ಮೂರು ದಿನಗಳ ಹಿಂದೆ ಪತ್ರಿಕೆಗಳಲ್ಲಿ ನನ್ನ ಮನ ಮುಟ್ಟಿದ, ಹೃದಯ ಕಲಕಿದ ಸುದ್ದಿ ಓದಿ ಈ ಮಹಾನ್ ವ್ಯಕ್ತಿಯನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿದೆ.
ಇಂದು ಮೈಸೂರಿಗೆ ಹೋಗಿ ಶ್ರೀಮತಿ #ಜ್ಯೋತಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದೆ. ನಿಜಕ್ಕೂ ಇವರ ಜೀವನವನ್ನೇ ಅಲುಗಾಡಿಸಿದ ಘಟನೆ ನಡೆದ ನಂತರ ಇವರು ತೋರಿಸಿದ ನಡವಳಿಕೆ ಅನನ್ಯ.
ಶ್ರೀಮತಿ #ಜ್ಯೋತಿ ಹೆಚ್ ಡಿ ಕೋಟೆ ತಾಲೂಕಿನ #ಸರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕಿ. ಪುಟ್ಟ ಕುಟುಂಬ.
ಕಳೆದ ಶನಿವಾರ, 28.3.26, ಎಸ್ ಎಸ್ ಎಲ್ ಸಿ, ಗಣಿತ ಪತ್ರಿಕೆಯ ಪರೀಕ್ಷೆ ನಡೆಯಿತು.
ಆದರೆ ಅದಕ್ಕೆ ಕೇವಲ ಮೂರು ದಿವಸಗಳ ಹಿಂದೆ ಶ್ರೀಮತಿ ಜ್ಯೋತಿಯವರು ಜೀವನದ ಅತ್ಯಂತ ಸವಾಲನ್ನು ಎದುರಿಸಿದರು. ಪ್ರಶಾಂತವಾಗಿದ್ದ ಈ ಪುಟ್ಟ ಕುಟುಂಬವನ್ನೇ ಪೂರ್ಣ ಅಲುಗಾಡಿಸಿ ಬಿಟ್ಟಿತು.
ಬುಧವಾರ, 25.3.26 ರಂದು ಬೆಳಗ್ಗೆ ಸುಮಾರು 9:30 ಗಂಟೆಗೆ, ಅವರ ಪತಿ ಶ್ರೀ ಕಿರಣ್ ಕುಮಾರ್ ಅವರು ಇದ್ದಕ್ಕಿದ್ದಂತೆ ಮನೆಯಲ್ಲಿ ಉರುಳಿಬಿದ್ದರು. ಅತ್ಯಂತ ಆರೋಗ್ಯವಂತ ರಾಗಿದ್ದ ಶ್ರೀ ಕಿರಣ್ ಕುಮಾರ್ ಅವರ ವಯಸ್ಸು ಕೇವಲ 46.

ಅವರು ಬಿದ್ದ ತಕ್ಷಣ ಪಕ್ಕದ ಮನೆಯವರ ನೆರವಿನಿಂದ ಒಂದು ಆಂಬುಲೆನ್ಸ್ ತರಿಸಿ ಕೇವಲ 20 ನಿಮಿಷಗಳಲ್ಲಿ ಒಂದು ಒಳ್ಳೆಯ ಆಸ್ಪತ್ರೆಗೆ ಶ್ರೀಮತಿ ಜ್ಯೋತಿಯವರು ತನ್ನ ಪತಿಯನ್ನು ಕರೆದೊಯ್ದರು .
ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಕೈ ಚೆಲ್ಲಿದರು. ಅವರು ಏನು ಹೇಳುತ್ತಿದ್ದಾರೆ ಎಂಬುದೇ ಶ್ರೀಮತಿ ಜ್ಯೋತಿ ಅವರಿಗೆ ಅರ್ಥವಾಗುತ್ತಿರಲಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲೇ ಎಂದು ಕೇಳಿದಾಗ ವೈದ್ಯರಿಗೆ ಇವರ ಮನಸ್ಥಿತಿ ಅರ್ಥವಾಗಿ ಶ್ರೀಮತಿ ಜ್ಯೋತಿ ಅವರನ್ನು ಒಂದೆಡೆ ಕುಳ್ಳರಿಸಿದರು.
ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಜ್ಯೋತಿಯವರ ಸಂಬಂಧಿಕರಿಗೆ ವಿಚಾರ ತಿಳಿಸಿ ಇದು ಕೈ ಮೀರಿ ಹೋಗಿರುವ ಪ್ರಸಂಗ. ಏನೇ ಮಾಡಿದರೂ ಉಳಿಸಲು ಸಾಧ್ಯವಿಲ್ಲ ಎಂಬ ಕಠೋರ ಆದರೆ ವಾಸ್ತವ ಸತ್ಯವನ್ನು ವೈದ್ಯರು ಪ್ರಕಟಿಸಿದರು. Massive Heart Attack ನಿಂದ ಶ್ರೀ ಕಿರಣ್ ಕುಮಾರ್ ಅವರು ಕುಟುಂಬವನ್ನು ಬಿಟ್ಟು ಅಗಲಿದರು.
ಅಂದೇ ಸಂಜೆ ಸುಮಾರು ಐದೂವರೆ ಗಂಟೆಗೆ ಶ್ರೀ ಕಿರಣ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ಕ್ರಿಯೆಯೂ ಮುಗಿದು ಹೋಯಿತು.
ಮಾರನೆಯ ದಿನ ಅವರ ಅಸ್ತಿ ವಿಸರ್ಜನೆ ಆದ ನಂತರ, ಶ್ರೀಮತಿ ಜ್ಯೋತಿಯವರಿಗೆ ಸರಗೂರಿನ ತನ್ನ ಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳ ಬಗ್ಗೆ ಆತಂಕ ಉಂಟಾಯಿತು.
ಇದಕ್ಕೆ ಮುನ್ನವೇ ಅವರು ತಮ್ಮ ತರಗತಿಯ 54 ಮಕ್ಕಳನ್ನು ಅವರವರ ಕ್ಷಮತೆಗೆ ಅನುಗುಣವಾಗಿ ಮೂರು ತಂಡಗಳನ್ನಾಗಿ ವಿಂಗಡಿಸಿ ಅವರಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಪ್ಲಾನ್ ಹಾಕಿಕೊಂಡಿದ್ದರು.
ತಮ್ಮ ಹತ್ತಿರದ ಬಂಧುಗಳೊಂದಿಗೆ ಶ್ರೀಮತಿ ಜ್ಯೋತಿಯವರು “ನಾನಂತೂ ನನ್ನ ಪತಿಯನ್ನು ಕಳೆದುಕೊಂಡುಬಿಟ್ಟೆ . ಆದರೆ ಈ ಮಕ್ಕಳ ಭವಿಷ್ಯವೂ ನನಗೆ ಮುಖ್ಯ 54 ಮಕ್ಕಳಲ್ಲಿ 10 ಮಕ್ಕಳು ಫೇಲಾದರೂ ಸಹ ಅವರ ಮುಂದಿನ ಜೀವನ ಏನಾಗಬಹುದು ಗೊತ್ತಾಗುವುದಿಲ್ಲ. ಅದಕ್ಕೆ ನಾನು ಈಗ ಹೋಗಿ ಅವರಿಗೆ ತಯಾರು ಮಾಡುತ್ತೇನೆ” ಎಂದು ತನ್ನ ನಿರ್ಧಾರ ಪ್ರಕಟಿಸಿ ಮನೆಯವರನ್ನು ಒಪ್ಪಿಸಿ ಹೆಗ್ಗಡದೇವನಕೋಟೆಯ ಬಳಿ ಇರುವ ಸರಗೂರಿಗೆ 12.30 ಗಂಟೆ ಸುಮಾರಿಗೆ ಹೋಗಿ ಸಂಜೆ 4:30 ವರೆಗೂ ಆ ಮಕ್ಕಳಿಗೆ ಪರೀಕ್ಷೆಗೆ ಬೇಕಾದ ಭೂಮಿಕೆ ಯನ್ನು ಸಿದ್ಧಗೊಳಿಸಿದರು. ಅಂದು ಆಕೆಯ ಮನಸ್ಥಿತಿ ಹೇಗಿದ್ದಿರಬಹುದು? ಊಹೆ ಮಾಡಲೂ ಸಾಧ್ಯವಿಲ್ಲ.
ಮೊನ್ನೆ ಶನಿವಾರ ಗಣಿತ ಪರೀಕ್ಷೆ ಮುಗಿದ ಮೇಲೆ ಆ 54 ಮಕ್ಕಳೂ ತಮ್ಮ ಟೀಚರ್ ಜ್ಯೋತಿಯವರಿಗೆ ಫೋನ್ ಮಾಡಿ ನಾವು ಪರೀಕ್ಷೆ ಚೆನ್ನಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇಂದು ಶ್ರೀಮತಿ ಜ್ಯೋತಿಯವರು ನನ್ನೊಡನೆ ಈ ಎಲ್ಲ ವಿವರಗಳನ್ನು ಹೇಳುತ್ತಾ ಹೋದಾಗ, ಜೊತೆಜೊತೆಯಲ್ಲಿ ಮತ್ತೊಂದು ಮಾತು ಹೇಳಿದರು. “ನಾನು ಈಗಲೂ ನಂಬುತ್ತಿಲ್ಲ. ನನ್ನ ಪತಿ ಇಲ್ಲೆಲ್ಲೋ ಹೊರಗೆ ಹೋಗಿದ್ದಾರೆ ಇನ್ನೇನು ಬರಬಹುದು ಎನ್ನುವ ಭಾವನೆ ನನ್ನದು ” ಎಂದರು.
ನಿಜಕ್ಕೂ ಶ್ರೀಮತಿ ಜ್ಯೋತಿಯವರ ಈ ಕಾರ್ಯ ತತ್ವರತೆಗೆ ನಮ್ಮದೆಲ್ಲಾ ಒಂದು ದೊಡ್ಡ ಸಲ್ಯೂಟ್.
ಪತಿಯನ್ನು ಕಳೆದುಕೊಂಡರೂ ತನ್ನ ಶಾಲೆಯ ಮಕ್ಕಳ ಮೇಲಿನ ಅಕ್ಕರೆ, ಆ ದುಃಖವನ್ನು ಮೀರಿ ಆ ಮಕ್ಕಳಿಗೆ ಪಾಠ ಮಾಡಿಸಿತಲ್ಲ, ಈ ಕರ್ತವ್ಯ ಪ್ರಜ್ಞೆ ಅನನ್ಯ.
ಇವರಿಗೆ ಒಬ್ಬಳೇ ಮಗಳು. 9ನೇ ತರಗತಿಯಲ್ಲಿ ಓದುತ್ತಿರುವ ಅನುಷ್ಕಾ ಕಶ್ಯಪ್.
ಇಂತಹ ಸಮಯದಲ್ಲಿ ಅವರಿಗೆ ಯಾವ ರೀತಿ ಸಾಂತ್ವನ ನುಡಿಯಬೇಕು ಎಂಬುದು ಗೊತ್ತಾಗುವುದಿಲ್ಲ. ಆದರೆ ಅವರ ಈ ಮಹಾನ್ ಕಾರ್ಯ ಕುರಿತು ಓದಿದ ಮೇಲೆ ಒಮ್ಮೆ ಹೋಗಿ ಅವರನ್ನು ಭೇಟಿ ಆಗಲೇ ಬೇಕು ಎಂದೆನಿಸಿದ ಕಾರಣ ಇವತ್ತು ಶ್ರೀಮತಿ ಜ್ಯೋತಿ ಅವರನ್ನು ಭೇಟಿ ಮಾಡಿ, ಸಾಂತ್ವನದ ನುಡಿ ನುಡಿದು, ಒಂದಷ್ಟು ಧೈರ್ಯ ಮಾತುಗಳನ್ನು ಆಡಿ, ಯಾವುದೇ ಸಮಸ್ಯೆ ಬಂದಾಗ ನನ್ನನ್ನು ಸಂಪರ್ಕಿಸಿ ಎಂದು ವಿಶ್ವಾಸದ ಮಾತನ್ನು ಹೇಳಿ ಹೊರಬಂದೆ.
ತನ್ನ ಕಷ್ಟ ಎಷ್ಟೇ ಇದ್ದರೂ, ಬೇರೊಬ್ಬರ ಹಿತಕ್ಕೆ ತುಡಿಯುವ ಶ್ರೀಮತಿ ಜ್ಯೋತಿಯಂತವರ ಹೃದಯವಂತಿಕೆ ಅಪರೂಪದಲಿ ಅಪರೂಪ. ಇಂತಹ ಅನೇಕ ಪ್ರಸಂಗಗಳನ್ನು ಪುಸ್ತಕಗಳಲ್ಲಿ ಓದಿದ್ದೆ.
ಆದರೆ ನಿಜಕ್ಕೂ ಇಂದು ಇಂತಹ ಮಹಾನ್ ವ್ಯಕ್ತಿಯನ್ನು ಕಂಡೆ.
-ಸುರೇಶ್ ಕುಮಾರ್
ಮಾನ್ಯ ಶಾಸಕರು, ರಾಜಾಜಿನಗರ ವಿಧಾನಸಭಾ ಕ್ಷೇತ್ರ.





