ನಮ್ಮ ದೇಶ ಭಾರತವೊಂದು ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ದೇಶದ ಆಗುಹೋಗುಗಳ ಕುರಿತಾಗಿ ಪ್ರಶ್ನಿಸುವ, ಪ್ರತಿಭಟಿಸುವ ಸರ್ಕಾರದ ನಿಲುವನ್ನು ಟೀಕಿಸುವ ಹಕ್ಕನ್ನು ನಮ್ಮ ಸಂವಿಧಾನವೇ ಕೊಟ್ಟಿದೆ. ಆದರೆ ಹಾಗೆ ನಡೆಸುವ ಹೋರಾಟ ಇಲ್ಲವೇ ಚಳುವಳಿಯ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇದೇಯೇ ಇಲ್ಲವೇ ಸ್ವಾರ್ಥವಿದೆಯೇ ಎಂಬುದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದಕ್ಕೆ ಕಳೆದ ಮೂರು ವಾರಗಳಿಂದಲೂ ದೆಹಲಿಯಲ್ಲಿ ಸೋನಂ ವಾಂಗ್ಚುಕ್ ಎಂಬ ವ್ಯಕ್ತಿಯು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವೇ ಜ್ವಲಂತ ಸಾಕ್ಷಿಯಾಗಿದೆ,
ಸೋನಂ ವಾಂಗ್ಚುಕ್ ಯಾರು? ಅತನ ಹಿನ್ನಲೆ ಏನು?

ಸೋನಂ ವಾಂಗ್ಚುಕ್ ಎಂದರೆ ಬಹುತೇಕರು ಅತನೊಬ್ಬ ದೊಡ್ಡ ವಿಜ್ಞಾನಿ, ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ. ಅಷ್ಟೇ ಲಡಾಕ್ ಪ್ರದೇಶಕ್ಕೆ ಸ್ವತಂತ್ರರಾಜ್ಯದ ಸ್ಥಾನಮಾನ ನೀಡಬೇಕು ಎಂದು ಹೋರಾಟದ ಪರ ಉಪವಾಸ ಸಹಾ ಮಾಡಿರುವ ವಿಷಯ ತಿಳಿಸುತ್ತಾರೆ. ಅದೇ ರೀತಿ ಸಾಮಾನ್ಯ ಜನರು ನಟ ಅಮೀರ್ ಖಾನ್ನ ತ್ರಿ ಇಡಿಯಟ್ಸ್ ಚಲನಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿದ್ದ ಫುನ್ಸುಖ್ ವಾಂಗ್ಡು ಪಾತ್ರದ ನಿಜವಾದ ವ್ಯಕ್ತಿತ್ವವೇ ಲಡಾಕ್ ಪ್ರದೇಶದಲ್ಲಿ ತನ್ನದೇ ಆದ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿಕೊಂಡು ದರ ಮೂಲಕ ಒಬ್ಬ ಶಿಕ್ಷಣ ಸುಧಾರಕರಾಗಿ, ಶಿಕ್ಷಣ ಎನ್ನುವುದು ಕೇವಲ ಅಂಕಪಟ್ಟಿಯಾಗಿರದೇ, ಮಕ್ಕಳಿಗೆ ಎಂತಹ ಸಮಯದಲ್ಲೂ ಧೈರ್ಯವಾಗಿ ಬದುಕಲು ಕಲಿಸುವ ಸಾಧನ ಆಗಬೇಕು. ಸುಶಿಕ್ಷಿತರಾದ ಮಕ್ಕಳು ತಮ್ಮ ಬದುಕನ್ನು ತಾನೇ ಕಟ್ಟಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ಬಯಸಿದವರೇ ಸೋನಂ ವಾಂಗ್ಚುಕ್ ಎನ್ನುತ್ತಾರೆ. ಆದರೆ ಇತ್ತೀಚೆಗೆ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ತಿಳಿಸಿದಂತೆ ಅಮೀರ್ ಖಾನ್ ಮತ್ತು ಆ ಚಿತ್ರದ ಚಿತ್ರಕಥೆ ಬರೆದ ವ್ಯಕ್ತಿಗೆ ಆ ಸಮಯದಲ್ಲಿ ಸೋನಂ ವಾಂಗ್ಚುಕ್ ಬಗ್ಗೆ ತಿಳಿದಿರಲ್ಲಿಲ್ಲ ಎಂದಿರುವುದು ಗಮನಾರ್ಹವಾಗಿದೆ.

ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಅಕ್ರಮಗಳನ್ನು ತಡೆಯಲು ಮತ್ತು ನೀಟ್ ಪರೀಕ್ಷೆಯ ಪಶ್ನಪತ್ರಿಕೆಗಳು ಲೀಕ್ ಆಗಿರುವ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ಮಂತರ್ನಲ್ಲಿ ಗಾಂಧಿ ರೀತಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಂ ವಾಂಗ್ಚುಕ್ ಎಲ್ಲರೂ ತಿಳಿದಿರುವಂತೆ ಕೇವಲ ಲಡಾಖ್ನ ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತನಷ್ಟೇ ಅಲ್ಲದೇ ರಾಜಕೀಯ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದಾನೆ ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ. ಅವನ ತಂದೆ ಸೋನಮ್ ವಾಂಗ್ಯಾಲ್ ಅವರು 1967ರಲ್ಲಿ ಕಾಂಗ್ರೇಸ್ ಪಕ್ಷದಿಂದ ಲಡಾಕ್ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾಗಿ 1975ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ಸೋನಂ ವಾಂಗ್ಚುಕ್ ಗೆ ಏಕೆ ಅಸಮಧಾನ?
ಸೋನಂ SECMOL ಸಂಸ್ಥೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಸೇವೆ ಮಾಡುತ್ತಿದ್ದದ್ದಲ್ಲದೇ ಹಿಮಾಲಯದ ಹವಾಮಾನದ ಕುರಿತಾಗಿ ಅವರ ಮತ್ತೊಂದು ಸಂಸ್ಥೆಯಾದ HIAL (ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್) ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಸಂಸ್ಥೆಗೆ 135 ಎಕರೆ ಭೂಮಿಯನ್ನು ಗುತ್ತಿಗೆ ರೂಪದಲ್ಲಿ 2018 ರಲ್ಲಿ ಈ ಪ್ರದೇಶದಲ್ಲಿ ಪರ್ಯಾಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮತ್ತು ಸುಸ್ಥಿರ ನಾವೀನ್ಯತೆಯನ್ನು ಉತ್ತೇಜಿಸಲು ನೀಡಿತ್ತು. ಆದರೆ ಈ ಭೂಮಿಯನ್ನು ಮೂಲತಃ ಉದ್ದೇಶಿಸಿದ ಉದ್ದೇಶಕ್ಕಾಗಿ (ಅಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು) ನಿಗಧಿತ ಸಮಯದಲ್ಲಿ ಬಳಸಲಿಲ್ಲ ಎಂದು ಸ್ಥಳೀಯ ಆಡಳಿತವು ಪ್ರತಿಪಾದಿಸಿದ್ದರಿಂದ ಆಗಸ್ಟ್ 2025 ರಲ್ಲಿ ಗುತ್ತಿಗೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ HIAL ಸಂಸ್ಥೆಗೆ ನೀಡಿದ್ದ ಭೂಮಿಯನ್ನು ಹಿಂಪಡೆಯಲಾಯಿತು. 2025ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಗೃಹ ಸಚಿವಾಲಯವು ಅವರ ಎನ್ಜಿಒ (NGO) ಆದ SECMOL ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿಯನ್ನು ರದ್ದುಗೊಳಿಸಿದ ನಂತರವೂ, ಸರ್ಕಾರದ ಆದೇಶಕ್ಕೆ ಕವಡೆಯ ಬೆಲೆಯನ್ನೂ ನೀಡದೇ ತಮ್ಮ ಸಂಸ್ಥೆಗೆ ಅಮೆರಿಕಾ ಮತ್ತು ಚೀನಾದಿಂದ ವಿವಿಧ ಸಂಸ್ಥೆಗಳ ಹೆಸರಿನಲ್ಲಿ, ಕಾರ್ಡ್ಗಳು ಮತ್ತು ಅನಧಿಕೃತ ಜಾಲಗಳ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದ ಆರೋಪವೂ ಇದೆ.





