ಕಥೆ - ಕೆ.ವಿ. ರಾಜಲಕ್ಷ್ಮಿ
ಅದನ್ನು ಬೇರೊಂದು ರೂಪದಲ್ಲಿ ಮುಂದೆ ಕಿರಿಮಗಳಿಗೆ ಕೊಟ್ಟಾಗ, ಅಕ್ಕ, ತಂಗಿಯ ಮೇಲೆ ಮುನಿಸಿಕೊಂಡು, ಮಾತು ಬಿಟ್ಟುಬಿಡುವುದೇ....? ಮುಂದೆ ಈ ಲೆಕ್ಕಾಚಾರ ಸರಿಹೋಗಿದ್ದು ಹೇಗೆ.....?
ಅಕ್ಕನ ಮಗನಿಗೆ ಮದುವೆ ನಿಶ್ಚಯವಾಗಿದೆ ಎಂದು ಮೂರನೆಯವರಿಂದ ಸುದ್ದಿ ತಿಳಿಯಿತು. ಒಂದೇ ಊರಲ್ಲಿ ಇದ್ದುಕೊಂಡು ನಾನು ಅಪರಿಚಿತಳಾಗಿಬಿಟ್ಟೆನೇ? ನಿಕ್ಕಿಯಾಗಿರುವ ಹುಡುಗಿಯ ತಂದೆ, ನನ್ನ ಸಹೋದ್ಯೋಗಿ, ಆಪ್ತ ಗೆಳತಿ ಶಾಲಿನಿಯ ಸೋದರ ಸಂಬಂಧಿ. ಹೀಗಾಗಿ ಅವಳ ಮೂಲಕ ವಿಷಯ ತಿಳಿದದ್ದು. ಮನಸ್ಸು ಇನ್ನಷ್ಟು ಕುಗ್ಗಿಹೋಗಿತ್ತು.
``ಹೋಗ್ಲಿ ಬಿಡು. ಈ ನೆಪದಲ್ಲಾದರೂ ನೀವಿಬ್ಬರು ಸರಿಹೋಗಬಹುದು,'' ಶಾಲಿನಿ ಸಂತೈಸಿದಾಗ, `ಏನು ಸರಿಹೋಗುವುದೋ ಏನೋ? ಎಲ್ಲ ಅವಳ ಮೂಗಿನ ನೇರಕ್ಕೆ ನಡೀಬೇಕು ಅನ್ನೋ ಹಠ, ಸಮಯ ಒಂದೇ ತರಹ ಇರುತ್ತಾ? ನಮಗೂ ಕಷ್ಟನಷ್ಟಗಳು ಇರೋಲ್ವಾ? ನಾನೇ ಅಡ್ಜಸ್ಟ್ ಮಾಡಬೇಕು ಯಾವಾಗ್ಲೂ.....' ಗೊಣಗಿಕೊಂಡಿದ್ದೆ.
ಎಂದಿನ ಹಾಗೆ ನಾನೇ ಸೋತಿದ್ದರೆ ಈ ವೈಮನಸ್ಯಕ್ಕೆ ಆಸ್ಪದವೇ ಇರುತ್ತಿರಲಿಲ್ಲವೇನೋ....ಅಮ್ಮನಿಗೆ ಫೋನ್ ಮಾಡಿದೆ ನನ್ನ ದುಃಖ ತೋಡಿಕೊಳ್ಳಲು.
``ಅಮೋಘನಿಗೆ ಮದುವೆ ಗೊತ್ತಾಗಿದೆಯಂತೆ....''
``ಹ್ಞೂಂ... ಇದುವರೆಗೂ ನಿನಗೆ ತಿಳಿಸಲಿಲ್ವಾ?''
``ಇಲ್ಲಮ್ಮ..... ಶಶಿ ನನ್ನೊಂದಿಗೆ ಮಾತಾಡಿ ಆರು ತಿಂಗಳುಗಳೇ ಕಳೆದಿವೆ....''
``ಅವಳ ಮುನಿಸು ಇದ್ರೆ ಇರಲಿ. ಮುಂದಿನ ಭಾನುವಾರ ಲಗ್ನಪತ್ರಿಕೆ ಹುಡುಗಿ ಮನೇಲಿ. ನನಗೆ ಶಶಿ ಫೋನ್ ಮಾಡಿ ಹೇಳಿದ್ಲು. ನಾನೂ ಬುದ್ಧಿ ಹೇಳಿದ್ದೀನಿ. ಇರೋದು ಒಬ್ಬಳೇ ತಂಗಿ. ನಿನಗೆ ಅವಳು, ಅವಳಿಗೆ ನೀನು. ಹೀಗೆ ದೂರ ಮಾಡೋದು ಸರಿಯಲ್ಲ ಅಂತ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿನ್ನ ತಂಗೀನ ಕರೀದಿದ್ರೆ ನಾನೂ ಬರೋಲ್ಲ ಅಂತ ಎಚ್ಚರಿಸಿದ್ದೀನಿ. ಶಶಿ ಏನು ಚಿಕ್ಕವಳಲ್ಲ. ನಿನಗೂ ಹೇಳ್ತಾಳೆ ಬಿಡು,'' ಅಮ್ಮ ಸಮಾಧಾನದ ಮಾತುಗಳನ್ನು ಹೇಳಿದರು.
ಇದಕ್ಕೆಲ್ಲ ಕಾರಣ ಆ ಬಂಗಾರದ ಬಳೆಗಳಲ್ಲವೇ? ಅಮ್ಮ ಮಾಡಿದ್ದೂ ಸರಿಯೇ? ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಒಂದಲ್ಲ ಹತ್ತು ಬಾರಿ ತುಲನೆ ಮಾಡಿರ್ತಾರೆ. ಅದರಲ್ಲಿ ಸಂಶಯವೇ ಬೇಡ.
ತಿಂಗಳ ಮೇಲಾಗಿತ್ತು ಅಮ್ಮನನ್ನು ನೋಡಿ. ಅದೇ ಬಡಾವಣೆಯಲ್ಲಿದ್ದ ಗೆಳತಿಯ ಮನೆ ಸಮಾರಂಭಕ್ಕೆ ಹಾಜರಾತಿ ಕೊಟ್ಟು ಅಮ್ಮನನ್ನು ನೋಡಲು ಹೋಗಿದ್ದೆ.
``ಬಾರೇ ಶಮೀ, ನಿನ್ನನ್ನೇ ನೆನೆಸಿಕೊಳ್ತಿದ್ದೆ.... ಊಟಕ್ಕೇಳು,'' ದೊಡ್ಡಮ್ಮ ಉಪಚರಿಸಿದರು.
``ಈಗಷ್ಟೇ ಆಯ್ತು ದೊಡ್ಡಮ್ಮ, ಗೆಳತಿಯ ಮನೆಯಲ್ಲಿ ಭೂರಿ ಭೋಜನ. ಅಮ್ಮ ಎಲ್ಲಿ?'' ಎಂದೆ ಮನೆಯೆಲ್ಲ ಕಣ್ಣಾಡಿಸುತ್ತ.
``ಬರ್ತಾಳೆ ಇರು. ಟೆರೇಸ್ಗೆ ಹೋಗಿದ್ದಾಳೆ ಬಟ್ಟೆ ಒಣಹಾಕೋಕ್ಕೆ, ನಿಮ್ಮ ಅತ್ತೆ ಮಾವ ಚೆನ್ನಾಗಿದ್ದಾರಾ?''
``ಹ್ಞೂಂ ದೊಡ್ಡಮ್ಮ ಚೆನ್ನಾಗಿದ್ದಾರೆ, ಔಷಧಿ ಮಾತ್ರೆಗಳ ದೆಸೆಯಿಂದ.....''
``ಏನ್ಮಾಡೋಕಾಗುತ್ತೆ? ಎಲ್ಲರ ಕಥೆಯೂ ಹಾಗೆ ಆಗಿಹೋಗಿದೆ.... ಊಟ ಬಿಡಬಹುದು ಮಾತ್ರೆ ಬಿಡಲಾಗದು....'' ಎಂದರು ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದ ದೊಡ್ಡಮ್ಮ.
``ನಿಮ್ಮ ವಯಸ್ಸಿಗೆ ನಮ್ಮ ಕಥೆ ಏನೋ.... ನಮಗೆ ಈಗಲೇ ಬಿ.ಪಿ., ಶುಗರ್, ಸ್ಟ್ರೆಸ್ಸು ಅಂತ ನೂರೆಂಟು ಕಾಯಿಲೆ ದಾಳಿ ಮಾಡ್ತಿವೆ....'' ಎಂದು ಮಾತು ಪೂರ್ತಿ ಮುಗಿಸುವ ಮೊದಲೇ ಅಮ್ಮ ಬಂದಿದ್ದರು.
``ಅದೇನು ಮಾತು ಅಂತ ಆಡ್ತಿ ಶಮೀ. ಸದ್ಯ ನೀವುಗಳು ಆರೋಗ್ಯವಾಗಿದ್ದರೆ ಅದೇ ನಮಗೆ ನೆಮ್ಮದಿ.... ಸರಿ ಊಟಕ್ಕೇಳು,'' ಎಂದರು.