ಮಧ್ಯಮ ವರ್ಗದ ಜಂಜಾಟದ ಜೀವನದಲ್ಲಿ ಬಸವಳಿದಿದ್ದ ಶ್ರೀನಾಥ್ ದಂಪತಿಗಳು ಮುಂದೆ ತಮ್ಮ ಸಂಧ್ಯಾಕಾಲದ ಸೆಕೆಂಡ್ ಇನ್ಸಿಂಗ್ಸ್ ಎದುರಿಸಿದ್ದು ಹೇಗೆ.......?
ಬೆಳಗಿನ ವಾಕಿಂಗ್ ಮುಗಿಸಿ ಮರಳಿದ ಶ್ರೀನಾಥರು ಕೈಯಲ್ಲಿ ಹಾಲಿನ ಪ್ಯಾಕೆಟ್ ಜೊತೆಗೆ ತಿಂಡಿ ಪೊಟ್ಟಣದ ಪಾರ್ಸೆಲ್ ಹಿಡಿದುಕೊಂಡೇ ಬಂದರು, ``ನಿಮ್ಮಿ, ತಿಂಡಿಗೆ ರೆಡಿ ಮಾಡಿ ಆಯ್ತೇನೆ....?'' ಎಂದು ಕೇಳುತ್ತಾ ಅಡುಗೆ ಮನೆಗೆ ಕಾಲಿಟ್ಟರು.
ಅವಲಕ್ಕಿ ಒಗ್ಗರಣೆ ತಯಾರಿಸಲು ಇನ್ನೇನು ಅವಲಕ್ಕಿ ಪ್ಯಾಕೆಟ್ ಒಡೆದು ನೆನೆಸಲು ಹೊರಟ ನಿರ್ಮಲಾ ಗಂಡ ಅವಸರಿಸುತ್ತಿರುವುದನ್ನು ಕಂಡು, ``ಏನು ಸಾಹೇಬರಿಗೆ ವಾಕಿಂಗ್ ಮಾಡಿ ಜೋರು ಹಸಿವೆಯಾಯಿತಾ ಹೇಗೆ....? ಅಥವಾ ತಿಂಡಿ ತಿಂದು ಎಲ್ಲಿಗಾದರೂ ಹೋಗಬೇಕಿತ್ತಾ....? ಇನ್ನೂ ಅವಲಕ್ಕಿ ನೆನೆಸೋಕೆ ಹೋಗ್ತಾ ಇದೀನಿ ಅಷ್ಟೇ,'' ಎಂದರು.
``ಅವಲಕ್ಕಿ ಎಲ್ಲ ನೆನ್ಸೋದು ಬೇಡ. ನಾನು ಹೋಟೆಲ್ ನಿಂದ ಇಡ್ಲಿ, ವಡೆ ಪಾರ್ಸೆಲ್ ತಂದಿದೀನಿ. ಅದನ್ನೇ ತಿನ್ನೋಣ ಬಾ.... ಆಮೇಲೆ ನಿನ್ನ ಕೈಯಿಂದ ಬಿಸಿ ಬಿಸಿಯಾದ ಒಂದು ಲೋಟ ಸ್ಟ್ರಾಂಗ್ ಕಾಫಿ ಕೊಟ್ಬಿಡು ಸಾಕು,'' ಎಂದರು ಶ್ರೀನಾಥ್.
ನಿರ್ಮಲಾರಿಗೆ ಹೀಗೆ ಗಂಡ ಹೋಟೆಲ್ ನಿಂದ ತಿಂಡಿ ತರೋದು ಸ್ವಲ್ಪ ಇಷ್ಟವಿಲ್ಲ. `ಸುಮ್ಮನೆ ದುಡ್ಡು ಪೋಲು ಮಾಡ್ತೀರಿ,' ಎಂದು ಸದಾ ಗಂಡನನ್ನು ದೂರುತ್ತಿದ್ದರು.
``ಅಯ್ಯೋ, ಸುಮ್ನೆ ಯಾಕೆ ಹೋಟೆಲ್ ನಿಂದ ತರೋಕೆ ಹೋದ್ರಿ....? ಹಣ ವೇಸ್ಟ್, ಅವಲಕ್ಕಿ ಮಾಡ್ತಾ ಇದ್ನಲ್ಲ.....'' ಎಂದು ಎಂದಿನಂತೆ ಆಕ್ಷೇಪಿಸಿದರು ನಿರ್ಮಲಾ.
``ನೀನು ದಿನಾ ಅಡುಗೆ ತಿಂಡಿ ಮಾಡೋದು ಇದ್ದೇ ಇದೆಯಲ್ಲ. ಇತ್ತೊಂದು ದಿನ ನಿನಗೆ ರೆಸ್ಟ್ ಕೊಡಬೇಕು ಅನ್ನಿಸ್ತು. ಅವಲಕ್ಕಿ ಏನೋ ನೀನು ಒಗ್ಗರಣೆ ಹಾಕ್ತೀಯಾ. ಆಮೇಲೆ ತಿಂಡಿ ಅಂತ ಮಾಡಿದ ಮೇಲೆ ಪಾತ್ರೆ ತೊಳಿಬೇಕು, ಒಲೆಯೆಲ್ಲ ಕ್ಲೀನ್ ಮಾಡಬೇಕು, ಅವಲಕ್ಕಿ ಮಿಕ್ಕಿದರೆ ಅದನ್ನು ಮತ್ತೆ ನೀನು ಸಂಜೆಗೆ ಅದನ್ನೇ ತಿಂತೀಯಾ? ಹೀಗೆ ಕೆಲಸ ಬಾಲಂಗೋಚಿಯಾಗಿ ಬೆಳೀತಾ ಹೋಗುತ್ತೆ. ಅದಕ್ಕಿಂತ ಈಗ ಹೋಟೆಲ್ ನಿಂದ ತಂದ ತಿಂಡಿ ತಿಂದು, ಕಾಫಿ ಕುಡಿದು ಬಿಟ್ಟರೆ ಮುಗಿದು ಹೋಯ್ತಲ್ಲ ಕೆಲಸ,'' ಎಂದು ಭುಜ ಕುಣಿಸುತ್ತಾ ಹೇಳಿದರು.
``ಆದರೂ ಹೋಟೆಲ್ ತಿಂಡಿಗೆ ಒಂದಕ್ಕೆ ನಾಲ್ಕು ರೇಟು! ಅದು ಯಾವ ಯಾವ ಎಣ್ಣೆಯಲ್ಲಿ ಮಾಡಿರ್ತಾರೋ ಏನೋ?'' ಎಂದು ರಾಗವೆಳೆದರು ನಿರ್ಮಲಾ.
``ಇದು ಮಾಮೂಲಿ ಹೋಟೆಲ್ ಅಲ್ಲ. ಒಂದು ಮನೆಯಲ್ಲಿ ನಮ್ಮ ಹಾಗೆ ವಯಸ್ಸಾದ ಗಂಡ ಹೆಂಡತಿ ಇದ್ದಾರೆ. ಅವರು ತಮಗಾಗಿ ಮನೆಯಲ್ಲಿ ತಿಂಡಿ ಮಾಡೋದರ ಜೊತೆಗೆ 35-40 ಜನರಿಗಾಗುವಷ್ಟು ತಿಂಡಿ ಮಾಡಿ ಸೇವ್ ಮಾಡ್ತಾರೆ. ಲಿಮಿಟೆಡ್ ಫುಡ್ ಮಾಡ್ತಾರೆ. ನನ್ನ ಫ್ರೆಂಡ್ ಜನಾರ್ಧನ ದಿನಾ ಅಲ್ಲೇ ತಿಂಡಿ ತಿನ್ನೋದು. ಏನು ಮಾಡೋದು ಅವನು ಬ್ರಹ್ಮಚಾರಿ ಅಲ್ವಾ? ಹೀಗೆ ಹೋಟೆಲ್ ನಲ್ಲಿ ತಿಂತಾನೇ ಜೀವನ ಕಳೆದುಬಿಟ್ಟ ನೋಡು. ಅವನು ಈ ಹೋಟೆಲ್ ನ ತುಂಬಾ ಹೊಗಳ್ತಾ ಇದ್ದ. ಅದಕ್ಕೆ ನೋಡೋಣ ಅಂತ ತಗೊಂಡು ಬಂದೆ. ಆ ಹೋಟೆಲ್ ನಡೆಸೋ ದಂಪತಿಗಳಿಗೂ ವಯಸ್ಸಾಗಿದೆ. ಒಂದು ರೀತಿಯಿಂದ ನಾವು ಸಹಾಯ ಮಾಡಿದ ಹಾಗೂ ಆಗುತ್ತೆ. ನಮಗೂ ಕೆಲಸ ಉಳಿಯುತ್ತೆ,'' ಎಂದು ಪ್ರೀತಿಯಿಂದ ಹೆಂಡತಿಯನ್ನು ಕರೆದರು.





