ಕಥೆ – ಜಿ.ಕೆ. ವೇದವಲ್ಲಿ 

ಗಂಡ ರಾಜೀ‌ವನ ಮನೆ ಬಿಟ್ಟ ಬಳಿಕ ಗೀತಾ ತನ್ನ ಸಹೋದ್ಯೋಗಿ ಸುಂದರ್‌ಗೆ ಹತ್ತಿರವಾಗಿದ್ದಳು. ಆದರೆ ಅವಳು ಮತ್ತೆ ರಾಜೀವ್ ಬಳಿಯೇ ಹಿಂತಿರುಗುವಂತಾಗಲು ಅಂಥಾದ್ದೇನು ನಡೆಯಿತು……?

ಗೀತಾ ಬಹಳ ಹೊತ್ತಿನಿಂದ ಮೋಡಗಳನ್ನೇ ನೋಡುತ್ತಿದ್ದಳು ಹಾಗೂ ಯೋಚಿಸುತ್ತಿದ್ದಳು. ಬೀಸುವ ಗಾಳಿಗೆ ತೊಯ್ದಾಡುವ ಹತ್ತಿಯ ಮುದ್ದೆಗಳಂತಿರುವ ಮೋಡದ ತುಂಡುಗಳು ಮನಸ್ಸಿಗೆ ಎಷ್ಟು ನೆಮ್ಮದಿ ಕೊಡುತ್ತವೆ. ನಮ್ಮ ಅಸ್ತಿತ್ವ ಕಾಲದ ಹೊಡೆತಗಳೊಂದಿಗೆ ಒಮ್ಮೆ ಮುದುರಿದರೆ ಒಮ್ಮೆ ಹೊಸ ಆಯಾಮಗಳನ್ನು ಮುಟ್ಟಲು ಪ್ರಯತ್ನಿಸುತ್ತದೆ.

ಅವಳ ಮನಸ್ಸಿನ ಎಲ್ಲ ಮೂಲೆಗಳಲ್ಲೂ ಒಂದು ವಿಚಿತ್ರವಾದ ಸ್ಪಂದನವಿತ್ತು. ಪ್ರೇಮದ ವಯಸ್ಸಂತೂ ತಾರುಣ್ಯಾವಸ್ಥೆಯಲ್ಲಿಯೇ ಇರುತ್ತದೆಂದು ಜನ ಹೇಳುತ್ತಾರೆ. ಆದರೆ ಗೀತಾ ಈ ವಯಸ್ಸಿನಲ್ಲೂ  ಅದರ ಮೂರ್ಖತೆಯನ್ನು ಅಷ್ಟೇ ಗಾಢತೆಯಿಂದ ಅನುಭವಿಸುತ್ತಿದ್ದಳು. ತಾನೂ ಗಾಳಿಯ ಬೀಸುವಿಕೆಯೊಂದಿಗೆ ಹಾರಬೇಕೆಂದು ಗೀತಾ ಇಚ್ಛಿಸುತ್ತಿದ್ದಳು. ಅಲ್ಲಿ ಯಾರ ದೃಷ್ಟಿಯೂ ಅವಳ ಮೇಲೆ ಬೀಳುವಂತಿರಲಿಲ್ಲ. ಅವಳು ಮತ್ತು  ಅವಳ ಅನುಭವ ಎರಡೇ ಇರಬೇಕು.

ಅವಳು ಬಾಲ್ಯದಿಂದ ಇದುವರೆಗೆ ತನ್ನದೇ ವಿಧಾನಗಳಿಂದ ಬದುಕುತ್ತಿದ್ದಾಳೆ. ಒಮ್ಮೊಮ್ಮೆ ಬದುಕಿನ ವೇಗವನ್ನು ಸುಂದರ ಬೀಡುಗಳಲ್ಲಿ ಬಿಡದಿದ್ದರೆ ನದಿಯ ಪ್ರವಾಹದಂತೆ ಹರಿದುಹೋಗುತ್ತದೆ.

ಅಂದು ಸುಂದರ್‌ ಅವಳನ್ನು ರೇಗಿಸಿದ್ದ, “ನೀನು ಬೇರೆಯವರಂತೆ ಖಂಡಿತಾ ಇಲ್ಲ. ವಿಭಿನ್ನ ರೀತಿಯಲ್ಲಿ ಯೋಚಿಸುತ್ತೀಯ. ನಿನ್ನ ಬದುಕಿನ ಬಗ್ಗೆ ನಿನ್ನ ವರ್ತನೆಯೂ ಬಹಳ ಭಿನ್ನವಾಗಿದೆ……”

“ಹೌದು. ನೀನು ಹೇಳಿದ್ದು ನಿಜ. ಜನರ ಬದುಕಿನ ಆರಂಭದಲ್ಲೇ ಎಲ್ಲ ನಿರ್ಧಾರಿತವಾಗಿರುತ್ತದೆ. ಈ ವಯಸ್ಸಿನಲ್ಲಿ ಓದು ಮುಗಿಸಿರಬೇಕು. ಈ ವಯಸ್ಸಿನಿಂದಲೇ ಉದ್ಯೋಗ, ಈ ವಯಸ್ಸಿನಲ್ಲೇ ಮದುವೆ, ಮಕ್ಕಳು, ಇಡೀ ಜೀವನ ಅದೇ ಸಂಬಂಧಗಳಲ್ಲಿ ಬಂಧಿಯಾಗಿರೋದು. ಸಂತೋಷಕ್ಕಿಂತ ದುಃಖವೇ ಹೆಚ್ಚಾಗಿರುತ್ತದೆ. ನಾನು ಈ ತಿಕ್ಕಾಟದಲ್ಲಿ ಬೇರೆಯೇ ಆಗಿ ಬದುಕಲು ಇಚ್ಛಿಸುತ್ತೇನೆ. ಅದಕ್ಕಾಗಿ ನನ್ನನ್ನು ಒಂದು ಉದ್ದೇಶಕ್ಕಾಗಿ ಅರ್ಪಿಸಿಕೊಂಡಿದ್ದೇನೆ, ಉದ್ದೇಶವಿಲ್ಲದಿದ್ದರೆ ಮನುಷ್ಯ ಎಷ್ಟು ಅಪೂರ್ಣನಾಗುತ್ತಾನೆ, ಅಲ್ವಾ?”

“ಆದರೆ ನನಗನ್ನಿಸುತ್ತೆ, ಅಪೂರ್ಣನಾದ ಮನುಷ್ಯ ಬದುಕಲು ಒಂದು ಉದ್ದೇಶವನ್ನು ಹುಡುಕುತ್ತಾನೆ.”

ಸುಂದರ್‌ ಅವಳು ಹೇಳಿದ ವಿಷಯಕ್ಕೆ ಗೇಲಿ ಮಾಡಿದ್ದ. ಆದರೆ ಅದರಿಂದ ಅವಳು ವಿಚಲಿತಳಾಗಲಿಲ್ಲ.

ಸುಂದರ್‌, “ಇದಕ್ಕೆ ವಿರುದ್ಧವಾದ ಯೋಚನೆ ಇದೆ. ಆದರೆ ಅದರಲ್ಲೇನು ತಪ್ಪು? ನದಿಯ 2 ದಂಡೆಗಳಂತೆ  ನಾವು ಸೇರಲಾಗುವುದಿಲ್ಲ. ಆದರೆ ಜೊತೆಯಲ್ಲಂತೂ ಹೋಗಬಹುದು,” ಎಂದ.

ಅವಳು  ಸುಂದರ್‌ಗೆ, “ಮನುಷ್ಯ ಪೂರ್ಣ ಅನಿಸಿಕೊಳ್ಳಲು ಇತರರ ಸಹಾಯದ ಅಗತ್ಯವಿಲ್ಲ. ಪ್ರಕೃತಿ ಮನುಷ್ಯನನ್ನು ಪೂರ್ಣನನ್ನಾಗಿ ಮಾಡಿ ಕಳಿಸಲಿಲ್ಲವೇ? ಸಂಗಾತಿಯಿಲ್ಲದೆ ವ್ಯಕ್ತಿ ಅಪೂರ್ಣನೆಂದು ಜನ ಏಕೆ ತಿಳಿದುಕೊಳ್ಳುತ್ತಾರೆ?” ಎಂದು ಹೇಳಿದಳು.

“ನಾನು ಹಾಗೆ ಹೇಳಲಿಲ್ಲ,” ಸುಂದರ್‌ ವಿರೋಧಿಸಿದ.

“ಆದರೆ ನೀನು ಹೇಳಿದ್ದರ ಅರ್ಥ ಅದೇ…”

“ಇಲ್ಲ ಹಾಗಲ್ಲ. ನೀನು ನನ್ನ ಮಾತನ್ನು ಅದೇ ರೂಪದಲ್ಲಿ ಬೇರೆಯವರೊಂದಿಗೆ ನೀನು ಮಾತಾಡುವಂತೆ ತಿರುಗಿಸಿಬಿಟ್ಟೆ.”

ನಂತರ ಅವಳು ಸ್ವಲ್ಪ ಹೊತ್ತು ಮೌನ ವಹಿಸಿದಾಗ ಸುಂದರ್‌ ಅವಳನ್ನು ರೇಗಿಸುತ್ತಾ ಹೇಳಿದ್ದ, “ಒಂದು ವಿಷಯ ಕೇಳಬೇಕು. ನೀನು ಯಾಕಿಷ್ಟು ಮಾತಾಡ್ತೀಯ? ಸ್ವಲ್ಪ ಹೊತ್ತು ಮೌನವಾಗಿದ್ದು ನೋಡು. ಸುಂದರ ಕ್ಷಣಗಳನ್ನು ಅನುಭವಿಸು. ಬಹಳಷ್ಟು ವಿಷಯಗಳು ಹಾಗೂ ನೆನಪುಗಳು ಒಂದೊಂದಾಗಿ ಅರಳಿದ ಹೂಗಳಂತೆ ಸುಗಂಧ ಸೂಸುತ್ತವೆ.”

“ಅವು ಹೂಗಳ ಸುವಾಸನೆಯೇ ಆಗಿರಬೇಕಿಲ್ಲ. ಮುಳ್ಳುಗಳ ಚುಚ್ಚುವಿಕೆಯೂ ಆಗಿರಬಹುದು. ಹೀಗಾಗಿ ಮತ್ತೆ ಅಂತಹ ಅನುಭವಗಳನ್ನು ಮನಸ್ಸಿನ ಗಲ್ಲಿಯಿಂದ ಯಾರು ತಾನೆ ಹೊರಬರಲು ಬಿಡುತ್ತಾರೆ?”

“ನೀನೆಂದೂ ನಿನ್ನ ಬಗ್ಗೆ ಏನೂ ಹೇಳಿಕೊಂಡಿಲ್ಲ. ಆದರೆ ನೀನು ಯಾರನ್ನು ಹೆಚ್ಚು ಪ್ರೀತಿಸುತ್ತಿದ್ದೆಯೋ ಅವನೇ ನಿನಗೆ ದುಃಖ ಕೊಟ್ಟಿರಬೇಕು.”

“ನಾನು ಏನಾದರೂ ಹೇಳಿದರೆ ಅದಕ್ಕೆ ನನಗೇ ಸಂಬಂಧ ಕಲ್ಪಿಸುವುದು ಸರಿಯಲ್ಲ.”

“ಯಾರು ಯಾರಿಗೂ ಜೊತೆ ಕೊಡಲ್ಲ. ಜೊತೆ ಬೇಕೂಂತ ಆಸೆ ಪಡೋದೂ ತಪ್ಪೇ! ನಮ್ಮವರೆನಿಸಿಕೊಂಡವರು ನೆರಳಿನ ರೀತಿ ತಾವೇ ಜೊತೆಗೆ ನಡೆದು ಬರ್ತಾರೆ. ಆದರೆ ಯಾರ ಬಗ್ಗೆಯಾದರೂ ಅಪೇಕ್ಷೆ ಇಟ್ಟುಕೊಂಡರೆ ದುಃಖವಲ್ಲದೆ ಬೇರೇನೂ ಸಿಗಲ್ಲ.”

“ನಿನ್ನ ಮಾತು ನನಗೆ ಅರ್ಥವಾಗಲ್ಲ. ಆದರೆ ಕೇಳೋಕೆ ಚೆನ್ನಾಗಿರುತ್ತೆ. ಶಬ್ದಗಳ ಜೊತೆ ಆಟಗಳನ್ನು ಆಡ್ತೀಯ. ನಿನ್ನ ಹಾಗೆ ನನಗೂ ಅಂತಹ ಪ್ರತಿಭೆ ಇದ್ದಿದ್ರೆ…?”

“ಹಾಗೆ ನೋಡಿದ್ರೆ ನೀನೂ ಶಬ್ದಗಳ ಜೊತೆ ಆಟ ಆಡ್ತೀಯ. ವ್ಯತ್ಯಾಸ ಏನೆಂದರೆ ಇಬ್ಬರ ಅಂದಾಜು ಬೇರೆ ಬೇರೆ,” ಹೀಗೆ ಹೇಳುವಾಗ ಗೀತಾಳ ತುಟಿಯಲ್ಲಿ ರಹಸ್ಯಭರಿತ ಮುಗುಳ್ನಗೆ ಮೂಡಿತ್ತು. ಇತ್ತೀಚೆಗೆ ಸುಂದರ್‌ನನ್ನು ಭೇಟಿ ಮಾಡುವುದು, ಮಾತಾಡುವುದು ಗೀತಾಗೆ ಹಿತವೆನ್ನಿಸುತ್ತಿತ್ತು. ಮೊದಲಿಗೆ ಸುಂದರ್‌ನ ಪೇಂಟಿಂಗ್ಸ್ ನೋಡಿ ಅವನತ್ತ ಆಕರ್ಷಿತಳಾಗಿದ್ದಳು. ಈಗ ಅವನ ಮಾತುಗಳೂ ಇಷ್ಟವಾಗಿದ್ದವು. ಯಾರನ್ನಾದರೂ ಇಷ್ಟಪಡುವುದು ಎಂತಹ ಅನುಭವವೆಂದರೆ ಅದನ್ನು ಎಷ್ಟೇ ಮುಚ್ಚಿಟ್ಟರೂ ಇತರರಿಗೆ ತಿಳಿದುಹೋಗುತ್ತದೆ. ನಿನ್ನೆ ನಡೆದ ವಿಷಯ. ಅವಳು ವರಾಂಡದಲ್ಲಿ ಕುಳಿತು ಸುಂದರ್‌ನ ಮಾತುಗಳ ಬಗ್ಗೆ ಯೋಚಿಸುತ್ತಿದ್ದಳು. ಆಗಲೇ ಮಗಳು ಜ್ಯೋತಿ ಕೇಳಿದಳು, “ಅಮ್ಮಾ, ಒಬ್ಬಳೇ ಕೂತು ನಗ್ತಾ ಇದ್ದೀಯಾ?”

ಗೀತಾ ಉತ್ತರಿಸಲಿಲ್ಲ. ಕಳ್ಳತನ ಗೊತ್ತಾಗಿ ಹೋಯಿತು ಎನ್ನುವಂತೆ ಎದ್ದು ನಿಂತಳು. ನಂತರ ತನ್ನನ್ನು ಸಂಭಾಳಿಸಿಕೊಂಡು ಮಗಳ ಹೆಗಲ ಮೇಲೆ ಪ್ರೀತಿಯಿಂದ ಕೈ ಇಡುತ್ತಾ, “ಅಂಥಾದ್ದೇನಿಲ್ಲ. ಇವತ್ತು ಅಡುಗೆ ಏನು ಮಾಡ್ಲೀಂತ ಯೋಚಿಸ್ತಾ ಇದ್ದೀನಿ,” ಎಂದಳು.

ಸುಂದರ್‌ ಮತ್ತು ಗಂಡ ರಾಜೀವ್‌ರಲ್ಲಿ ಎಷ್ಟೊಂದು ಅಂತರವಿತ್ತು?  ಪಲ್ಯ ಮಾಡುವಾಗ ಇದ್ದಕ್ಕಿದ್ದಂತೆ ಹಳೆಯ ಗಾಯ ಮರುಕಳಿಸಿತು. ಅವಳ ಮನಸ್ಸಿನಲ್ಲಿ ರಾಜೀವ್ ಹೇಳಿದ ಮಾತುಗಳು ಗುಂಯ್‌ಗುಡುತ್ತಿದ್ದವು.

“ಗೀತಾ, ನೀನು ಚೆನ್ನಾಗಿ ಅಡುಗೆ ಮಾಡ್ತೀಯಾ. ಆದರೆ ಪಲ್ಯ ಮಾಡಿದ್ರೆ ನಮ್ಮ ಅಮ್ಮ ಮಾಡಿದ ಪಲ್ಯದ ರುಚಿ ಬರಲ್ಲ.”

ಗಂಡ ಮಾಡಿದ ಈ ಟೀಕೆ ಅವಳನ್ನು ಗಾಢವಾಗಿ ಭೇದಿಸಿತ್ತು. ಏಕೆಂದರೆ ಎದುರಿಗೆ ಕೂತಿದ್ದ ಅತ್ತೆ ವ್ಯಂಗ್ಯವಾಗಿ ನಗುತ್ತಾ ಅವಳನ್ನು ನೋಡಿದ್ದರು. ಅದು ಒಂದು ದಿನದ ವಿಷಯವಾಗಿರಲಿಲ್ಲ. ಪ್ರತಿದಿನ ಹೀಗೆಯೇ ನಡೆಯುತ್ತಿತ್ತು. ರಾಜೀವ್ ಅಮ್ಮನನ್ನು ಹೊಗಳುತ್ತಿದ್ದ, ಅತ್ತೆ ವ್ಯಂಗ್ಯವಾಗಿ ನಗುತ್ತಿದ್ದರು. ಆ ನಗು ಸುಟ್ಟಗಾಯಕ್ಕೆ ಉಪ್ಪು ಸವರಿದಂತಾಗುತ್ತಿತ್ತು. ಗೀತಾ ಮಾತುಮಾತಿಗೂ ಗಂಡನೊಡನೆ ಜಗಳವಾಡಿ ತನ್ನ ಕೋಪ ತೋರಿಸುತ್ತಿದ್ದಳು. ಗಂಡನೂ ಬೇಕಾದಷ್ಟು ಟೀಕೆ ಮಾಡುತ್ತಿದ್ದ.

ಗೀತಾಳ ಅಪ್ಪ ಎಷ್ಟು ಆಸೆಗಳನ್ನು ಇಟ್ಟುಕೊಂಡು ರಾಜೀವ್ ಜೊತೆ ಅವಳ ಮದುವೆ ಮಾಡಿದ್ದರು. ಅವಳೂ ಬಹಳ ಆಸೆಗಳನ್ನು ಇಟ್ಟುಕೊಂಡು ಅತ್ತೆಮನೆಯಲ್ಲಿ ಹೆಜ್ಜೆ ಇಟ್ಟಿದ್ದಳು. ಆದರೆ ಸಣ್ಣಸಣ್ಣ ವಿಷಯಗಳೇ ಸಂಬಂಧಗಳಲ್ಲಿ ಯಾವಾಗ ಬಿರುಕು ಮೂಡಿಸಿತು ಎಂಬುದು ತಿಳಿಯಲೇ ಇಲ್ಲ. ಅತ್ತೆಯೊಂದಿಗೆ ಒರಟಾಗಿ ಮಾತಾಡಿದೆ ಎಂದು, ಗೆಳೆಯರನ್ನು ನೆಂಟರನ್ನು ಸರಿಯಾಗಿ ಆದರಿಸಲಿಲ್ಲ ಎಂದು, ನನ್ನ ಮಾತು ಕೇಳಲಿಲ್ಲ, ಯಾವಾಗಲೂ ನಿನಗೆ ಬೇಕಾದ ಹಾಗೆ ನಡುದುಕೊಳ್ತೀಯಾ ಎಂದು ದೂರುತ್ತಾ ರಾಜೀವ್ ಹೆಂಡತಿಯನ್ನು ಸದಾ ತೆಗಳುತ್ತಿದ್ದ. ಎಂದೂ ಅನ್ಯಾಯವನ್ನು ಸಹಿಸದ ಗೀತಾ ರೂಮಿನ ಬಾಗಿಲು ಹಾಕಿಕೊಂಡು ಗಟ್ಟಿಯಾಗಿ ಅಳುತ್ತಿದ್ದಳು ಮತ್ತು ಕೋಪದಿಂದ ಕೂಗಾಡುತ್ತಿದ್ದಳು.

ಹೀಗೆ ಕೋಪದಿಂದಾಗಿ ಗಂಡನ ಮೇಲೆ ಅವಳಿಗಿದ್ದ ಪ್ರೀತಿಯೂ ಕಡಿಮೆಯಾಯಿತು. ಗಂಡ ಹತ್ತಿರ ಬಂದರೂ ಅವಳಿಗೆ ಸಮಾಗಮದ ಇಚ್ಛೆ ಉಂಟಾಗುತ್ತಿರಲಿಲ್ಲ. ಸಮಯ ಕಳೆದಂತೆ ಇಬ್ಬರಲ್ಲೂ ಅಂತರ ಹೆಚ್ಚಾಯಿತು. ಒಂದು ದಿನ ಸಣ್ಣ ವಿಷಯಕ್ಕೆ ರಾಜೀವ್‌ ಅವಳ ಮೇಲೆ ಕೈ ಎತ್ತಿದಾಗ ಅವಳು ಅವನಿಂದ ಬೇರೆಯಾಗಲೂ ತೀರ್ಮಾನಿಸಿದಳು.

ಅಂದಹಾಗೆ ಅತ್ತೆ ಯಾವಾಗಲೂ ಗೀತಾಳ ವಿರುದ್ಧ ರಾಜೀವ್‌ನನ್ನು ಎತ್ತಿಕಟ್ಟುತ್ತಿದ್ದರು. ಅವಳ ಮೇಲೆ ಇಲ್ಲಸಲ್ಲದ  ಆಪಾದನೆ ಮಾಡುತ್ತಿದ್ದರು. ಯಾರ ಬಗ್ಗೆಯಾದರೂ ಸತತವಾಗಿ ದೂರು ಹೇಳುತ್ತಿದ್ದರೆ, ಯಾರೇ ಆದರೂ ನಿಜವೆಂದು ನಂಬುತ್ತಾರೆ. ರಾಜೀವನಿಗೂ ಹೀಗೇ ಆಯಿತು. ಆವೇಶದ ಯಾವುದೋ ಕ್ಷಣದಲ್ಲಿ ಅತ್ತೆಗೆ ಮಾರುತ್ತರ ನೀಡಿದ್ದು, ಅದರ ಬಗ್ಗೆ ಕೊಂಚ ಉಪ್ಪು ಖಾರ ಸೇರಿಸಿ ಅತ್ತೆ ಮಗನಿಗೆ ದೂರು ಹೇಳಿದರು. ರಾಜೀವ್‌ ಕೋಪದಿಂದ ಕೆಂಡಾಮಂಡಲನಾಗಿ ತಾಯಿಯ ಎದುರಿಗೇ ಹೆಂಡತಿಯ ಕೆನ್ನೆಗೆ ಬಾರಿಸಿಬಿಟ್ಟ. ಅತ್ತೆ ವ್ಯಂಗ್ಯವಾಗಿ ನಕ್ಕರು.

ರಾಜೀವನ ಈ ವರ್ತನೆ ಗೀತಾಳ ಮನಸ್ಸಿನಲ್ಲಿ ಮುಳ್ಳಿನಂತೆ ಆಳವಾಗಿ ಚುಚ್ಚಿತು. ಅವಳು ಕೂಡಲೇ ಮನೆಬಿಟ್ಟು ಹೋಗಲು ನಿರ್ಧರಿಸಿದಳು. ತನ್ನ ಸಾಮಾನುಗಳನ್ನು ಪ್ಯಾಕ್‌ ಮಾಡಿಕೊಳ್ಳತೊಡಗಿದಳು. ಅವಳನ್ನು ಯಾರೂ ತಡೆಯಲಿಲ್ಲ. ಅವಳು ಮಗಳನ್ನು ಕರೆದುಕೊಂಡು ಹೋಗುವಾಗ ಅತ್ತೆ ಮೊಮ್ಮಗಳು ಜ್ಯೋತಿಯ ಕೈ ಹಿಡಿದುಕೊಂಡರು. ಅವರ ಕೈ ಕೊಡವಿ ಜ್ಯೋತಿಯನ್ನು ಎಳೆದುಕೊಂಡು ಗೀತಾ ಹೊರಗೆ ಹೊರಟಳು.

ಹಿಂದಿನಿಂದ ಅತ್ತೆಯ ಧ್ವನಿ ಕೇಳಿತು, “ಹೀಗೆ ಮನೆ ಬಿಟ್ಟು ಹೋಗ್ತಿದ್ದೀಯ ಅಂದ್ರೆ ನೆನಪಿಟ್ಕೋ. ಮತ್ತೆ ಈ ಮನೆಗೆ ವಾಪಸ್‌ ಬರೋ ಅಗತ್ಯ ಇಲ್ಲ.”

ಗೀತಾ ತಿರುಗಿ ನೋಡಿ, “ಇನ್ನು ಬದುಕಿರೋವರ್ಗೂ ನಿಮ್ಮ ಮುಖ ನೋಡಲ್ಲ!”

ಮುಂದೆ ಪರಿಸ್ಥಿತಿಗಳು ಹೇಗಾಯಿತೆಂದರೆ ಅತ್ತೆಯ ಮುಖವನ್ನು ಮತ್ತೆ ನೋಡುವ ಅವಕಾಶ ಸಿಗಲೇ ಇಲ್ಲ. 2 ವರ್ಷಕ್ಕೂ ಮೊದಲೇ ಟೈಫಾಯಿಡ್‌ ಜ್ವರ ಬಂದು ಅತ್ತೆ ತೀರಿಹೋದರು. ಚಿಕ್ಕ ನಾದಿನಿ ಸವಿತಾ ಇದುವರೆಗೂ ಮನೆಯನ್ನು ಸಂಭಾಳಿಸಿದಳು. ಆದರೆ ರಾಜೀವ್ ಕಳೆದ ವರ್ಷ ಅವಳ ಮದುವೆ ಮಾಡಿ, ಗೀತಾಳನ್ನು ಮದುವೆಗೆ ಕರೆದಿದ್ದ. ಆದರೆ ಅವಳು ಹೋಗಲಿಲ್ಲ. ಫೋನ್‌ನಲ್ಲೇ ಶುಭಾಶಯ ಹೇಳಿದ್ದಳು.

ಈಗಂತೂ ರಾಜೀವ್ ಒಬ್ಬಂಟಿಯಾಗಿದ್ದ. ಅವನಿಂದ ವಿಚ್ಛೇದನ ಪಡೆದು ಇನ್ನೊಂದು ಮದುವೆಯಾಗಬೇಕೆಂದು ಗೀತಾಗೆ ಅನಿಸಿತು. ಆದರೆ ಹಾಗಾಗಲಿಲ್ಲ. ರಾಜೀವ್‌ ಕೂಡ ಅವಳನ್ನು ಮತ್ತೆ ಮನೆಗೆ ಕರೆಯಲಿಲ್ಲ. ಆದರೆ ಜ್ಯೋತಿಯನ್ನು ಭೇಟಿಯಾಗಲು ಆಗಾಗ್ಗೆ ಹೋಗುತ್ತಿದ್ದ.

ಗೀತಾ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅವಳಿಗೆ ಕೊಂಚ ನೆಲೆ ಸಿಕ್ಕಿತು. ಅಲ್ಲೇ ಸುಂದರ್‌ ಜೊತೆ ಗೆಳೆತನವಾಯಿತು. ಬದುಕು ತನಗೆ ಇನ್ನೊಂದು ಅವಕಾಶ ಕೊಟ್ಟಿದೆ ಎಂದು ಗೀತಾಗೆ ಅನಿಸಿತು. ಆಗಲೇ ಅವಳು 40 ವರ್ಷ ದಾಟಿದ್ದಳು ಮಗಳಿಗೂ 14 ವರ್ಷ ಆಗಿತ್ತು. ನಿಧಾನವಾಗಿ ಅವಳು ಸುಂದರ್‌ಗೆ ಹತ್ತಿರವಾಗುತ್ತಿದ್ದಳು. ಆರಂಭದಲ್ಲಿ ಅವಳು ತನ್ನನ್ನು ನಿಯಂತ್ರಿಸಿಕೊಳ್ಳಬೇಕು ಎಂದುಕೊಂಡಳು. ಆದರೆ ಹಾಗೆ ಮಾಡಲಾಗಲಿಲ್ಲ. ಅವಳು ಸುಂದರ್‌ನ ಮೋಹ ಪಾಶದಲ್ಲಿ ಬೀಳತೊಡಗಿದಳು.

ಈಗ ಸುಂದರ್‌ ಗೀತಾಳ ಮನೆಗೂ ಬರತೊಡಗಿದ. ಅವನು ಅವಳ ಮಗಳು ಜ್ಯೋತಿಗೂ ಏನಾದರೂ ಉಡುಗೊರೆ ತರುತ್ತಿದ್ದ. ಹೊಸ ಡ್ರೆಸ್‌, ಡಾಲ್‌ ಇತ್ಯಾದಿ. ಅವನು ಮಗಳನ್ನೂ ನೋಡಿಕೊಳ್ಳಲು ಸಿದ್ಧನಿದ್ದಾನೆಂದು ಅವಳಿಗೆ ಖುಷಿಯಾಗುತ್ತಿತ್ತು. ಆದರೆ ಒಂದು ದಿನ ಮಗಳೊಂದಿಗೆ ಮಾತಾಡಿದಾಗ ಅವಳು ತನ್ನ ನಿರ್ಧಾರದ ಬಗ್ಗೆ ಮತ್ತೆ ಯೋಚಿಸುವ ಅನಿವಾರ್ಯತೆ ಉಂಟಾಯಿತು.

ಅಂದು ಮಗಳು ಮನೆಗೆ ಬೇಗ ಬಂದಿದ್ದಳು. ಮಗಳೊಂದಿಗೆ ಅದೂ ಇದೂ ಮಾತನಾಡುತ್ತಿದ್ದಳು. ಇದ್ದಕ್ಕಿದ್ದಂತೆ ಮಗಳು, “ಅಮ್ಮಾ, ನಿನಗೆ ಒಂದು ವಿಷಯ ಕೇಳ್ಲಾ?”

“ಕೇಳು ಜ್ಯೋತಿ…”

“ಅಮ್ಮಾ, ನಿನಗೆ ಸುಂದರ್‌ ಅಂಕಲ್ ಒಳ್ಳೆಯವರು ಅನಿಸುತ್ತಾ?”

ಇದನ್ನು ಕೇಳಿ ಅವಳಿಗೆ ಕೊಂಚ ನಾಚಿಕೆಯಾಯಿತು. ನಂತರ ಹೇಳಿದಳು, “ಹೌದು ಜ್ಯೋತಿ, ನಿನಗೂ ಒಳ್ಳೆಯವರು ಅನ್ನಿಸುತ್ತಲ್ವಾ?”

“ಅಮ್ಮಾ, ಅವರು ಒಳ್ಳೆಯವರೂಂತ ಒಪ್ಕೊತೀನಿ, ನಮ್ಮನ್ನು ಚೆನ್ನಾಗಿ ನೋಡ್ಕೋತಾರೆ. ಆದರೆ…..”

“ಆದರೆ ಏನು ಜ್ಯೋತಿ….?” ಎಂದಳು ಗಾಬರಿಯಿಂದ.

“ಅಮ್ಮಾ, ಯಾಕೋ ಗೊತ್ತಿಲ್ಲ, ಅವರ ಸ್ಪರ್ಶ ಅಪ್ಪನ ಸ್ಪರ್ಶದಂತೆ ಇರಲ್ಲ. ಅಪ್ಪ ಹತ್ತಿರ ಬಂದರೆ ಸುರಕ್ಷಾ ಕವಚದೊಳಗೆ ಇದ್ದೇನೆ ಅನಿಸುತ್ತೆ. ಆದರೆ ಅಂಕಲ್ ಬಹಳ ವಿಚಿತ್ರವಾಗಿ ನೋಡ್ತಾರೆ. ನನಗೆ ಇಷ್ಟವಾಗಲ್ಲ.”

ಮಗಳು  ಹೃದಯದ ಮಾತಾಡಿದ್ದಳು. ಗೀತಾ ಹತಪ್ರಭಳಾಗಿದ್ದಳು.

“ಅಮ್ಮಾ, ಇನ್ನೊಂದು ವಿಷಯ?”

“ಹ್ಞೂಂ ಹೇಳು….”

“ನೆನಪಿದ್ಯಾ ನಿನಗೆ, ಹೋದ ಶನಿವಾರ ಸ್ಕೂಲ್‌ನಲ್ಲಿ ಲೇಟಾಗಿತ್ತು. ನೀನು ಸುಂದರ್‌ ಅಂಕಲ್ ರನ್ನು ಕಳಿಸಿದ್ದೆ…. ನನ್ನನ್ನು ಕರ್ಕೊಂಡು ಬರೋಕೆ.”

“ಹೌದು. ಏನಾಯ್ತು?”

“ಅಮ್ಮಾ….” ಇದ್ದಕ್ಕಿದ್ದಂತೆ ಜ್ಯೋತಿಯ ಕಣ್ಣುಗಳು ತುಂಬಿಬಂದವು,

“ಅಮ್ಮಾ, ಅವರು ನನ್ನನ್ನು ವಿಚಿತ್ರವಾಗಿ ಮುಟ್ಟತೊಡಗಿದರು. ಆಗಲೇ ದಾರಿಯಲ್ಲಿ ನನಗೆ ರಮ್ಯಾ ಕಾಣಿಸಿದಳು. ನಾನು ಕೂಡಲೇ ಕಾರು ನಿಲ್ಲಿಸಲು ಹೇಳಿ ರಮ್ಯಾಳನ್ನು ಕೂರಿಸಿಕೊಂಡೆ. ಇಲ್ಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ…..”

ಮಾತು ಗಂಟಲಲ್ಲೇ ಸಿಕ್ಕಿಕೊಂಡಿತು. ಗೀತಾಳ ಹೃದಯದಲ್ಲಿ ಒಂದು ರೀತಿಯ ವಿಚಿತ್ರ ಅನುಭವವಾಗತೊಡಗಿತು.

“ನೀನ್ಯಾಕೆ ಮೊದಲೇ ಹೇಳಲಿಲ್ಲ?”

“ನಾನು ಏನು ಹೇಳ್ಲಿ ಅಮ್ಮಾ, ನಿನಗೆ ಕೋಪ ಬರುತ್ತೆ ಅನಿಸ್ತು.”

“ಇಲ್ಲ ಜ್ಯೋತಿ, ನಿನಗಿಂತ ಮಹತ್ವವಾದದ್ದು ನನಗೆ ಬೇರೇನೂ ಇಲ್ಲ,” ನಂತರ ಅವಳು ಜ್ಯೋತಿಯನ್ನು ಅಪ್ಪಿಕೊಂಡಳು. ಇನ್ನು ಮುಂದೆ ಸುಂದರ್‌ನನ್ನು ಎಂದೂ ಮನೆಗೆ ಕರೆಯುವುದಿಲ್ಲ, ತಾನೂ ಅವನನ್ನು ನೋಡಲು ಹೋಗುವುದನ್ನು ಕಡಿಮೆ ಮಾಡಬೇಕೆಂದು ನಿಶ್ಚಯಿಸಿದಳು.

ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳಲು ಅವಳಿಗೆ ಸಂಪೂರ್ಣ ಹಕ್ಕಿದೆ. ಆದರೆ ತನ್ನ ಮಗಳ ಭಾವನೆಗಳನ್ನು ಕಡೆಗಣಿಸಲಾಗುವುದಿಲ್ಲ. ಏಕೆಂದರೆ ಮಗಳ ಬದುಕೂ ಸಹ ಅವಳೊಂದಿಗೆ ಕೂಡಿಕೊಂಡಿದೆ. ಅವಳ ಸುರಕ್ಷತೆಯೂ ಬಹಳ ಮುಖ್ಯ.

ಮರುದಿನದಿಂದಲೇ ಗೀತಾ ಸುಂದರ್‌ ನಿಂದ ಒಂದು ಅಂತರ ಕಾಪಾಡಿಕೊಂಡಳು. ಆಫೀಸ್‌ನಲ್ಲಿ ಎಲ್ಲರೂ ಅದನ್ನು ಗಮನಿಸಿದರು. ಅವಳ ಪಕ್ಕದ ಸೀಟ್‌ನ ಮೀರಾ, “ಏನಾಯ್ತು ಗೀತಾ? ಈ ನಡುವೆ ಸುಂದರ್‌ಗೆ ಬೆಲೆ ಕೊಡ್ತಿಲ್ಲ ನೀನು?” ಎಂದು  ಕೇಳಿಯೇಬಿಟ್ಟಳು.

“ಇಲ್ಲ. ಅಂಥದ್ದೇನೂ ಇಲ್ಲ. ನನ್ನ ಮರ್ಯಾದೆ ಬಗ್ಗೇನೂ ನೋಡ್ಕೋಬೇಕಲ್ವಾ? ಒಬ್ಬ ಮಗಳ ತಾಯಿ ನಾನು,” ಎಂದಳು.

“ಸರಿಯಾದ ನಿರ್ಧಾರ ಮಾಡಿದ್ದೀಯಾ ಗೀತಾ, ನೀನು ಅವನ ಮುಂದಿನ ಬೇಟೆ ಆಗೋದು ತಪ್ಪಿಸಿಕೊಂಡೆ ಅಂತ ನನಗೆ ಖುಷಿಯಾಗ್ತಿದೆ,” ಎಂದಳು ಮೀರಾ.

“ಮುಂದಿನ ಬೇಟೆ….?” ಗೀತಾ ಬೆಚ್ಚಿದಳು.

“ಮುಗ್ಧರಾದ ಏಕಾಂಗಿ ಮಹಿಳೆಯರ ಜೊತೆ ಗೆಳೆತನ ಬೆಳೆಸಿ. ಅವರ ಮಗಳು, ಸೊಸೆಯರನ್ನು ಒಲಿಸಿಕೊಳ್ಳೋದು ಅವನಿಗೆ ಚೆನ್ನಾಗಿ ಗೊತ್ತು.”

“ಏನೂ …?” ಗೀತಾ ನಡುಗಿಹೋದಳು.

ಅಂದರೆ ಜ್ಯೋತಿಯ ಅನುಮಾನ ನಿಜವಾಗಿತ್ತು. ಸುಂದರನ ಸ್ವಭಾವ ಒಳ್ಳೆಯದಲ್ಲ. ಸಧ್ಯ…. ನನ್ನ ಕಣ್ಣು ತೆರೆಯಿತು. ಮನಸ್ಸಿನಲ್ಲೇ ನೆಮ್ಮದಿಯ ಉಸಿರೆಳೆದಳು.

ಜೀವನದ ಈ ತಿರುವಿನಲ್ಲಿ ಮನಸ್ಸಿನಲ್ಲಿ ಮೂಡಿದ ಬಿರುಗಾಳಿಯಿಂದ ನೆಮ್ಮದಿ ಪಡೆಯಲು ಅವಳು 3 ದಿನಗಳ ರಜೆ ಪಡೆದಳು. ಮೂರೂ ದಿನಗಳು ಮಗಳ ಜೊತೆ ಕಳೆಯಲು ತೀರ್ಮಾನಿಸಿದಳು. ದಿನವಿಡೀ ಶಾಪಿಂಗ್‌, ಸಿನಿಮಾ, ಮೋಜು, ಹೊಸ ಹೊಸ ಜಾಗಗಳ ಸುತ್ತಾಟ ಇವೇ ಅವರ ದಿನಚರಿಯಾಗಿತ್ತು.

ಒಂದು ದಿನ ಸಂಜೆ ಶಾಪಿಂಗ್‌ ನಂತರ ಗೀತಾ ಮಗಳನ್ನು ಕರೆದುಕೊಂಡು ಒಂದು ಹೋಟೆಲ್ ಗೆ ಹೊರಟಳು. ಆ ಹೋಟೆಲ್ ‌ಗೆ  ಆಗಾಗ್ಗೆ ಸುಂದರ್‌ ಜೊತೆ ಹೋಗಿದ್ದಳು. ಅಲ್ಲಿ ಕುಳಿತ ನಂತರ ಇದ್ದಕ್ಕಿದ್ದಂತೆ ಒಂದು ಟೇಬಲ್ ನತ್ತ ಅವಳ ದೃಷ್ಟಿ ಹೋದಾಗ ಅವಳು ಬೆಚ್ಚಿದಳು. ಸುಂದರ್‌ 15-16 ವರ್ಷಗಳ ಒಬ್ಬ ಹುಡುಗಿಯೊಂದಿಗೆ ಅಲ್ಲಿ ಕುಳಿತಿದ್ದ. ಅವಳು ಎದ್ದು ಮಗಳೊಂದಿಗೆ ಮೂಲೆಯಲ್ಲಿದ್ದ ಒಂದು ಟೇಬಲ್ ಬಳಿ ಹೋಗಿ ಕುಳಿತಳು. ಅಲ್ಲಿಂದ ಸುಂದರ್‌ ಮತ್ತು ಆ ಹುಡುಗಿ ಸರಿಯಾಗಿ ಕಾಣುತ್ತಿದ್ದರು.

ಸ್ವಲ್ಪ ಹೊತ್ತಿನಲ್ಲೇ ಗೀತಾ ಸುಂದರ್‌ನ ಹಾವಭಾವಗಳಿಂದ ಆ ಹುಡುಗಿ ಸುಂದರ್‌ನ ಹೊಸ ಬೇಟೆಯೆಂದು ತಿಳಿದುಕೊಂಡಳು. ಗೀತಾ ಅವರಿಗೆ ಗೊತ್ತಾಗದಂತೆ ಮಗಳೊಂದಿಗೆ ಹೋಟೆಲ್ನಿಂದ ಹೊರಬಂದಳು ಮತ್ತು ಸುಂದರ್‌ನಿಂದ ಶಾಶ್ವತವಾಗಿ ದೂರ ಇರುವ ತನ್ನ ನಿರ್ಧಾರ ಗಟ್ಟಿಗೊಳಿಸಿದಳು.

ಒಂದು ಅಪೂರ್ಣ ಹಾಗೂ ಹೇಸಿಗೆ ಬರುವಂತಹ ಪ್ರೀತಿಯ ಅನುಭವ ಅವಳನ್ನು ಬಹಳವಾಗಿ ನೋಯಿಸಿತ್ತು. ಯಾವ ಕ್ಷಣಗಳಲ್ಲಿ ಅವಳು ಸುಂದರ್‌ಗಾಗಿ ಹಪಹಪಿಸಿದ್ದಳೋ ಆ ಕ್ಷಣಗಳು ಈಗ ಶೂಲದಂತೆ ಅವಳನ್ನು ಚುಚ್ಚುತ್ತಿದ್ದವು. ಹಲವು ದಿನಗಳು ಅವಳು ಉದಾಸಳಾಗಿದ್ದಳು. ಬದುಕಿನಲ್ಲಿ ಅವಳು ಪ್ರೀತಿಗೆ ಹಂಬಲಿಸಿದಾಗ ಉಪೇಕ್ಷೆ ಹಾಗೂ ಮೋಸವೇ ಸಿಕ್ಕಿತ್ತು. ಬಹುಶಃ ಅವಳ ಬದುಕಿನಲ್ಲಿ ಪ್ರೀತಿ ಅನ್ನುವುದು ಬರೆದಿರಲಿಕ್ಕಿಲ್ಲ. ಅವಳು ಇಡೀ ಜೀವನ ಒಂಟಿಯಾಗಿರಬೇಕು. ಈ ವಿಚಾರಗಳೊಂದಿಗೆ ತಳಮಳಿಸುತ್ತಿದ್ದಳು.

ಒಂದು ದಿನ ಮಗಳು, “ಅಮ್ಮಾ, ಇತ್ತೀಚೆಗೆ ನೀವು ಬಹಳ ಬೇಸರದಿಂದ ಇದ್ದೀರಿ ಯಾಕೆ?” ಎಂದು ಕೇಳಿದಳು. ಗೀತಾ ಏನೂ ಹೇಳಲಿಲ್ಲ, ಮುಗುಳ್ನಕ್ಕಳು.

“ಅಮ್ಮಾ, ನೀವು ಅಪ್ಪನ ಬಳಿಗೆ ಮತ್ತೆ ಯಾಕೆ ಹೋಗಬಾರದು. ಅಪ್ಪ ಒಳ್ಳೆಯವರಮ್ಮ.”

ಗೀತಾಳ ಮುಖ ಕಾಂತಿಹೀನವಾಯಿತು. ರಾಜೀವನಿಂದ ದೂರವಾಗಿ ಇಷ್ಟು ದಿನಗಳಾದ ಮೇಲೆ ಜ್ಯೋತಿ ವಾಪಸ್‌ ಹೊರಡುವ ಮಾತಾಡಿದ್ದಳು. ಏನೋ ಒಂದು ವಿಷಯ ಈ ಮುಗ್ಧ ಹುಡುಗಿಗೆ ತೊಂದರೆ ಕೊಡುತ್ತಿದೆ. ಹಾಗೆ ನೋಡಿದರೆ, ಅವಳಿಗೆ ಕಳೆದುಹೋದದ್ದು ನೆನಪಿಸಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಮಗಳು ಮತ್ತೆ ಅದೇ ಲೋಕಕ್ಕೆ ಹಿಂತಿರುಗಲು ಹೇಳುತ್ತಿದ್ದಾಳೆ. ಗೀತಾ ಪ್ರೀತಿಯಿಂದ ಮಗಳ ತಲೆ ಸವರುತ್ತಾ, “ಜ್ಯೋತಿ, ನೀನು ಮತ್ತೆ ಅಪ್ಪನ ಬಳಿ ಹೋಗಲು ಏಕೆ ಇಚ್ಛಿಸ್ತೀಯಾ? ಅವರು ನನ್ನ ಜೊತೆ ಎಷ್ಟು ಜಗಳ ಆಡ್ತಿದ್ರೂಂತ ಮರೆತುಬಿಟ್ಯಾ?” ಎಂದಳು.

“ಅಮ್ಮಾ, ಆದರೆ ಅವರು ನಿನ್ನನ್ನು ಪ್ರೀತಿಸ್ತಾನೂ ಇದ್ರಮ್ಮ,” ಎಂದು ಹೇಳಿ ಅಮ್ಮನ ಮುಖವನ್ನು ನೋಡಿದಳು. ಗೀತಾ ಅವಳ ಕಣ್ಣುಗಳನ್ನು ಮುಚ್ಚುತ್ತಾ, “ಇನ್ನು ಮಲಕ್ಕೊ. ನಾಳೆ ಸ್ಕೂಲಿಗೆ ಹೋಗಬೇಕಲ್ವಾ?” ಎಂದಳು.

ನಿಜಕ್ಕೂ ಗೀತಾಗೆ ಮಗಳನ್ನು ಎದುರಿಸಲಾಗಲಿಲ್ಲ. ಅವಳ ಮಾತುಗಳ ಸುಳಿಯಲ್ಲೇ ಮುಳುಗಿದಳು. ಅವಳ ಮನದಲ್ಲಿ ಹಲವಾರು ಯೋಚನೆಗಳೆದ್ದವು. ರಾಜೀವ್ ತನ್ನನ್ನು ಪ್ರೀತಿಸುತ್ತಿದ್ದರೆ ನನ್ನನ್ನೇಕೆ ಮನೆ ಬಿಟ್ಟು ಹೋಗದಂತೆ ತಡೆಯಲಿಲ್ಲ. ಅವರು ನನ್ನನ್ನು ಪ್ರೀತಿಸುತ್ತೇನೆ ನಾನಿರದೆ ಇರಲು ಆಗುವುದಿಲ್ಲ ಎಂದೇಕೆ ಹೇಳಲಿಲ್ಲ. ನಾನಂತೂ ಅವರ ಬದುಕಿನಲ್ಲಿ ಅನಪೇಕ್ಷಿತಳಾಗಿದ್ದೆ. ಅದಕ್ಕೇ ನನ್ನನ್ನು ಒಪ್ಪಿಸಲು ಎಂದೂ ಪ್ರಯತ್ನಿಸಲಿಲ್ಲ. ಸಾರಿ ಕೇಳಲಿಲ್ಲ. ಒಂದು ದಿನ ಜ್ಯೋತಿ ಪಕ್ಕದಮನೆಯ ಮಹಿಳೆಯೊಂದಿಗೆ ಜಗಳವಾಡಿದಳು. ಅವಳನ್ನು `ಆಂಟಿ… ಆಂಟಿ’ ಎಂದು ಕರೆಯುತ್ತಾ ಜ್ಯೋತಿ ಮಾತಾಡಿಸುತ್ತಿದ್ದಳು. ಆದರೆ ಆಕೆ ಅವಳಮ್ಮನ ಮೇಲೆ ಇಲ್ಲಸಲ್ಲದ್ದನ್ನು ಹೇಳಿದಾಗ ಕೆರಳಿ ಕೆಂಡವಾದ ಜ್ಯೋತಿ ಆ ಮಹಿಳೆಯ ಗ್ರಹಚಾರ ಬಿಡಿಸಿದಳು. ಅಂದು ಗೀತಾ ಮಗಳನ್ನು ಸುಮ್ಮನಾಗಿಸಿದ್ದಳು. ನಂತರ ವಿಚಾರಿಸಿದಾಗ ಜ್ಯೋತಿ ಅಳುತ್ತಾ, “ಅಮ್ಮಾ, ಅವರು ನಿನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದರು. ನನಗೆ ತಡೆದುಕೊಳ್ಳಲು ಆಗಲಿಲ್ಲ. ಅದಕ್ಕೇ ಅವರಿಗೆ ಆ ರೀತಿ ಬೈಯಬೇಕಾಯಿತು,” ಎಂದಳು.

ಗೀತಾ ಏನೂ ಮಾತಾಡಲಿಲ್ಲ. ಜ್ಯೋತಿಯ ಮಾತು ಅವಳ ಹೃದಯವನ್ನು ಚುಚ್ಚಿತು.

“ಒಂದು ವಿಷಯ ಹೇಳ್ಲಾಮ್ಮಾ,” ಎಂದು ಜ್ಯೋತಿ ಪ್ರೀತಿಯಿಂದ ಅಮ್ಮನ ಕೆನ್ನೆ ಸವರುತ್ತಾ, “ಅಮ್ಮಾ, ಅಪ್ಪ ನಿಮ್ಮ ಜೊತೆ ಹೆಚ್ಚಾಗಿ ಜಗಳ ಆಡ್ತಾ ಇದ್ದಿದ್ದು ಯಾವ ವಿಷಯಕ್ಕೆ ಹೇಳಿ. ನನಗೆ ನೆನಪು ಇರೋ ಮಟ್ಟಿಗೆ ಅವರು ಅಜ್ಜಿಗೆ ಸಪೋರ್ಟ್‌ ಮಾಡೋಕೆ ನಿಮ್ಮ ಜೊತೆ ಜಗಳ ಆಡ್ತಿದ್ರು.”

“ಹೌದು ಜ್ಯೋತಿ. ಆಗೆಲ್ಲಾ ನನಗೆ ಬಹಳ ಕೆಟ್ಟದೆನಿಸ್ತಾ ಇತ್ತು. ವಿಷಯ ತಪ್ಪೋ ಸರಿಯೋ, ಯಾವಾಗಲೂ ಅವರಮ್ಮನಿಗೆ ಸಪೋರ್ಟ್‌ ಮಾಡ್ತಿದ್ರು.”

`’ಅಮ್ಮಾ, ನನಗೆ ಅನ್ನಿಸುತ್ತೆ. ಅಪ್ಪ ನೀವಂದುಕೊಂಡಷ್ಟು ಕೆಟ್ಟವರೇನಲ್ಲ. ನನ್ನನ್ನು ನಂಬಿ ಅಮ್ಮ. ಅವರು ಇಂದಿಗೂ ನಿಮ್ಮನ್ನು ತುಂಬಾ ಪ್ರೀತಿಸ್ತಾರೆ. ಆದರೆ ಅದನ್ನು ಹೇಳಿಕೊಳ್ಳಲ್ಲ ಅಷ್ಟೇ,” ಜ್ಯೋತಿ ಬಹಳ ಮುಗ್ಧತೆಯಿಂದ ಹೇಳಿದಳು. ಅವಳ ಮಾತುಗಳಲ್ಲಿ ಅಡಗಿದ್ದ ಸೂಚನೆಯನ್ನು ಗೀತಾ ಅರ್ಥ ಮಾಡಿಕೊಂಡಳು. ತನ್ನ ಮಗಳು ನಿಜಕ್ಕೂ ಬುದ್ಧಿವಂತೆಯಾಗಿದ್ದಾಳೆಂದು ಅವಳಿಗೆ ಖುಷಿಯಾಯಿತು.

ಗೀತಾ ಮಗಳನ್ನು, “ಜ್ಯೋತಿ, ನೀನು ಇಂದಿಗೂ ಅಪ್ಪನ ಬಳಿ ವಾಪಸ್‌ ಹೋಗಲು ಇಚ್ಛಿಸ್ತೀಯಾ? ಅವರು ನನಗೆ ಹೊಡೆಯೋದನ್ನು ನೋಡಬೇಕೂಂತಿದ್ದೀಯಾ? ಅಥವಾ ನನ್ನನ್ನು ಬಿಟ್ಟು ಅಪ್ಪನ ಬಳಿ ಹೋಗಿರ್ತೀಯಾ?” ಎಂದು ಕೇಳಿದಳು.

“ಇಲ್ಲಮ್ಮ ಖಂಡಿತಾ ಇಲ್ಲ. ಅಮ್ಮನ್ನ ಬಿಟ್ಟು ನಾನು ಎಲ್ಲಿಗೂ ಹೋಗಲ್ಲ,” ಎನ್ನುತ್ತಾ ಜ್ಯೋತಿ ಅವಳನ್ನು ಅಪ್ಪಿಕೊಂಡಳು. ಮಗಳಲ್ಲಿ ಅಡಗಿದ್ದ ಇಷ್ಟದ ಬಗ್ಗೆ ಗೀತಾಗೆ ತಿಳಿಯದೇ ಏನಿಲ್ಲ. ಆದರೆ ತನ್ನ ಕಹಿನೆನಪುಗಳನ್ನು ಇಷ್ಟು ಬೇಗ ಮರೆತು ಗಂಡನ ಬಳಿ ಹೋಗಲು ಅವಳಿಗೆ ಧೈರ್ಯವಿರಲಿಲ್ಲ. ರಾಜೀವ್ ಮಾತುಮಾತಿಗೆ ಬೈಯುತ್ತಿದ್ದುದನ್ನು ಮರೆಯಲು ಹೇಗೆ ಸಾಧ್ಯ? ಕಳೆದುಹೋದ ಆ ಅಹಿತಕರ ಘಟನೆಗಳು ತನ್ನ ನಿರ್ಧಾರ ಬದಲಿಸದಂತೆ ತಡೆಯುತ್ತಿತ್ತು.

ಅಂದು ಜ್ಯೋತಿಯ ಹುಟ್ಟುಹಬ್ಬವಾಗಿತ್ತು. ಗೀತಾ ಅವಳಿಗೆಂದು ವಿಶೇಷವಾದ ಕೇಕ್‌ ತರಿಸಿದ್ದಳು. ಸುಂದರವಾಗಿದ್ದ ಗುಲಾಬಿ ಬಣ್ಣದ ಡ್ರೆಸ್‌ ಕೊಡಿಸಿದ್ದಳು. ಅದನ್ನು ಧರಿಸಿದ ಜ್ಯೋತಿ ಬಹಳ ಸುಂದರವಾಗಿ ಕಾಣುತ್ತಿದ್ದಳು. ಬರ್ತ್‌ಡೇ ಪಾರ್ಟಿಗೆ ನೆರೆಹೊರೆಯವರು ಮತ್ತು ಜ್ಯೋತಿಯ ಗೆಳತಿಯರನ್ನು ಕರೆದಿದ್ದಳು. ಜ್ಯೋತಿ ತನ್ನ ಅಪ್ಪನನ್ನು ಕರೆದಿರಬಹುದೆಂಬ ನಂಬಿಕೆ ಅವಳಲ್ಲಿತ್ತು. 7 ಗಂಟೆಗೆ ಪಾರ್ಟಿ ಶುರುವಾಗಲಿತ್ತು. ಗೀತಾ ಶಾರ್ಟ್‌ಲೀವ್ ತೆಗೆದುಕೊಳ್ಳಬೇಕೆಂದು ಬೇಗ ಬೇಗ ಕೆಲಸ ಮುಗಿಸಿ ಸರಿಯಾಗಿ 4 ಗಂಟೆಗೆ ಆಫೀಸ್‌ನಿಂದ ಹೊರಟಳು. ಇನ್ನೂ ಅರ್ಧ ದಾರಿಯಲ್ಲಿದ್ದಾಗ ರಾಜೀವ್ ಫೋನ್‌ ಬಂದಿತು. ಬಹಳ ದುಗುಡದ ಸ್ವರದಲ್ಲಿ ರಾಜೀವ್, “ಗೀತಾ, ನಮ್ಮ ಜ್ಯೋತಿ…..”

“ಏನಾಯ್ತು ಜ್ಯೋತಿಗೆ?” ಗೀತಾ ಗಾಬರಿಯಿಂದ ಕೇಳಿದಳು.

“ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಬಹುಶಃ ಶಾರ್ಟ್‌ಸರ್ಕ್ಯೂಟ್‌ ಆಗಿರಬೇಕು. ಜ್ಯೋತಿಗೆ ಸ್ವಲ್ಪ ಗಾಯಗಳಾಗಿವೆ. ನಾನು ಅವಳನ್ನು ಸಿಟಿ ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದೀನಿ. ನೀನೂ ಬೇಗ ಆಸ್ಪತ್ರೆಗೆ ಬಾ…..”

ಗೀತಾ ಓಡೋಡುತ್ತಾ ಆಸ್ಪತ್ರೆ ತಲುಪಿದಾಗ ರಾಜೀವ್ ಒಂದು ಮೂಲೆಯಲ್ಲಿ ದುಃಖದಿಂದ ಕೂತಿರುವುದನ್ನು ಕಂಡಳು. ಅವಳನ್ನು ನೋಡಿದ ಕೂಡಲೇ ರಾಜೀವ್‌ ಓಡುತ್ತಾ ಬಂದು ಅವಳನ್ನಪ್ಪಿಕೊಂಡು ಅಳತೊಡಗಿದ. ಅವರಿಬ್ಬರೂ ಹಲವಾರು ವರ್ಷಗಳಿಂದ ದೂರವಿದ್ದರು ಎಂದು ಅನ್ನಿಸಲೇ ಇಲ್ಲ. ಒಂದು ವಿಚಿತ್ರ ಸುಖಾನುಭವ! ಸಮಯ ನಿಂತೇ ಹೋಗಿದೆ ಅನ್ನಿಸಿತು. ನಂತರ ನಿಧಾನವಾಗಿ ಅವನಿಂದ ದೂರ ಸರಿದು, “ಜ್ಯೋತಿ ಎಲ್ಲಿ? ಹೇಗಿದ್ದಾಳೆ?” ಎಂದು ಕೇಳಿದಳು.

“ಬಾ ಇಲ್ಲಿ,” ಎಂದು ರಾಜೀವ್ ಗೀತಾಳನ್ನು ಜ್ಯೋತಿಯ ವಾರ್ಡ್‌ಗೆ ಕರೆದುಕೊಂಡು ಹೋದ. ಅಲ್ಲಿ ಜ್ಯೋತಿ ಅವರಿಬ್ಬರೂ ಒಟ್ಟಾಗಿರುವುದನ್ನು ಕಂಡು ಅಂತಹ ಸ್ಥಿತಿಯಲ್ಲೂ ಮುಗುಳ್ನಕ್ಕಳು.

ಜ್ಯೋತಿಯ ಹಣೆ ಸವರುತ್ತಾ ಗೀತಾ, “ಜ್ಯೋತಿ, ಈಗ ಹೇಗಿದ್ದೀಯಾ?” ಎಂದು ಕೇಳಿದಳು. ಜ್ಯೋತಿ ಮುಗುಳ್ನಗುತ್ತಾ,?

“ನನ್ನ ಅಪ್ಪ, ಅಮ್ಮ ನನ್ನ ಜೊತೇಲಿರುವಾಗ ನನಗೇನಾಗುತ್ತೆ? ಅಪ್ಪ ಆ ಹೊಗೆ, ಬೆಂಕಿಯಿಂದ ನನ್ನನ್ನು ಕಾಪಾಡಿ ಹೊರಗೆ ತಂದು ಆಸ್ಪತ್ರೆಗೆ ಸೇರಿಸಿದರು. ಅಪ್ಪ ಐ ಲವ್ ಯೂ!” ಎಂದಳು.

ಗೀತಾ ಮಾತಾಡದೆ ಅಪ್ಪ ಮಗಳ ಪ್ರೀತಿ ನೋಡುತ್ತಾ ನಿಂತಿದ್ದಳು. ಅವಳಿಗೆ ಒಳಗೊಳಗೇ ಒಂದು ಧನ್ಯತೆಯ ಭಾವ ಮೂಡಿಬರುತ್ತಿತ್ತು. ಬದುಕು ಅವಳು ಕಳೆದುಕೊಂಡಿದ್ದನ್ನು ಮತ್ತೆ ವಾಪಸ್‌ ಕೊಟ್ಟಿತ್ತು. ಮೊದಲು ರಾಜೀವನೊಂದಿಗೆ ಇದ್ದಾಗಿನ ಪೂರ್ಣತೆಯ ಅನುಭವ ಉಂಟಾಗುತ್ತಿತ್ತು.

ಇದ್ದಕ್ಕಿದ್ದಂತೆ ಜ್ಯೋತಿ ಗೀತಾಳ ಕೈಗಳನ್ನು ಹಿಡಿದುಕೊಂಡು ರಾಜೀವ್ ಕೈಗಳಲ್ಲಿ ಕೊಟ್ಟು ಹೇಳಿದಳು, “ನನಗೆ ನಿಮ್ಮಿಬ್ಬರಿಂದ ಒಂದೇ ಒಂದು ಗಿಫ್ಟ್ ಬೇಕು. ಅದೇನೆಂದರೆ ನೀವಿಬ್ಬರೂ ಒಂದಾಗಬೇಕು. ನನ್ನ ಬರ್ತ್‌ಡೇಗೆ ಅಷ್ಟೂ ಕೊಡಲ್ವಾ ನೀವು?”

ಗೀತಾ ಮತ್ತು ರಾಜೀವ್ ಮೊದಲೇ ತಬ್ಬಿಬ್ಬಾಗಿದ್ದರು. ನಂತರ ಇಬ್ಬರೂ ನಗುತ್ತಾ ಜ್ಯೋತಿಯನ್ನು ಚುಂಬಿಸಿದರು. ಜ್ಯೋತಿ, ಗೀತಾ ಮತ್ತು ರಾಜೀವ್‌ ಇಬ್ಬರಿಗೂ ಹೊಸ ರೀತಿಯಲ್ಲಿ ಬದುಕು ಬಗ್ಗೆ ಯೋಚಿಸುವಂತೆ ಮಾಡಿದ್ದಳು.

ಯಾವ ಕ್ಷಣಗಳಲ್ಲಿ ಅವಳು ಸುಂದರ್‌ಗಾಗಿ ಹಪಹಪಿಸುತ್ತಿದ್ದಳೋ ಆ ಕ್ಷಣಗಳು ಈಗ ಶೂಲದಂತೆ ಅವಳನ್ನು ಇರಿಯುತ್ತಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ