ರಾಘವೇಂದ್ರ ಅಡಿಗ ಎಚ್ಚೆನ್.

“ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಮನುಷ್ಯತ್ವಕ್ಕೆ ದೊಡ್ಡ ‌ಉದಾಹರಣೆಯಾಗಿದ್ದಾರೆ.” ಎಂದು ಕರ್ನಾಟಕ ರಾಜ್ಯದ ಉಪ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಖ್ಯಾತ ನಟ ದಿ.ಡಾ.ಪುನೀತ್ ರಾಜ್‍ಕುಮಾರ್ ಕುರಿತಂತೆ ಇರುವ ಎಐ(ಕೃತಕ ಬುದ್ಧಿಮತ್ತೆ) ಆಧಾರಿತ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ ಸಿದ್ಧವಾಗಿರುವ  ಸ್ಟಾರ್ ಫ್ಯಾನ್ಡಮ್ ಆ್ಯಪ್ (ಕನ್ನಡದ ಅಪ್ಪು ಪಿಆರ್ಕೆ ಮೊಬೈಲ್ ಆ್ಯಪ್) ಅನ್ನು ಖಾಸಗಿ ಹೋಟೆಲ್ನಲ್ಲಿ ಲಾಂಚ್ ಮಾಡಿದ ನಂತರ ಅವರು ಮಾತನಾಡಿದರು.

Appu @1

“ನಾನು ಹಾಗೂ ಪುನೀತ್ ರಾಜಕುಮಾರ್ ನೆರೆಹೊರೆಯವರು. ಇಬ್ಬರೂ ಒಟ್ಟಿಗೆ ಒಂದೇ ಜಿಮ್ಗೆ ಕಸರತ್ತು ನಡೆಸಲು ಹೋಗುತ್ತಿದ್ದೆವು. ಕೊನೆ ಕ್ಷಣಗಳು ಅವರ ಕೈಯಲ್ಲೂ ಇರಲಿಲ್ಲ. ಅವರ ಜಿಮ್ ತರಬೇತುದಾರ ಹಾಗೂ ನನ್ನ ತರಬೇತುದಾರ ಕೊನೆ ಕ್ಷಣದಲ್ಲಿ ಒಟ್ಟಿಗೆ ಇದ್ದರು. ಅವರು ನನಗೆ ಈ ವಿಚಾರ ತಿಳಿಸಿದರು. ಸಾವು ಎಂಬುದು ಯಾರ ಕೈಯಲ್ಲೂ ಇಲ್ಲ.” ಎಂದ ಶಿವಕುಮಾರ್ “ನಾನು ಈ ಮೊದಲು ಟೂರಿಂಗ್ ಟಾಕೀಸ್ಗಳನ್ನು ನಡೆಸುತ್ತಿದೆ. ನನಗೆ ಗೊತ್ತಿರುವ ಪ್ರಕಾರ ಅತಿ ಹೆಚ್ಚು ಓಡಿದ ಸಿನಿಮಾ ಎಂದರೆ ಸತ್ಯ ಹರಿಶ್ಚಂದ್ರ. ಮದುವೆಯಾದ ಹೊಸದರಲ್ಲಿ ನನ್ನ ಹೆಂಡತಿಯನ್ನು ಮೈಸೂರಿಗೆ ಸತ್ಯ ಹರಿಶ್ಚಂದ್ರ ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದೆ. ಒಂದು ಬಾರಿ ಸಿನಿಮಾ ಪ್ರದರ್ಶನ ಆರಂಭಿಸಿದರೆ, 15 ದಿನಗಳ ಕಾಲ ನಡೆಯುತ್ತಿತ್ತು. ರಾಜ್ಕುಮಾರ್ ಅವರ ಅಭಿನಯ ಅಷ್ಟು ತೀವ್ರವಾಗಿತ್ತು. ಈಗಲೂ ಸುಮಾರು 20ಕ್ಕೂ ಹೆಚ್ಚು ಚಲನಚಿತ್ರ ಪರದೆಗಳನ್ನು ಹೊಂದಿದ್ದೇನೆ. ನಾನು ಬಿಟ್ಟರು ಚಲನಚಿತ್ರ ರಂಗ ನಮ್ಮನ್ನು ಬಿಡುತ್ತಿಲ್ಲ” ಎಂದು ಹೇಳಿದರು.

Appu @2

“ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದವರಲ್ಲಿ ಪುನೀತ್ ರಾಜಕುಮಾರ್ ಒಬ್ಬರು. ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳುತ್ತಾರೆ. ನಿಮ್ಮನ್ನು ನೀವು ನಿಯಂತ್ರಣ ಮಾಡಿಕೊಳ್ಳಬೇಕಾದರೆ ಮೆದುಳನ್ನು ಬಳಸಿ ಇತರರನ್ನು ನಿಯಂತ್ರಿಸಬೇಕಾದರೆ ಹೃದಯವನ್ನು ಬಳಸಿ. ಹೃದಯವಂತಿಕೆಯಿಂದ ಪುನೀತ್ ರಾಜಕುಮಾರ್ ಅವರು ಕೆಲಸ ಮಾಡಿದರು. ಇದನ್ನು ಮುಂದುವರೆಸಿಕೊಂಡು ಹೋಗಲು ಆ್ಯಪ್ ಮುಖಾಂತರ ಹೊಸ ಹೆಜ್ಜೆ ಇಡಲಾಗಿದೆ.”
“ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ” ಎಂದು ತಿಳಿಸಿದರು.
“ಎಐ‌ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ನಲ್ಲಿ ಬಾಲ್ಯಕಾಲದ ಪುನೀತ್‌‌ ಸೇರಿದಂತೆ ಇತ್ತೀಚಿನ ದಿನದವರೆಗಿನ ಪುನೀತ್ವರೆಗೆ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು, ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ” ಎಂದು ಹೇಳಿದರು.
“ನನಗೆ ಬಹಳಷ್ಟು ರಾಜ್ಯಗಳ ಸಿನಿಮಾ ಸ್ನೇಹಿತರು ಪರಿಚಯ ಇದ್ದಾರೆ. ಯಾರೂ ಕೂಡ ಈ ಆಲೋಚನೆ ಮಾಡಿಲ್ಲ. ನನ್ನ ಸ್ನೇಹಿತನ ಹೆಸರಿನಲ್ಲಿ ಇಂತಹ ಆ್ಯಪ್ ರೂಪುಗೊಂಡಿದ್ದು, ಅದನ್ನು ಉದ್ಘಾಟನೆ ಮಾಡಲು ನಾನು ಬಂದಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ” ಎಂದು ಖುಷಿ ವ್ಯಕ್ತಪಡಿಸಿದರು.

Appu @3

“ಎಐ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿದ್ದೀರಿ. ಮುಂದಿನ‌ ಪೀಳಿಗೆ ಹೆಚ್ಚು ತಂತ್ರಜ್ಞಾನದ ಮೂಲಕ ಅವಲಂಭಿತವಾಗಿದೆ. ಭವಿಷ್ಯದಲ್ಲಿ ಎಲ್ಲವೂ ಸಹ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮುಖಾಂತರವೇ ನಡೆಯಲಿದೆ ಎನಿಸುತ್ತಿದೆ. ಉದಾಹರಣೆಗೆ, ನನ್ನ ಕಾರ್ಯದರ್ಶಿಗೆ ಕರೆ ಮಾಡಿ ಭಾಷಣ ಕಳಿಸುವಂತೆ ಕೇಳಿದೆ. ಪಕ್ಕದಲ್ಲಿದ್ದ ನನ್ನ ಮಗಳು ಇಷ್ಟೊಂದು ಕಷ್ಟಪಡುವುದು ಬೇಡ ಚಾಟ್ ಜಿಪಿಟಿಯಲ್ಲಿ ನೀನು ಕೇಳಿದ ಮಾಹಿತಿ ದೊರೆಯುತ್ತದೆ ಎಂದು ಹೊಸ ವಿದ್ಯೆ ಕಲಿಸಿಕೊಟ್ಟಳು” ಎಂದರು.
“ಸರ್ಕಾರದಿಂದ ಎಲ್ಇಡಿ ಬಲ್ಬ್ ನೀಡುವ ಯೋಜನೆಗೆ ಪುನೀತ್ ಅವರನ್ನೇ ರಾಯಭಾರಿಯನ್ನಾಗಿ ಮಾಡಲಾಗಿತ್ತು. ಅವರು ಪ್ರೀತಿಯಿಂದ ನನ್ನ ಆಹ್ವಾನ ಒಪ್ಪಿಕೊಂಡಿದ್ದರು. ನಾನು ತಂತ್ರಜ್ಞಾನದಿಂದ ದೂರ ಇದ್ದೇನೆ.‌ ಅದರ ಬಗ್ಗೆ ಅರಿವಿದೆ. ಆದರೆ ಬಳಸುವ ಪ್ರಮೇಯ ಬಂದಿಲ್ಲ. ಪ್ರತಿದಿನವೂ ಹೊಸ ವಿಚಾರಗಳು ಬರುತ್ತಲೇ ಇರುತ್ತವೆ. ಈಗಿನ‌ ಕಾಲದ‌ ಟಿವಿಯನ್ನು ಆನ್ ಮಾಡಲು ಸಹ ಮಕ್ಕಳ ಅಥವಾ ಹೆಂಡತಿಯ ಸಹಾಯ ಕೇಳುತ್ತೇನೆ. ಕೇವಲ ಒಂದು ಬಟನ್ ಒತ್ತಿದರೆ ಇನ್ನೆಲ್ಲೋ ಸ್ಪೋಟವಾಗುವ ತಂತ್ರಜ್ಞಾನ ಯುದ್ದದಲ್ಲಿ ಬಳಕೆಯಾಗುತ್ತಿದೆ” ಎಂದು ತಿಳಿಸಿದರು.

“ರಾಮಾಯಣ ಮತ್ತು ಮಹಾಭಾರತವನ್ನು ಈಗಲೂ ನಾವು ಓದುತ್ತೇವೆ, ಬಳಸುತ್ತೇವೆ. ರಾಜಕಾರಣದಿಂದ ಹಿಡಿದು ಶಿಕ್ಷಣಕ್ಕೂ ಇದರ ಮಹತ್ವ ಬೇಕಾಗಿದೆ. ನಮ್ಮ ಬಾಲ್ಯಕಾಲದಲ್ಲಿ ದೂರದರ್ಶನದಲ್ಲಿ ಮಹಾಭಾರತ ಸೀರಿಯಲ್ ಅನ್ನು ತೋರಿಸುತ್ತಿದ್ದರು. ಈಗ ಹೊಸ ತಂತ್ರಜ್ಞಾನದ ಮೂಲಕವೂ ತೋರಿಸುತ್ತಿದ್ದಾರೆ. ಆದರೆ ಎರಡು ಹೇಳುವ ಆಚಾರ ವಿಚಾರ ಒಂದೇ.”
“ನಾನು 2 ತಿಂಗಳ ಹಿಂದೆ ಟೆಕ್ ಸಮಿಟ್ ಪೂರ್ವಭಾವಿ ಸಭೆಯಲ್ಲಿ ಸಿಎಂ, ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆ ಚರ್ಚೆ ಮಾಡಿದ್ದೆ. ಈ ಸಮಾವೇಶದಲ್ಲಿ ದೇಶದ ಸುಮಾರು 500 ಸಿಇಒಗಳು ಬಂದಿದ್ದರು. ಮುಂದಿನ ತಿಂಗಳು 18, 19, 20 ದೊಡ್ಡ ಟೆಕ್ ಸಮಿಟ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆಗ ಕ್ರಿಶ್ ಗೋಪಾಲಕೃಷ್ಣ ಆವರು ನನ್ನ ಜೊತೆ ಮಾತನಾಡುತ್ತಾ ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್ಗಳು, 2 ಲಕ್ಷ ಜನ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಕೃತಕ ಬುದ್ಧಿಮತ್ತೆ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು” ಎಂದು ಮಾಹಿತಿ ಹಂಚಿಕೊಂಡರು.
“ಈ ಕಾರ್ಯಕ್ರಮದ ಬಗ್ಗೆ ತಿಳಿದಾಗ ಇದರಲ್ಲಿ ವಿಶೇಷತೆ ಇದೆ ಎಂದು ಕಾರ್ಯಕ್ರಮಕ್ಕೆ ಬರಲು ಒಪ್ಪಿದೆ. ನಾನು ಡಿಸಿಎಂ ಆಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಈ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ. ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತ. ಎಲ್ಲರಿಗೂ ಶುಭವಾಗಲಿ” ಎಂದು ಹಾರೈಸಿದರು. “ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಹೊಸ ಪೀಳಿಗೆಗೆ ಹೊಸ ವಿಚಾರ ತಲುಪಿಸಬೇಕು. ತಾನು ಬೆಳೆದು ಬಂದ ಹಾದಿ ಬಲಿಷ್ಠವಾಗಿ ಬೆಳೆಸಲು ಪುನೀತ್ ಅವರಿಗೆ ದೃಢವಾದ ಸಂಕಲ್ಪ ಇತ್ತು. ಸ್ಯಾಂಡಲ್ವುಡ್ ಲೋಕದಲ್ಲಿರುವ ಜನರಿಗೆ ಸಿನಿಮಾ ರಂಗದಲ್ಲಿ ಬೆಳೆಯಲು ಆಸಕ್ತಿ ಇರುವವರಿಗೆ ಒಂದು ವೇದಿಕೆಯಾಗಿ ಈ ಆ್ಯಪ್ ರೂಪುಗೊಂಡಿದೆ” ಎಂದರು.
ರಾಜಕೀಯಕ್ಕೆ ಕರೆದಿದ್ದೆ: “ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣಕ್ಕೆ ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನಪಟ್ಟೆ, ಚಾಕಲೇಟ್ ಕೊಟ್ಟೆ. ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನೂ ಸಹ ಆಹ್ವಾನಿಸಿದೆ. ಅವರೂ ಸಹ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು. ರಾಜಕಾರಣಕ್ಕೆ ಬರಲಿಲ್ಲ. ಅಶ್ವಿನಿ ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ, ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ, ಆದರೆ ಮುಖ್ಯವಾಹಿನಿಯಲ್ಲಿರಿ ಎಂದಿದ್ದೆ. ಇಷ್ಟು ದಿನ ಇದನ್ನು ಬಹಿರಂಗಗೊಳಿಸಿರಲಿಲ್ಲ. ಇಂದು ಬಹಿರಂಗಗೊಳಿಸಿದ್ದೇನೆ ” ಎಂದು ಹೇಳಿದರು.
ಅಪ್ಪು ಆಪ್, ವಿಶೇಷತೆಗಳ ತಿಳಿಸಿದ ಅಶ್ವಿನಿ: ಆಪ್ ಲೋಕಾರ್ಪಣೆ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆಪ್ ಅಲ್ಲ, ನಿಮ್ಮ ಆಪ್ ಎಂದು ಹೇಳಿದರು.

ಸ್ಟಾರ್ ಫ್ಯಾನ್ಡಮ್‌ ಆ್ಯಪ್ ಪುನೀತ್ ರಾಜ್‍ಕುಮಾರ್ ಅವರ ಸಿನಿಮಾಗಳು, ಫಿಟ್ನೆಸ್ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.  ಸ್ಟಾರ್ ಫ್ಯಾನ್ಡಮ್ ಆ್ಯಪ್ ಸಂಸ್ಥೆಯ ಅಧ್ಯಕ್ಷ ಡಾ.ಸಮರ್ಥ ರಾಘವ ನಾಗಭೂಷಣಂ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ