ್ಲೋ ಏನೋ ಸರಿ ಇಲ್ಲ ಅನ್ಸುತ್ತೆ….. ಯಾಕೋ ಗಾಬರಿಯಾಗ್ತಿದೆ….” ಎಂದರು.
“ಅಯ್ಯೋ ದೇವರೇ…. ಬನ್ನಿ ಇಲ್ಲಿ ಕುಳಿತುಕೊಳ್ಳಿ,” ಎನ್ನುತ್ತಾ ಗಂಡನನ್ನು ಕೂರಿಸಿ, ಆತನ ಹಣೆ ಮುಟ್ಟಿ ನೋಡುತ್ತಾ, “ಜ್ವರವಿಲ್ಲ… ತಲೆನೋವು ಏನಾದರೂ ಇದೆಯಾ…?” ಎಂದು ಕೇಳಿದರು.
ರಾಜೇಶ್ ಇಲ್ಲವೆನ್ನುವಂತೆ ಗೋಣು ಅಲುಗಾಡಿಸಿದರು.
“ಅಲ್ಲಾ ರೀ…. ಗಂಟೆ 10, ಬೆಳಗ್ಗೆಯಿಂದ ಒಂದು ಕಪ್ ಟೀ ಕುಡಿದಿದ್ದಷ್ಟೆ…. ಹೊಟ್ಟೆ ಹಸಿವಾಗಿರುತ್ತೆ, ಇಲ್ಲಾ ಗ್ಯಾಸ್ಟ್ರಿಕ್ ಆಗಿರಬೇಕು. ಅದು ಗೊತ್ತಾಗಲ್ಲ ನಿಮಗೆ. ಬನ್ನಿ ತಿಂಡಿ ತಿನ್ನಿ ಅಂತ ಆಗಲಿಂದ ಕರೀತಾ ಇದೀನಿ. ಆಮೇಲೆ ಆಮೇಲೆ ಎನ್ನುತ್ತಾ ಕೂತಿದ್ದೀರಿ,” ಎಂದರು ಸುಶೀಲಾ ತುಸು ಕೋಪದಿಂದ.
ಹೆಂಡತಿಯ ಮುಖ ನೋಡುತ್ತಾ, “ಅದೆಲ್ಲಾ ಏನೂ ಇಲ್ಲ…. ಮನಸ್ಸಿನಲ್ಲಿ ಏನೋ ನೋವು ಹೇಳಲಾಗದ ಆತಂಕ ಸುಶೀಲಾ… ನಿನಗೆ ಹೇಗೆ ಹೇಳಲಿ….?” ಎಂದರು ರಾಜೇಶ್.
“ಅಲ್ಲಾ ರೀ, ವಿನೂತನಿಗೆ ಏನಾದರೂ ಮೈ ಹುಷಾರಿಲ್ಲ ಅಂತ ಫೋನ್ ಬಂದಿತ್ತಾ……? ನಮ್ಮ ಅವಿ ಕಾಲಿಗೆ ಪೆಟ್ಟಾಗಿತ್ತಲ್ಲ ನಿನ್ನೆಯಿಂದ ಸ್ವಲ್ಪ ಯೋಚನೆ ಮಾಡಿರುತ್ತಿದ್ದೀರಿ….. ರಾಧಾ ಹೇಳಲಿಲ್ವಾ ನಿಮ್ಮ ಮೊಮ್ಮಗನ ಕಾಲು ಸರಿಯಾಗಿದೆ ಅಂತ ಮತ್ತೇಕೆ ಯೋಚನೆ….? ತಿಂಡಿ ತರ್ತೀನಿ ತಡೀರಿ,” ಎನ್ನುತ್ತಾ ಅಡುಗೆ ಮನೆಗೆ ಹೋದರು ಸುಶೀಲಾ.
ಕೈಯಲ್ಲಿ ಬಿಸಿಬಿಸಿ ದೋಸೆ ತಟ್ಟೆ ಹಿಡಿದುಕೊಂಡು ಬಂದರು. ಆಕಾಶವೇ ಕಳಚಿ ಬಿದ್ದ ಹಾಗೆ ಕುಳಿತ ಗಂಡನನ್ನು ನೋಡಿ ಏಕೋ ಸುಶೀಲಾರಿಗೆ ಒಂದು ನಿಮಿಷ ಭಯವೇ ಆಯಿತು. ಗಂಡನ ಮುಂದೆ ಇದ್ದ ಟೀಪಾಯಿ ಮೇಲೆ ತಿಂಡಿ ತಟ್ಟೆ ಇಟ್ಟು ರಾಜೇಶರ ಮುಖವನ್ನು ಬೊಗಸೆಯಲ್ಲಿ ಹಿಡಿದು, ಕಣ್ಣಲ್ಲೇ ಪ್ರೀತಿ ತುಂಬಿಕೊಂಡು, “ದೇವರು ನಮಗೆ ಎಲ್ಲ ರೀತಿಯಲ್ಲಿಯೂ ಸುಖ ಸಮೃದ್ಧಿಯನ್ನು ಕೊಟ್ಟಿದ್ದಾನೆ. ದಾಂಪತ್ಯದ 50 ವಸಂತಗಳನ್ನು ಕಷ್ಟವೋ ಸುಖವೋ ಇಬ್ಬರೂ ಹಂಚಿಕೊಂಡು ನಡೆದಿದ್ದೀವಿ. ಮಕ್ಕಳಿಬ್ಬರೂ ಸುಖವಾಗಿ ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ. ಮತ್ತೀನೇನು ನಿಮಗೆ ಚಿಂತೆ, ಯಾಕೆ ಇಷ್ಟೊಂದು ಮಂಕಾಗಿ ಕುಳಿತಿದ್ದೀರಿ….” ಎನ್ನುತ್ತಾ ಕಣ್ಣೀರು ಹಾಕಿದರು.
“ಆರತಿ…. ಆರತಿ…” ಎಂದು ರಾಜೇಶ್ ರ ಬಾಯಿಂದ ಕೇಳಿ, ಆಶ್ಚರ್ಯದಿಂದ ಕೈಯನ್ನು ಹಿಂದೆ ತೆಗೆದುಕೊಂಡು ಗಂಡನ ತೊಡೆಯ ಮೇಲೆ ಕೈಯೂರಿ, ಕಣ್ಣೀರು ಒರೆಸಿಕೊಳ್ಳುತ್ತಾ ಅವರ ಪಕ್ಕದಲ್ಲಿ ಕುಳಿತರು. ರಾಜೇಶ್ ರ ಕಣ್ಣಲ್ಲಿ ನೀರು ತುಂಬಿತ್ತು.
“ಏನಾಯ್ತು ರೀ…. ಆರತಿಗೆ? ಹುಷಾರಾಗಿದ್ದಾಳೆ ತಾನೇ…..?” ಎಂದು ಕಕ್ಕುಲತೆಯಿಂದ ಕೇಳಿದರು.
“ಅದೇ ಗೊತ್ತಾಗ್ತಿಲ್ಲ ಸುಶೀ…. ನನಗೆ ಗೊತ್ತು ಅವಳು ಏನೋ ತೊಂದರೆಯಲ್ಲಿದ್ದಾಳೆ ಅಂತ. ಮೊದಲೇ ಮೈ ಹುಷಾರಿರಲಿಲ್ಲ,” ರಾಜೇಶರ ಧ್ವನಿ ಗದ್ಗದಿತವಾಯಿತು.
“ಹೌದು ರೀ…. ಆ ಹುಡುಗಿಗೆ ದೇವರು ಆ ಕಾಯಿಲೆ ಕೊಡಬಾರದಾಗಿತ್ತು. ಆದರೆ ಅವಳಿಗೆ ಕ್ಯಾನ್ಸರ್ ನಿಂದ ಮುಕ್ತಿ ಸಿಕ್ಕಿತು ಅಂದಿದ್ದರಲ್ಲ……!”
“ಹೌದು ಅವಳು ತುಂಬಾ ಗಟ್ಟಿಗಿತ್ತಿ ಸುಶೀ…. ಆದರೂ ಮನಸ್ಸಿಗೆ ಯಾಕೋ ಏನೋ ಕೆಟ್ಟದ್ದು ಆಗುತ್ತೆ ಅನಿಸುತ್ತಿದೆ, ಭಯ ಆಗ್ತಿದೆ. ದೇವರು ಕೊಟ್ಟ ನನ್ನ ತಂಗಿಗೆ ಏನೂ ಆಗಬಾರದು. ಅವಳು ಹುಷಾರಾಗಿರಲಿ ತಂದೆ,” ಎಂದು ಎರಡೂ ಕೈ ಮುಗಿದರು ರಾಜೇಶ್.
“ರಕ್ಷಾಬಂಧನ ಹತ್ತಿರ ಬರುತ್ತಿದೆಯಲ್ಲ, ನಿಮಗೆ ಅವಳ ನೆನಪು ಕಾಡುತ್ತಿದೆ, ಅದಕ್ಕೆ ಏನೇನೋ ವಿಚಾರಗಳು ಬರುತ್ತಿವೆ. ಇನ್ನೊಂದು ಎಂಟು ದಿನ ತಡೆಯಿರಿ ರಾಖಿ ಜೊತೆಗೆ ಒಂದು ವರ್ಷದ ಆಗುಹೋಗುಗಳ ಉದ್ದನೆಯ ಪತ್ರ ಬಂದೇ ಬಿಡುತ್ತದೆ,” ಎಂದ ಸುಶೀಲಾ ಮಾತಿಗೆ ಇಬ್ಬರೂ ನಗುತ್ತಾ, ಹಾಗೆ ಅವಳ ನೆನಪಿನ ದೋಣಿಯಲ್ಲಿ ಸಾಗಿದ ರಾಜೇಶ್ ಹೇಳತೊಡಗಿದರು.
“ಅದೇ ತಾನೇ ನಾನು ಯೌವನದ ಯುವಕ, ಬಿಸಿ ರಕ್ತ, ಅದಕ್ಕೆ ತಕ್ಕಂತೆ ನನ್ನ ಡ್ಯೂಟಿ ಕಾಶ್ಮೀರದ ಒಂದು ಪುಟ್ಟ ಕಣಿವೆಯಲ್ಲಿ. ನಾನು ಸೈನ್ಯ ಸೇರಿದ್ದು ದೇಶದ್ರೋಹಿಗಳನ್ನು ಮಟ್ಟಹಾಕಲು. ಆ ಕಣಿವೆಗೆ ನನ್ನನ್ನು ರಹಸ್ಯ ಕಾರ್ಯಾಚರಣೆಯ ಅಂಗವಾಗಿ ಕಳಿಸಲಾಗಿತ್ತು. ಆ ಒಂದು ದಿನ ತುಂಬಾ ಹಿಮಪಾತದಿಂದ ನಮ್ಮ ಬಂಕರ್ ಕಾಣದ ಹಾಗೆ ಮುಚ್ಚಿಕೊಂಡಿತ್ತು. ಸತತ 8-10 ದಿನಗಳವರೆಗೆ ಒಳಗಿದ್ದ ನಮಗೆ ಹೊರಗೆ ಬರಲು ಆಗಲೇ ಇಲ್ಲ. ನಮ್ಮಲ್ಲಿದ್ದ ಆಹಾರ ಪದಾರ್ಥಗಳು ಎಲ್ಲಾ ಕರಗಲು ಹಸಿವಿನಿಂದ ಒದ್ದಾಡುವ ಪರಿಸ್ಥಿತಿ ಏರ್ಪಟ್ಟಿತು.
“ಹಿಮವನ್ನು ಸರಿಸುವ ಹರಸಾಹಸಕ್ಕೆ ನಾನು ಕೈ ಹಾಕಿದೆ. ಇನ್ನೇನು ನನ್ನ ಕೈ ಹೊರಗಿನ ವಾತಾವರಣವನ್ನು ಸ್ಪರ್ಶಿಸಬೇಕು. ಅಷ್ಟರಲ್ಲಿ ಯಾವುದೋ ಒಂದು ಕೈ ನನ್ನನ್ನು ಹಿಡಿದು ಎತ್ತಲು ಸಹಾಯ ಮಾಡುತ್ತಿತ್ತು. ಎರಡು ದಿನದಿಂದ ಊಟ ಬೇರೆ ಇರಲಿಲ್ಲ. ನಿತ್ರಾಣನಾದ ನನ್ನ ಕಣ್ಣುಗಳನ್ನು ಸಂಧಿಯಿಂದ ನೋಡುತ್ತಿತ್ತು ಆ ಪುಟ್ಟ ಕಣ್ಣುಗಳು. ಸಾಹಸ ಮಾಡಿ ಹೊರಗೆ ಬಂದೆ. ನೋಡಿದರೆ ಪುಟಾಣಿ ಹುಡುಗಿ. ಸೇಬಿನ ಹಣ್ಣಿನ ಹಾಗೆ ಹೊಳೆಯುವ ಅವಳ ಮುಖ.
“ನಾನು ನಡುಗುತ್ತಾ….. ಯಾರು ನೀನು….? ಇಲ್ಲಿಗೇಕೆ ಬಂದೆ….. ಇಂಥ ಚಳಿಯಲ್ಲಿ ಇಲ್ಲಿಗೆಲ್ಲಾ ಬರಬಾರದು ಅಂತ ಸ್ವಲ್ಪ ಜೋರಾಗಿ ಬೈದೆ. ಅವಳು ಅಲ್ಲಿಯೇ ಪಕ್ಕದಲ್ಲಿ ಇದ್ದ ಚೀಲವನ್ನು ತೋರಿಸಿ, `ಊಟ ಮಾಡಿ. ನಾನು ನಿಮ್ಮ ತಂಗಿ,’ ಎಂದು ಹೊರಟೇ ಹೋದಳು. ಅವಳನ್ನು ಕೂಗುತ್ತಾ ಹಿಮದಲ್ಲಿ ಓಡಲಾಗದೆ ಅಲ್ಲಿಯೇ ಕುಸಿದು ಬಿದ್ದೆ. ಇಂಥ ದುರ್ಗಮ ಪ್ರದೇಶದಲ್ಲಿ ಯಾವ ಮನೆಗಳೂ ಇಲ್ಲ. ಇಲ್ಲಿ ಹೇಗೆ ಇವಳು ಎಂದು ಯೋಚಿಸತೊಡಗಿದೆ.
“ಅವಳು ಕೊಟ್ಟ ಊಟವನ್ನು ನಾವು ಮೂವರು ಗೆಳೆಯರು ಹೊಟ್ಟೆ ತುಂಬಾ ಉಂಡೆವು. ಹಿಮ ಮತ್ತೆ ತನ್ನ ವಿರಾಟ ರೂಪ ತೋರಿಸತೊಡಗಿತು. ಆದರೆ ಆ ನನ್ನ ತಂಗಿ ಅದೇಕೋ ಗೊತ್ತಿಲ್ಲ ಪ್ರತಿದಿನ ನಮಗೆ ಊಟ ತರುತ್ತಿದ್ದಳು. ನಾನು ಹೆಸರು ಕೇಳಿದಾಗೆಲ್ಲಾ ನಿಮ್ಮ ತಂಗಿ ಎಂದು ಹೇಳಿ ಹೋಗುತ್ತಿದ್ದಳು. ಅವಳು ಬರುವುದು ಸ್ವಲ್ಪ ತಡವಾದರೂ ನಮ್ಮ ಗೆಳೆಯರೆಲ್ಲಾ ಯಾಕೋ ಇವತ್ತು ನಿನ್ನ ತಂಗಿ ಬಂದಿಲ್ಲ ಎಂದು ಕೇಳುತ್ತಿದ್ದರು. ಅಷ್ಟೊಂದು ಆತ್ಮೀಯಳಾಗಿದ್ದ ಅವಳು ನಮ್ಮ ಪಾಲಿಗೆ ಅನ್ನಪೂರ್ಣೆಯಾಗಿದ್ದಳು.
“12ನೇ ದಿನ ಸೂರ್ಯನ ದರ್ಶನವಾಗಲು ಅಲ್ಲಿಯೇ ಸಮೀಪದ ಹಳ್ಳಿಗೆ ಅಂದರೆ 12 ಕಿ.ಮೀ. ದೂರದಲ್ಲಿದ್ದ ಹಳ್ಳಿಗೆ ಸಾಮಾನು ತರಲು ಹೋದೆ. ಆಗ ನನಗೆ ದೇವರು ಕೊಟ್ಟ ನನ್ನ ತಂಗಿ ಸಿಕ್ಕಳು. ಮನೆಗೆ ಕರೆದುಕೊಂಡು ಹೋದಳು. ತನ್ನ ಅಪ್ಪನ ಪರಿಚಯ ಮಾಡಿಸಿದಳು. ತನ್ನ ಹೆಸರು `ಆರತಿ’ ಎಂದು ಹೇಳಿದಳು. ಅವಳ ಅಣ್ಣ ಸಹ ದೇಶಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟಿದ್ದ.
“ಅದೇಕೋ ಏನೋ ಆರತಿಗೆ ನನ್ನನ್ನು ನೋಡಿದರೆ ಅವಳ ಅಣ್ಣನ ನೆನಪು ಬರುತ್ತಿತ್ತಂತೆ. ಅದಕ್ಕಾಗಿಯೇ ಅವಳು ನನ್ನನ್ನು ಹುಡುಕಿಕೊಂಡು ಬಂಕರ್ ವರೆಗೂ ಬಂದು ಊಟ ಕೊಡುತ್ತಿದ್ದಳು. ಅವಳ ಮುಗ್ಧ ನಗು, ಆ ಆತ್ಮೀಯತೆಯ ಬಂಧದಲ್ಲಿ ನಾನು ಗೊತ್ತಿಲ್ಲದೆ ಬಂಧಿಯಾದೆ. ಅಣ್ಣ ತಂಗಿ ಸಮಯ ಸಿಕ್ಕಾಗೆಲ್ಲ ಹರಟೆ ಹೊಡೆಯುತ್ತಿದ್ದೆವು. ಪ್ರತಿ ರಕ್ಷಾ ಬಂಧನಕ್ಕೆ ತಾನೇ ಕೈಯಿಂದ ಮಾಡಿದ ರಾಖಿ ಕಟ್ಟುತ್ತಿದ್ದಳು. ನಾನು ಆ ಸ್ಥಳದಲ್ಲಿ ಮೂರು ವರ್ಷಗಳ ಕಾಲ ಇದ್ದೆ.
“ಕೊನೆಯ ಆರು ತಿಂಗಳಲ್ಲಿ ಆ ದಿನ ಭಯೋತ್ಪಾದಕರೊಡನೆ ಗುಂಡಿನ ಚಕಮಕಿಯಲ್ಲಿ ನನಗೆ ಗುಂಡು ತಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುವಾಗ ಇದೇ ನನ್ನ ತಂಗಿ ತನ್ನ ರಕ್ತವನ್ನು ಕೊಟ್ಟು ನನ್ನನ್ನು ಕಾಪಾಡಿದ್ದಳು. `ಬಾಂಧವ್ಯ ಬದುಕಿಗೆ ಶ್ರೀರಕ್ಷೆ’ ಎನ್ನುವ ಹಾಗೆ ನನ್ನ ತಂಗಿ ನನ್ನ ಪ್ರಾಣ ಕಾಪಾಡಿದ್ದಳು. ಅಂದಿನಿಂದ ಇಂದಿನವರೆಗೂ ನಾನು ದೇಶದ ಯಾವುದೇ ಭಾಗದಲ್ಲಿರಲಿ, ನನಗೆ ರಕ್ಷಾಬಂಧನದಂದು ರಾಖಿ ಕಳಿಸುತ್ತಾಳೆ. ನನ್ನ ಮದುವೆಗೂ ಬಂದಿದ್ದಳು.
“ನನಗಿಂತ 10 ವರ್ಷ ಚಿಕ್ಕವಳಾದ ನನ್ನ ತಂಗಿಯ ಮದುವೆಗೂ ನಾವು ಸಹ ಕುಟುಂಬ ಸಮೇತ ಹೋಗಿ ಆಶೀರ್ವದಿಸಿ ಬಂದಿದ್ದೆ. ನಮ್ಮ ಮದುವೆಯ 50ನೇ ವಾರ್ಷಿಕೋತ್ಸವಕ್ಕೆ ಅವಳನ್ನು ಆಹ್ವಾನಿಸಿ ಪತ್ರ ಬರೆದಿದ್ದೆ. ಆಗ ಅವಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಅದನ್ನು ಹೇಳದೆ ಮುಚ್ಚಿಟ್ಟಿದ್ದಳು. ಆಗಲೂ ನನಗೆ ಏನೋ ಸಂಕಟವಾಗಿತ್ತು. ನಾನು ನೀನು ಅವಳ ಹೆಸರಿಗೆ ತುಪ್ಪದ ದೀಪ ಹಚ್ಚಿ ಬೇಡಿಕೊಂಡೆವು. ಅದನ್ನು ಗೆದ್ದು ಬಂದ ನಂತರ ನನಗೆ ಪತ್ರ ಬರೆದಿದ್ದಳು.
“ನಲ್ವತ್ತು ವರ್ಷದಿಂದಲೂ ಪತ್ರ ವ್ಯವಹಾರ ನಡೆಯುತ್ತಿದೆ. (ಅಲ್ಲಿ ಫೋನ್ ಸೌಲಭ್ಯ ಇರದ ಕಾರಣ) ಒಂದು ವರ್ಷದ ಆಗುಹೋಗು ಎಲ್ಲವನ್ನೂ ಹೇಳುತ್ತಾಳೆ. ನನ್ನ ಆರೋಗ್ಯಕ್ಕಾಗಿ ಪ್ರತಿ ವರ್ಷ ಅವಳ ಊರ ದೇವರಿಗೆ ಹರಕೆ ಕಟ್ಟುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಏನೇ ಆದರೂ ರಾಖಿ ಕಳುಹಿಸುವುದು ಒಂದು ವರ್ಷವೂ ತಪ್ಪಿಲ್ಲ. ಯಾವ ಜನ್ಮದ ಬಂಧವೋ ಏನೋ,” ಎನ್ನುತ್ತಾ ಕಣ್ಣು ಒರೆಸಿಕೊಂಡರು ರಾಜೇಶ್.
ಸುಶೀಲಾರ ಕಣ್ಣಲ್ಲೂ ನೀರು ಬಂದಿತು. ಅವರು ಕಣ್ಣೀರು ಒರೆಸಿಕೊಳ್ಳುತ್ತಾ, “ಎದ್ದೇಳಿ ಇತ್ತು ಶುಕ್ರವಾರ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಆರತಿ ಹೆಸರಲ್ಲಿ ಅರ್ಚನೆ ಮಾಡಿಸೋಣ,” ಎನ್ನುತ್ತಾ ಗಂಡನನ್ನು ಸಮಾಧಾನಿಸಿ, ಆರಿದ ದೋಸೆ ಎತ್ತಿಟ್ಟು ಮತ್ತೆ ಬಿಸಿ ದೋಸೆ ಹಾಕಲು ಅಡುಗೆ ಮನೆಗೆ ಹೋದರು.
ಹೀಗೆ ದಿನಗಳು ಉರುಳುತ್ತಾ ರಕ್ಷಾಬಂಧನ ಬಂದೇಬಿಟ್ಟಿತು. ಬೆಳಗ್ಗೆಯಿಂದಲೇ ಕಾತುರದಿಂದ ಕಾಯುತ್ತಾ ಗೇಟಿನ ಬಳಿ ನಿಂತ ರಾಜೇಶರಿಗೆ ದೂರದಲ್ಲಿ ಪೋಸ್ಟ್ ಮ್ಯಾನ್ ಬರುವುದು ನೋಡಿ ಖುಷಿಯೋ ಖುಷಿ! ಅರ್ಧ ರಸ್ತೆಗೆ ಓಡಿ ಹೋಗಿ ಪತ್ರವನ್ನು ಪಡೆದುಕೊಂಡು ಬಂದರು. ಮನೆಗೆ ಬಂದು ಗಾರ್ಡನ್ನಿನ ಕುರ್ಚಿಯಲ್ಲಿ ಕುಳಿತು ಮೊದಲು ಪತ್ರವನ್ನು ಕೈಯಿಂದ ಸವರಿ, ಆನಂದಬಾಷ್ಛ ಸುರಿಸಿದರು. `ನನ್ನ ಪುಟ್ಟ ತಂಗ್ಯವ್ವ,’ ಎಂಬ ಉದ್ಗಾರದೊಂದಿಗೆ ಪತ್ರ ತೆರೆದರು. ರಾಖಿ ಕಂಡಿತು ರಾಖಿಯನ್ನು ಸ್ಪರ್ಶಿಸಿದರು. ತಂಗಿಯ ಒಲವನ್ನು, ಆ ಬಾಂಧವ್ಯವನ್ನು ಅನುಭವಿಸಿದರು. ವಯಸ್ಸಾದ್ದರಿಂದ ಕೈ ನಡುಗುತ್ತಿದ್ದ ಪತ್ರವನ್ನು ತೆರೆದರು.
`ನನ್ನ ಪ್ರೀತಿಯ ದೇವರು ಕೊಟ್ಟ ಅಣ್ಣನಿಗೆ ನಿನ್ನ ಮುದ್ದು ತಂಗಿ ಮಾಡುವ ನಮಸ್ಕಾರಗಳು. ಅಣ್ಣಾ ನನಗೆ ಗೊತ್ತು ನೀನು ನನ್ನ ಪತ್ರಕ್ಕಾಗಿ ಕಾಯುತ್ತಿರುವೆ ಎಂದು. ಈ ಅಕ್ಷರಗಳೇಕೆ ಡೊಂಕು ಡೊಂಕಾಗಿವೆ ಎಂದು ನಗ್ತಾ ಇದ್ದೀಯಾ…. ಅದು ನಿನ್ನ ತಂಗಿಗೂ ವಯಸ್ಸಾಯ್ತು ನೋಡು, ಓದುತ್ತಿದ್ದ ರಾಜೇಶರ ಮುಖದ ಮೇಲೆ ನಗು ಮೂಡಿತು. `ಅಣ್ಣಾ, ಈ ಒಂದು ವರ್ಷದಲ್ಲಿ ನನ್ನ ಯಜಮಾನರು ಮತ್ತು ನನ್ನ ಮಕ್ಕಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಜೀವನದಲ್ಲಿ ಸಂಬಂಧಗಳ ವಿಷಯದಲ್ಲಿ ನಾನು ತುಂಬಾ ಪುಣ್ಯವಂತಳು. ಒಡಹುಟ್ಟಿದ ಅಣ್ಣನನ್ನು ದೇವರು ಕಸಿದುಕೊಂಡ. ಆದರೆ ರಕ್ತ ಸಂಬಂಧಕ್ಕಿಂತ ಮಿಗಿಲಾದ ಅಣ್ಣನನ್ನು ನಿನ್ನ ರೂಪದಲ್ಲಿ ನನಗೆ ಕೊಟ್ಟ.`ನಿನ್ನ ಬಾಂಧ್ಯದ ಶ್ರೀರಕ್ಷೆಯಲ್ಲಿ ಇಷ್ಟು ದಿನ ಆರಾಮವಾಗಿದ್ದೆ. ಖುಷಿಯಾಗಿ ಜೀವನ ನಡೆಸಿದೆ, ರಾಜೇಶರ ಮುಖ ವಿವರ್ಣವಾಯಿತು. ಏಕೋ ಮನದಲ್ಲಿ ಮತ್ತೆ ಆತಂಕ ಮೂಡಿತು. `ಅಣ್ಣಾ…. ಎಂದು ನಿನ್ನನ್ನು ಕರೆದೆನೋ ಆಗಿನಿಂದ ಪ್ರತಿ ವರ್ಷ ನಿನ್ನ ಕೈಗೆ ರಾಖಿ ಕಟ್ಟುತ್ತಿದ್ದೇನೆ. ಆದರೆ, ಆ ದೇವರು ನನ್ನನ್ನು ಬೇಗ ಕರೆದುಕೊಳ್ಳುತ್ತಾನೆ ಎಂದು ಗೊತ್ತಿತ್ತು. ಆದರೂ ಒಪ್ಪಿಕೊಳ್ಳಲು ಮನಸ್ಸು ಹಿಂಜರಿಯುತ್ತಿತ್ತು. ಅಷ್ಟರಲ್ಲಿ ವಿಧಿ ನನ್ನನ್ನು ನಿನ್ನಿಂದ ದೂರ ಕರೆದುಕೊಂಡು ಹೋಯಿತು. ಅಣ್ಣಾ…. ಈ ಪತ್ರ ಹಾಗೂ ನಿನ್ನ ರಕ್ಷಾ ಕವಚವಾದ ಈ ರಾಖಿಯೇ ಕೊನೆಯದು. ಅಣ್ಣಾ…. ನನ್ನ ನಿನ್ನ ಈ ಬಾಂಧವ್ಯ ಈ ಜನ್ಮದಲ್ಲಷ್ಟೇ ಅಲ್ಲ ಜನ್ಮಜನ್ಮಗಳ ಅನುಬಂಧ…..
ಪತ್ರವನ್ನು ಓದುತ್ತಿದ್ದ ರಾಜೇಶರ ಉಸಿರು ಕಟ್ಟುತ್ತಿತ್ತು. ಗಂಟಲಿನ ನರಗಳು ಊದಿಕೊಂಡವು. ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಿದ್ದವು ಕೈಗಳು ನಡುಗುತ್ತಿದ್ದವು. `ಅಣ್ಣಾ ಮುಂದಿನ ಜನ್ಮದಲ್ಲಿ ನಿನ್ನ ಮಗಳಾಗಿ ಹುಟ್ಟಿ ಬರುವೆ. ಈ ಪತ್ರ ನಿನ್ನ ಕೈ ಸೇರುವಷ್ಟರಲ್ಲಿ ನನ್ನ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ನಿನ್ನ ತಂಗಿಯ ಕೊನೆಯ ರಾಖಿ ಸ್ವೀಕರಿಸು ಅಣ್ಣಾ…….’
ಇಂತಿ ನಿನ್ನ ಮುದ್ದು ತಂಗ್ಯವ್ವ.
ರಾಜೇಶರ ಕಣ್ಣೀರಿಗೆ ಕೊನೆಯೇ ಇರಲಿಲ್ಲ.