ಶರತ್ ಚಂದ್ರ
ಕನ್ನಡಿಗರ ಮೆಚ್ಚಿನ ಧ್ವನಿ ಯಗಿದ್ದ ಅಪರ್ಣ ನಮ್ಮನ್ನು ಆಗಲಿ ಇದೇ ಜುಲೈ ತಿಂಗಳಿಗೆ ಎರಡು ವರ್ಷಗಳಾ ದರೂ,ಆ ಸುಂದರ ಧ್ವನಿ ಈಗಲೂ ಜನರ ಕಿವಿಯಲ್ಲಿ ಮತ್ತು ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ.
ಪುಟ್ಟಣ್ಣ ಅವರ' ಮಸಣದ ಹೂ 'ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದ ಅಪರ್ಣ ವಸ್ತಾರೆ, ಸಿನಿಮಾಗಳಲ್ಲಿ ಅಭಿನಯಿಸಿದ್ದು ಬೆರಳೆಣಿಕೆಯ ಚಿತ್ರಗಳು. ಮೊದಲ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೂ ಕೂಡ ನಂತರ ಸಿಕ್ಕಿದ್ದು 'ನಮ್ಮೂರ ರಾಜ 'ಒಂದಾಗಿ ಬಾಳು ' ಚಿತ್ರಗಳಲ್ಲಿ ತಂಗಿಯ ಪಾತ್ರ.ನಿರೂಪಕಿಯಾಗಿ ಜನಪ್ರಿಯರಾದ ಮೇಲೆ ಕಿರುತೆರೆಯಲ್ಲಿ ಒಂದಷ್ಟು ಪಾತ್ರಗಳನ್ನು ಮಾಡಿದ್ದು ಬಿಟ್ಟರೆ ಸಿನಿಮಾದ ಕಡೆ ಮುಖ ಮಾಡಿರಲಿಲ್ಲ.

ಎಲ್ಲಾ ತರದ ಪಾತ್ರ ನಿಭಾಯಿಸುವ ಸಾಮರ್ಥ್ಯ ಆಕೆಗೆ ಇತ್ತು ಅಂತ ತೋರಿಸಿ ಕೊಟ್ಟಿದ್ದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಶೋ ಮೂಲಕ. ಆಕೆಯ ಹಾಸ್ಯ ಭರಿತ ಪಾತ್ರ ಈಗಲೂ ಜನ ಮರೆತಿಲ್ಲ.
ಇಷ್ಟೆಲ್ಲಾ ಪೀಠಿಕೆಯ ಉದ್ದೇಶ ಅಪರ್ಣ ಅಭಿನಯಿಸಿರುವ ಕೊನೆಯ ಚಿತ್ರ 'ಗ್ರಾಮಾಯಣ ' ಬಿಡುಗಡೆಯಾಗಿದೆ.ಹೆಸರೇ ಹೇಳುವಂತೆ ಹಳ್ಳಿಯ ಕಥಾ ವಸ್ತು ಹೊಂದಿರುವ ಈ ಚಿತ್ರದಲ್ಲಿ,ನಾಯಕ ವಿನಯ್ ರಾಜಕುಮಾರ್ ಅವರ ಅಮ್ಮನಾಗಿ, ಕುಟುಂಬದ ಜವಾಬ್ದಾರಿ ವಹಿಸಿ ಗಂಡ ಮತ್ತು ಮಗನನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ ಗಟ್ಟಿಗಿತ್ತಿಯ ಪಾತ್ರವನ್ನು ಅಪರ್ಣ ಮಾಡಿದ್ದಾರೆ.

ಸಿನಿಮಾದಲ್ಲಿ ಆಕೆಯ ಪಾತ್ರ ಕೆಲವೇ ಸನ್ನಿವೇಶಗಳಲ್ಲಿ ಬಂದು ಹೋದರೂ ಪ್ರೇಕ್ಷಕರಿಗೆ ಆ ಪಾತ್ರ ಇಷ್ಟವಾಗುತ್ತದೆ.
ತನ್ನ ನಿರೂಪಣೆಯಲ್ಲಿ ಯಾವಾಗಲೂ ಸುಸಂಸ್ಕೃತ ಪದಗಳನ್ನು ಬಳಸುತ್ತಿದ್ದ ಅಪರ್ಣ, ಹಳ್ಳಿ ಭಾಷೆಯಲ್ಲಿ ಬಯ್ಯುವ ರೀತಿ ನೋಡಿ ಜನ ಬೆರಗಾಗಿದ್ದಾರೆ.

ಒಟ್ಟಿನಲ್ಲಿ ನಿರ್ದೇಶಕ ದೇವನೂರು ಚಂದ್ರು ಈ ಪಾತ್ರವನ್ನು ಅಪರ್ಣ ಕೈಲ್ಲಿ ಮಾಡಲು ಒಪ್ಪಿಸಿದ್ದು ವಿಶೇಷವಾಗಿದ್ದರೆ,ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿ ಅಪರ್ಣ ಮತ್ತೆ ಜನರ ಮನಸ್ಸನ್ನು ಗೆದ್ದಿರುವುದು ಇನ್ನೊಂದು ವಿಶೇಷ.ಸಿನಿಮಾ ನೋಡಿದ ಜನ, ಅಪರ್ಣ ಬದುಕಿದ್ದಾಗ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಸಬೇಕಿತ್ತು ಅನ್ನುವ ಅನಿಸಿಕೆ ಮನಸಿನಲ್ಲಿ ಮೂಡಿ ಬಂದಿರಬಹುದು.





