ಸ್ವಿಟ್ಜರ್ಲೆಂಡ್ನ ಕ್ರ್ಯಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷಾಚರಣೆ ಸಂದರ್ಭ ಭೀಕರ ಅಗ್ನಿ ದುರಂತ ಸಂಭವಿಸಿ 47 ಮಂದಿ ಮೃತಪಟ್ಟಿದ್ದಾರೆ. ಇದು ಭಯೋತ್ಪಾದಕ ದಾಳಿ ಇರಬಹುದು ಎಂಬ ಶಂಕೆ ತಳ್ಳಿಹಾಕಿರುವ ಅಧಿಕಾರಿಗಳು, ಬೆಂಕಿಯಿಂದ ಅವಘಡ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದೇಶಾದ್ಯಂತ 5 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಭೂಲೋಕದ ಸ್ವರ್ಗ ಎಂದೇ ಕರೆಯುವ ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಅಗ್ನಿ ದುರಂತ ಸೂತಕದ ಛಾಯೆ ಮೂಡಿಸಿದೆ. ಸ್ವಿಟ್ಜರ್ಲೆಂಡ್ನ ಆಲ್ಪ್ಸ್ ಪರ್ವತ ಪ್ರದೇಶದಲ್ಲಿರುವ ಕ್ರ್ಯಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 47 ಮಂದಿ ಸಾವನ್ನಪ್ಪಿದ್ದಾರೆ.
ಈ ದುರಂತದ ಕುರಿತು ಭಯೋತ್ಪಾದಕ ಚಟುವಟಿಕೆಯ ಕೈವಾಡದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಘಟನೆಗೆ ಯಾವುದೇ ಭಯೋತ್ಪಾದಕ ದಾಳಿ ಕಾರಣವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಾಲಿಸ್ ನ ಪ್ರಾಸಿಕ್ಯೂಟರ್ ಜನರಲ್ ಬೀಟ್ರಿಸ್ ಪಿಲ್ಲೌಡ್ “ಪ್ರಸ್ತುತ ನಾವು ಬೆಂಕಿಯ ಆಯಾಮವನ್ನು ಪ್ರಬಲವಾಗಿ ಪರಿಗಣಿಸುತ್ತಿದ್ದೇವೆ. ಅಲ್ಲದೆ, ಸದ್ಯಕ್ಕೆ ಯಾವುದೇ ಭಯೋತ್ಪಾದಕ ದಾಳಿಯ ಬಗ್ಗೆ ಕುರುಹುಗಳಿಲ್ಲ. ಅಲ್ಲದೆ, ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಗುರುತಿಸುವ ಕಾರ್ಯಚರಣೆಯಲ್ಲಿ ತೊಡಗಿರುವ ವಾಲಿಸ್ ಕ್ಯಾಂಟನ್ ಪೊಲೀಸ್ ಕಮಾಂಡರ್ ಫ್ರೆಡ್ರಿಕ್ ಗಿಸ್ಲರ್ ಮಾತನಾಡಿದ್ದು, ” ಈ ದುರಂತದಿಂದಾಗಿ ಒಂದು ಸಮುದಾಯವೇ ಧ್ವಂಸವಾಗಿದ್ದು, ಮೃತದೇಹಗಳನ್ನು ಗುರುತಿಸಿ ಕುಟುಂಬಗಳಿಗೆ ತಿಳಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದು, ಈ ಘಟನೆ ಬಗ್ಗೆ ಹೆಚ್ಚಿನ ವಿಧಿವಿಜ್ಞಾನ ತನಿಖೆ ಅಗತ್ಯವಿದೆ. ಆ ಕಾರ್ಯಚರಣೆ ಮುಗಿದಿದ್ದು ಮೃತದೇಹವನ್ನು ಆದಷ್ಟು ಬೇಗ ಕುಟುಂಬಸ್ಥರಿಗೆ ಹಸ್ತಾಂತರಿಸಲು ಈ ಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ” ಎಂದು ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ನ ಆಲ್ಪ್ಸ್ ಪರ್ವತ ಪ್ರದೇಶದಲ್ಲಿರುವ ಕ್ರ್ಯಾನ್ಸ್-ಮೊಂಟಾನಾದಲ್ಲಿನ ಪ್ರಸಿದ್ದ ಹಾಗೂ ಐಷಾರಾಮಿ ಲೆ ಕಾನ್ಸ್ಟೆಲೇಷನ್ ಬಾರ್ ನಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಹೊಸ ವರ್ಷವನ್ನು ಸ್ವಾಗತಿಸಲು ಸೇರಿದ್ದರು. ಆದರೆ ಮಧ್ಯರಾತ್ರಿ 1:30ರ ಸುಮಾರಿಗೆ ಅಚಾನಕ್ ಆಗಿ ಸಂಭವಿಸಿದ ಅಗ್ನಿ ಅವಘಡದಿಂದ ಸುಮಾರು 47 ಮಂದಿ ಬಲಿಯಾಗಿದ್ದು, 100ಕ್ಕೂ ಅಧಿಕ ಜನರಿಗೆ ಸುಟ್ಟಗಾಯಗಳೊಂದಿಗೆ ಗಂಭೀರ ಗಾಯಗಳಾಗಿದ್ದವು. ಅಲ್ಲಿ ನೆರೆದಿದ್ದವರಲ್ಲಿ ಹೆಚ್ಚಿನವರು ಪ್ರವಾಸಿಗರೇ ಆಗಿದ್ದರು ಎಂದು ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ಹೊತ್ತಿಕೊಂಡ ಮೇಣದ ಬತ್ತಿಯು ಮರದ ಮೇಲ್ಛಾವಣಿಗೆ ತಗುಲಿ, ಬೆಂಕಿ ವೇಗವಾಗಿ ಹರಡಲು ಕಾರಣವಾಗಿರಬಹುದು. ಇದು ದಿಢೀರ್ ಮತ್ತು ತೀವ್ರವಾದ ಜ್ವಾಲೆಯ ಹರಡುವಿಕೆ ಅಥವಾ ಹಿಮ್ಮುಖ ಸ್ಫೋಟವಾಗಿರಬಹುದು ಅಥವಾ ಪಟಾಕಿಗಳಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ಊಹಿಸಲಾಗಿತ್ತುಎನ್ನಲಾಗಿದೆ.
5 ದಿನ ಶೋಕಾಚರಣೆ: ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಗೈ ಪಾರ್ಮೆಲಿನ್ ಇದು ದೇಶದ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ. ಈ ಘಟನೆಯಲ್ಲಿ ಜೀವ ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಮುಂದಿನ 5 ದಿನಗಳು ದೇಶದಾದ್ಯಂತ ಶೋಕಾಚರಣೆಯನ್ನು ಘೋಷಿಸಲಾಗುತ್ತಿದೆ ಎಂದು ಆದೇಶ ಹೊರಡಿಸಿದ್ದಾರೆ.





