ಆಶಾ 25 ಯುಗಾದಿಗಳನ್ನು ಕಂಡಿದ್ದ ಹುಡುಗಿ. ಇದುವರೆಗೂ ಆಕೆ ಯಾರ ಪ್ರೀತಿ ಪ್ರೇಮದ ಗುಂಗಿನಲ್ಲಿಯೂ ಬಿದ್ದಿರಲಿಲ್ಲ, ಈ ವಿಷಯವಾಗಿ ಅವಳಿಗೆ ಬಲು ಹೆಮ್ಮೆ ಎನಿಸಿತ್ತು. ಮದುವೆಗೆ ಮುಂಚಿನ ಪ್ರೀತಿ ಪ್ರೇಮವೆಲ್ಲ ಬರೀ ಟ್ರಾಷ್.... ಅದು ಕೇವಲ ಆಕರ್ಷಣೆ, ಯೌವನದ ಸೆಳೆತಷ್ಟೆ ಎಂಬುದು ಅವಳ ವಾದ. ಅದರಲ್ಲೂ ಇಂದಿನ ಯುವಜನತೆ ಹುಚ್ಚು ಆವೇಶದ ಭರದಲ್ಲಿ ಕಾಮವನ್ನೇ ಪ್ರೇಮವೆಂದು ಭಾವಿಸಿ, 4 ದಿನಗಳ ಹಾರಾಟದ ನಂತರ ಕೈ ತೊಳೆದುಕೊಳ್ಳುವ ಕೆಟ್ಟ ಪ್ರಕ್ರಿಯೆಯನ್ನೂ ಆಕೆ ದ್ವೇಷಿಸುತ್ತಿದ್ದಳು.
ಆಶಾಳಂಥ ಸುಂದರ ಸುಶೀಲ ಕನ್ಯೆ ಪರಿಪಕ್ವ ವಯಸ್ಸು ಸಮೀಪಿಸಿದರೂ, ಯಾವುದೇ ಹುಡುಗನ ಜೊತೆ ಪ್ರಣಯ ಪ್ರಸಂಗಕ್ಕೆ ಸಿಲುಕಿಕೊಳ್ಳದೇ ಹಾಗೇ ಉಳಿದುಬಿಟ್ಟಿದ್ದು ಆಶ್ಚರ್ಯದ ವಿಷಯವಾಗಿತ್ತು. ಅವಳ ಹೃದಯ ಯಾರಿಗಾಗಿಯೂ ಮಿಡಿಯಲಿಲ್ಲ. ಅಂದರೆ ಅವಳಲ್ಲಿ ಏನಾದರೂ ದೈಹಿಕ ಕೊರತೆ ಇತ್ತೇ? ಅಥವಾ ಆಕೆ ಬೆಳೆದು ಬಂದ ಪರಿಸರ, ಕೌಟುಂಬಿಕ ಮೌಲ್ಯ, ಸಂಸ್ಕಾರ ಇತ್ಯಾದಿಗಳ ಪ್ರಭಾವದಿಂದ ಇಂಥ ಆಕರ್ಷಣೆಗೆ ಮನಸೋಲದಂತೆ ತನ್ನನ್ನು ತಾನು ಬಲಂತವಾಗಿ ನಿಗ್ರಹಿಸಿಕೊಳ್ಳುತ್ತಿದ್ದಳೇ?
ಹಾಗೆಂದ ಮಾತ್ರಕ್ಕೆ ಆಶಾ ಸುಂದರಿ ಅಲ್ಲ ಎಂದುಕೊಳ್ಳಬಾರದು, ಆದರೆ ಅವಳ ಸೌಂದರ್ಯಕ್ಕೆ ಗ್ರಹಣ ಹಿಡಿದಂತೆ ಸದಾ ಏನೋ ಒಂದು ಮಂಕು ಕವಿದುಕೊಂಡಿರುತ್ತಿತ್ತು. ಮರೆತೂ ಸಹ ಅಳೆಂದೂ ಮುಗುಳ್ನಗು ಬೀರುತ್ತಿರಲಿಲ್ಲ. ಅವಳು ತನ್ನ ಗೆಳತಿಯರ ಮಧ್ಯೆ ಗಂಡಸಿನಂಥ ಹೆಂಗಸು ಎಂಬ ಅಡ್ಡಹೆಸರು ಹೊಂದಿದ್ದಳು, ಸಾಲದ್ದಕ್ಕೆ ಅವಳಿಗೆ ಪುರುಷಕಂಠ ಇತ್ತು. ಎಲ್ಲರೂ ಅವಳನ್ನು ಇದಕ್ಕಾಗಿ ಕೀಟಲೆ ಮಾಡುತ್ತಿದ್ದರು.
ಗೆಳತಿಯರು ತಂತಮ್ಮ ಪ್ರಣಯ ಪ್ರಸಂಗಗಳನ್ನು ಬಿಚ್ಚಿಕೊಂಡು ಹರಟುತ್ತಿದ್ದಾಗ, ಅವಳು ಆ ಜಾಗವನ್ನೇ ಬಿಟ್ಟು ಹೊರಟು ಬಿಡುತ್ತಿದ್ದಳು. ಅವರೆಲ್ಲ ಚೆನ್ನಾಗಿ ರೇಗಿಸುತ್ತಿದ್ದರು, ``ಥೂ...... ಇವಳೆಂಥ ಬೊಡ್ಡೆ ಮರವೇ! ಅದೆಲ್ಲಿಂದ ಹುಡುಗಿಯಾಗಿ ಸೃಷ್ಟಿಯಾಗಿ ಬಂದಳೋ.... ಹುಡುಗಿಯ ದೇಹದಲ್ಲಿ ಒರಟು ಗಂಡಸಿನ ಆತ್ಮ ಸೇರಿಕೊಂಡಂತಿದೆ, ಆದರೆ ಈ ಹಾಳಾದವಳು ಹುಡುಗಿ ತರಹ ಯಾರನ್ನೂ ಆಕರ್ಷಿಸುವುದೂ ಇಲ್ಲ.
``ಹುಡುಗ ಹುಡುಗಿಯರಿಬ್ಬರೂ ಒಂದೇ ಇವಳೆದುರಿಗೆ. ಮುಂದೇನು ಕಥೆಯೋ ಗೊತ್ತಿಲ್ಲ..... ಅದಾವ ಪುಣ್ಯಾತ್ಮ ಇವಳನ್ನು ಪ್ರೇಮಿಸುತ್ತಾನೋ.... ಅದಾರು ಇವಳ ಕೈ ಹಿಡಿಯಲಿದ್ದಾರೋ? ಯಾಜ್ಜೀವನ ಕನ್ಯಾಕುಮಾರಿಯಾಗುಳಿದರೂ ಆಶ್ಚರ್ಯವೇನಿಲ್ಲ.''
ಯಾರೇನು ಟೀಕೆ ಟಿಪ್ಪಣಿ ಮಾಡಿದರೂ, ಮೌನವಾಗಿ ಅರ್ಧಂಬರ್ಧ ತುಟಿ ಅರಳಿಸಿ, ದಿವ್ಯಾ ನಿರ್ಲಿಪ್ತತೆ ಪ್ರದರ್ಶಿಸಿ ಅದು ತನಗೆ ಹೇಳಿದ್ದೇ ಅಲ್ಲವೇನೋ ಎಂಬಂತೆ ಸುಮ್ಮನಿದ್ದುಬಿಡುತ್ತಿದ್ದಳು.
ಒಂದು ದಿನ ಇವಳ ಆಪ್ತ ಗೆಳತಿ ನೇತ್ರಾ ಅತಿ ಕಕ್ಕುಲತೆಯಿಂದ ವಿಚಾರಿಸಿಕೊಂಡಳು, ``ನೀನೇಕೆ ನಿನ್ನ ಜೀವನವನ್ನು ಹೀಗೆ ಬರಡು ಬಂಜರುಭೂಮಿ ಆಗಿರಿಸಿಕೊಂಡಿರುವೆ? ಹೆಣ್ಣಿನ ಜೀವನ ಅಂದಮೇಲೆ ಅದರಲ್ಲಿ ಪ್ರೀತಿ ಪ್ರೇಮಗಳಂಥ ಮಹತ್ತರ ಭಾವನೆಗಳಿಗೆ ಉನ್ನತ ಸ್ಥಾನವಿರಬೇಕು. ಇಂಥ ಕೋಮಲ ಭಾವನೆಗಳು ನಿನ್ನ ಹೃದಯದಲ್ಲಿ ಮೂಡುವುದೇ ಇಲ್ಲವೇ? ಅಷ್ಟು ಮಾತ್ರ ನಿನ್ನ ಹೃದಯ ಕಠೋರವಾಗಿದೆಯೇ? ನಿನ್ನ ಜೀವನದಲ್ಲೂ ಪ್ರೀತಿ ಪ್ರೇಮದ ತಂಗಾಳಿ ಬೀಸಬೇಕು ಎಂದೆನಿಸುವುದಿಲ್ಲವೇ.....?''
ನೇತ್ರಾ ಒಳ್ಳೆಯ ಸ್ವಭಾವದ ಹುಡುಗಿ. ಅವಳು ಆಶಾಳ ಒಬ್ಬ ಪರಮಾಪ್ತ ಹಿತೈಷಿ ಕೂಡ. ಆಶಾಳಿಗೆ ಸದಾ ಒಳಿತಾಗಲಿ ಎಂದು ಆಶಿಸುವ ಈ ಶ್ರೇಯೋಭಿಲಾಷಿಯ ಮೇಲೆ ಮುನಿಸು ಬಾರದೆ, ಆಶಾ ಸಮಾಧಾನದಿಂದಲೇ ಈ ಪ್ರಶ್ನೆಗೆ ಎಷ್ಟೋ ಸಲ ಉತ್ತರ ಕೊಟ್ಟಿದ್ದಾಳೆ. ಆಶಾಳ ಈ ಶುಷ್ಕ, ನೀರಸ ಜೀವನ ಸರಿಹೋಗಲು ಒಂದೋ, ಅವಳು ಯಾರನ್ನಾದರೂ ಮದುವೆಯಾಗಬೇಕು ಅಥವಾ ಯಾರನ್ನಾದರೂ ಪ್ರೇಮಿಸಬೇಕು, ಈ ಕಾಲಕ್ಕೆ ಅದು ಅನಿವಾರ್ಯ ಕೂಡ ಎಂದೇ ನೇತ್ರಾ ಹೇಳುತ್ತಿದ್ದಳು.