ಬಂತಿದೋ ಆಲಿಯಾ ಕಾಲ

ರಣಬೀರ್‌ ಕಪೂರ್‌ಗೆ ಕೊರೋನಾ ಆದಾಗಿನಿಂದ, ದುಃಖತಪ್ತೆ ಆಲಿಯಾ, ನಕ್ಕಿದ್ದೇ ಕಡಿಮೆ. ಈಗ ಸಣ್ಣ ಅವಕಾಶ ಸಿಕ್ಕಿದೆ, ಅದೇನಂತೀರಾ? ಅವಳ ಇತ್ತೀಚಿನ `ಗಂಗೂಬಾಯಿ’ ಚಿತ್ರದ ಟ್ರೇಲರ್‌ ಔಟಾದದ್ದೇ ಬಹಳ ಜನ ಅದನ್ನು ಮೆಚ್ಚಿ ಹೊಗಳಿದ್ದಾರೆ! ಇದೀಗ ಇವಳ ಮತ್ತೊಂದು ಹೊಸ ಚಿತ್ರದ ಫ್ರೆಶ್‌ ಲುಕ್ಸ್ ರಿಲೀಸ್‌ ಆಗಿ, ಅದು ಎಲ್ಲರ ವಾಹ್‌! ವಾಹ್‌! ಗಿಟ್ಟಿಸಿದೆ. ಇದೀಗ ಇವಳ ಒಂದಲ್ಲ 2 ಚಿತ್ರಗಳು ರಿಲೀಸ್‌ಗೆ ರೆಡಿ! ಅದರ ನಿರ್ದೇಶಕರ ತಾಕತ್ತು ಗಮನಿಸಿದರೆ 2021ರಲ್ಲಿ ಆಲಿಯಾ ಗೆದ್ದಳೆಂದೇ ಲೆಕ್ಕ!

ಸೋನಾಕ್ಷಿಗೆ ದಕ್ಕಿದ OTT ಆಸರೆ

sonakshi1

ಪಾಪ, ಸೋನಾ ಬೇಬಿ ಕೇವಲ ಬಾಲಿವುಡ್‌ನ ಬೆಳ್ಳಿ ತೆರೆಯಿಂದ ಮಾತ್ರವಲ್ಲ, ಸ್ವಾರಸ್ಯಕರ ಗಾಸಿಪ್‌ಗಳಿಲ್ಲದೆ ಜನರ ನೆನಪಿನಿಂದಲೂ ದೂರ ಸರಿದಿದ್ದಳು. ಈ ಮಧ್ಯೆ ಆಕಸ್ಮಿಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿ ಸೋನಾ ಮಿಂಚಿದ್ದೂ ಮಿಂಚಿದ್ದೆ! ತಕ್ಷಣ ಸುದ್ದಿಗಾರರು ಇದರ ಮೂಲ ಅರಸುತ್ತಾ ಹೊರಟರು. ಅದರಿಂದ ತಿಳಿದದ್ದು ಎಂದರೆ, ಸೋನಾ ಇತ್ತಿಚೆಗೆಗೆ OTTಗಾಗಿ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾಳಂತೆ! ಇದು ಅದರದೇ ಲುಕ್‌. ಪಾಲಿಗೆ ಬಂದದ್ದೇ ಪಂಚಾಮೃತ, ಹಿರಿತೆರೆ ಇಲ್ಲದ್ದಿದರೇನಂತೆ….. ಸೋನಾಗೆ OTT ಕೃಪಾಕಟಾಕ್ಷವಾದರೂ ಸಿಕ್ಕಿತಲ್ಲ ಜನರನ್ನು ಮನೆಯಲ್ಲೇ ತಲುಪಲು……

ವಿಚ್ಛೇದನ ತಪ್ಪಿಸಲು ಟ್ವಿಂಕಲ್ ಹೇಳಿದ ಉಪಾಯ

akshye_or_twinkale1

ಬಾಲಿವುಡ್‌ನಲ್ಲಿ ಏನೋ ಒಂದು ಕಾರಣಕ್ಕೆ ಜಗಳವಾಡಿ ಬೇರಾಗದ ಜೋಡಿ ಅಪರೂಪವೆಂದೇ ಹೇಳಬೇಕು. ಅಂಥ ಒಂದು ಅಪೂರ್ವ ಸುಖೀ ಜೋಡಿ ಎಂದರೆ ಅಕ್ಷಯ್‌ ಟ್ವಿಂಕಲ್ ಖನ್ನಾರದು. ಇತ್ತೀಚೆಗೆ ಟ್ವಿಂಕಲ್ ಸೋಶಿಯಲ್ ಮೀಡಿಯಾದಲ್ಲಿ, ಗಂಡನ ಜೊತೆ ತನ್ನ ಫೋಟೋ ಶೇರ್‌ ಮಾಡುತ್ತಾ, ಎಲ್ಲಾ ಜೋಡಿಗಳೂ ಇದೇ ತರಹ ನಿಜ ಜೀವನದಲ್ಲೂ ಸದಾ ನಸುನಗುತ್ತಿದ್ದರೆ, ಅಂದ್ರೆ ಪ್ರತಿ ಸಲ ಫೋಟೋಗೆ ಪೋಸ್‌ ಕೊಡುವಾಗ ನಗುವಂತೆ, ಆಗ ಮಾತ್ರ ಹೆಚ್ಚುತ್ತಿರುವ ವಿಚ್ಛೇದನಗಳ ಸಂಖ್ಯೆ ತಗ್ಗಬಹುದು ಎಂದಿದ್ದಾಳೆ. ಮಾತೇನೋ ಸರಿ, ಆದರೆ ಇಂಥ ಸಲಹೆಗಳನ್ನು ಈವರೆಗೂ ಅದೆಷ್ಟು ಲಕ್ಷಾಂತರ ಜನ ಕೊಟ್ಟಿದ್ದಾರೋ…..? ನಮ್ಮ ಜನ ಕಿವಿಗೊಡುತ್ತಾರೆಯೇ?

ಬೆಂಗಾಡಿನ ಬಾಲಿವುಡ್‌ನಲ್ಲಿ ಚಿಮ್ಮಿದ ಓಯಸಿಸ್‌ ರೂಹಿ

roohi1

ಕೊರೋನಾ ಕಾರಣದಿಂದ ಎಲ್ಲಾ ಉದ್ಯಮಗಳೂ ಬೆಂಗಾಡಾಗಿರುವಂತೆ ಬಾಲಿವುಡ್‌ನಲ್ಲೂ ಸಹ ಇತ್ತೀಚೆಗೆ ಬಿಡುಗಡೆಯಾದ `ರೂಹಿ’ ಚಿತ್ರ ಓಯಸಿಸ್‌ ಎಂದೇ ನಿರೂಪಿತವಾಗಿದೆ! ರಿಲೀಸ್‌ ಆದ ಮೊದಲ ವಾರಾಂತ್ಯದಲ್ಲೇ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ 13 ಕೋಟಿಗೂ ಹೆಚ್ಚಿನ ಹಣ ಬಾಚಿದೆ. ಮುಂದಿನ ದಿನಗಳೂ ಹೀಗೇ ಇದ್ದರೆ, ಈ ಚಿತ್ರ 20-25 ಕೋಟಿ ಗಳಿಸುವುದರಲ್ಲಿ 2 ಮಾತಿಲ್ಲ. ಹೀಗಾಗಿ ಚಿತ್ರದ ತಾರಾ ಬಳಗಾದ ರಾಜ್‌ಕುಮಾರ್‌ ರಾವ್‌, ಜಾಹ್ನವಿ ಕಪೂರ್‌, ಹಿಮಾಂಶುರಿಗೆ ಅಚ್ಛೇ ದಿನ್‌ ಬಂತೆಂದೇ ಲೆಕ್ಕ. ರಾಜಕುಮಾರ್‌ ಹಿಟ್‌ ನೀಡುತ್ತಲೇ ಇದ್ದಾನೆ, ಆದರೆ ಮುಳುಗುವ ದೋಣಿ ಏರಿದ್ದ ಜಾಹ್ನವಿ (ಶ್ರೀದೇವಿ ಮಗಳು), ಹಿಮಾಂಶು ಸಹ ಕೆರಿಯರ್‌ನ ದಡ ಕಾಣುವಂತಾಗಿದೆ.

ಹೃತಿಕ್V/S ಪ್ರಭಾಸ್‌

retik1

ಅ…ಯ್ಯ….ಯ್ಯೋ ! ಇವರಿಬ್ಬರ ಮಧ್ಯೆ ಏನಪ್ಪ ಜಗಳ ಅಂದುಕೊಳ್ಳಬೇಡಿ. ಅಸಲಿಗೆ ಟೈಗರ್‌ನ ಸೂಪರ್‌ ಹಿಟ್‌ ಚಿತ್ರ `ವಾರ್‌’ ಇದೀಗ `ವಾರ್‌’ ಆಗಿ ಶುರುವಾಗಲಿದೆ. ಇದನ್ನು ಮೊದಲಿನ ಚಿತ್ರಕ್ಕಿಂತ ಹೆಚ್ಚು ರೋಮಾಂಚಿತಗೊಳಿಸಲು, ಅಂದ್ರೆ ಮೊದಲಿಗಿಂತಲೂ ಹೆಚ್ಚು ಮಾರಾಮಾರಿ ತುಂಬಿಸಲು, ಘಟಾನುಘಟಿಗಳೇ ಬೇಕಲ್ಲವೇ? ಹೀಗಾಗಿ ಬಾಹುಬಲಿ ಪ್ರಭಾಸ್‌ನನ್ನು ಚಿತ್ರದ ಹೀರೋ ಹೃತಿಕ್‌ ಜೊತೆ ಹಣಾಹಣಿಗೆ ಇಳಿಸಲಾಗಿದೆ!

ಯಾವ ಕಾನ್ಸೆಪ್ಟ್ ಸರಿ ಹೋದೀತು?

prabhas2

ಭಾರತೀಯರ ಮಧ್ಯೆ OTT  ಜನಪ್ರಿಯವಾದಾಗಿನಿಂದ, ಜನ ಇದರ ಹುಚ್ಚರಾಗಿದ್ದಾರೆ. ಇದರ ಹಿಂದಿನ ಕಾರಣ? ಈ ಚಿತ್ರಗಳಿಗೆ ಕತ್ತರಿ ಆಡಿಸುವ ಸೆನ್ಸಾರ್‌ ಮಂಡಳಿ ಎಂಬ ರಿಂಗ್‌ ಮಾಸ್ಟರ್‌ ಕೈವಾಡವಿರಲಿಲ್ಲ! ಇದರಲ್ಲಿ ಸಂಭಾಷಣೆ, ದೃಶ್ಯಾವಳಿಗಳೂ ಕೂಡಿದ್ದವು ಎಂಬುದೇ ಪ್ಲಸ್‌ ಪಾಯಿಂಟ್‌. ಇದೀಗ ಸರ್ಕಾರ ಇದರತ್ತ ಕೆಂಗಣ್ಣು ಹೊರಳಿಸಿ, ಇದರ ಮೇಲೆ ನಿಯಂತ್ರಣ ಹೇರಿದಾಗಿನಿಂದ ಇದರತ್ತ ವೀಕ್ಷಕರ ಅಭಿರುಚಿ ಬದಲಾಗಿದೆ. ಅದೇ ತರಹ ವೆಬ್‌ ಸೀರೀಸ್‌ ನಿರ್ಮಾಪಕರೂ ಸಹ ಯಾವಾಗ ಯಾವ ದೃಶ್ಯ ಆಕ್ಷೇಪಾರ್ಹವೋ ಎಂದು ಬಾಯಿಗೆ ಅಕ್ಕಿಕಾಳು ಹಾಕಿಕೊಂಡು ಕುಳಿತಿದ್ದಾರೆ. `ಬಾಂಬೆ ಬೇಗಮ್ಸ್’ ಚಿತ್ರಕ್ಕೆ ಸಂಬಂಧಿಸಿದ ಹೊಸ ಪ್ರಕರಣ ಕಪಿಮುಷ್ಟಿಗೆ ಸಿಲುಕಿದಾಗಿನಿಂದ ನಿರ್ಮಾಪಕರಿಗೆ ಈ ಚಿಂತೆ ಹೆಚ್ಚಾಗಿದೆ. ಈ ಚಿತ್ರದ ಕಲಾವಿದರೊಬ್ಬರು ಗಂಭೀರವಾಗಿ ಸ್ಪಂದಿಸುತ್ತಾ, ಹೀಗೆ ಚಿತ್ರದ ವಿರುದ್ಧ ದೂರು ಕೊಟ್ಟರು, ಯಾವ ದೃಶ್ಯಗಳು ಸರಿ ಇಲ್ಲ ಎಂದು ಕತ್ತರಿ ಹಾಕಿ ಮರುಪ್ರಸಾರ ಬಯಸುತ್ತಾರೋ ಅಂಥ ದುಶ್ಚಟ ನಮ್ಮ ಸಮಾಜದಿಂದ ದೂರವಾಗುವಂತೆ ಇವರೇಕೆ ಮಾಡಬಾರದು ಎಂದು ಪ್ರಶ್ನಿಸುತ್ತಾರೆ. ಯಾವ ಚಿತ್ರ ನೋಡಬೇಕು, ಬಾರದು ಎಂಬ ನಿರ್ಧಾರ ಪ್ರೇಕ್ಷಕರೇ ತೆಗೆದುಕೊಳ್ಳಲಿ.

ಇದೀಗ ಚರ್ಚೆಯಲ್ಲಿದೆ ಈ ಚಹರೆಗಳು

cheher1

`ಚೆಹರೆ’ ಚಿತ್ರ ತನ್ನ ಕೆಲವು ಸಂಭಾಷಣೆಗಳಿಂದಾಗಿ ಇದೀಗ ಅಪಾರ ಚರ್ಚೆಯಲ್ಲಿದೆ! ಆದರೆ ಈ ಚಿತ್ರದ ಕೆಲವು ಚಹರೆಗಳು, ಚಿತ್ರದ ಬಿಡುಗಡೆಗೆ ಮುಂಚೆಯೇ ಚರ್ಚೆಯಲ್ಲಿದ್ದವು. ಒದಲ ಚಹರೆ ಎಂದರೆ ಅಮಿತಾಬ್, ಇವರ ಲುಕ್ಸ್ ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮತ್ತೊಂದು ಚಹರೆ ಅಂದ್ರೆ ರಿಯಾ ಚಕ್ರವರ್ತಿ, ಇವಳು ಪೋಸ್ಟರ್‌ನಿಂದ ಕಣ್ಮರೆ ಆಗಿದ್ದರೂ ಚರ್ಚೆಗಂತೂ ಉಳಿದಿದ್ದಾಳೆ. ಸುದ್ದಿಗಾರರಂತೂ ಸದಾ ತಮ್ಮ ಕ್ಯಾಮೆರಾ ಪೊಸಿಷನ್‌ನಲ್ಲಿ ಇರಿಸಿಕೊಂಡು, ಈ ಹುಡುಗಿ ಸುಶಾಂತ್‌ ಕೇಸಿನಿಂದ ಹೆಸರು ಗಳಿಸಿದ್ದಳು, ಇದೀಗ ಈ ಚಿತ್ರದ ಪ್ರಮೋಶನ್‌ಗೂ ಬರುತ್ತಾಳಾ ಅಂತ ಕಾಯುತ್ತಿದ್ದಾರೆ. ಹಾಗೇನೂ ಇಲ್ಲ ಅನ್ಸುತ್ತೆ, ಏಕೆಂದರೆ ಸುದ್ದಿಗಾರರ ಪ್ರಕಾರ, ಸುಶಾಂತ್‌ ಕೇಸ್‌ನ ಈ ಹುಡುಗಿ ಚಿತ್ರದ ಪ್ರಚಾರಕ್ಕೆ ಬಂದರೆ ಅದರಿಂದ ತಮಗೆ ಕಂಟಕ ತಪ್ಪಿದ್ದಲ್ಲ ಎಂದು ನಿರ್ಮಾಪಕರು ಚೆನ್ನಾಗಿ ಬಲ್ಲರು!

ಮರಳಿ ಬಂದ ಈಶಾ`ಧೂಮ್’ ಚಿತ್ರದ ಈಶಾ ಡಿಯೋಲ್ ‌(ಹೇಮಾಮಾಲಿನಿ ಹಿರಿ ಮಗಳು) ನಿಮಗೆ ನೆನಪಿದ್ದಾಳಾ ಅಥವಾ ಮರೆತೇಬಿಟ್ಟಿರಾ? ಅಂದ ಹಾಗೆ ಈ ಮಹಾತಾಯಿಯನ್ನು ನೆನಪಿಸಿಕೊಳ್ಳುವಂಥ ಯಾವ ಘನ ಕಾರ್ಯವನ್ನೂ ಅವಳು ಮಾಡಿಲ್ಲ ಬಿಡಿ. ತಪ್ಪು ತಿಳೀಬೇಡಿ, ನಾವು ಅವಳ ಸಿನಿ ಕೆರಿಯರ್‌ ಬಗ್ಗೆ ಮಾತ್ರ ಹೇಳಿದ್ದು. ಮದುವೆ, ಮಕ್ಕಳಾದ ಮೇಲೆ ಹದಿನಾರಾಣೆ ಅಪ್ಪಟ ಗೃಹಿಣಿಯಾಗಿ ಉಳಿದ ಇವಳು ಮತ್ತೆ ಗ್ಲಾಮರ್‌ ಲೋಕಕ್ಕೆ ಮರಳಿ ಬಂದಾಳು ಎಂದು ಇವಳ ಅಳಿದುಳಿದ ಫ್ಯಾನ್ಸ್ ಸಹ ನಂಬುತ್ತಿಲ್ಲ ಬಿಡಿ. ಆದರೆ ಹಾಗೆ ನಡೆಯುತ್ತಿರುವುದಂತೂ ನಿಜ. ನಂಬಲರ್ಹ ಮೂಲಗಳ ಪ್ರಕಾರ ಇದೀಗ ಇವಳು ಹೊಸ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾಳಂತೆ. ನಿಮ್ಮಮ್ಮನ ಪಾಲಿನ 1% ಯಶಸ್ಸಾದರೂ ನಿನಗೆ ಸಿಗಲಿ ಎನ್ನುತ್ತಿದ್ದಾರೆ ಫ್ಯಾನ್ಸ್!

ಯಾರು ಯಾರಿಗೆ ಸಲಹೆ ಕೊಡೋದು…..?

harfanmaula1

ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್ ಎಂದೇ ಖ್ಯಾತವಾದ ಆಮೀರ್‌ಗೆ ಯಾರಾದರೂ ರೀಟೇಕ್‌ ಮಾಡಲು ಹೇಳಿದರೆ ಅದು ಸೋಜಿಗ ತಾನೇ? ಸುದ್ದಿಗಾರರ ಪ್ರಕಾರ ಆಮೀರ್‌ ಎಲೀ ನಟನೆಯ `ಹರ್ಫನ್‌ ಮೌಲಾ….’ ಹಾಡಿನ ಶೂಟಿಂಗ್‌ನಲ್ಲಿ ಹೀಗಾಯ್ತಂತೆ. ಅಸಲಿಗೆ ಎಲೀ ಈ ಹಾಡಿನ ಕೆಲವು ದೃಶ್ಯಗಳ ಕುರಿತು ಸಂದೇಹದಲ್ಲಿದ್ದಳು. ಇದನ್ನು ಆಮೀರ್‌ಗೂ ಹೇಳಿದಳಂತೆ. ಅಷ್ಟೇ ಅಲ್ಲ, ಆ ಹಾಡಿನ ಮರುಚಿತ್ರಣವನ್ನೂ ಮಾಡಿಸಿದಳಂತೆ. ಕೇವಲ ಕೆಲವೇ ಚಿತ್ರಗಳಲ್ಲಿ ನಟಿಸಿರುವ ಈ ಎಳೇ ನಿಂಬೆಕಾಯಿ ತನಗೇ ಸಲಹೆ ನೀಡುವುದೇ ಎಂದು ಒಂದು ಕ್ಷಣ ಆಮೀರ್‌ ಬೆಚ್ಚಿಬಿದ್ದನಂತೆ. ಹೇಗೇ ಇರಲಿ, 2ನೇ ಸಲ ಶೂಟಾದ ಈ ಹಾಡು ಇದೀಗ ಹಿಟ್ ಎನಿಸಿದೆ.

ಈದ್‌ ಹಬ್ಬಕ್ಕೆ ಬರಲಿದೆ ರಾಧೆ

radhe1

ಈತನ ಕಮಿಟ್‌ಮೆಂಟ್‌ ಮೆಚ್ಚತಕ್ಕದ್ದು. ಇತ್ತೀಚೆಗಷ್ಟೆ ಸಲ್ಮಾನ್‌ ತನ್ನ ಮುಂದಿನ `ರಾಧೆ’ ಚಿತ್ರದ ಲುಕ್ಸ್ ರಿಲೀಸ್‌ ಮಾಡುತ್ತಾ, ಚಿತ್ರ ಖಂಡಿತಾ ಈದ್‌ಗೆ ರಿಲೀಸ್‌ಆಗುತ್ತೆ ಎಂದಿದ್ದ. ಸಹಜವಾಗಿಯೇ ಈತನ ಫ್ಯಾಸ್ ಖುಷಿಗೊಂಡಿದ್ದಾರೆ. ಚಿತ್ರಮಂದಿರಗಳ ಮಾಲೀಕರೂ ಖುಷಿಯಾಗಿದ್ದಾರೆ. ಕೊರೋನಾ ಕಾರಣ ಇವನೂ ಇತರರಂತೆ ನಾನಾ ಪಾಡು ಪಟ್ಟಿದ್ದ, ಈ ಚಿತ್ರದ ಮೂಲಕವಾದರೂ ಬಾಕ್ಸ್ ಆಫೀಸ್‌ ಹಿಗ್ಗುತ್ತೋ ನೋಡಬೇಕು. ಅದೇ ತರಹ ಅಕ್ಷಯ್‌ನ `ಸೂರ್ಯವಂಶಿ’ ಸಹ ಥಿಯೇಟರ್‌ಗಳಲ್ಲಿ ಇದೇ ಸಂದರ್ಭದಲ್ಲಿ ರಿಲೀಸ್‌ ಆಗುವ ಸಂಭವವಿದೆ. ಇಬ್ಬರು ಘಟಾನುಘಟಿಗಳ ಕಾರಣ ಥಿಯೇಟರ್‌ ಮಾಲೀಕರಿಗಂತೂ  ಸುಗ್ಗಿ!

ಹಿರಿ ತೆರೆಯಲ್ಲಿ ಬರೋದಿಲ್ವಂತೆ ತೂಫಾನ್

toofan1

ಯಶಸ್ವಿ `ಭಾಗ್‌ ಮಿಲ್ಕಾ ಭಾಗ್‌’ ಚಿತ್ರದ ನಿರ್ದೇಶಕರಿಂದ ಮತ್ತೊಂದು ಹೊಸ ಚಿತ್ರ `ತೂಫಾನ್‌’ ಥಿಯೇಟರ್‌ನಲ್ಲೇ ರಿಲೀಸ್‌ಆಗುತ್ತೆ ಅಂತ ಅದರ ಓನರ್‌ಗಳು ಕಾದಿದ್ದೇ ಬಂತು, ಆದರೆ ಈ ಚಿತ್ರ ಅವರ ಕೈ ತಪ್ಪಿ OTT  ಪಾಲಾಯಿತು. ಚಿತ್ರ ನಿರ್ಮಾಪಕರಿಗೆ ಅಲ್ಲೇ `ದೊಡ್ಡ’ ಮೊತ್ತ ಸಿಕ್ಕಿರುವಾಗ ಚಿತ್ರಮಂದಿರಗಳ ರಿಸ್ಕ್ ತೆಗೆದುಕೊಳ್ತಾರಾ? ಆದರೆ OTT ಹೊಸ ನಿಮಯಗಳ ಪ್ರಕಾರ ಯಾವ ದೃಶ್ಯಗಳಿಗೆ ಕತ್ತರಿ ಬೀಳುತ್ತೋ ಎಂಬ ಭಯ ತಪ್ಪಿದ್ದಲ್ಲ. ಹೀಗೇ ಎಲ್ಲಾ ಚಿತ್ರಗಳೂ ತಮ್ಮ ಕೈ ತಪ್ಪಿದರೆ, ದೇಶಾದ್ಯಂತ ಎಲ್ಲಾ ಥಿಯೇಟರ್‌ಗಳೂ `ಮಾಲ್‌’ ಆಗುವ ದಿನ ದೂರವಿಲ್ಲ ಅಂತಾರೆ ಅದರ ಓನರ್‌ಗಳು. ಹಾಗೇನೂ ಆಗಲಾರದು, ಜನ ಎಷ್ಟು ದಿನ OTTಗೆ ಅಂಟಿ ಮನೆಯಲ್ಲಿ ಕೂರುತ್ತಾರೆ ಎಂಬುದು ಆರ್ಥಿಕ ತಜ್ಞರ ವಿಮರ್ಶೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ