ದಿನನಿತ್ಯ ಸೈಬರ್ ವಂಚನೆಯ ಲೂಟಿಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಇನ್ ಸ್ಪೆಕ್ಟರ್ ಪಲ್ಲವಿ ಹೇಗಾದರೂ ಈ ವಂಚನೆಯ ಜಾಲವನ್ನು ಕೊನೆಗಾಣಿಸಬೇಕೆಂದು ಕಾರ್ಯೋನ್ಮುಖರಾದರು. ಈ ಸಮಸ್ಯೆ ಬಗೆಹರಿದದ್ದು ಹೇಗೆ......?
ಇನ್ ಸ್ಪೆಕ್ಟರ್ ಪಲ್ಲವಿ ಸೈಬರ್ ಠಾಣೆಗೆ ರ್ಗಾಗಿ ಬಂದು ಅಧಿಕಾರ ಸ್ವೀಕರಿಸಿದ್ದರು. ಕಾನಸ್ಟೇಬಲ್ ನ್ನು ಬರ ಹೇಳಿ ಕಳೆದೊಂದು ವರ್ಷದಿಂದ ಪರಿಹರಿಸಲಾಗದೆ ಹಾಗೇ ಉಳಿದಿದ್ದ ಕೇಸುಗಳ ಫೈಲ್ ನ್ನು ತರಿಸಿ ಓದಿದರು. ಮೋಸ ಹೋಗಿ ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ಕಳಕೊಂಡ ಹಲವರು ದೂರು ನೀಡಿದ್ದರು.
ಸೈಬರ್ ಕಳ್ಳರಿಂದಾಗಿ ಸಾರ್ವನಿಕರು ಬೇರೆ ಬೇರೆ ರೀತಿಯಲ್ಲಿ ನಿರಂತರವಾಗಿ ಮೋಸ ಹೋಗುತ್ತಿದ್ದುದು ಹಾಗೂ ಅಂತಹ ವಂಚಕರನ್ನು ಹಿಡಿಯಲು ಸಾಧ್ಯವಾಗದಿದ್ದುದು ಇಲಾಖೆಗೆ ನಿಜಕ್ಕೂ ತಲೆ ತಗ್ಗಿಸುವಂತೆ ಆಗಿತ್ತು.
ಒಂದು ದೂರಿನ ಪ್ರಕಾರ ಮೋಸ ಹೋದಾತನ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಎಲ್ಲಿಂದಲೋ ಪಡಕೊಂಡ ವಂಚಕನು ಬಳಿಕ ಬ್ಯಾಂಕಿನ ಖಾತೆಯ ಸಂಖ್ಯೆಯನ್ನು ಹೇಗೋ ತಿಳಿದುಕೊಂಡು ದೂರುದಾರನ ಖಾತೆಯಿಂದ ಹತ್ತೊಂಬತ್ತು ಸಾವಿರ ರೂಪಾಯಿಗಳನ್ನು ದೋಚಿದ್ದನು. ತಾನು ಖಾತಾ ಸಂಖ್ಯೆಯನ್ನು ಹೇಳಿರಲೇ ಇಲ್ಲ ಎಂದು ದೂರುದಾರನು ಸ್ಪಷ್ಟ ಶಬ್ದಗಳಲ್ಲಿ ದೂರು ನೀಡಿದ್ದನು.
ಇನ್ನೊಂದು ಪ್ರಕರಣದಲ್ಲಿ ದೂರುದಾರನ ಪ್ಯಾನ್ ಸಂಖ್ಯೆಯ ಮೂಲಕ ಮೋಸ ಮಾಡಲಾಗಿತ್ತು. ಈ ದೂರುದಾರ ತಾನೂ ಬ್ಯಾಂಕ್ ಖಾತೆಯ ವಿವರ ಕೊಟ್ಟಿಲ್ಲವೆಂದೇ ತಿಳಿಸಿದ್ದರೂ, ವಂಚಕರ ಜಾಲ ಖಾತಾ ಸಂಖ್ಯೆಯನ್ನು ಹೇಗೆ ಪಡಕೊಂಡಿರಬಹುದು? ಹಾಗೆಯೇ ಫೈ್ಲ ನ್ನು ತಿರುಗಿಸುತ್ತಿದ್ದಾಗ ಆಧಾರ್ ಸಂಖ್ಯೆಯ ಮೂಲಕ ಎಂಭತ್ತಾರು ಸಾವಿರ ರೂಪಾಯಿ ಬ್ಯಾಂಕ್ ಖಾತೆಯಿಂದ ಮಾಯ ಆಗಿದ್ದ ಇನ್ನೊಂದು ಪ್ರಕರಣ ಕೈಗೆ ಸಿಕ್ಕಿತು.
ಹೀಗೆ ಹಲವು ಒಂದೇ ರೀತಿಯ ವಂಚನೆಗಳೇ ಆಗಿದ್ದವು. ಇನ್ನು ಕೆಲವೆಲ್ಲ ಹನಿಟ್ರ್ಯಾಪ್ ಪ್ರಕರಣಗಳು. ಮನುಷ್ಯನು ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದಾಗ ಇವೆಲ್ಲ ಮುಂದೆಯೂ ಖಂಡಿತ ನಡೆಯುವಂತಹುದೇ ಎಂದು ಒಮ್ಮೆ ಅನಿಸಿದರೂ, ಈ ಬಗ್ಗೆ ಹೆಚ್ಚು ಯೋಚಿಸದೆ ಪೊಲೀಸರಾಗಿ ವಂಚಕರನ್ನು ಹಿಡಿಯುವುದು ತಮ್ಮ ಕರ್ತವ್ಯವೆಂದು ಪಲ್ಲವಿಗೆ ಅನಿಸಿತು. ತಲೆ ಚಿಟ್ಟು ಹಿಡಿದಂತಾಗಿ ಪಲ್ಲವಿ ಬಿಸಿ ಬಿಸಿ ಕಾಫಿ ತರಿಸಿ ಕುಡಿಯುತ್ತಾ ಒಂದೈದು ನಿಮಿಷದ ಬಳಿಕ ಮತ್ತೆ ಫೈಲಿನ ಒಳಗೆ ಕಣ್ಣುಗಳನ್ನು ನೆಟ್ಟರು.
ಮಧ್ಯಾಹ್ನ ಹನ್ನೆರಡು ಘಂಟೆಗೆ ಸರಿಯಾಗಿ ಎಲ್ಲ ಕೇಸುಗಳ ಬಗ್ಗೆ ಮಾಹಿತಿಗಳನ್ನು ಜೋಡಿಸಿಕೊಂಡು ಐಜಿಯವರು ಕರೆದಿದ್ದ ಜಿಲ್ಲಾ ಎಸ್ ಪಿಗಳು ಮತ್ತು ಪ್ರಮುಖ ಠಾಣೆಗಳ ಇನ್ ಸ್ಪೆಕ್ಟರ್ಗಳ ವಿಡಿಯೋ ಕಾನ್ಛರೆನ್ಸ್ ನಲ್ಲಿ ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯ ಅಪರಾಧಗಳಿರುವ ಠಾಣೆಗಳ ಇನ್ ಸ್ಪೆಕ್ಟರ್ ಗಳ ಉತ್ತರಗಳಿಂದ ಸಮಾಧಾನಗೊಳ್ಳದ ಐಜಿಯವರು ಅಂಥಹವರ ಬೆವರಿಳಿಸಿದರು.
ಪಲ್ಲವಿಯ ಕಾರ್ಯವೈಖರಿ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದ ಐಜಿಯವರು ಆ ಸೈಬರ್ ಕಳ್ಳರ ಜಾಲವನ್ನು ಭೇದಿಸಲು ಒಂದು ತಿಂಗಳ ಸಮಯ ನೀಡಿದರು. ಇಷ್ಟರವರೆಗೆ ಫಲಿತಾಂಶದ ಮೂಲಕವೇ ಉತ್ತರ ನೀಡುತ್ತಾ ಬಂದಿದ್ದ ಪಲ್ಲವಿ ಇಲ್ಲೂ ಏನೂ ಮಾತಾಡದೆ, `ಖಂಡಿತಾ ಸಾರ್.....' ಎಂದಷ್ಟೇ ಹೇಳಿ ಮಾತು ಕೊನೆಗೊಳಿಸಿದರು.





