- ರಾಘವೇಂದ್ರ ಅಡಿಗ ಎಚ್ಚೆನ್.
ಕಿರುತೆರೆಯ ʻಗಿಚ್ಚಿ ಗಿಲಿಗಿಲಿʼ ರಿಯಾಲಿಟಿ ಶೋ ಹಾಗೂ ʻಕ್ವಾಟ್ಲೆ ಕಿಚನ್ʼ ವಿನ್ನರ್ ಪ್ರಶಾಂತ್ ಗೌಡ ಅವರು ತಮ್ಮ ಐದು ವರ್ಷಗಳ ಸುದೀರ್ಘ ಪ್ರೇಮ ಜೀವನವನ್ನ ಯಶಸ್ವಿಯಾಗಿ ಮದುವೆಯ ಬಂಧನಕ್ಕೆ ಮುನ್ನಡೆಸಿದ್ದಾರೆ. ಕೃತಿ ಗೌಡ ಅವರೊಂದಿಗೆ ಪ್ರಶಾಂತ್ ಗೌಡ ಅವರ ವಿವಾಹ ಮಹೋತ್ಸವವು ಬೆಂಗಳೂರಿನಲ್ಲಿ ಅತ್ಯಂತ ಅದ್ದೂರಿ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿದೆ.

ಶನಿವಾರ (ಜುಲೈ 4) ರಾತ್ರಿ ಬೆಂಗಳೂರಿನ 'ವಿ ಲೆಗಸಿ' ಕನ್ವೆನ್ಷನ್ ಹಾಲ್ನಲ್ಲಿ ಈ ಜೋಡಿಯ ಭವ್ಯ ಆರತಕ್ಷತೆ ನೆರವೇರಿತು. ರಿಸೆಪ್ಷನ್ ವೇದಿಕೆಗೆ ಪ್ರಶಾಂತ್ ಅವರು ತಮ್ಮ ಮನದನ್ನೆ ಕೃತಿ ಅವರೊಂದಿಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿಕೊಂಡೇ ಎಂಟ್ರಿ ಕೊಟ್ಟಿದ್ದು ವಿಶೇಷವಾಗಿತ್ತು. ಈ ವೇಳೆ ವರ ಪ್ರಶಾಂತ್ ಬಿಳಿ ಬಣ್ಣದ ಸೂಟ್ನಲ್ಲಿ ಮಿಂಚಿದರೆ, ವಧು ಕೃತಿ ಕೆಂಪು ಬಣ್ಣದ ಗೌನ್ ಧರಿಸಿ ಕಂಗೊಳಿಸಿದರು

ಆರತಕ್ಷತೆ ಹಾಗೂ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಪ್ರಮುಖ ತಾರೆಯರು ಸಾಕ್ಷಿಯಾಗಿದ್ದರು. ಖ್ಯಾತ ನಟಿಯರಾದ ಅನುಪಮಾ ಗೌಡ, ನಿವೇದಿತಾ ಗೌಡ, ‘ಕರ್ಣ’ ಖ್ಯಾತಿಯ ಭವ್ಯಾ ಗೌಡ, ಶರ್ಮಿತಾ ಗೌಡ, ವಾಣಿ ಗೌಡ, ಸೂರಜ್, ‘ನಂದಗೋಕುಲ’

ಖ್ಯಾತಿಯ ಮೇಘ ಹಾಗೂ ನಿರಂಜನ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಬಳಗವೇ ಆಗಮಿಸಿ ನವದಂಪತಿಗೆ ಶುಭ ಹಾರೈಸಿತು. ಇವರೊಂದಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮತ್ತು ಟಿ.ಎ. ಶರವಣ ಅವರು ಕೂಡ ಆಗಮಿಸಿ ಹೊಸ ಜೋಡಿಗೆ ಆಶೀರ್ವದಿಸಿದರು.

ರಿಸೆಪ್ಷನ್ ಸಂಭ್ರಮದ ಬೆನ್ನಲ್ಲೇ, ಇಂದು (ಜುಲೈ 5) ಬೆಳಗಿನ ಶುಭ ಮುಹೂರ್ತದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಪ್ರಶಾಂತ್ ಗೌಡ ಅವರು ಕೃತಿ ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಸದ್ಯ ಪ್ರಶಾಂತ್-ಕೃತಿ ಅವರ ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಸ್ನೇಹಿತರು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.





