``ಗುರು, ಇದ್ಯಾಕೆ ಹೀಗೆ ಜೋಲು ಮೋರೆ ಹಾಕಿಕೊಂಡು ಕುಳಿತಿರುವೆ? ಈಗ ನೀನು ಜಾಲಿ ಮಾಡೋ ಸಮಯ! ನಿನ್ನ ಪ್ರೇಯಸಿ ಇದೀಗ ನಿನ್ನ ಹೆಂಡ್ತಿ ಆಗ್ತಿದ್ದಾಳೆ, ಇದಕ್ಕಿಂತ ಇನ್ನೇನು ಬೇಕು? ನೀನಂತೂ ಮೈತುಂಬಾ ಮಚ್ಚೆ ತುಂಬಿಕೊಂಡೇ ಹುಟ್ಟಿದ್ದೀಯಾ ಬಿಡಪ್ಪ......'' ಗೆಳೆಯ ವಿಜಯ್ನನ್ನು ಹುರಿದುಂಬಿಸುತ್ತಾ ಹೇಳಿದ ರಮೇಶ್.
ಆದರೆ ಮದುವೆ ಗಂಡಾಗಿ ಗೊತ್ತಾಗಿದ್ದರೂ ಲೇಶ ಮಾತ್ರ ಉತ್ಸಾಹವಿಲ್ಲದ ವಿಜಯ್ ಹೇಳಿದ, ``ಬಡ್ಕೊಂಡ್ರು ನನ್ನ ಭಾಗ್ಯಕ್ಕೆ! ನಿನ್ನ ಮದುವೆ ಇನ್ನು ಫಿಕ್ಸ್ ಆಗಿಲ್ಲ..... ಅದಕ್ಕೆ ನನ್ನ ಕಷ್ಟ ನಿನಗೆ ಗೊತ್ತಾಗ್ತಾ ಇಲ್ಲ.''
``ಏನು ನಿನ್ನ ಮಾತಿನ ಅರ್ಥ? ನನಗಂತೂ ಏನೂ ಹೊಳೆಯುತ್ತಿಲ್ಲ. ನನಗೆ ಗೊತ್ತಿರೋದೆಲ್ಲ ಇಷ್ಟೆ..... ಲವ್ ಮ್ಯಾರೇಜ್ ಮನೆಯವರಿಂದ ಪಾಸ್ ಮಾಡಿಸಿಕೊಳ್ಳುವಷ್ಟರಲ್ಲಿ ಜನ 7 ಕೆರೆ ನೀರು ಕುಡಿಯುತ್ತಾರೆ. ಆದರೆ ನಿನ್ನ ಕೇಸಿನಲ್ಲಿ ಅಂತೂ ಒಂದೇ ತಿಂಗಳಲ್ಲಿ ಎಂಗೇಜ್ಮೆಂಟ್ 6 ತಿಂಗಳಲ್ಲೇ ಮದುವೆ ಅಂತ ಗೊತ್ತಾಗಿರುವಾಗ ಏನು ಕಷ್ಟವಪ್ಪ......''
ಅಷ್ಟರಲ್ಲಿ ವಿಜಯ್ ಮೊಬೈಲ್ಗೆ ಒಂದು ಮೆಸೇಜ್ ಬಂತು. `ಫ್ರೀ ಇದ್ದೀಯಾ?' ವಿಜಯ್ ರಮೇಶನ ಮಾತನ್ನು ಅರ್ಧ ಬಿಟ್ಟು ರಶ್ಮಿಯ ಕರೆಗಾಗಿ ಎದ್ದು ನಿಂತ.
ವಿಜಯ್ ರಶ್ಮಿ ಮೊದಲಿನಿಂದಲೂ ಕಾಲೇಜಿನಲ್ಲಿ ಯುವ ಪ್ರೇಮಿಗಳು. ಈ ವಿಷಯವನ್ನು ಇವರ ಸಹಪಾಠಿಗಳೆಲ್ಲ ಬಿ.ಇ ಕಲಿಯುವ ಮೊದಲ ವರ್ಷದಲ್ಲೇ ಗುರುತಿಸಿದ್ದರು. ಅದನ್ನು ಇವರಿಬ್ಬರೂ ಎಂದೂ ಮುಚ್ಚಿಡುವ ಪ್ರಯತ್ನ ಮಾಡಲೇ ಇಲ್ಲ. ಇಬ್ಬರೂ ಬೇರೆ ಜಾತಿಗೆ ಸೇರಿದವರು, ಸಸ್ಯಾಹಾರಿಗಳೇ ಆದ್ದರಿಂದ ಊಟತಿಂಡಿ ವಿಷಯದಲ್ಲಿ ಇಬ್ಬರಿಗೂ ಹೊಂದಾಣಿಕೆ ಕಷ್ಟವಾಗಲಿಲ್ಲ. ಆದರೆ ಇವರ ಮನೆಯವರಿಬ್ಬರೂ ಈ ಮದುವೆಗೆ ಸುಲಭ ಒಪ್ಪಿಗೆ ನೀಡಲಿಲ್ಲ.
ಅಂತಿಮ ವರ್ಷದ ಫೇರ್ವೆಲ್ ಪಾರ್ಟಿಯಂದು ಸಹಪಾಠಿಗಳೆಲ್ಲ ಕೂಡಿ, ತಾವು ತಾವೇ ಖರ್ಚು ವಹಿಸಿಕೊಂಡು, ಇವರಿಬ್ಬರಿಗೂ ಸಾಂಕೇತಿಕ ವಿವಾಹ ಮಾಡಿಸಿ ಮುಗಿಸಿಬಿಟ್ಟಿದ್ದರು. ಅದಕ್ಕೆ ಇವರಿಬ್ಬರ ವಿರೋಧ ಇರಲಿಲ್ಲ. ಮುಂದೆ ಸಾಂಪ್ರದಾಯಿಕ ಅಸಲಿ ವಿವಾಹ ನಡೆಯುತ್ತದೋ ಇಲ್ಲವೋ, ಕೇವಲ ರೆಜಿಸ್ಟರ್ಡ್ ಮದುವೆ ಆಗಬೇಕಾಗಿ ಬಂದರೆ..... ಹೀಗಾದರೂ ಎಲ್ಲರ ಮುಂದೆ ಮದುವೆ ನಡೆಯಲಿ ಎಂದು ಸಂಭ್ರಮಿಸಿದರು. ಹೀಗೆ ಕಾಲ ಕಳೆದು, ಮುಂದೆ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರುವಂತಾಯಿತು. ಇಬ್ಬರೂ ಒಂದೇ ಸೆಕ್ಷನ್ನಿನ, ಒಂದೇ ಪ್ರಾಜೆಕ್ಟ್ ಗೆ ಕೆಲಸ ಮಾಡತೊಡಗಿದರು. ಹೀಗಾಗಿ ಇನ್ನಷ್ಟು, ಮತ್ತಷ್ಟು ನಿಕಟರಾಗಲು ಅನುಕೂಲವಾಯಿತು. ಹೇಗಾದರೂ ಸರಿ, ಮನೆಯವರನ್ನು ಒಪ್ಪಿಸಿಯೇ ತಾವು ಮದುವೆಗೆ ಮುಂದಾಗಬೇಕು ಎಂದು ನಿರ್ಧರಿಸಿದರು.
ವಿಜಯ್ ತನ್ನ ಮನೆಯವರ ಬಳಿ ರಶ್ಮಿ ಈಗ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುವ ವಿಚಾರ ತಿಳಿಸಿದ. ಅವಳ ಸಂಬಳ, ಪ್ಯಾಕೇಜ್ ಕುರಿತೂ ಹೇಳಿದ. ಅನ್ಯ ಜಾತಿಯವಳಾದರೂ ಇಂದಿನ ಕಾಲಕ್ಕೆ ತಕ್ಕಂತೆ ದುಡಿಯುವ ಸೊಸೆ ಬರಲಿ, ಎಂದು ಒಬ್ಬನೇ ಮಗನ ನಿರ್ಧಾರಕ್ಕೆ ವಿರೋಧಿಸದೆ ಒಪ್ಪಿದರು. ಇಬ್ಬರಿಗೂ ಬಹುತೇಕ ಸಮಾನ ಸಂಬಳ ಇದ್ದುದರಿಂದ ಮುಂದೆ ಸಂಸಾರಕ್ಕೆ ಅನುಕೂಲ ಆಗುತ್ತಿತ್ತು.
ಎಲ್ಲಕ್ಕೂ ಮೊದಲು ವಿಜಯನ ತಂದೆ ಹೇಳಿದರು, ``ನೋಡಪ್ಪ ದುಡಿಯುವ ಹುಡುಗಿ ಮನೆಗೆ ಸೊಸೆಯಾಗಿ ಬರುವುದು ಈಗಿನ ಕಾಲದಲ್ಲಿ ಬಹಳ ಮುಖ್ಯವಾಗಿದೆ. ಇಂದಿನ ಪೇಟೆ ಧಾರಣೆ ಅಷ್ಟು ದುಬಾರಿಯಾಗಿದೆ. ಮುಂದೆ ಮಕ್ಕಳ ಓದು, ಮದುವೆ ಕಾಲಕ್ಕೆ ಒಬ್ಬರ ಸಂಬಳದಿಂದ ಏನೇನೂ ಲಾಭ ಇಲ್ಲ. ರಶ್ಮಿಗೆ ಒಳ್ಳೆ ಸಂಬಳ, ಪ್ಯಾಕೇಜ್ ಇರುವುದು ಮುಂದಿನ ಭವಿಷ್ಯದ ದೃಷ್ಟಿಯಿಂದ ಭಾರಿ ಒಳ್ಳೆಯದು.